Advertisement

ಪ್ರೇಮವೆಂಬುದು ಆಕರ್ಷಣೆ ಅಲ್ಲ, ಅನ್ವೇಷಣೆ ಕಾಣಾ…

12:30 AM Feb 14, 2019 | |

ಪ್ರೇಮದ ಮುಂದಿನ ಅಧ್ಯಾಯ ವಿವಾಹ, ಸರಿ. ಆದರೆ ಹೆಣ್ಣು, ಗಂಡು ಇಬ್ಬರ ಪೋಷಕರೂ ಸಮ್ಮತಿಸದಿದ್ದರೆ ಪ್ರಶ್ನೆ ಎದುರಾಗುತ್ತದೆ. ಅವರು ಒಪ್ಪಿದರೂ ಅನ್ನಿ. ಮುಂದೆ ಪೋಷಕರ ನಡುವೆ ಪರಸ್ಪರ ಸೌಹಾರ್ದವಿದ್ದೀತೆನ್ನಲು ಯಾವ ಖಾತರಿ? ನಾವೇನೇ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದರೂ ಅವು ಚಲಾವಣೆಗೆ ಬರಬೇಕಲ್ಲ! ಜಾತಿ ಅಡ್ಡ ಬರಬಹುದು. ಪೋಷಕರು ಎಷ್ಟರ‌ಮಟ್ಟಿಗೆ ಜಾತ್ಯತೀತ ಮನೋವೃತ್ತಿಗೆ ಅಣಿಯಾಗಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. 

Advertisement

ಮೊದಲಿಗೆ ಅಮೆರಿಕ, ಇಂಗ್ಲೆಂಡಿನಲ್ಲಿ ಮಾತ್ರವೆ ಸಡಗರದಿಂದ ಆಚರಿಸಲಾಗುತ್ತಿದ್ದ “ಪ್ರೇಮಿಗಳ ದಿನ’ ಇಂದಿಗೆ ಜಾಗತಿಕವಾಗಿ ಹಬ್ಬವೆಂದೇ ಸಂಭ್ರಮಿಸಲಾಗುತ್ತಿದೆ. ಅಂದಹಾಗೆ ಗಂಡು-ಹೆಣ್ಣು ಪರಸ್ಪರ ಪ್ರೇಮ ವಿವೇದಿಸಿಕೊಳ್ಳಲು ಮಾತ್ರ “ಪ್ರೇಮಿಗಳ ದಿನ’ ಎಂದೇನಿಲ್ಲ. ಮಕ್ಕಳು ಹಿರಿಯರನ್ನು, ಶಿಷ್ಯರು ಗುರುವರ್ಯರನ್ನು, ಮಾಲೀಕರು ಕಾರ್ಮಿಕರನ್ನು, ಅಧಿಕಾರಿಗಳು ನೌಕರರನ್ನು ಗೌರವಿಸುವ ದಿನವಾಗಿಯೂ ಈ ಸಂದರ್ಭವನ್ನು ಪರಿಗಣಿಸಬಹುದು. ಪ್ರೀತಿ, ಪ್ರೇಮದ ಇತರೆ ಮುಖಗಳನ್ನೂ ಅನುಸಂಧಾನಿಸಬೇಕು.

ಅವನ ಮತ್ತು ಅವಳ ಪರಿಚಯವಾಯಿತು. ಪರಿಚಯ ಆತ್ಮೀಯತೆಗೆ, ಆತ್ಮೀಯತೆ ಪ್ರೀತಿಗೆ, ಪ್ರೀತಿ ಕ್ರಮೇಣ ಪ್ರೇಮಕ್ಕೆ ತಿರುಗಿತು ಎನ್ನುವ ಒಕ್ಕಣೆ ಕಥೆ ಹೆಣೆಯಲು ಸರಿಯೇ. ಆದರೆ ನಿಜ ಜೀವನದ ಸಂಗತಿ ಹಾಗಾಗದು. ಪ್ರಣಯಿಗಳಲ್ಲಿ ಒಂದು ಸ್ಪಷ್ಟತೆ ಅತ್ಯಗತ್ಯ. ಪ್ರೀತಿ, ಪ್ರೇಮ ಅಕ್ಕ ಪಕ್ಕದಲ್ಲಿ ಕೂತು ಒಂದು ಸಿನಿಮಾವನ್ನು ನೋಡುವಷ್ಟು ಅಥವಾ ಮಸಾಲೆ/ಪಿಜಾl ಚಪ್ಪರಿಸುವಷ್ಟು ಸರಳವಲ್ಲ. ಹದಿಹರೆಯದ  ಗಂಡು, ಹೆಣ್ಣು ಪರಸ್ಪರ ಪೂರ್ವಾಪರ ತಿಳಿಯದೆ ಕೇವಲ ಆಕರ್ಷಣೆಗೆ ಮಾರು ಹೋಗಿ ಉದ್ವೇಗದಿಂದ ನಾ ನಿನ್ನ ಬಿಟ್ಟಿರಲಾರೆ, ನೀನೇ ಎಲ್ಲಾ ಮುಂತಾಗಿ ಹಾರಾಡು ವುದು ತಕ್ಕುದಲ್ಲ. ಎಚ್ಚರ ತಪ್ಪಿದರೆ ಭವಿತವ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಹೆಣ್ಣೇ ಬಲಿಪಶುವಾಗುವ ಸಂಭಾವ್ಯತೆ ಹೆಚ್ಚು ಎನ್ನುವುದು  ನಿಷ್ಠುರ ಸತ್ಯ.  

