Advertisement

ಪ್ರೀತಿ ಮಧುರ; ತ್ಯಾಗ ಅಮರ

12:05 PM Sep 22, 2018 | |

“ನಿನ್ನಲ್ಲಿ ಯಾವ ಸ್ವಾರ್ಥನೂ ಇಲ್ವಾ? …’ ಅವಳು ಕೇಳುವ ಪ್ರಶ್ನೆಗೆ ಅವನು ದಂಗಾಗುತ್ತಾನೆ. ಇಲ್ಲ ಎನ್ನುವುದಕ್ಕೆ ಅವನಿಗೆ ಮನಸ್ಸಾಗುವುದಿಲ್ಲ. ಏಕೆಂದರೆ, ಅವಳು ಹಿಂದೊಮ್ಮೆ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಳು ಅಂತ ಗೊತ್ತಿದ್ದರೂ, ಆಕೆಗೊಬ್ಬ ಮಗನಿದ್ದಾನೆ ಅಂತ ಅವನಿಗೆ ಗೊತ್ತಿದ್ದರೂ, ಅವನು ಅವಳಿಗೆ ಸಹಾಯ ಮಾಡುವುದು, ಅವಳ ಜೊತೆಗೆ ನಿರಂತರವಾಗಿ ನಿಲ್ಲುವುದು ಅದೊಂದೇ ಕಾರಣಕ್ಕೆ. ಅವನಿಗೆ ಅವಳ ಮೇಲೆ ಮನಸ್ಸಾಗಿರುತ್ತದೆ.

Advertisement

ಮುಂದೊಂದು ದಿನ ಅವಳ ಜೊತೆಗೆ ಸಂಸಾರ ಮಾಡಬೇಕೆಂದು ಕನಸು ಕಂಡಿರುತ್ತಾನೆ. ಅದೇ ಕಾರಣಕ್ಕೆ ಅವಳಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿರುತ್ತಾನೆ. ಅವನ ಅಷ್ಟೆಲ್ಲಾ ಸಹಾಯ ಮತ್ತು ತ್ಯಾಗ ಮನೋಭಾವಗಳನ್ನು ನೋಡಿ ಅವಳೂ ಖುಷಿಯಾಗುತ್ತಾಳೆ. ಇನ್ನೇನು ಅವಳ ಮನಸ್ಸು ಅವನತ್ತ ವಾಲಬೇಕು ಎನ್ನುವಷ್ಟರಲ್ಲೇ ಅವನೆದುರು ಈ ಪ್ರಶ್ನೆಯನ್ನು ಇಡುತ್ತಾಳೆ. ಅವನ ಉತ್ತರವೇ ಈ ಚಿತ್ರದ ಕ್ಲೈಮ್ಯಾಕ್ಸ್‌ ಅಷ್ಟೇ ಅಲ್ಲ, ಈ ಚಿತ್ರದ ಹೈಲೈಟ್‌ ಕೂಡಾ ಹೌದು.

“ಇರುವುದೆಲ್ಲವ ಬಿಟ್ಟು’ ಒಂದು ವಿಭಿನ್ನವಾದ ಚಿತ್ರ ಎಂದು ಹೇಳುವುದು ಕಷ್ಟ. ಒಬ್ಬ ತ್ಯಾಗಮಯಿ ಹುಡುಗ ಇನ್ನೊಬ್ಬರ ಜೀವನದಲ್ಲಿ ಬೆಳಕು ತರುವ ಕೆಲವು ಚಿತ್ರಗಳು ಬಂದಿವೆ. “ಇರುವುದೆಲ್ಲವ ಬಿಟ್ಟು’ ಸಹ ಅಂಥದ್ದೊಂದು ಪ್ರಯತ್ನ. ಅದನ್ನೇ ವಿಭಿನ್ನವಾಗಿ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ಕಾಂತಾ ಕನ್ನಲ್ಲಿ. ಇಲ್ಲಿ ಪ್ರೇಮ, ಸ್ನೇಹ, ತ್ಯಾಗ, ತಾಯಿ-ಮಗನ ಸೆಂಟಿಮೆಂಟ್‌, ತಂದೆ-ಮಗಳ ಸೆಂಟಿಮೆಂಟ್‌ ಎಲ್ಲವನ್ನೂ ಸೇರಿಸಿ ಅವರೊಂದು ಚಿತ್ರ ಮಾಡಿದ್ದಾರೆ.

