Advertisement

ಲೋಕಸಭಾ ಚುನಾವಣೆ ಫ‌ಲಿತಾಂಶ; ಮೋದಿ ಜಸ್ಟ್‌ಪಾಸ್‌!

12:58 AM Jun 05, 2024 | Team Udayavani |

ಹೊಸದಿಲ್ಲಿ: 18ನೇ ಲೋಕಸಭಾ ಚುನಾ­ವಣೆಯನ್ನು ಗೆಲ್ಲಲು ಇನ್ನಿಲ್ಲದಂತೆ ಕಸರತ್ತು ನಡೆಸಿದ ಐಎನ್‌ಡಿಐಎ ಮೈತ್ರಿಕೂಟ, ಬಹುಮತದ ಹತ್ತಿರ ಬಂದಿದೆ. ಆದರೆ ಸರಕಾರ ರಚನೆ ಮಾಡುವುದಕ್ಕೆ ಅಗತ್ಯವಿರುವ 272 ಸ್ಥಾನಗಳು ಮಾತ್ರ ಲಭಿಸಿಲ್ಲ. ಹಾಗಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ ಮುಂತಾದವರು ಸುಮ್ಮನೆ ಕುಳಿತಿಲ್ಲ. ಬಹುಮತವಿಲ್ಲ­ದಿದ್ದರೂ ಸರಕಾರ ರಚನೆ ಮಾಡಲು “ಔಟ್‌ ಆಫ್ ಸಿಲಬಸ್‌’ ಮಾರ್ಗದಲ್ಲಿ ಪ್ಲಾನ್‌ ಮಾಡುವ ಸಾಧ್ಯತೆಯಿದೆ.

Advertisement

ನೀವು ಸರಕಾರ ರಚನೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಯಾವುದೇ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಹುಲ್‌, ನಾವಿನ್ನೂ ಈ ವಿಷಯವನ್ನು ಮಿತ್ರಪಕ್ಷಗಳ ಜತೆಗೆ ಚರ್ಚೆ ನಡೆಸಿಲ್ಲ. ಹಾಗಾಗಿ ಇವತ್ತು ನನ್ನಲ್ಲಿ ಇದಕ್ಕೆ ಉತ್ತರವಿಲ್ಲ. ಆದರೆ ನಾಳೆ (ಬುಧವಾರ) ನನ್ನಲ್ಲಿ ಉತ್ತರವಿರುತ್ತದೆ ಎಂದು ಹೇಳಿದ್ದಾರೆ.

ಖರ್ಗೆ ಮಾತನಾಡಿ, ನಾವು ಈ ಬಗ್ಗೆ ಇನ್ನೂ ಮಿತ್ರಪಕ್ಷಗಳ ಜತೆಗೆ ಮಾತಾಡಿಲ್ಲ. ನಮ್ಮೊಂದಿಗೆ ಸೇರಲಿರುವ ಹೊಸ ಮಿತ್ರಪಕ್ಷಗಳ ಜತೆಗೂ ಚರ್ಚಿಸಿಲ್ಲ. ನಾವು ಅವರೊಂದಿಗೆ ಮಾತನಾಡಿ ಹೇಗೆ ಬಹುಮತ ಪಡೆಯ­ಬಹುದೆಂದು ಚರ್ಚಿಸುತ್ತೇವೆ ಎಂದು ನಿಗೂಢವಾಗಿ ಉತ್ತರಿಸಿದ್ದಾರೆ. ಖರ್ಗೆ ಈ ಉತ್ತರ ನೀಡುವ ಮೂಲಕ ಎನ್‌ಡಿಎ ಮಿತ್ರ ಪಕ್ಷಗಳನ್ನು ಐಎನ್‌ಡಿಐಎ ಕೂಟಕ್ಕೆ ಸೆಳೆಯುವ ಪರೋಕ್ಷ ಸುಳಿವು ನೀಡಿದ್ದಾರೆಂದು ವಿಶ್ಲೇಷಿಸಲಾಗಿದೆ. ಒಂದು ವೇಳೆ ಅದು ಗಂಭೀರವಾಗಿ ಈ ಯತ್ನ ನಡೆಸಿದಲ್ಲಿ ಸರಕಾರ ರಚನೆಗೆ ಎನ್‌ಡಿಎ-ಐಎನ್‌ಡಿಐಎ ನಡುವೆ ಹಗ್ಗ ಜಗ್ಗಾಟ ನಡೆಯುವ ಸಾಧ್ಯತೆಯಿದೆ.