ಅಮೆರಿಕದ ತಂತ್ರಜ್ಞ ಜಾರ್ಜ್‌ ಮೆಲ್ವಿಲೆ ಎಂಬಾತ ಪ್ರಥಮ ಪ್ರೇಮ ಕೊನೆಯದೆಂದೂ ಕೊನೆಯ ಪ್ರೇಮ ಪ್ರಥಮದ್ದೆಂದೂ ಭ್ರಮಿಸಲಾಗುತ್ತದೆ. ದಿನೇ ದಿನೇ ಬದುಕಿನ ಶೈಲಿ ನಾಗಾಲೋಟದಲ್ಲಿ ಬದಲಾಗುತ್ತಿದೆ. ಇಡೀ ಜಗತ್ತು ಕಿರು ಗ್ರಾಮವಾಗಿದೆ. ಸುಮಾರು ಒಂದೂವರೆ ಬಿಲಿಯನ್‌ ಮಂದಿ ಫೇಸ್‌ಬುಕ್‌ ಬಳಸುತ್ತಾರೆ. ಶೇಕಡ 78 ರಷ್ಟು ಕಾಲೇಜಿನ ವಿದ್ಯಾರ್ಥಿಗಳು, ಶೇಕಡಾ 72 ರಷ್ಟು ಹೈಸ್ಕೂಲಿನ ವಿದ್ಯಾರ್ಥಿಗಳು ಒಂದು ದಿನಮಾನದಲ್ಲಿ ಕನಿಷ್ಠ ಎರಡೂವರೆ ತಾಸುಗಳು ಒಂದಲ್ಲೊಂದು ಬಗೆಯ ಸಾಮಾಜಿಕ ಜಾಲ ತಾಣದಲ್ಲಿ ಮಗ್ನರಾಗಿರುತ್ತಾರೆ. ಮಾಹಿ ತಿಗೆ, ಜ್ಞಾನಾರ್ಜನೆಗೆ ಅದನ್ನು ಬಳಸಿದರೆ ಅಡ್ಡಿಯಿಲ್ಲ. ಆದರೆ ಕೈಯಾರೆ ವ್ಯತಿರಿಕ್ತ ಪರಿಣಾಮಗಳನ್ನು ಹದಿಹರೆಯದವರು ಮೇಲೆಳೆದುಕೊಂಡರೆ?! ಅದೂ ವಿದ್ಯಾ ರ್ಜ ನೆಯ ದೆಸೆಯಲ್ಲಿ ಪ್ರೀತಿ, ಪ್ರಣಯ, ಪ್ರೇಮವೆಂಬ ಮಾಯಾ ಜಿಂಕೆ ಯನ್ನ ರಸು ವುದು ಸರ್ವಥಾ ಯುಕ್ತವಲ್ಲ. ವಿದ್ಯಾಲಯ, ಗ್ರಂಥಾಲಯ ಪ್ರೇಮಿಗಳು ಸಂಧಿಸುವ ತಾಣಗಳಾದರೆ “ಸಾ ವಿದ್ಯಾ ಯಾ ವಿಮುಕ್ತಯೇ’ (ಸಲ್ಲದ ರೀತಿ ನೀತಿಗಳಿಂದ ಯಾವುದು ಮುಕ್ತಗೊಳಿಸುವುದೋ ಅದೇ ವಿದ್ಯೆ) ಎಂಬ ನುಡಿ ಅರ್ಥಹೀನ ವಾಗುತ್ತದೆ. ಯುವಕ, ಯುವತಿರಲ್ಲಿ ಅನುಕರಣಾ ಗೀಳು ಹೆಚ್ಚುತ್ತಿದೆ. ಕೆಲವರಿಗೆ ತಮ್ಮ ಗೆಳೆಯರು ಫೇಸ್‌ಬುಕ್‌ನಲ್ಲಿ ಹೊಸ ದಿರಸು ಧರಿಸಿದರೆ, ಹೊಸ ಕೇಶ ವಿನ್ಯಾಸ ಮಾಡಿಕೊಂಡರೆ, ಭಿನ್ನ ನಿಲುವಿನ ಫೋಟೋ ಹಾಕಿಕೊಂಡ‌ರೆ ತಾವೂ ಅದನ್ನೇ ಅನುಸರಿಸುವ ತವಕ. 

