Advertisement

ಲೋಕಾ ಚುನಾವಣೆ: ನೀತಿ ಸಂಹಿತೆ ಜಾರಿ

07:43 AM Mar 12, 2019 | Team Udayavani |

ದೇವನಹಳ್ಳಿ: ಈಗಾಗಲೇ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿರುವುದರಿಂದ ಭಾನುವಾರ ಸಂಜೆಯಿಂದಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಹೇಳಿದರು.

Advertisement

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ನಲ್ಲಿರುವ ಜಿಲ್ಲಾ ಸಂಕೀರ್ಣದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಮಾತನಾಡಿ,  ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ ನಡೆಯುವ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಾ.26 ಕೊನೆಯ ದಿನವಾಗಿದೆ.

ಮಾ.27 ಸಲ್ಲಿಕೆಯಾದ ನಾಮಪತ್ರ ಪರಿಶೀಲನಾ ಕಾರ್ಯನಡೆಯಲಿದೆ. ಮಾ.29ಕ್ಕೆ ನಾಮಪತ್ರಗಳ ವಾಪಸ್‌ಪಡೆಯಲು ಕೊನೆಯ ದಿನವಾಗಿರುತ್ತದೆ. ಏ.18ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಚುನಾವಣೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

590 ವೀಲ್ಸ್ ಚೇರ್‌ ವ್ಯವಸ್ಥೆ: ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 8 ಲಕ್ಷ 12 ಸಾವಿರ 902 ಮತದಾರರನ್ನು ಹೊಂದಿದ್ದು,  40,9767 ಪುರುಷ ಮತದಾರರು, 40,3015 ಮಹಿಳಾ ಮತದಾರರು, 120 ಇತರೆ ವರ್ಗದ ಮತದಾರರು ಇದ್ದು, ಒಟ್ಟು 8,12,902 ಮತದಾರರು ಇದ್ದಾರೆ. 1130 ಮತಗಟ್ಟೆಗಳನ್ನು ಹೊಂದಿದೆ. ನಾಲ್ಕು ಪಿಂಕ್‌ ಮತಗಟ್ಟೆಗಳನ್ನು ಮಾಡಲಾಗಿದೆ. ಅಂಗವಿಕಲರಿಗೆ ವಿಶೇಷವಾಗಿ ಮಾದರಿಯಾಗಿ ಮತ ಹಾಕಲು ಜಿಪಂ ಸಿಇಒ ಅವರಿಂದ 590 ವೀಲ್ಸ್ ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

16 ಚೆಕ್‌ ಪೋಸ್ಟ್‌: ಜಿಲ್ಲೆಯಲ್ಲಿ 16 ಕಡೆ ಚೆಕ್‌ ಪೋಸ್ಟ್‌ಗಳನ್ನು ಮಾಡಲಾಗಿದೆ. ವಿಜಯಪುರದಲ್ಲಿ ಬ್ಯಾನರ್‌, ಫ್ಲೆಕ್ಸ್‌ ಹಾಕಿದ್ದವರ ಮೇಲೆ ಮೊಕದಮ್ಮೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲೆಡೆ ಈಗಾಗಲೇ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. 1130 ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಅದರಲ್ಲಿ ಮೂರು ಕಡೆ ರ್‍ಯಾಂಪ್‌ ಹಾಗೂ ಎರಡು ಕಡೆ ಶೌಚಾಲಯ ಇರಲಿಲ್ಲ, ಅದರ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ ಎಂದರು.

Advertisement

ಸಾಮಾಜಿಕ ಜಾಲತಾಣ ಮೇಲೆ ನಿಗಾ: ಜಿಲ್ಲೆಯಲ್ಲಿ 76 ಟೀಂಗಳನ್ನು ಮಾಡಲಾಗಿದ್ದು, ಎಲ್ಲಾ ಮತದಾರರು ನಿಭೀರ್ತಿಯಿಂದ ಮತ ಚಲಾಯಿಸುವಂತೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇನ್ನು ಮತದಾರರಿಗೆ ಅರಿವು ಮೂಡಿಸಲು ವಿವಿಪ್ಯಾಟ್‌ನ ಜಾಗೃತಿ ಕಾರ್ಯ ಮಾ.15ರ ವರೆಗೆ ನಡೆಯಲಿದೆ.

ವಿವಿಪ್ಯಾಟ್‌ ಕಡ್ಡಾಯವಾಗಿರುವುದರಿಂದ ಈಗಾಗಲೇ ಎಲ್ಲಾ ಮತದಾರರು ತಪ್ಪದೆ ಮತ ಚಲಾಯಿಸುವಂತೆ ಅರಿವು ಮೂಡಿಸಲಾಗಿದೆ. ವಿಶೇಷವಾಗಿ ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ಹಾಗೂ ವಾಟ್ಸ್‌ಆ್ಯಪ್‌ ಸೇರಿದಂತೆ ಎಲ್ಲವನ್ನು ಗಮನಿಸಲಾಗುತ್ತಿದೆ. ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಗ್ರೂಪ್‌ ಅಡ್ಮಿನ್‌ ಮೇಲೆ ನೇರವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಫ್ಲೆಯಿಂಗ್‌ ಸ್ಕ್ವಾಡ್‌ ನೇಮಕ: ಅನಧಿಕೃತವಾಗಿ ಇನ್ನೂ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳು ಕಂಡು ಬಂದಲ್ಲಿ ಕೂಡಲೇ ಗಮನಕ್ಕೆ ತನ್ನಿ ನಾವು ಅವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕ್ರಮಕೈಗೊಳ್ಳಲಾಗುವುದು. 101 ಸೆಕ್ಟರ್‌ ಆಫೀಸರ್‌, 27 ಫ್ಲೆಯಿಂಗ್‌ ಸ್ಕ್ವಾಡ್‌ಗಳನ್ನು  ನೇಮಿಸಲಾಗಿದೆ. 5 ವಿಡಿಯೋ ಫ್ಲೆಯಿಂಗ್‌ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ಜಿಪಂ ಸಿಇಒ ಆರ್‌.ಲತಾ, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ವಿಕಾಸ್‌, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶೋಭಾ, ಚುನಾವಣಾ ಶಿರಸ್ಥೆದಾರ್‌ ಮೈಕಲ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ದೂರು ನೀಡಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆ 1800-4255-1950ಗೆ ಸಂಪರ್ಕಿಸಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಯ ಸಂಬಂಧಿಸಿದಂತೆ ಸಾರ್ವಜನಿಕರು 2019ರ ಲೋಕಸಭಾ ಚುನಾವಣೆಯ ಸಂಬಂಧ ಮದ್ಯ ಹಾಗೂ ಅಬಕಾರಿ ವಸ್ತುಗಳ ಹೊಂದುವಿಕೆ, ದಾಸ್ತಾನು ಸಾಗಾಣಿಕೆ, ಮಾರಾಟ ಇತ್ಯಾದಿ ಅಬಕಾರಿ ಅಕ್ರಮಗಳ ಯಾವುದೇ ದೂರುಗಳು/ಮಾಹಿತಿಗಳನ್ನು ಇಲಾಖಾ ನಿಯಂತ್ರಣಾ ಕೊಠಡಿಯ ಸಹಾಯವಾಣಿ ಸಂಖ್ಯೆ 1800-425-5273ಕ್ಕೆ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next