Advertisement

ಲೋಕಾಯುಕ್ತ ದಾಳಿಯಲ್ಲಿ ಕೋಟಿ ಕುಳಗಳು

12:57 PM Apr 26, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ 8 ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಲೋಕಾ ಯುಕ್ತ ಅಧಿಕಾರಿಗಳು ಕೋಟ್ಯಂತರ ರೂ. ನಗದು, ಚಿನ್ನಾಭರಣ, ಸ್ಥಿರಾಸ್ತಿ ಮತ್ತು ಚರಾಸ್ಥಿಯನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು ನಗರ, ಕೋಲಾರ, ಬೀದರ್‌, ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಎಂಟು ಮಂದಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳು, ಫಾರ್ಮ್ ಹೌಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

Advertisement

ಈ ವೇಳೆ ಆರೋಪಿತ ಅಧಿಕಾರಿಗಳು ಶೇಕಡಾ ಪ್ರಮಾಣದಲ್ಲಿ ಅಕ್ರಮ ಆಸ್ತಿಗಳಿಕೆ ಮಾಡಿರು ವುದು ಕಂಡು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರು ಎಕರೆ ಕೃಷಿ ಭೂಮಿ: ಬಳ್ಳಾರಿ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಹುಸೇನ್‌ ಸಾಬ್‌ಗ ಸೇರಿದ 6 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಬಳ್ಳಾರಿಯ ರಾಘವೇಂದ್ರ ಕಾಲೋನಿಯಲ್ಲಿನ ಮನೆ, ಹೊಸಪೇಟೆಯ ವಿದ್ಯಾನಗರ ಲೇಔಟ್‌ನಲ್ಲಿ ಒಂದು ನಿವೇಶನ, ಒಂದು ವಾಸದ ಮನೆ, ಸಿದಿಗಿನಮೂಲ ಗ್ರಾಮದಲ್ಲಿ 1 ಮನೆ, ಹಡಗಲಿ ತಾಲೂಕಿನಲ್ಲಿ 6 ಎಕರೆ 20 ಗುಂಟೆ ಕೃಷಿ ಜಮೀನು, 4 ಕಾರು, 2 ಬೈಕ್‌, 1.487 ಕೆ.ಜಿ ಚಿನ್ನಾಭರಣ, 680 ಗ್ರಾಂ ಬೆಳ್ಳಿ, 23.69 ಲಕ್ಷ ರೂ. ನಗದು ಪತ್ತೆಯಾಗಿದೆ. ‌

14 ಫ್ಲ್ಯಾಟ್‌ಗಳ ಒಡೆಯ ಗಂಗಾಧರಯ್ಯ: ಬಿಬಿಎಂಪಿ ಯಲಹಂಕ ವಲಯ ನಗರ ಯೋಜನೆ ಸಹಾಯಕ ನಿರ್ದೇಶಕ ಕೆ.ಎಲ್. ಗಂಗಾಧರಯ್ಯ ಬರೋಬ್ಬರಿ 14 ಫ್ಲಾಟ್‌ಗಳ ಒಡೆಯ. ನೆಲಮಂಗಲದಲ್ಲಿ 5 ಎಕರೆ ಕೃಷಿ ಜಮೀನು, 73 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, 1.47 ಕೋಟಿ ರೂ. ನಗದು, 10298 ಅಮೆರಿಕ ಡಾಲರ್‌, 1180 ದುಬೈ ದೀರಂ, 35 ಈಜಿಪ್ಟ್ ಕರೆನ್ಸಿ ಮತ್ತು ವಿವಿಧ ಸ್ಥಿರಾಸ್ತಿ ದಾಖಲೆ ಪತ್ರಗಳು ಮತ್ತು 50 ಲಕ್ಷ ರೂ.ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ.

 45 ಲಕ್ಷ ರೂ. ಮೌಲ್ಯದ ಎಲ್‌ಐಸಿ ಬಾಂಡ್‌ಗಳು: ಬೀದರ್‌ನ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಸುರೇಶ್‌ ಮೇಡ ಬಳಿ ಬೀದರ್‌ನಲ್ಲಿ 1 ಮನೆ, 3 ನಿವೇಶನಗಳು, ಆನಂದನಗರದಲ್ಲಿ 1 ಮನೆ, 3 ಕಾರು, 3 ಬೈಕ್‌, 11.34 ಲಕ್ಷ ರೂ. ನಗದು, 1892 ಗ್ರಾಂ ಚಿನ್ನ, 6 ಕೆ.ಜಿ. 628 ಗ್ರಾಂ ಬೆಳ್ಳಿ, 45 ಲಕ್ಷ ರೂ. ಎಲ್‌ ಐಸಿ ಬಾಂಡ್‌ ಇರುವುದು ಸಿಕ್ಕಿದೆ.

