Advertisement

ಗಡ್ಡ ತೆಗೆದರೆ ರೌಡಿಯಂತೆ ಕಾಣ್ತೇನೆ!

12:43 PM Jan 27, 2018 | |

ಬೆಂಗಳೂರು: ನನಗೆ ಗಡ್ಡದಿಂದ ವ್ಯಕ್ತಿತ್ವ ಬಂದಿದೆ. ಗಡ್ಡ ತೆಗೆದರೆ ಯಾರೂ ಗುರುತಿಸುವುದಿಲ್ಲ. 1973ರಲ್ಲಿ ಚಳವಳಿ ವೇಳೆ ಆದ ಗಾಯ ಮಾಸಲಿಲ್ಲ. ಹಾಗಾಗಿ ಗಡ್ಡ ಬಿಡಲಾರಂಭಿಸಿದೆ. ಗಡ್ಡ ತೆಗೆದರೆ ಹಳೇ ರೌಡಿಯಂತೆ ಕಾಣುತ್ತೇನೆ. ಗೌರವ ಉಳಿಸಿಕೊಳ್ಳಲು ಗಡ್ಡ ಬಿಟ್ಟಿದ್ದೇನೆ!

Advertisement

ಹೀಗೆ ತಮ್ಮ ಗಡ್ಡದ ಮಹತ್ವವನ್ನು ಬಿಚ್ಚಿಟ್ಟವರು ಕವಿ ಡಾ.ಸಿದ್ದಲಿಂಗಯ್ಯ. ಸಪ್ನ ಬುಕ್‌ಹೌಸ್‌ ತನ್ನ 51ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಓದುಗರೊಡನೆ ಒಂದಿಷ್ಟು ಸಮಯ’ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗೆ ತಮ್ಮ ಗಡ್ಡದ ಮಹಿಮೆ ತಿಳಿಸಿದರು. ಆರಂಭದಲ್ಲಿ ಅತಿಥಿಗಳೇ ಸಂವಾದಕ್ಕಿಳಿದರು.

ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌, “ಎಷ್ಟೇ ವಯಸ್ಸಾದರೂ ಕವಿಗಳಿಗೆ ಬರೆಯಬೇಕೆಂಬ ಹುಮ್ಮಸು, ಸಂಕಲ್ಪ ಇರುತ್ತದೆ. ಆದರೆ 82ನೇ ವಯಸ್ಸಿನಲ್ಲಿ ಬರೆಯುತ್ತಾರೆ ಎಂದು ಯಾರಾದರೂ ಮಾತನಾಡಿದಾಗ ಪಾಪಪ್ರಜ್ಞೆ ಕಾಡುತ್ತದೆ. ಹಳೆಯ ಮೆಲುಕುಗಳು ಸುಂದರ ಎಂದರು.

ಪತ್ರಕರ್ತ ಪಿ.ಲಂಕೇಶ್‌ ಬಗ್ಗೆ ಪ್ರಸ್ತಾಪಿಸಿದ ಅವರು, “ಯಾರಾದರೂ ಸ್ವಲ್ಪ ಜನಪ್ರಿಯತೆ ಗಳಿಸಿದರೆ ಅವರ ಮೇಲೆ ಲಂಕೇಶ್‌ ಕಿಡಿ ಕಾರುತ್ತಿದ್ದ. ಅದು ಅಹಂಭಾವವೋ, ಆತ್ಮವಿಶ್ವಾಸವೋ ಗೊತ್ತಾಗದು. ಆದರೆ ತನ್ನದೇ ಆದ ಅದ್ಭುತ ಶೈಲಿ ರೂಢಿಸಿಕೊಂಡ. ನಿರಂಜನ ಅವರನ್ನು ಹೊರತುಪಡಿಸಿದರೆ ಆಕರ್ಷಕ ಶೈಲಿ ರೂಢಿಸಿಕೊಂಡವನು ಲಂಕೇಶ್‌ ಎಂದು ಹೇಳಿದರು.

“ಲಂಕೇಶ- ಕನ್ನಡದ ಬರ್ನಾಡ್‌ ಶಾ’ ಎಂದು ಲಂಕೇಶ್‌ ಹೇಳುತ್ತಿದ್ದ. ಆದರೆ ಬಹಳ ಕೆಟ್ಟ ಮೇಷ್ಟ್ರು. ಸಭಾ ಕಂಪನ ಜಾಸ್ತಿ ಇತ್ತು. ಮಾತುಗಳು ತೊದಲುತ್ತಿದ್ದವು. ನಮ್ಮಂತೆ ಅವನಿಗೂ ದೌರ್ಬಲ್ಯವಿತ್ತು. ಅದನ್ನು ಮೀರಿ ದೊಡ್ಡ ಲೇಖಕನಾಗಿ ಬೆಳೆದು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ. ಇಂದು 2- 3 ಕೋಟಿ ರೂ. ಬೆಲೆಬಾಳುವ ಮನೆಯನ್ನು ಸಹೋದರನಿಗೆ ಬಿಟ್ಟುಕೊಟ್ಟ ಹೃದಯವಂತ ಎಂದು ಸ್ಮರಿಸಿದರು.

