Advertisement

ರಂಗೇರಿದ ಲೋಕ ಚುನಾವಣಾ ಕಣ

09:35 AM Mar 29, 2019 | Team Udayavani |

ಬಿರುಬಿಸಿಲಿನ ನಡುವೆ ಲೋಕಸಭಾ ಚುನಾವಣಾ ಕಣ ಸೋಮವಾರ ಮತ್ತಷ್ಟು ರಂಗೇರಿದೆ. ಜೆಡಿಎಸ್‌ ವರಿಷ್ಠ ದೇವೇಗೌಡ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸದಾನಂದಗೌಡ, ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್‌ ಸೇರಿ ಹಲವು ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ. ಈ ನಡುವೆ, ಮಂಡ್ಯ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಪಾರ ಜನಸ್ತೋಮದ ನಡುವೆ, “ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ನಾನು ರಾಜ್ಯ ರಾಜಕೀಯದ ನಿಜವಾದ ಜೋಡೆತ್ತುಗಳು’ ಎಂದು ಹೇಳುವ ಮೂಲಕ ನಟರಾದ ದರ್ಶನ್‌ ಮತ್ತು ಯಶ್‌ಗೆ ಟಾಂಗ್‌ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಯಾರು, ಏನೆಲ್ಲಾ ಮಾತನಾಡಿದರು ಎಂಬುದರ ವಿವರ ಇಲ್ಲಿದೆ.

Advertisement

ಹೆಣ ಹೊರುವವರು ನಾವೇ, ಪಲ್ಲಕ್ಕಿ ಹೊರುವವರೂ ನಾವೇ
ಮಂಡ್ಯ: ನಿಮ್ಮ ಹೆಣ ಹೊರುವವರು ನಾವೇ, ಪಲ್ಲಕ್ಕಿ ಹೊರುವವರೂ ನಾವೇ,
ಬೇರೆ ಯಾರೂ ಬರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ್‌ ಸ್ಟಾರ್‌ ನಟರಾದ ಯಶ್‌, ದರ್ಶನ್‌ಗೆ ಟಾಂಗ್‌ ನೀಡಿದರು.

ಅಂಬರೀಶ್‌ ಅವರು ಎಚ್‌.ಡಿ. ಕುಮಾರಸ್ವಾಮಿ ಸರ್ಕಾರವನ್ನು ಆಶೀರ್ವದಿಸಿರಲಿಲ್ಲವೇ? ಮಂಡ್ಯಕ್ಕೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದಾಗ, ಇದೇ ಕುಮಾರಸ್ವಾಮಿ, ಮಂಡ್ಯ ಜಿಲ್ಲೆ ಜನತೆಯ ಅಭಿಮಾನಕ್ಕಾಗಿ ತಂದು ಅಭಿಮಾನಿಗಳ ಆಸೆ ಈಡೇರಿಸಿದರು ಎಂದರು. ರಾಜಕೀಯದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಹೃದಯ ಶ್ರೀಮಂತಿಕೆ ಇರಬೇಕು. ನಾನು ಕುಮಾರಸ್ವಾಮಿ ಬೇಕಾದಷ್ಟು ಬಾರಿ ಜಗಳ ಮತ್ತು ಗುದ್ದಾಡಿದ್ದೇವೆ. ಇಂದು ದೇಶದ ಏಳಿಗೆಗಾಗಿ ಇಬ್ಬರೂ ಒಂದಾಗಿದ್ದೇವೆ ಎಂದರು.

ಅಂಬಿ ಹೆಸರು ಹೇಳಿ ಮತ ಕೇಳುವ ಅವಶ್ಯಕತೆ ನನಗಿಲ್ಲ: ಕುಮಾರಸ್ವಾಮಿ
ಮೈಸೂರು: ಚುನಾವಣೆಯಲ್ಲಿ ಅಂಬರೀಶ್‌ ಹೆಸರೇಳಿ ನಾವು ಮತ ಕೇಳುವುದಿಲ್ಲ.ಅದರ ಅವಶ್ಯಕತೆಯೂ ನನಗಿಲ್ಲ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಚುನಾವಣೆಯಲ್ಲಿ ಅಂಬರೀಶ್‌ ಹೆಸರನ್ನು ನಾನು ಬಳಸುತ್ತಿಲ್ಲ. ಅಂಬರೀಶ್‌ ಹೆಸರಿನಲ್ಲಿ ಮತ ಕೇಳುವ ಅವಶ್ಯಕತೆ ನನಗಿಲ್ಲ. ನಾನು ರೈತರ ಪರ ಕೆಲಸ ಮಾಡಿದ್ದೇನೆ.ಹೀಗಾಗಿ ಜಿಲ್ಲೆಯ ರೈತರು ನಮ್ಮ ಕೈಹಿಡಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು

