Advertisement

ಜನ ಸಿನೆಮಾ ನೋಡಿ ಓಟ್‌ ಹಾಕಲ್ಲ

11:02 PM Apr 10, 2019 | Team Udayavani |

ವಿವೇಕ್‌ ಒಬೇರಾಯ್‌ ನಟಿಸಿರುವ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ PM Narendra Modi ಬಿಡುಗಡೆಯನ್ನು ಚುನಾವಣಾ ಆಯೋಗ ತಡೆಹಿಡಿದಿದೆ. ಲೋಕಸಭಾ ಚುನಾವಣೆಗಳು ಮುಗಿಯುವವರೆಗೂ ಈ ಚಿತ್ರ ಬಿಡುಗಡೆಯಾಗುವಂತಿಲ್ಲ ಎಂದು ಅದು ಹೇಳಿದೆ. ಈ ಚಿತ್ರವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಕ್ಷಗಳು ವಾದಿಸುತ್ತಾ ಬಂದಿದ್ದವು. ಹಾಗಿದ್ದರೆ ಈ ಚಿತ್ರ ನಿಜಕ್ಕೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಾದದ್ದೇ? ಬಿಜೆಪಿಯ ಸ್ವಹಿತಾಸಕ್ತಿ ಇದರಲ್ಲಿ ಅಡಗಿದೆಯೇ? ಈ ಚಿತ್ರವನ್ನು ಮೋದಿ ನೋಡಿದ್ದಾರಾ? ಎಂಬ ಪ್ರಶ್ನೆಗಳಿಗೆಲ್ಲ ಚಿತ್ರದ ನಿರ್ದೇಶಕ ಒಮುಂಗ್‌ ಕುಮಾರ್‌ ಉತ್ತರಿಸಿದ್ದಾರೆ. ಅವರು ಹಫಿಂಗ್‌ಟನ್‌ ಪೋಸ್ಟ್‌ಗೆ ನೀಡಿರುವ ಸಂದರ್ಶನ ಇಲ್ಲಿದೆ…

Advertisement

ದೇಶದ ಪ್ರಧಾನಿಯ ಮೇಲೆ ಚಿತ್ರ ನಿರ್ದೇಶಿಸುತ್ತಿದ್ದೇವೆ ಎನ್ನುವುದನ್ನು ಹೊರತುಪಡಿಸಿ ಮತ್ಯಾವ “ಪ್ರೇರಕ’ ಸಂಗತಿಗಳು ಈ ಸಿನೆಮಾ ನಿರ್ಮಾಣಕ್ಕೆ ಕಾರಣವಾದವು?
ನಾನು ನಿರ್ದೇಶಿಸಿದ್ದ ಮೇರಿ ಕೋಂ, ಸರಬ್ಜಿತ್‌ ಚಿತ್ರಗಳನ್ನು ನೋಡಿ. ಆ ಕಥೆಗಳೆಲ್ಲ ಹೋರಾಟ-ಕಷ್ಟದ ಕಥೆಗಳು. ನೀವು ರಾಜಕೀಯವನ್ನು ಪಕ್ಕಕ್ಕೆ ಇಟ್ಟು ನೋಡಿದರೆ ಈ ಚಿತ್ರವೂ ಕೂಡ ಹೋರಾಟದ ಕಥೆಯೇ… ಚಹಾ ಮಾರುವವನೊಬ್ಬ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಕನಸು ಕಂಡು ದೇಶದ ಪ್ರಧಾನಿಯಾದ ಸ್ಫೂರ್ತಿದಾಯಕ ಕಥೆಯಿದು. ನಾನು ಖಂಡಿತವಾಗಿಯೂ ಯಾವ ಪಕ್ಷದ ಸಮರ್ಥಕನೂ ಅಲ್ಲ. ಇದೇ ಕಾರಣಕ್ಕಾಗಿಯೇ ಈ ಚಿತ್ರ ನಿರ್ಮಿಸುವುದಕ್ಕೆ ನಾನೇ ಸರಿಯಾದ ವ್ಯಕ್ತಿ ಎಂದು ನನಗನಿಸುತ್ತದೆ. ನನಗೆ ಬಿಜೆಪಿಯೊಂದಿಗೆ ಸಂಬಂಧವಿಲ್ಲ.