Advertisement

ಲಂಕೇಶ್‌ ಒಡನಾಟವನ್ನು ಪ್ರಸ್ತಾಪಿಸಿದ ಸಿದ್ದಲಿಂಗಯ್ಯ, ನಾನು ನಿರಂತರವಾಗಿ ಲಂಕೇಶ್‌ ಅವರ ಕಚೇರಿಗೆ ಹೋಗುತ್ತಿದ್ದೆ. ಸೀತಾರಾಂ ಒಮ್ಮೆ ಯಾಕೆ ಆಗಾಗ್ಗೆ ಹೋಗುತ್ತೀರಿ ಎಂದು ಪ್ರಶ್ನಿಸಿದರು. ಆಗಾಗ್ಗೆ ಅಲ್ಲಿ ಕಾಣಿಸಿಕೊಳ್ಳದಿದ್ದರೆ ಪತ್ರಿಕೆಯಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ ಎಂದಾಗ ಸಭಿಕರು ನಗೆಗಡಲಲ್ಲಿ ತೇಲಿದರು.

ವಿಶೇಷ ರಿಯಾಯಿತಿ: ಸಪ್ನ ಬುಕ್‌ಹೌಸ್‌ 51ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯ್ದ ಪುಸ್ತಕಗಳ ಮೇಲೆ ಶೇ.10ರಿಂದ ಶೇ.51ರವರೆಗೆ ರಿಯಾಯ್ತಿ ಪ್ರಕಟಿಸಿದ್ದು, ಫೆ.11ರವರೆಗೆ ಸೌಲಭ್ಯ ಪಡೆಯಬಹುದಾಗಿದೆ.

ಚಿತ್ರ ಪಯಣದ ಕುರಿತ ಪುಸ್ತಕ: “ನನ್ನ 30- 35 ವರ್ಷಗಳ ಚಲನಚಿತ್ರ ನಿರ್ದೇಶನ ಪಯಣ ಕುರಿತು ಪುಸ್ತಕ ಬರೆಯುತ್ತೇನೆ. ಆರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳ ನಿರ್ದೇಶನದ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಆದರೆ ಮನಸ್ಸು ಒಪ್ಪಲಿಲ್ಲ. ನನ್ನ ಸಹೋದ್ಯೋಗಿಗಳ ಪಯಣದ ಬಗ್ಗೆಯೂ ಬರೆಯಬೇಕಿನಿಸಿತು. ಹಾಗಾಗಿ ಆಯಾ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಾದ ಬೆಳವಣಿಗೆ, ಅನುಭವಗಳನ್ನು ದಾಖಲಿಸುತ್ತೇನೆ,’ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಮೂರನೇ ಮಹಾಯುದ್ಧ ಯಾವಾಗ ಅಂತ ಕೇಳಿ: “ಮುಂದಿನ ಏಪ್ರಿಲ್‌ನಲ್ಲಿ ಜಪಾನ್‌ ಪ್ರವಾಸ ಕೈಗೊಳ್ಳಲಿದ್ದೇನೆ. ಎರಡನೇ ಮಹಾಯುದ್ದದಲ್ಲಿ ಅಣುಬಾಂಬ್‌ ದಾಳಿಗೆ ತುತ್ತಾದ ಹಿರೋಶಿಮಾ- ನಾಗಸಾಕಿ ಪ್ರದೇಶಕ್ಕೂ ಭೇಟಿ ನೀಡುತ್ತೇನೆ,’ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು. ಆಗ ಕವಿ ಸಿದ್ದಲಿಂಗಯ್ಯ ಮಧ್ಯ ಪ್ರವೇಶಿಸಿ, “ಜಪಾನ್‌ಗೆ ಹೋದಾಗ ಪಕ್ಕದಲ್ಲೇ ಇರುವ ಉತ್ತರ ಕೊರಿಯಾಗೂ ಭೇಟಿ ಕೊಟ್ಟು, ಮೂರನೇ ಮಹಾಯುದ್ಧ ಯಾವಾಗ ಎಂದು ಕೇಳಿಕೊಂಡು ಬನ್ನಿ,’ ಎಂದಾಗ ಕಾರ್ಯಕ್ರಮದಲ್ಲಿ ನಗೆ ಅರಳಿತು.

Advertisement

Udayavani is now on Telegram. Click here to join our channel and stay updated with the latest news.

Next