ಪ್ರೀತಿ, ಪ್ರೇಮ ಮನಷ್ಯನ ಬದುಕಿಗೆ ಪ್ರೇರಣೆ. ಅದರ ಹೊರತಾಗಿ ಜೀವನ ಬರಡು ಒಪ್ಪೋಣ. ಆದರೆ ಅದಕ್ಕೊಂದು ಶಿಸ್ತಿದೆ, ಶಿಷ್ಟಾಚಾರವಿದೆ. ಇಲ್ಲೊಂದು ಮಾತು ಗಮನಿಸಲೇಬೇಕಿದೆ. ಪ್ರೀತಿ ದೈಹಿಕ ಆಕರ್ಷಣೆಗೂ ಮೀರಿದ್ದು. ಅದೊಂದು ಶೋಧ, ಅನ್ವೇಷಣೆ. ಪ್ರೀತಿ, ಪ್ರೇಮದ ಮುಂದಿನ ಅಧ್ಯಾಯ ವಿವಾಹ, ಸರಿ. ಆದರೆ ಹೆಣ್ಣು, ಗಂಡು ಇಬ್ಬರ ಪೋಷಕರೂ ಸಮ್ಮತಿಸದಿದ್ದರೆ ಪ್ರಶ್ನೆ ಎದುರಾಗುತ್ತದೆ. ಅಂತೂ ಹೇಗೋ ಆಯ್ತು ಅಂತ ಅವರು ಒಪ್ಪಿದರೂ ಅನ್ನಿ. ಮುಂದೆ ಪೋಷಕರ ನಡುವೆ ಪರಸ್ಪರ ಸೌಹಾರ್ದವಿದ್ದೀತೆನ್ನಲು ಯಾವ ಖಾತರಿ? ನಾವೇನೇ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದರೂ ಅವು ಚಲಾವಣೆಗೆ ಬರಬೇಕಲ್ಲ! ಜಾತಿ ಅಡ್ಡ ಬರಬಹುದು. ಪೋಷಕರು ಎಷ್ಟರ‌ಮಟ್ಟಿಗೆ ಜಾತ್ಯತೀತ ಮನೋವೃತ್ತಿಗೆ ಅಣಿಯಾಗಿದ್ದಾರೆ. ಸೊಸೆ/ಅಳಿಯ ಒಂದಲ್ಲೊಂದು ಬಗೆಯಲ್ಲಿ ಹಿಂಸೆಗೆ ಗುರಿಯಾಗುವುದು, ಊರಿನಿಂದ ಬಹಿಷ್ಕಾರ, ಮರ್ಯಾದೆ ಹತ್ಯೆ ಮುಂತಾದ ಅಮಾನವೀಯತೆ ನಡೆದೇ ಇದೆ. ವರದಕ್ಷಿಣೆ ಭೂತಕ್ಕೆ ತನ್ನ ವ್ಯಗ್ರತೆ, ವಕ್ರತನವನ್ನು ನಿಲ್ಲಿಸಲು ಇನ್ನೆಷ್ಟು ವರ್ಷಗಳು ಬೇಕೋ? ನಾವು ಯಾವುದನ್ನು ವಿವಾಹ ಎಂದು ಕರೆಯುತ್ತೇವೆಯೋ ಅದು ಅತ್ಯಂತ ಪ್ರಾಚೀನ ಸಾಮಾಜಿಕ ವ್ಯವಸ್ಥೆ. ಜಗನ್ಮಾನ್ಯ ಏರ್ಪಾಡು. ಬದುಕಿನುದ್ದಕ್ಕೂ ನಾವು ಜೊತೆಯಾಗಿದ್ದು ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತೇವೆಂದು ಹತ್ತು ಜನರ ಸಮ್ಮುಖದಲ್ಲಿ ಪ್ರಮಾಣ ಮಾಡುವ ಸಂದರ್ಭ ವಿಶಿಷ್ಟವಾದುದು. ಈ ನಡಾವಳಿ ಜಗತ್ತಿನ ಎಲ್ಲ ನಾಗರಿಕತೆಗಳಲ್ಲೂ ಇದೆ. ಅದರ ಸ್ವರೂಪ ಭಿನ್ನ ಭಿನ್ನವಾಗಿದ್ದರೂ ಪರಿಕಲ್ಪನೆ ಒಂದೇ. ಒಂದು ಪ್ರಸಂಗವನ್ನು ಹಂಚಿಕೊಳ್ಳ ಬಯಸುತ್ತೇನೆ. ವಾರದ ಹಿಂದೆಯಷ್ಟೆ ಬೆಂಗಳೂರಿನ ಹನುಮಂತನಗರದ ಬಸ್‌ ನಿಲ್ದಾಣದಲ್ಲಿ ನಿಂತಿದ್ದೆ. ಗೋಧೂಳೀ ಮುಹೂರ್ತ. ಮೂವತ್ತೆçದರ ಪ್ರಾಯದ ಪುರುಷ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ಬಂದು ನಿಂತರು. ಅವರು ತಾವು ಧರಿಸಿದ್ದ ಹೆಲ್ಮೆಟ್‌ ಅಲ್ಲದೆ ಇನ್ನೊಂದನ್ನು ಹಿಂಬದಿ ಸೀಟಿಗೆ ಲಗತ್ತಿಸಿದ್ದರು. ಕುತೂಹಲಗೊಂಡೆ. ಅರೇ! ಒಂದು ಬಸ್‌ ಬಂದೇಬಿಟ್ಟತು. ಇಳಿದವರ ಪೈಕಿ ಮಹಿಳೆಯೊಬ್ಬರು ಸ್ಕೂಟರಿನತ್ತ ಹೆಜ್ಜೆಯಿರಿಸಿದರೆಂದರೆ ಇನ್ನು ಹೇಳುವುದೇನಿದೆ? ಕೈ ಹಿಡಿದಾಕೆಗೆ ಹೆಲ್ಮೆಟ್‌! 