ಇಷ್ಟು ಚಿಕ್ಕ ಅವಧಿಯಲ್ಲೇ ಸಿನೆಮಾ ಬಗ್ಗೆ ಘೋಷಣೆ ಮಾಡಿ, ಅದನ್ನೂ ಪೂರ್ತಿಯೂ ಮಾಡಿದ್ದು ಹೇಗೆ? ಅದೂ ಸರಿಯಾಗಿ ಲೋಕಸಭಾ ಚುನಾವಣೆಯ ಸಮಯದಲ್ಲೇ ಸಿದ್ಧವಾಗುವಂತೆ ನೋಡಿಕೊಂಡಿದ್ದೀರಲ್ಲ?
ಈ ಚಿತ್ರವನ್ನು ಮೂರು ವರ್ಷದ ಹಿಂದೆಯೇ ನಿರ್ಮಿಸಲು ನನ್ನ ಸಹೋದ್ಯೋಗಿ ಸಂದೀಪ್‌ ಸಿಂಗ್‌ ಪ್ಲ್ರಾನ್‌ ಮಾಡಿದ್ದ, ಆದರೆ ಆ ಸಮಯದಲ್ಲಿ ನಾನು ಬ್ಯುಸಿ ಇದ್ದೆ. ಈಗಲೂ ಅಷ್ಟೇ, ಬೇರೆ ಚಿತ್ರವನ್ನು ನಿರ್ದೇಶಿಸಲು ಉದ್ದೇಶಿಸಿದ್ದೆ, ಆದರೆ ಅದರ ನಾಯಕ ಲಭ್ಯವಾಗಲಿಲ್ಲ. ಹೀಗಾಗಿ, ಈ ಅವಧಿಯಲ್ಲಿ ಮೋದಿ ಜೀವನಾಧಾರಿತ ಚಿತ್ರ ನಿರ್ಮಿಸೋಣ ಅಂತ ಸಂದೀಪ್‌ ಹೇಳಿದ. ನಾನೂ ಯೋಚಿಸಿ, ಒಪ್ಪಿಕೊಂಡೆ. 38 ದಿನದಲ್ಲಿ ಈ ಸಿನೆಮಾ ಮಾಡಿದ್ದೇವೆ. ನನ್ನ ಇತರೆ ಸಿನೆಮಾಗಳೂ ಕೂಡ ಬೇಗನೇ ಮುಗಿದಿವೆ. ಮೇರಿ ಕೋಂ ಸಿನೆಮಾ ಕೇವಲ 52 ದಿನದಲ್ಲಿ ಸಿದ್ಧವಾಗಿತ್ತು.

ಈ ಚಿತ್ರ ನಿರ್ಮಾಣದ ಹಿಂದೆ ಬಿಜೆಪಿ ಅಥವಾ ಪ್ರಧಾನಮಂತ್ರಿ ಕಾರ್ಯಾಲಯದ ಪಾತ್ರವೆಷ್ಟಿದೆ? ನೀವು ಮೋದಿಯವರನ್ನು ಭೇಟಿಯಾಗಿದ್ದೀರಾ?
ಇಲ್ಲ. ಅವರನ್ನು ಭೇಟಿಯಾಗಲು ಇಷ್ಟವಿರಲಿಲ್ಲ, ಏಕೆಂದರೆ ಇದರಿಂದ ಸಿನೆಮಾದೆಡೆಗಿನ ನನ್ನ ದೃಷ್ಟಿಕೋನ ಬದಲಾಗುತ್ತಿತ್ತು.

