Advertisement

ಮದರಂಗಿ ಕೃಷ್ಣ ಹೊಸ ಚಿತ್ರ ಲವ್‌ಮಾಕ್ಟೆಲ್‌

01:50 PM Apr 14, 2020 | Sharanya Alva |

ನಟ ಮದರಂಗಿ ಕೃಷ್ಣ ನಿರ್ದೇಶಕರಾಗುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಬಂದಿತ್ತು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಕೃಷ್ಣ, ಆಗ ತಮ್ಮ ಚಿತ್ರಕ್ಕಿನ್ನೂ ನಾಮಕರಣ ಮಾಡಿರಲಿಲ್ಲ. ಈಗ ಚಿತ್ರಕ್ಕೆ “ಲವ್‌ ಮಾಕ್ಟೆಲ್‌’ ಎಂದು ಹೆಸರಿಟ್ಟಿದ್ದಾರೆ.

Advertisement

ವಿಶೇಷವೆಂದರೆ, ಚಿತ್ರದ ಶೀರ್ಷಿಕೆ ಹಾಗೂ ಮೊದಲ ಪೋಸ್ಟರ್‌ ಅನ್ನು ನಟ ಸುದೀಪ್‌ ಅವರು ಬಿಡುಗಡೆ ಮಾಡುತ್ತಿದ್ದಾರೆ. ಹೌದು, ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ನಿರ್ದೇಶಕ ಕಮ್‌ ನಟ ಕೃಷ್ಣ, “ಹೊಸ ವರ್ಷಕ್ಕೆ  ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್‌ ಅನ್ನು ಸುದೀಪ್‌ ಅವರು ಅನಾವರಣ ಮಾಡಲಿದ್ದಾರೆ. ಸದ್ಯಕ್ಕೆ ಶೀರ್ಷಿಕೆ, ಪೋಸ್ಟರ್‌ ವಿನ್ಯಾಸದ ಕೆಲಸ ನಡೆಯುತ್ತಿದೆ. ಇನ್ನು, “ಲವ್‌ ಮಾಕ್ಟೆಲ್‌’ ಶೀರ್ಷಿಕೆ ಬಗ್ಗೆ ಹೇಳುವುದಾದರೆ, ಮಾಕ್ಟೆಲ್‌ ಜ್ಯೂಸ್‌ ಬಗ್ಗೆ ಎಲ್ಲರಿಗೂ ಗೊತ್ತು. ಹಣ್ಣುಗಳ ಮಿಕ್ಸ್‌ ಜ್ಯೂಸ್‌ಗೆ “ಮಾಕ್ಟೆಲ್‌’ ಎನ್ನುತ್ತಾರೆ.

ಹಾಗೆಯೇ, ಚಿತ್ರದಲ್ಲೂ ಸಹ ನಾಯಕ ಮೂರ್‍ನಾಲ್ಕು ಹುಡುಗಿಯರ ಜೊತೆ ಲವ್‌ ಮಾಡ್ತಾನೆ. ಕಥೆ ಕೂಡ ಸಂಪೂರ್ಣವಾಗಿ ಪ್ರೀತಿ ಮೇಲೆಯೇ ಸಾಗುತ್ತದೆ. ಚಿತ್ರದ ಕಥೆಯಲ್ಲಿ ಸಾಕಷ್ಟು ಪ್ರೀತಿಗೆ ಸಂಬಂಧಿಸಿದ ವಿಷಯಗಳಿವೆ. ಹಾಗಾಗಿ, ಚಿತ್ರಕ್ಕೆ “ಲವ್‌ ಮಾಕ್ಟೆಲ್‌’ ಎಂದು ಹೆಸರಿಟ್ಟಿದ್ದೇನೆ.
ಅದು ಕಥೆಗೆ ಪೂರಕವಾಗಿದ್ದು, ಈಗಿನ ಟ್ರೆಂಡ್‌ಗೂ ಸರಿಹೊಂದುತ್ತೆ ಎಂಬ ಭಾವನೆಯಿಂದ ಇಡಲಾಗಿದೆ. ಸುದೀಪ್‌ ಅವರ ಬಳಿ ಹೋಗಿ, ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್‌ ಬಿಡುಗಡೆ ಮಾಡಿಕೊಡಬೇಕು ಎಂಬ ಮನವಿ ಇಟ್ಟಾಗ, ಪ್ರೀತಿಯಿಂದಲೇ ಅವರು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ.

