Advertisement

ಲವ್ ಜಿಹಾದ್ ಪಿಡುಗು ತಕ್ಷಣ ಕೊನೆಯಾಗಬೇಕು: ಶೋಭಾ ಕರಂದ್ಲಾಜೆ

04:09 PM May 31, 2022 | Team Udayavani |

ಉಡುಪಿ: ಲವ್ ಜಿಹಾದ್ ಒಂದು ಪಿಡುಗು. ಇದು ತಕ್ಷಣ ಕೊನೆಯಾಗಬೇಕು. ಲವ್ ಜಿಹಾದಿಗೆ ಹೆಣ್ಣುಮಕ್ಕಳು ಬಲಿಯಾದರೆ ಅವರ ತಂದೆ-ತಾಯಿಯ ದುಃಖ ಕೇಳುವವರ್ಯಾರು? ಲವ್ ಜಿಹಾದ್ ತಡೆಗೆ ಬಲವಾದ ಕಾನೂನು ಜಾರಿ ಮಾಡುವ ಅಗತ್ಯವಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ನಮ್ಮ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಪ್ರಕ್ರಿಯೆ. ಪ್ರೀತಿಯ ಹೆಸರಲ್ಲಿ ಮದುವೆಯಾಗುತ್ತಾರೆ ಅಥವಾ ಮದುವೆಯಾಗದೆ ಮೋಸ ಮಾಡುತ್ತಾರೆ. ಕೈಗೊಂದು ಮಗುವನ್ನು ಕೊಟ್ಟು ಓಡಿ ಹೋಗುತ್ತಾರೆ. ನಂತರ ತಲಾಖ್ ಎಂದು ಹೇಳಿ ಇನ್ನೊಬ್ವರನ್ನು ಮದುವೆಯಾಗುತ್ತಾರೆ. ದೇಶದ ಅನೇಕ ಭಾಗಗಳಲ್ಲಿ ನಮ್ಮ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದಿನಿಂದಲೂ ಈ ಬಗ್ಗೆ ವಾದ ಮಾಡಿಕೊಂಡು ಬಂದಿದ್ದೇನೆ ಎಂದರು.

ಮಸಿ ಬಳಿಯುವುದು ಸರಿಯಲ್ಲ: ರೈತ ನಾಯಕ ರಾಕೇಶ್ ಟಿಕಾಯತ್ ಗೆ ಮಸಿ ಬಳೆದ ವಿಚಾರವಾಗಿ ಮಾತನಾಡಿದ ಸಚಿವೆ, ಯಾವುದೇ ಹೋರಾಟಗಾರರ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಪ್ರಜಾತಂತ್ರದಲ್ಲಿ ಹೋರಾಟಕ್ಕೆ ಬಲವಿದೆ. ಲೋಕಸಭೆ ರಾಜ್ಯಸಭೆ ವಿಧಾನಸಭೆ ವಿಧಾನ ಪರಿಷತ್ ಗಳಲ್ಲಿ ಪ್ರತಿಪಕ್ಷಕ್ಕೆ ದೊಡ್ಡ ತಾಕತ್ತಿದೆ. ಸರಕಾರದ ಲೋಪದೋಷಗಳನ್ನು ಸರಿಪಡಿಸಿ ಎಚ್ಚರಗೊಳಿಸುವ ಕೆಲಸ ಹೋರಾಟದಿಂದಲೇ ಸಾಧ್ಯ. ಟಿಕಾಯತ್ ತನ್ನದೇ ಒಂದು ವಿಚಾರ ಇಟ್ಟು ಹೋರಾಟ ನಡೆಸುತ್ತಿದ್ದಾರೆ. ಅದರಿಂದ ರೈತರಿಗೆ ಎಷ್ಟು ಲಾಭವಾಯ್ತು, ಎಷ್ಟು ನಷ್ಟವಾಯಿತೆಂದು ಅವರೇ ಅವಲೋಕನ ಮಾಡಲಿ. ಆದರೆ ಯಾವುದೇ ವ್ಯಕ್ತಿಯ ಮೇಲೆ ಈ ರೀತಿ ವೈಯಕ್ತಿಕ ದ್ವೇಷ ಕಾರುವುದು ಸರಿಯಲ್ಲ. ಮಸಿ ಬಳಿಯುವ ಕೆಲಸ ಯಾರು ಕೂಡ ಮಾಡಬಾರದು, ಅದು ಶೋಭೆ ತರುವಂತದ್ದಲ್ಲ ಎಂದರು.