ಏನೇನು ದಾರಿಗಳಿವೆ?
ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆಯಲು ಐಎನ್‌ಡಿಐಎ ಕೂಟ ಬಲವಾದ ಪ್ರಯತ್ನ ನಡೆಸಬಹುದು
ಇತರ ರೂಪದಲ್ಲಿ ಗೆದ್ದಿರುವ ಸಂಸದರನ್ನು ಸಂಪರ್ಕಿಸಿ ಒಳಕ್ಕೆಳೆದುಕೊಳ್ಳಬಹುದು. ಆದರೆ ಇದು ಕಷ್ಟದ ದಾರಿ
ಬಿಜೆಪಿ-ಮೋದಿಯ ಮೇಲೆ ವಿಪಕ್ಷಗಳಿಗೆ ಇರುವ ಸಿಟ್ಟನ್ನೇ ಅವಕಾಶವನ್ನಾಗಿ ಮಾಡಿಕೊಂಡು ನಿತೀಶ್‌, ಚಂದ್ರಬಾಬು ಅವರನ್ನು ಸೆಳೆಯಲು ಯತ್ನಿಸಬಹುದು

ನಿತೀಶ್‌, ಚಂದ್ರಬಾಬು “ಕೃಪಾಂಕ’ ಸಿಗುತ್ತಾ ಐಎನ್‌ಡಿಐಎ ಮೈತ್ರಿಗೆ?
ಮೂಲಗಳ ಪ್ರಕಾರ ನಿತೀಶ್‌ ಕುಮಾರ್‌ ನಾಯಕತ್ವದ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೃಪಾಂಕ­ಕ್ಕಾಗಿ ಐಎನ್‌ಡಿಐಎ ಮೈತ್ರಿಕೂಟ ಬಲವಾದ ಯತ್ನ ನಡೆಸಿದೆ. ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಎರಡೂ ಪಕ್ಷಗಳು ಎನ್‌ಡಿಎ ಬಹುಮತದಲ್ಲಿ ಮಹ­ತ್ವದ ಪಾತ್ರ ವಹಿಸಿವೆ. ಹೀಗಾಗಿ ಈ ಇಬ್ಬರು ನಾಯಕರನ್ನು ಸೆಳೆಯಲು ನಿತೀಶ್‌ಕುಮಾರ್‌ಗೆ ಉಪ್ರಪ್ರಧಾನಿ ಸ್ಥಾನ ವನ್ನು, ಚಂದ್ರಬಾಬು ಅಧಿಕಾರದಲ್ಲಿರುವ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ.

Advertisement

ಪ್ರಿಪರೇಟರಿ ಹಂತದಲ್ಲೇ ಮೈತ್ರಿ ಮಾಡಿ ಗೆದ್ದ ಬಿಜೆಪಿ
ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಮುಖ್ಯ ಕಾರಣವಾಗಿರುವುದು 12 ಸ್ಥಾನ ಹೊಂದಿರುವ ನಿತೀಶ್‌ ಕುಮಾರ್‌ ಜೆಡಿಯು ಮತ್ತು 16 ಸ್ಥಾನ ಹೊಂದಿರುವ ಚಂದ್ರಬಾಬು ನಾಯ್ಡು ಟಿಡಿಪಿ. ವಾಸ್ತವವಾಗಿ ಈ ಎರಡೂ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ಹೊರ ಹೋಗಿದ್ದವು. ಜನವರಿ ಮಧ್ಯಾವಧಿ ಹೊತ್ತಿಗೆ ಐಎನ್‌ಡಿಐಎ ಕೂಟದ ಮೇಲೆ ಸಿಟ್ಟಾದ ನಿತೀಶ್‌ ದಿಢೀರ್‌ ಎನ್‌ಡಿಎ ಸೇರಿದರು. ಮಾರ್ಚ್‌ ಹೊತ್ತಿಗೆ ಚಂದ್ರಬಾಬು ಕೂಡ ಸೇರಿಕೊಂಡರು. ಚಾಣಕ್ಯ ಅಮಿತ್‌ ಶಾ ತಂತ್ರವೋ, ಆಗಲೇ ಬಿಜೆಪಿಗೆ ಸೋಲಿನ ಸುಳಿವು ಸಿಕ್ಕಿತ್ತೋ ಎನ್ನುವುದು ಖಾತ್ರಿಯಿಲ್ಲ. ಆದರೆ ಈ ಮೈತ್ರಿಯೇ ಬಿಜೆಪಿಯನ್ನು ಅಧಿಕಾರದಲ್ಲಿ ಉಳಿಸಿದೆ.

ಇದು ಐತಿಹಾಸಿಕ ವಿಜಯ
ಜನ ಎನ್‌ಡಿಎ ಮೇಲೆ ಸತತ 3ನೇ ಬಾರಿಗೆ ನಂಬಿಕೆ ಯಿ­ಟ್ಟಿದ್ದಾರೆ. ಇದು ಭಾರತೀಯ ಇತಿಹಾಸ­ದಲ್ಲಿ ಐತಿಹಾಸಿಕ ಸಾಧನೆ. ಆಂಧ್ರದಲ್ಲಿ ಚಂದ್ರಬಾಬು, ಬಿಹಾರದಲ್ಲಿ ನಿತೀಶ್‌ ಕುಮಾರ್‌ ನಾಯಕತ್ವದಲ್ಲಿ ಎನ್‌ಡಿಎ ಅತ್ಯುತ್ತಮ ಸಾಧನೆ ಮಾಡಿದೆ. ಅವರಿಗೆ ಧನ್ಯವಾದ. ಕಳೆದ 10 ವರ್ಷದಲ್ಲಿ ಮಾಡಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸು­ತ್ತೇವೆ. ಜನರ ಆಶೋತ್ತರಗಳನ್ನು ಪೂರೈಸುವ ದಿಕ್ಕಿನಲ್ಲಿ ನಡೆಯು­ತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next