ಅಮಿತ್‌ ಶಾ ಅಥವಾ ಬಿಜೆಪಿಯ ಮತ್ಯಾವ ನಾಯಕರನ್ನೂ ಭೇಟಿಯಾಗಲಿಲ್ಲವೇ?
ಇಲ್ಲ

Advertisement

ಸಿನೆಮಾದ ಸ್ಕ್ರಿಪ್ಟ್ ಅನ್ನು ನರೇಂದ್ರ ಮೋದಿ ಮತ್ತು ಅವರ ತಂಡಕ್ಕೆ ತೋರಿಸಿದ್ದೀರಾ?
ನನಗಂತೂ ಐಡಿಯಾ ಇಲ್ಲ

ಆದರೂ, ಪ್ರಧಾನಮಂತ್ರಿಗಳಿಂದ ಅನುಮತಿಯನ್ನಂತೂ ಪಡೆದಿರುತ್ತೀರಿ ತಾನೆ?
ಹಾಂ…ಆಮೇಲೆ ಪಡೆದೆವು. ಅದಕ್ಕಿಂತ 10 ತಿಂಗಳ ಮೊದಲೇ ನಾವು ಸ್ಕ್ರಿಪ್ಟ್ ಬರೆಯಲು ಆರಂಭಿಸಿದ್ದೆವು. ಚಿತ್ರೀಕರಣದ ಸಮಯದಲ್ಲೂ ನಾನು ಸ್ಕ್ರಿಪ್ಟ್ ತಿದ್ದುಪಡಿ ಮಾಡುತ್ತಲೇ ಇದ್ದೆ. ಸಿನೆಮಾ ಕೊನೆಯ ಹಂತದಲ್ಲಿದ್ದಾಗ ನಮ್ಮ ಚಿತ್ರ ತಂಡ ಅವರನ್ನು ಭೇಟಿಯಾಯಿತು..

ಮೋದಿ ಮತ್ತವರ ಟೀಂ ಈ ಸಿನೆಮಾ ನೋಡಿದೆಯೇ?
ನೋಡಿದ್ದಾರೆ. ಅವರೆಲ್ಲ ಈ ಬಗ್ಗೆ ಆಮೇಲೆ ಮಾತನಾಡಲಿದ್ದಾರೆ.

ಹಾಗಿದ್ದರೆ ಚುನಾವಣಾ ಸಮಯದಲ್ಲಿ ಸಿನೆಮಾ ಸಿದ್ಧವಾದದ್ದನ್ನು ನೀವು ಕಾಕತಾಳೀಯ ಎನ್ನುತ್ತೀರಾ?
ನಾವು ಒಂದು ವರ್ಷದ ಹಿಂದೆಯೇ ಪ್ಲ್ರಾನ್‌ ಮಾಡಿಕೊಂಡಿದ್ದೆವು. ಆ ಸಮಯದಲ್ಲಿ ಚುನಾವಣಾ ದಿನಾಂಕವೂ ಘೋಷಣೆಯಾಗಿರಲಿಲ್ಲ.

ದೇಶದಲ್ಲಿ ಅನೇಕ ವರ್ಷಗಳಿಂದ ಏಪ್ರಿಲ್‌-ಮೇ ತಿಂಗಳ ಆಸುಪಾಸಿನಲ್ಲೇ ಚುನಾವಣೆಗಳು ನಡೆಯುತ್ತವಲ್ಲ…
ನೋಡಿ, ಈ ಅವಧಿಯಲ್ಲಿ ದೇಶಾದ್ಯಂತ ಐಪಿಎಲ್‌ ನಡೆಯುತ್ತವಾದ್ದರಿಂದ, ಅನ್ಯ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಇತರೆ ಫಿಲಂಗಳು ಯಾವಾಗ ರಿಲೀಸ್‌ ಆಗಲಿವೆ ಎನ್ನುವುದು ನಮಗೆ ತಿಳಿದಿತ್ತು, ಹೀಗಾಗಿ ಈಗಿನ ಸಮಯವೇ ಸೂಕ್ತ, ನಮಗೆ ಜಾಗವಿದೆ ಎನ್ನಿಸಿತು…