Advertisement

ಬದುಕನ್ನು ಹಂಚಿಕೊಂಡು ಬಾಳುವುದೆಂದರೆ ಇದೇ ಅಲ್ಲವೇ?  ಮದುವೆ ಎಂಬ ಅಡಿಗಲ್ಲಿನ ಮೇಲೆಯೇ ಸ್ವಾಸ್ಥ್ಯ ಸಮಾಜದ ನಿರ್ಮಿತಿ ಎನ್ನುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ. ಹಾಗಾಗಿ ಗುಲಾಬಿ ಹೂ ಹಿಡಿಯುವ ಮುನ್ನ ಯುವಕ, ಯುವತಿಯವರು ಪದೇ ಪದೇ ತಮ್ಮನ್ನು ತಾವೇ ಪ್ರಶ್ನಿಸಿಕೊಂಡೇ ಹೆಜ್ಜೆಯಿಡಬೇಕು. ಸಿನಿಮಾದ ಸನ್ನಿವೇಶಗಳನ್ನು ಆವಾಹಿಸಿಕೊಂಡು ಮರ ಸುತ್ತುವುದು, ಹಾಡುಗಳನ್ನು ಗುನುಗುವುದು, ಸಂಭಾಷಣೆಗಳನ್ನು ಮೆಲುಕು ಹಾಕುವುದು, ಬೈಕ್‌ ಓಡಿಸುವುದು ಅತಿ ಬಾಲಿಶ. ಸಿನಿಮಾದಲ್ಲಿ ನಿರ್ದೇಶಕರ ಅಣತಿಯಂತೆ ಸಂದರ್ಭಗಳು ಸೃಷ್ಟಿಯಾಗುತ್ತವೆ, ಸಾಗುತ್ತವೆ. ಆದರೆ ನಮ್ಮ ಬದುಕಿಗೆ ನಾವೇ ನಿರ್ದೇಶಕರಾಗುವಷ್ಟು ಪ್ರಬುದ್ಧತೆ ಬೆಳೆಸಿಕೊಳ್ಳಬೇಕು. ಒಲವಿನ ಕವಿ ಕೆ,ಎಸ್‌,ನ. ಅವರ “ನಮ್ಮೂರು ನವಿಲೂರು’ ಕವನ ಸಂಕಲನದ ಸಾಲುಗಳು ಅರ್ಥಗರ್ಭಿತವಾಗಿವೆ:

       “ಹಗಲೆಲ್ಲ ದುಡಿಯುವೆನು ಕೆಸರ ಗದ್ದೆಯಲಿ 
        ಶ್ರಮವೆಲ್ಲ ಹೊನ್ನಹುದು ವರ್ಷದಂತ್ಯದಲಿ
        ನಿನ್ನ ತಟ್ಟೆಯಲ್ಲಿ ಅನ್ನ, ನೊರೆ ಹಾಲು
        ನನ್ನ ನುಡಿಯ ಕೇಳು ನನ್ನೊಡನೆ ಬಾಳು’

ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next