ವಿವಾದವಿರದವರು ಸಮಿತಿಯಲ್ಲಿರಲಿ: ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರ ಬಗ್ಗೆ ನಮ್ಮ ಮಕ್ಕಳಿಗೆ ಗೊತ್ತಿರುವುದಿಲ್ಲ. ನಮ್ಮ ಮಕ್ಕಳು ನಮ್ಮ ಚರಿತ್ರೆಯನ್ನು ಕಲಿಯಬೇಕು. ನಮ್ಮ ಇತಿಹಾಸದಲ್ಲಿ ಆಗಿರುವ ಲೋಪದೋಷಗಳನ್ನು ತಿಳಿದುಕೊಳ್ಳಬೇಕು. ಬ್ರಿಟಿಷರು ದೇಶಕ್ಕೆ ಯಾಕೆ ಬಂದರು? ಮೊಘಲರು ಈ ದೇಶಕ್ಕೆ ಯಾಕೆ ಬಂದರು? ಘಜ್ನಿ ಮಹಮ್ಮದ್ 18 ಬಾರಿ ದಾಳಿ ಮಾಡಿದ್ದು ಯಾಕೆ? ನಮ್ಮ ಕೊರತೆ ಏನು? ಎಲ್ಲವನ್ನು ನಮ್ಮ ಮಕ್ಕಳು ಅಧ್ಯಯನ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವ್ಯಕ್ತಿ ಅಥವಾ ಸಮಿತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು. ನಮ್ಮ ಕನ್ನಡ ಸಾಹಿತ್ಯ ಸತ್ವಯುತವಾಗಿದೆ, ಕನ್ನಡದ ಸಾಹಿತಿ ಕವಿಗಳಲ್ಲಿ ಅಷ್ಟೊಂದು ತಾಕತ್ತಿದೆ. ನಮ್ಮ ರಾಜ್ಯದ ಏಕೀಕರಣದಂತಹ ವಿಚಾರಗಳು ಕೂಡ ಮಕ್ಕಳಿಗೆ ತಿಳಿಯುವಂತಾಗಬೇಕು ಎಂದರು.

Advertisement

ಇದನ್ನೂ ಓದಿ:ಹುಣಸೂರು: ಚಿಲ್ಕುಂದ; ವೇತನಕ್ಕಾಗಿ ಆಗ್ರಹಿಸಿ ಗ್ರಾ.ಪಂ.ಸಿಬ್ಬಂದಿಗಳ ಪ್ರತಿಭಟನೆ

ವಿವಾದವಿಲ್ಲದಂತಹ ವ್ಯಕ್ತಿಗಳನ್ನು ಸಮಿತಿಯಲ್ಲಿ ಜೋಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಎಲ್ಲರಿಗೂ ಪ್ರಿಯವಾದ ವಿಚಾರಗಳನ್ನು ಹೇಳಬೇಕು. ಎಲ್ಲರನ್ನೂ ಖುಷಿಪಡಿಸುವುದು ಕಷ್ಟ, ಎಲ್ಲರೂ ಸಮಾನ ಎನ್ನುವ ರೀತಿಯಲ್ಲಿ ಪರಿಷ್ಕರಣೆಯಾಗಬೇಕು. ಮಕ್ಕಳ ಮನಸ್ಸನ್ನು ಪುಳಕಗೊಳಿಸುವ, ವಿಕಸಿತಗೊಳಿಸುವ ಪಠ್ಯಗಳು ಬರಬೇಕು ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಹಿಜಾಬ್ ಆದೇಶ ಪಾಲಿಸಿ: ಮಂಗಳೂರಿನಲ್ಲಿ ಹಿಜಾಬ್ ಗಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಹೋರಾಟದ ವಿಚಾರವಾಗಿ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಸ್ಪಷ್ಟವಾಗಿದೆ. ತರಗತಿಯ ಒಳಗೆ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿದೆ. ಈ ನೆಲದಲ್ಲಿ ಬದುಕುವಂಥ ಕಾನೂನಿಗೆ ಗೌರವ ಕೊಡುವಂತ ಎಲ್ಲರೂ ಈ ಆದೇಶ ಪಾಲಿಸಬೇಕು. ಹೈಕೋರ್ಟ್ ಕಾನೂನು ಉಲ್ಲಂಘನೆ ಮಾಡುತ್ತೇವೆನ್ನುವುದು ಸರಿಯಲ್ಲ. ಅಂಥವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಇದು ದೇಶದ್ರೋಹಿ ಚಟುವಟಿಕೆಗೆ ಕಾರಣವಾಗುತ್ತದೆ ಎಂದರು.

ಎಲ್ಲವನ್ನೂ ಸರ್ಕಾರ ಗಮನಿಸುತ್ತಿದೆ: ಮಳಲಿ ಮಸೀದಿ ವಿಚಾರ, ಎಸ್ ಡಿಪಿಐ ಎಚ್ಚರಿಕೆ ವಿಚಾರವಾಗಿ ಕೇಳಿ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಈ ವಿಚಾರವನ್ನು ಗಮನಿಸುತ್ತಿದೆ. ಇತಿಹಾಸಗಳಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಬೇಕು. ಈ ಬಗ್ಗೆ ಎಲ್ಲರೂ ಆಲೋಚಿಸಿದರೆ ಒಟ್ಟಾಗಿ ಬದುಕಬಹುದು ಎಂದರು.

ಹಲವಾರು ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಾವ್ಯಾರೂ ಇದಕ್ಕೆ ಸಾಕ್ಷಿಗಳಲ್ಲ. ನಮ್ಮ ಹಿರಿಯರ ಕಾಲದಲ್ಲಿ ಕೆಲವೊಂದು ತಪ್ಪುಗಳಾಗಿವೆ. ಇತಿಹಾಸಜ್ಞರು ಉತ್ಖನನ ಮಾಡಿ ಯಾವುದು ಸರಿ ಯಾವುದು ತಪ್ಪು ಎನ್ನುವ ಬಗ್ಗೆ ತಿಳಿಸಬೇಕು. ಎಲ್ಲರೂ ಈ ಬಗ್ಗೆ ಒಟ್ಟಾಗಿ ಯೋಚನೆ ಮಾಡಿದರೆ ಖಂಡಿತ ಈ ಸಮಸ್ಯೆ ಬಗೆಹರಿಸಬಹುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next