ಹೊಸ ವರ್ಷದ ದಿನದಂದು “ಲವ್‌ ಮಾಕ್ಟೆಲ್‌’ ಶೀರ್ಷಿಕೆ ಜೊತೆಗೆ ಮೊದಲ ಪೋಸ್ಟರ್‌ ಕೂಡ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ಕೊಡುತ್ತಾರೆ ಕೃಷ್ಣ. ಈಗಾಗಲೇ ಚಿತ್ರದ ಚಿತ್ರೀಕರಣ ಶೇ.50 ರಷ್ಟು ನಡೆದಿದೆ. ಮೊದಲ ನಿರ್ದೇಶನವಾಗಿರುವುದರಿಂದ ಸಾಕಷ್ಟು ಅನುಭವ ಕೂಡ ಆಗಿದೆ ಎನ್ನುವ ಮದರಂಗಿ ಕೃಷ್ಣ, “ಇಲ್ಲಿ ಯಾವುದೇ ಫ‌ಲಿತಾಂಶ ಬಂದರೂ ನಾನೇ ಜವಾಬ್ದಾರಿ ಹೊರಬೇಕು. ಹಾಗಾಗಿ, ತುಂಬಾ ಕಾಳಜಿ ವಹಿಸಿ, ಎಲ್ಲಾ ವಿಭಾಗದಲ್ಲೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇನೆ. ಇನ್ನೂ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ.

Advertisement

ಚಿತ್ರದಲ್ಲಿ ನಾಲ್ಕು ಮಾಂಟೇಜಸ್‌ ಹಾಡುಗಳಿವೆ. ಆದರೆ, ಸಂಗೀತ ನಿರ್ದೇಶಕರಿನ್ನೂ ಫಿಕ್ಸ್‌ ಆಗಿಲ್ಲ. ಕ್ರೇಜಿಮೈಂಡ್ಸ್‌ನ ಶ್ರೀ ಸಂಕಲನದ ಜೊತೆಗೆ ಇದೇ ಮೊದಲ ಬಾರಿಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೃಷ್ಣ ಟಾಕೀಸ್‌ ಬ್ಯಾನರ್‌ನಲ್ಲೇ ತಯಾರಾಗುತ್ತಿರುವ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಆ ಪೈಕಿ ಈಗ ಮಿಲನ ನಾಗರಾಜ್‌ ಮಾತ್ರ ಪಕ್ಕಾ ಆಗಿದ್ದಾರೆ. ಉಳಿದಂತೆ ಇಬ್ಬರು ಆಯ್ಕೆಯಾಗಬೇಕಿದೆ.

ಇದೊಂದು ಎಮೋಷನಲ್‌ ಲವ್‌ಸ್ಟೋರಿಯಾಗಿದ್ದು, ಮೂರು ಭರ್ಜರಿ ಆ್ಯಕ್ಷನ್‌ ಕೂಡ ಇರಲಿದೆ. ನಾಯಕನ ಬದುಕಿನಲ್ಲಿ ಮೂರು ಹಂತಗಳು ಬರಲಿದ್ದು, ಒಂದೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆ ಕಥೆ ಮೂಲಕ ನಾಯಕನ ಲೈಫ್ ಕೂಡ ಬದಲಾಗುತ್ತಾ
ಹೋಗುತ್ತದೆ’ ಎಂಬುದು ಕಥೆ ಎನ್ನುತ್ತಾರೆ ಕೃಷ್ಣ.

Advertisement

Udayavani is now on Telegram. Click here to join our channel and stay updated with the latest news.

Next