Advertisement

ಜಾಯಿಕಾಯಿ ಬೆಳೆ ಕಡಿಮೆ ಖರ್ಚು, ಅಧಿಕ ಲಾಭ

03:04 PM Jul 16, 2021 | Team Udayavani |

ಜಾಯಿಕಾಯಿ ಬಹು ವಾರ್ಷಿಕ ದೀರ್ಘ‌ಕಾಲಿಕ ಬೆಳೆ. ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಪತ್ರೆ (ಜಾಯಿ ಪತ್ರೆ) ಎಂಬ ಎರಡು ಪ್ರಮುಖ ಸಂಬಾರ ಪದಾರ್ಥಗಳಿರುವುದು ಇದರ ವಿಶೇಷ. ಇವುಗಳಿಗೆ ವರ್ಷದ ಎಲ್ಲ ಸಮಯದಲ್ಲೂ ಬಹುಬೇಡಿಕೆ ಇರುತ್ತವೆ. ಜಾಯಿಕಾಯಿ ನಿತ್ಯಹರಿದ್ವರ್ಣದಿಂದ ಕೂಡಿದ ಸುಮಾರು ಮಧ್ಯಮ ಗಾತ್ರದಷ್ಟು ಬೆಳೆಯಬಲ್ಲ ಮರ.

Advertisement

ಉಪಯೋಗ
ಜಾಯಿಕಾಯಿಯ ತಿರುಳು ಮತ್ತು ಪತ್ರೆಯನ್ನು ಅಡುಗೆಗಳಲ್ಲಿ ಸಂಬಾರ ಪದಾರ್ಥವಾಗಿ, ಸಿಹಿ ತಿಂಡಿ, ಪಾನೀಯಗಳಲ್ಲಿ ಸುವಾಸನೆಯ ವೃದ್ಧಿಗಾಗಿ, ಔಷಧ, ಸುಗಂಧ ದ್ರವ್ಯ, ಶ್ಯಾಂಪೂ, ಸೋಪು, ಕೀಟನಾಶಕಗಳ ತಯಾರಿಯಲ್ಲೂ ಬಳಸಲಾಗುತ್ತದೆ. ಜಾಯಿಕಾಯಿ ಹಣ್ಣಿನ ಹೊರಭಾಗದ ಹೊಂಬಣ್ಣದ ಸಿಪ್ಪೆಯನ್ನು ಬಳಸಿ ಜ್ಯಾಮ್‌, ಉಪ್ಪಿನ ಕಾಯಿ, ತಂಬ್ಳಿ ಇತ್ಯಾದಿಗಳನ್ನು ಮಾಡುತ್ತಾರೆ.

ಜಾಯಿಕಾಯಿ ಕಾಡು ಉತ್ಪನ್ನ ವರ್ಗಕ್ಕೆ ಸೇರಿರುವುದರಿಂದ ಇದಕ್ಕೆ ವಿಶೇಷ ಆರೈಕೆ ಕೂಡ ಅಗತ್ಯವಿಲ್ಲ. ಜಾಯಿಕಾಯಿ ಮರ ಏಕಲಿಂಗದ ಹೂ ಬಿಡುವ ಸಸ್ಯ ವರ್ಗಕ್ಕೆ ಸೇರಿದ್ದು, ಇದರಲ್ಲಿ ಗಂಡು ಮತ್ತು ಹೆಣ್ಣು ಎಂಬ ಪ್ರತ್ಯೇಕ ಗಿಡಗಳಿವೆ. ಸುಮಾರು 100ರಿಂದ 150 ವರ್ಷಗಳ ಕಾಲ ಜಾಯಿಕಾಯಿ ಮರಗಳು ಬಾಳ್ವಿಕೆ ಬರುತ್ತವೆ. ಇದಕ್ಕೆ ಖರ್ಚು ಕಡಿಮೆ, ಆದಾಯ ಅಧಿಕ.

ಹವಾಮಾನ, ಮಣ್ಣು
ಜಾಯಿಕಾಯಿ ಮೂಲತಃ ಉಷ್ಣ ವಲಯದಲ್ಲಿ ಬೆಳೆಯುವ ಸಸ್ಯ. ಸುಮಾರು. ಶೇ. 10ರಷ್ಟು ನೆರಳಿದ್ದರೆ ಉತ್ತಮ. ಸದಾ ತೇವಾಂಶವಿರುವ ಕೆಂಪು, ಕಪ್ಪು ಮಣ್ಣುಗಳಲ್ಲಿ ಇದನ್ನು ನಾಟಿ ಮಾಡಬಹುದು. ಜಾಯಿಕಾಯಿ ಸಸಿ ನೆಡಲು ಜೂನ್‌- ಜುಲೈ ತಿಂಗಳುಗಳು ಸೂಕ್ತ ಕಾಲ. ಕಸಿ ಕಟ್ಟುವುದಾದರೆ
ಆಗಸ್ಟ್- ಸೆಪ್ಟಂಬರ್‌ ಅವಧಿ ಉತ್ತಮ. ಕಸಿ ಕಟ್ಟಿದ ಗಿಡವನ್ನು ಮುಂದಿನ ವರ್ಷ ನಾಟಿ ಮಾಡುವ ವರೆಗೆ ಕಸಿ ಕಟ್ಟಿದ ಜಾಗದವರೆಗೆ ಮಣ್ಣಿನಿಂದ ಮುಚ್ಚಿ ನೆಡಬೇಕು.