ನಿಜ ಹೇಳಿ…ನಿಮ್ಮ ಸಿನೆಮಾ ಲೋಕಸಭಾ ಚುನಾವಣೆಯ ಸಮಯದಲ್ಲೇ ಬರುತ್ತದೆ ಅಂತ ನಿಮಗಾಗಲೀ, ನಿಮ್ಮ ಇಡೀ ಚಿತ್ರತಂಡಕ್ಕಾಗಲೀ ಅರಿವಿರಲಿಲ್ಲವೇ?
ಕೊನೆಗೆ ನಮಗೆ ಹಾಗೆ ಅನಿಸಿತು. ಹೇಗಿದ್ದರೂ ಚಿತ್ರ ಬಿಡುಗಡೆಯ ಸಮಯದಲ್ಲಿ ಲೋಕಸಭಾ ಚುನಾವಣೆಗಳೂ ನಡೆಯುವುದರಿಂದ ನಮಗೆ ಲಾಭವಾಗುತ್ತದೆ ಅಂತ. ನಮಗ್ಯಾಕೆ ಲಾಭವಾಗಬಾರದು ಹೇಳಿ? ಬೇರೆ ಪ್ರೊಡ್ನೂಸರ್‌ಗಳೆಲ್ಲ ದೀಪಾವಳಿ, ಕ್ರಿಸ್ಮಸ್‌ ಮತ್ತು ಹೋಳಿ ಸಮಯದಲ್ಲಿ ಚಿತ್ರ ಬಿಡುಗಡೆಗೊಳಿಸಿ ಲಾಭ ಮಾಡಿಕೊಳ್ಳುವುದಿಲ್ಲವೇನು?

ಅವೆಲ್ಲ ದೀರ್ಘ‌ ರಜಾದಿನಗಳು. ಪ್ರೊಡ್ನೂಸರ್‌ಗಳು ಆ ಅವಧಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ನೀವು ಹಬ್ಬಗಳನ್ನು ಭಾರತೀಯ ಪ್ರಜಾಪ್ರಭುತ್ವದ ಅತಿಮುಖ್ಯ ಅಂಶವಾದ ಚುನಾವಣೆಗೆ ಹೋಲಿಸುತ್ತಿದ್ದೀರಾ?
ಹಾಗಿದ್ದರೆ ನೀವು ಅನ್ನೋದೇನು? ನನ್ನ ಚಿತ್ರ ನೋಡಿದರೆ ಜನ ಮೋದಿಯವರಿಗೆ ಮತ ನೀಡುತ್ತಾರೆ ಅಂತಲೇ?

ಹೌದು..ನಿಮಗೆ ಹಾಗೆ ಅನಿಸೋದಿಲ್ಲವೇ?
ಇಲ್ಲ

ಅಂದರೆ ಸಿನೆಮಾ ನಿರ್ದೇಶಕನಾಗಿ ನೀವು ಹೇಳುತ್ತಿರುವುದು ಏನು? ಸಿನೆಮಾಗಳು ಜನರನ್ನು ಪ್ರಭಾವಿಸುವುದಿಲ್ಲ ಎಂದೇ?
ನಾನು ಹಾಗೆ ಹೇಳುತ್ತಿಲ್ಲ. ಸಿನೆಮಾಗಳು ಜನರಿಗೆ ಪ್ರೇರಣೆ ನೀಡಬಲ್ಲವು. ಅದರಿಂದ ಓಟ್‌ ಬರುತ್ತದೆ ಎಂದು ಅರ್ಥವಲ್ಲ…

Advertisement

Udayavani is now on Telegram. Click here to join our channel and stay updated with the latest news.

Next