Advertisement

ಸುಮಲತಾ ಮನೆ, ಬಿಜೆಪಿ ಕಚೇರಿಗೆ ಪೊಲೀಸ್‌ ಭದ್ರತೆ
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಾಡಿಗೆ ಮನೆ ಹಾಗೂ ಬಿಜೆಪಿ ಕಚೇರಿಗೆ ಪೋಲೀಸ್‌ ಭದ್ರತೆ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡೇಶ್ವರಿ ನಗರದಲ್ಲಿರುವ ಸುಮಲತಾ ಮನೆ ಹಾಗೂ ಮಂಡ್ಯದ ಸುಭಾಷ್‌ ನಗರದಲ್ಲಿರುವ ಬಿಜೆಪಿ ಕಚೇರಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಸಿದ್ದುಗೆ ಪ್ರತಾಪ್‌ ಸವಾಲು
ಮೈಸೂರು: ಐದು ಬಾರಿ ನಿಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವ ಘನಂದಾರಿ ಅಭಿವೃದಿಟಛಿ ಕೆಲಸಗಳನ್ನು ಮಾಡಿದ್ದೀರಿ ಎಂದು
ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದಟಛಿ ವಾಗ್ಧಾಳಿ ನಡೆಸಿದರು.

ಸೋಮವಾರ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರು ಏನು ಅಭಿವೃದಿಟಛಿ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದರು. ಹಾಗಾಗಿ ಅಗತ್ಯವಾದ ದಾಖಲೆಗಳೊಂದಿಗೆ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ನಾವು ಆಹ್ವಾನ ನೀಡಿದರೂ, ಅವರು ಈವರೆಗೆ ಚರ್ಚೆಗೆ ಬಂದಿಲ್ಲ, ಧೈರ್ಯ ಇದ್ದರೆ ನಮ್ಮ ಸವಾಲನ್ನು ಸ್ವೀಕರಿಸಿ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಮೈತ್ರಿ ನಡುವೆ ಮೂಡದ ಸಮನ್ವಯ!
ಮೈಸೂರು: ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಸಿ.ಎಚ್‌. ವಿಜಯಶಂಕರ್‌ ಅವರು ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್‌-ಜೆಡಿಎಸ್‌ ಎರಡೂ ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇತ್ತು. ಆದರೆ, ದೋಸ್ತಿ ಪಕ್ಷಗಳಲ್ಲಿ ಆರಂಭದಿಂದಲೂ ಸಮನ್ವಯ ಇಲ್ಲದಿರುವುದು ನಾಮಪತ್ರ ಸಲ್ಲಿಕೆ ವೇಳೆಯೂ ಪ್ರತಿ ಧ್ವನಿಸಿತು.

ಕಾಂಗ್ರೆಸ್‌ ಪಕ್ಷದ ಸಾವಿರಾರು ಕಾರ್ಯಕರ್ತರು ಸರಿದ್ದರಾದರೂ ಜೆಡಿಎಸ್‌ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ಲಾ, ಮಾಜಿ
ಕಾರ್ಪೋರೇಟರ್‌ಗಳಾದ ಕೆ.ವಿ.ಮಲ್ಲೇಶ್‌, ಆರ್‌.ಲಿಂಗಪ್ಪ ಸೇರಿದಂತೆ ಬೆರಳೆಣಿಕೆಯ ಜೆಡಿಎಸ್‌ ಕಾರ್ಯಕರ್ತರು ಬಿಟ್ಟರೆ ಆ ಪಕ್ಷದ ಪ್ರಮುಖ ನಾಯಕರುಗಳಾಗಲಿ, ಜಿಲ್ಲೆಯ ಇಬ್ಬರೂ ಸಚಿವರೂ ಇತ್ತ ಸುಳಿಯಲಿಲ್ಲ. ಆರಂಭದಲ್ಲೇ ಜೆಡಿಎಸ್‌ ಈ ರೀತಿ ಕೈಕೊಟ್ಟಿದ್ದು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಚರ್ಚೆಗೆ ಗ್ರಾಸವಾಗಿತ್ತು.

ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿದ ಬಳಿಕ ಹಾಜರಾದ ಸಚಿವ ಸಾ.ರಾ.ಮಹೇಶ್‌ ಅವರು ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್‌ ಪರವಾಗಿ ಹಾಜರಿದ್ದರು. ತಮ್ಮ ಅಭ್ಯರ್ಥಿ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಜರಿದ್ದರಾದರೂ ಪುತ್ರ ನಿಖೀಲ್‌ ಜೊತೆಗೆ ಮೈಸೂರಿನಲ್ಲೇ ಇದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇತ್ತ ಸುಳಿಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next