Advertisement

Lok Sabha Election: ರಾಜ್ಯ ಬಿಜೆಪಿ ಪಟ್ಟಿ ಮತ್ತೆ ಕಗ್ಗಂಟು!

12:33 AM Mar 10, 2024 | Team Udayavani |

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದಲ್ಲಿ ರವಿವಾರ ಸಂಜೆ ದಿಲ್ಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣ ಸಮಿತಿಯ ಸಭೆ ನಡೆಯಲಿದ್ದು, ಇದರಲ್ಲಿ ಕರ್ನಾಟಕದ ಪ್ರತಿನಿಧಿಗಳು ಭಾಗಿಯಾಗುವುದು ದಿಢೀರ್‌ ಮುಂದೂಡಿಕೆಯಾಗಿದೆ. ಹಾವೇರಿ, ಮೈಸೂರು ಸಹಿತ ಕೆಲವು ಕ್ಷೇತ್ರಗಳ ಕಗ್ಗಂಟು ಬಿಗಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ತಮ್ಮ ದಿಲ್ಲಿ ಭೇಟಿಯನ್ನು ದಿಢೀರ್‌ ರದ್ದುಗೊಳಿಸಿದ್ದಾರೆ. ಹೀಗಾಗಿ ಬಿಜೆಪಿ 2ನೇ ಪಟ್ಟಿಯಲ್ಲೂ ಕರ್ನಾಟಕದ ಅಭ್ಯರ್ಥಿಗಳು ಅಂತಿಮಗೊಳ್ಳುವ ಸಾಧ್ಯತೆ ಸಂಪೂರ್ಣವಾಗಿ ಕ್ಷೀಣಿಸಿದೆ.

Advertisement

ಶನಿವಾರ ರಾತ್ರಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತುಕತೆ ಬಳಿಕ ಗೊಂದಲಗಳನ್ನು ಇತ್ಯರ್ಥಗೊಳಿಸಿದ ಬಳಿಕವಷ್ಟೇ ದಿಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂಬ ನಿರ್ಧಾರ ಕೈಗೊಂಡರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪ್ರವಾಸ ದಿಢೀರ್‌ ರದ್ದಾಯಿತು ಎಂದು ತಿಳಿದು ಬಂದಿದೆ.

ಈ ಮಧ್ಯೆ ಬಿಜೆಪಿ-ಜೆಡಿಎಸ್‌ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಜಂಟಿ ಸಭೆ ನಡೆಯುವ ಸಾಧ್ಯತೆಗಳು ಕ್ಷೀಣಿಸಿವೆ. ಇದುವರೆಗೆ ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಒಮ್ಮೆಯೂ ಅಧಿಕೃತ ಸಭೆ ನಡೆಸಿಲ್ಲ.

ದಿಲ್ಲಿ ಮಟ್ಟದಲ್ಲೂ ಅಂಥ ಪ್ರಯತ್ನಗಳು ನಡೆದಿಲ್ಲ. ಕ್ಷೇತ್ರ ಹಂಚಿಕೆ ಸಂಬಂಧ ಪ್ರತ್ಯೇಕವಾಗಿಯೇ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲು ವರಿಷ್ಠರು ನಿರ್ಧರಿಸಿದ್ದಾರೆ.

ಜೆಡಿಎಸ್‌ಗೆ ಮೂರು ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಾಗಿದೆಯಾದರೂ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಕುಮಾರಸ್ವಾಮಿ ಲೋಕಸಭೆಗೆ ಸ್ಪರ್ಧಿಸಬೇಕೆಂಬುದು ಬಿಜೆಪಿಯ ನಿಲುವಾಗಿದ್ದು, ಸೋಮವಾರ ನಡೆಯುವ ಸಭೆಯಲ್ಲಿ ಇದು ಇತ್ಯರ್ಥವಾಗಬಹುದು ಎನ್ನಲಾಗುತ್ತಿದೆ.

Advertisement

ಮೈಸೂರಿಗೆ ಯದುವೀರ್‌ ಹೆಸರು ಪ್ರಸ್ತಾವ
ಮಹತ್ವದ ಬೆಳವಣಿಗೆಯೊಂದರಲ್ಲಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಮೈಸೂರು ರಾಜವಂಶಸ್ಥ ಯದುವೀರ್‌ ಒಡೆಯರ್‌ ಹೆಸರನ್ನು ರಾಜ್ಯ ನಾಯಕರು ಪ್ರಸ್ತಾವಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಹಾಲಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಕೊಡಗು-ಮೈಸೂರು ಭಾಗದ ಮುಖಂಡರ ವಿರೋಧವಿದೆ ಎಂಬ ಕಾರಣವನ್ನು ಮುಂದಿರಿಸಿ ರಾಜ್ಯ ಬಿಜೆಪಿಯ ಇಬ್ಬರು ಪ್ರಭಾವಿಗಳು ಹಾಗೂ ಒಬ್ಬರು ಆರೆಸ್ಸೆಸ್‌ ನಾಯಕರು ಬದಲಾವಣೆಯ ಪ್ರಸ್ತಾವವನ್ನು ಕಳೆದ ವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಮಂಡಿಸಿದ್ದಾರೆ. ಪ್ರತಾಪ್‌ ಬದಲು ಯದುವೀರ್‌ ಹೆಸರು ಇವರು ನೀಡಿದ ಪಟ್ಟಿಯಲ್ಲಿ ಇರುವುದು ದೃಢಪಟ್ಟಿದೆ.