ಗೊಬ್ಬರ
ಜಾಯಿಕಾಯಿಗೆ ಗೊಬ್ಬರವಾಗಿ ಆಡಿನ ಹಿಕ್ಕೆ, ಹಟ್ಟಿಗೊಬ್ಬರ, ನೆಲಗಡಲೆ ಹಿಂಡಿ, ಕಹಿಬೇವಿನ ಹಿಂಡಿ, ಸುಡುಮಣ್ಣು, ಬೂದಿ, ಎರೆಹುಳ ಗೊಬ್ಬರ ಇತ್ಯಾದಿಗಳನ್ನು ಬಳಸಬಹುದು.

Advertisement

ಕೃಷಿ ಹೇಗೆ ?
ನಾಟಿ ಮಾಡುವಾಗ ಒಂದೂವರೆ ಅಡಿಗಿಂತ ಹೆಚ್ಚು ಎತ್ತರ ಬೆಳೆದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡು ಅಡಿ ಉದ್ದ , ಅಗಲ ಮತ್ತು ಆಳದ ಗುಂಡಿ ತೋಡಿ ಅದಕ್ಕೆ ಸ್ವಲ್ಪ ಸುಡು ಮಣ್ಣು, ಕಹಿ ಬೇವಿನ ಹಿಂಡಿ ಹಾಕಿ ಗಿಡ ನೆಟ್ಟು ಬುಡಕ್ಕೆ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು.

ಒಂದು ಗಿಡದಿಂದ ಇನ್ನೊಂದಕ್ಕೆ 6ರಿಂದ 8 ಅಡಿ ಅಂತರವಿರಲಿ. ಮಳೆ ಸರಿಯಾಗಿ ಬರದಿದ್ದರೆ ಎರಡು ದಿನಗಳಿಗೊಮ್ಮೆ ನೀರುಣಿಸಬೇಕು. ವರ್ಷಕ್ಕೆ ಎರಡು ಬಾರಿ ಗೊಬ್ಬರ ನೀಡಿದರೆ ಗಿಡ ಬೇಗನೆ ಫ‌ಸಲು ಸಿಗುವುದು. ಗಂಡು ಗಿಡಗಳ ಹಾವಳಿ ತಡೆಯಲು ಕಸಿ ಕಟ್ಟಿಯೂ ಹೊಸಗಿಡಗಳನ್ನು ಬೆಳೆಸುತ್ತಾರೆ. ಕಸಿ ಗಿಡಗಳು ಪೊದೆಯಂತೆ ಬೆಳೆಯುತ್ತವೆ. ಬೀಜದಿಂದ ಹುಟ್ಟಿದ ಗಿಡಗಳು ಎತ್ತರಕ್ಕೆ ಬೆಳೆದು ದೊಡ್ಡ
ಮರವಾಗಿ ಹೆಚ್ಚು ಇಳುವರಿ ನೀಡುತ್ತವೆ. ಕಸಿ ಗಿಡ ಮೂರಿಂದ ನಾಲ್ಕು ವರ್ಷಗಳಲ್ಲಿ ಫ‌ಲ ನೀಡಿದರೆ, ಬೀಜದಿಂದ ಹುಟ್ಟಿದ ಸಸಿಗಳು 5ರಿಂದ 6 ವರ್ಷಗಳಲ್ಲಿ ಫ‌ಸಲು ನೀಡುತ್ತವೆ. ಮರ ಬಲಿತ ಹಾಗೆ ಕಾಯಿ ಬಿಡುವ ಪ್ರಮಾಣ ಹೆಚ್ಚುತ್ತದೆ.

ಇದು ಅತಿಯಾದ ಬಿಸಿಲನ್ನು ಸಹಿಸುವುದಿಲ್ಲ. ರೋಗ, ಕೀಟ ಬಾಧೆ ಕಡಿಮೆ. ಸಾಮಾನ್ಯವಾಗಿ ಮೇಯಿಂದ ಆಗಸ್ಟ್‌ ತಿಂಗಳುಗಳಲ್ಲಿ ಫ‌ಸಲು ನೀಡುತ್ತವೆ. ಅದರಲ್ಲಿ ಜೂನ್‌- ಜುಲೈ ತಿಂಗಳುಗಳಲ್ಲಿ ಪ್ರಮಾಣ ಹೆಚ್ಚು. ಹಣ್ಣಿನೊಳಗೆ ಸುಂದರವಾದ ಕೆಂಪು ಬಣ್ಣದ ಪತ್ರೆಯನ್ನು ಕಾಣಬಹುದು.

ಮರದಲ್ಲಿ ಹಣ್ಣಾಗಿ ಬಿರಿದ ಕಾಯಿಗಳು ತನ್ನಷ್ಟಕ್ಕೇ ಕೆಳಕ್ಕೆ ಬೀಳುತ್ತವೆ. ಇವುಗಳನ್ನು ಹೆಕ್ಕಿ ಪತ್ರೆ ಹಾಗೂ ಕಾಯಿ  ಬೇರ್ಪಡಿಸಿ, ಒಣಗಿಸಿ ಬಳಿಕ ಮಾರಾಟ ಮಾಡಲಾಗುತ್ತದೆ. ಮಳೆಗಾಲದಲ್ಲಿ ಬೀಳುವಾಗ ಪತ್ರೆ ಹಾಳಾಗುವುದರಿಂದ ಪ್ರತಿ 2-3 ದಿನಗಳಿಗೊಮ್ಮೆ ಕೊಯ್ಲು ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next