Advertisement

15 ಸೈಟ್‌ಗಳ ಮಾಲೀಕ ವಿಜಯಕುಮಾರಸ್ವಾಮಿ: ಬೀದರ್‌ನ ಬಸವ ಕಲ್ಯಾಣ ತಾಲೂಕು ನಾಡ ಕಚೇರಿ ಉಪ ತಹಶೀಲ್ದಾರ್‌ ವಿಜಯಕುಮಾರಸ್ವಾಮಿ ಬೀದರ್‌ನಗರದಲ್ಲಿ 1 ಮನೆ, ಬಸವಕಲ್ಯಾಣದಲ್ಲಿ 15 ಸೈಟ್‌ಗಳು, 1 ಸಾಯಿ ಸರ್ವಿಸ್‌ ಎಂಬ ಆಟೋ ಗ್ಯಾರೇಜ್‌, 2 ಕಾರು ಪತ್ತೆಯಾಗಿವೆ. ಹನುಮಂತಯ್ಯನ 25 ಎಕರೆ ಅಡಕೆ ತೋಟ: ಬಿಬಿಎಂಪಿ ಬೊಮ್ಮನಹಳ್ಳಿ ರಾಜ ಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಟಿ. ಹನುಮಂತಯ್ಯ ಬಳಿ ಹಿರಿಯೂರು ತಾಲೂಕಿನ ಬೋಚಾಪುರುದಲ್ಲಿ 24 ಎಕರೆ 23 ಗುಂಟೆ ಅಡಕೆ ಮತ್ತು ಬಾಳೆ ತೋಟ, 1 ಫಾರ್ಮ್ಹೌಸ್‌, 2 ಪೌಲ್ಟ್ರಿ ಫಾರ್ಮ್, ಹಿರಿಯೂರಿನಲ್ಲಿ 2 ಮನೆಗಳು, ಬೆಂಗಳೂರಿನಲ್ಲಿ 1 ಮನೆ, ಕಾರು, 1 ಬೈಕ್‌, ಚಿನ್ನಾಭರಣಗಳು ಹಾಗೂ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.

ವಾಣಿಜ್ಯ ಸಂಕೀರ್ಣ, ಸರ್ವೀಸ್‌ ಸ್ಟೇಷನ್‌ಗಳು: ನಿವೃತ್ತ ಡಿಸಿಎಫ್ ಐ.ಎಂ. ನಾಗರಾಜು ಹೊನ್ನಾಳಿಯಲ್ಲಿ 1 ಮನೆ, ಶಿವಮೊಗ್ಗದಲ್ಲಿ 1 ಮನೆ ಮತ್ತು ಮಳಿಗೆ, 4 ವಾಣಿಜ್ಯ ಸಂಕೀರ್ಣಗಳು, ಬೆಂಗಳೂರಿನ ಕಗ್ಗಲಿಪುರದಲ್ಲಿ 1 ಫ್ಲ್ಯಾಟ್‌, ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ 1 ಫಾರ್ಮ್ ಹೌಸ್‌, 10 ಎಕರೆ ಅಡಿಕೆ ತೋಟ, ಸಾಗರ ರಸ್ತೆಯಲ್ಲಿ 1 ದುರ್ಗಾಂಭ ಸರ್ವಿಸ್‌ ಸ್ಟೇಷನ್‌, ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ 1 ಶ್ರೀದೇವಿ ಸರ್ವಿಸ್‌ ಸ್ಟೇಷನ್‌, ಶಿವಮೊಗ್ಗದಲ್ಲಿ 2 ಸೈಟ್‌, 1 ಫ್ಲ್ಯಾಟ್‌, ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದಲ್ಲಿ 3 ಫ್ಲ್ಯಾಟ್‌, ಶ್ರೀರಾಂಪುರ ಗ್ರಾಮದಲ್ಲಿ 2 ಸೈಟ್‌, 4 ಕಾರು, 1 ಬೈಕ್‌ ಮತ್ತು 16 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಲಭ್ಯವಾಗಿವೆ.

ನೌಕರಿ ಜತೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರ: ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತಹಶೀಲ್ದಾರ್‌ ಎನ್‌.ಜೆ. ನಾಗರಾಜು ಶಿಕಾರಿಪುರದ ಚನ್ನಕೇಶವ ನಗರದಲ್ಲಿ 1 ಮನೆ, ನಿಂಬಾಪುರದಲ್ಲಿ 1 ಮನೆ, ಚನ್ನಗಿರಿಯಲ್ಲಿ ಕೃಷಿ ಜಮೀನು, 244 ಗ್ರಾಂ ಚಿನ್ನ, 533 ಗ್ರಾಂ ಬೆಳ್ಳಿ, 1 ಕಾರು, 1 ಬೈಕ್‌ ಹೊಂದಿದ್ದಾರೆ. ಅಧಿಕಾರಿ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿ ದಾಖಲೆ ಪತ್ರಗಳು ಮತ್ತು ರಿಯಲ್‌ ಎಸ್ಟೇಟ್‌ನಲ್ಲಿ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿರುವ ಪತ್ರಗಳು ಪತ್ತೆಯಾಗಿವೆ.

14 ಎಕರೆ ಕೃಷಿ ಜಮೀನು: ಕೋಲಾರದ ಬಾಗೇಪಲ್ಲಿ ತಾಪಂ ಇಒ ವೆಂಕಟೇಶಪ್ಪ ಬಳಿ 14 ಎಕರೆ ಕೃಷಿ ಜಮೀನು, ಬಂಗಾರಪೇಟೆ ನಗರದಲ್ಲಿ 1 ನಿವೇಶನ, 1 ಮನೆ, ತಿಪ್ಪದೊಡ್ಡಹಳ್ಳಿಯಲ್ಲಿ 1 ಮನೆ, ಬಂಗಾರಪೇಟೆಯ ಎಸ್‌ಎನ್‌ ಸಿಟಿಯಲ್ಲಿ ನಿರ್ಮಾಣ ಹಂತದ 1 ಮನೆ, ಹಾರ್ಡ್‌ವೇರ್‌ ಶಾಪ್‌, ಗೋದಾಮು, 4 ಪೌಲ್ಟ್ರಿ ಶೆಡ್‌ಗಳು, 550 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next