ಆದರೆ ಪ್ರತಾಪ್‌ ಬದಲಾವಣೆಗೆ ಈ ಸಭೆಯಲ್ಲಿ ಮುಂದಿಟ್ಟ ಕಾರಣಗಳಿಗೆ ಅಮಿತ್‌ ಶಾ ಒಪ್ಪಿಗೆ ಸಿಕ್ಕಿಲ್ಲ. ಒಂದೊಮ್ಮೆ ಮೈಸೂರು ಕ್ಷೇತ್ರದ ಅಭ್ಯರ್ಥಿ ಬದಲಾಯಿಸಿದರೆ ಸಿಎಂ ಸಿದ್ದರಾಮಯ್ಯ ಪುತ್ರ ಡಾ| ಯತೀಂದ್ರ ಅವರು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಾಪ್‌ ಬಿಟ್ಟು ಬೇರೆಯವರಿಗೆ ಅವಕಾಶ ಕಲ್ಪಿಸಿದರೆ ಒಂದು ಕ್ಷೇತ್ರ ಕಳೆದುಕೊಳ್ಳಬೇಕಾಗಬಹುದು ಎಂದು ಅಮಿತ್‌ ಶಾ ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯ ನಾಯಕರ ಮಧ್ಯೆ ಭಿನ್ನ ಅಭಿಪ್ರಾಯ ಸುಳಿದಿರುವುದರಿಂದ ಅಂತಿಮ ತೀರ್ಮಾನವನ್ನು ಪ್ರಧಾನಿ ಮೋದಿ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆಯೊಳಗೆ ಎಲ್ಲವೂ ಅಂತಿಮವಾಗಲಿದೆ. 22, 23, 24 ಕ್ಷೇತ್ರ ಗೆಲುವಿನ ಪ್ರಶ್ನೆ ಅಲ್ಲ. ರಾಜ್ಯದಲ್ಲಿ ಬಿಜೆಪಿ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ. ಬಹುತೇಕ 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಎಲ್ಲರ ಕುತೂಹಲಕ್ಕೆ ಮೂರ್‍ನಾಲ್ಕು ದಿನದಲ್ಲಿ ಉತ್ತರ ಲಭಿಸಲಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಮೈಸೂರಿನಲ್ಲಿ ಯಾವ ಜನಪ್ರತಿನಿಧಿಯೂ ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಜನ ಖುಷಿಯಾಗಿದ್ದರೆ ಮೇಲಿನ ವರೂ ಅದೇ ನಿರ್ಧಾರ ಮಾಡು ತ್ತಾರೆ. ನನ್ನ ಕೆಲಸವೇ ನನಗೆ ಶ್ರೀರಕ್ಷೆ. ತಾಯಿ ಚಾಮುಂಡಿ ನನ್ನ ಕೈ ಬಿಡುವು ದಿಲ್ಲ.
-ಪ್ರತಾಪ್‌ ಸಿಂಹ, ಮೈಸೂರು-ಕೊಡಗು ಕ್ಷೇತ್ರದ ಸಂಸದ

ನಾಳೆ ಬಿಜೆಪಿ ವರಿಷ್ಠರ ಜತೆ ಎಚ್‌ಡಿಕೆ ಸಭೆ
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸೋಮವಾರ ಬೆಳಗ್ಗೆ ದಿಲ್ಲಿಗೆ ತೆರಳಲಿದ್ದು, ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ. ಜೆಡಿಎಸ್‌ಗೆ ಬಿಟ್ಟುಕೊಡಬೇಕಾದ ಕ್ಷೇತ್ರ ಗಳಿಗೆ ಸಂಬಂಧಪಟ್ಟಂತೆ ಬಿಜೆಪಿ ವರಿಷ್ಠರು ಜೆಡಿಎಸ್‌ ನಾಯಕರ ಜತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ. ಆ ಬಳಿಕವೇ ರಾಜ್ಯದ ಪಟ್ಟಿ ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ಇಂದು ಬಿಜೆಪಿ 150 mಕ್ಷೇತ್ರಗಳ 2ನೇ ಪಟ್ಟಿ ?
ಹೊಸದಿಲ್ಲಿ: ಇತ್ತೀಚೆಗೆ ಲೋಕಸಭೆ ಚುನಾವಣೆಯ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿಯು ರವಿವಾರ 150 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ, ಬಿಹಾರದ ಹೆಚ್ಚಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಜತೆಗೆ ಕರ್ನಾಟಕ, ಆಂಧ್ರ, ತ.ನಾಡು, ರಾಜಸ್ಥಾನ, ಹಿಮಾಚಲ, ಹರಿಯಾಣ, ಒಡಿಶಾ ಅಭ್ಯರ್ಥಿಗಳ ಹೆಸರೂ ಪ್ರಕಟ ವಾಗಬಹುದು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next