ಇಲ್ಲಿ ಫೈಟು, ಬಿಲ್ಡಪ್ಪುಗಳನ್ನೆಲ್ಲಾ ನಿರೀಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲೊಂದು ಸಾಫ್ಟ್ ಆದ ಕಥೆ ಇದೆ. ಅದನ್ನು ಅಷ್ಟೇ ಸಾಫ್ಟ್ ಆಗಿ ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕರು. ಈ ಚಿತ್ರದ ಮೂಲಕ ಹಲವು ವಿಚಾರಗಳನ್ನು ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಪ್ರಮುಖವಾಗಿ ಇಗೋನ ಪಕ್ಕಕ್ಕಿಟ್ಟು ಜೀವನ ಸಾಗಿಸಿದರೆ, ಎಲ್ಲವೂ ಸರಾಗ ಎಂದು ಹೇಳಲಾಗಿದೆ. ಹಾಗೆ ನೋಡಿದರೆ, ಇಲ್ಲೊಂದು ವಿಶೇಷವಾದ ಕಥೆ ಅಂತೇನೂ ಇಲ್ಲ.

ಅಷ್ಟೇ ಅಲ್ಲ, ಚಿತ್ರ ಅಲ್ಲಲ್ಲಿ ನಿಧಾನವಾಗುತ್ತಾ ಹೋಗುತ್ತದೆ. ಕೆಲವು ನಿಮಿಷಗಳ ನಂತರ ಮತ್ತೆ ಚಿತ್ರವನ್ನು ಟ್ರಾಕ್‌ಗೆ ತೆಗೆದುಕೊಂಡು ಬರುವ ಅವರು, ಒಂದಿಷ್ಟು ಘಟನೆಗಳ ಮೂಲಕ ಪ್ರೇಕ್ಷಕರ ಗಂಟಲು ಉಬ್ಬುವಂತೆ ಮಾಡುವಲ್ಲಿ ಕಾಂತಾ ಯಶಸ್ವಿಯಾಗಿದ್ದಾರೆ. ಹಾಗೆ ನೋಡಿದರೆ, ಸೆಂಟಿಮೆಂಟ್‌ ದೃಶ್ಯಗಳನ್ನು ಅವರು ಬಹಳ ಸೂಕ್ಷ್ಮವಾಗಿಯಷ್ಟೇ ಅಲ್ಲ, ಮನಸ್ಸಿಗೆ ತಟ್ಟುವಂತೆ ಹಿಡಿದಿಟ್ಟಿದ್ದಾರೆ. ಚಿತ್ರದ ಹೈಲೈಟ್‌ ಎಂದರೆ ಅದು ಮೇಘನಾ ರಾಜ್‌.

Advertisement

ಇಷ್ಟು ಚಿತ್ರಗಳಲ್ಲಿ ನೋಡದ ಮೇಘನಾ ಅವರನ್ನು ಇಲ್ಲಿ ಕಾಣಬಹುದಾಗಿದೆ. ಸೆಂಟಿಮೆಂಟ್‌ ದೃಶ್ಯಗಳಲ್ಲಂತೂ ಮೇಘನಾ ನಿಮ್ಮ ಮನಸ್ಸು ತಟ್ಟುತ್ತಾರೆ. ಶ್ರೀ ಇಡೀ ಚಿತ್ರದಲ್ಲಿ ಲವಲವಿಕೆಯಿಂದ ನಟಿಸಿದ್ದರಾದರೂ, ಅವರ ಮಾತು, ತುಟಿಚಲನೆ ಇನ್ನಷ್ಟು ಸಿಂಕ್‌ ಆಗುವ ಅವಶ್ಯಕತೆ ಇತ್ತು. ತಿಲಕ್‌ಗೆ ದೊಡ್ಡ ಪಾತ್ರವಾಗಲೀ, ನಟನೆಗೆ ಸ್ಕೋಪ್‌ ಆಗಲೀ ಇಲ್ಲ. ಅಚ್ಯುತ್‌ ಕುಮಾರ್‌ ಮತ್ತು ಅರುಣ ಬಾಲರಾಜ್‌ ಚೆನ್ನಾಗಿ ನಟಿಸಿದ್ದಾರಾದರೂ, ಅವರ ಬಾಯಲ್ಲಿ ಕರಾವಳಿ ಕನ್ನಡ ಕೇಳುವುದು ಕಿರಿಕಿರಿ. ಶ್ರೀಧರ್‌ ಸಂಭ್ರಮ್‌ ಅವರ ಎರಡ್ಮೂರು ಹಾಡುಗಳು, ವಿಲಿಯಂ ಡೇವಿಡ್‌ ಅವರ ಛಾಯಾಗ್ರಹಣ ಖುಷಿಕೊಡುತ್ತದೆ.

ಚಿತ್ರ: ಇರುವುದೆಲ್ಲವ ಬಿಟ್ಟು
ನಿರ್ಮಾಣ: ದೇವರಾಜ್‌
ನಿರ್ದೇಶನ: ಕಾಂತಾ ಕನ್ನಲ್ಲಿ
ತಾರಾಗಣ: ಶ್ರೀ, ಮೇಘನಾ ರಾಜ್‌, ತಿಲಕ್‌, ಅಚ್ಯುತ್‌ ಕುಮಾರ್‌, ಅರುಣ ಬಾಲರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next