Advertisement

ಅಧಿಕಾರಿಗಳ ಸುತ್ತಾಟಕ್ಕೆ ಜಿಲ್ಲೆಯಲ್ಲಿ 652 ವಾಹನಗಳು !

01:48 AM Mar 28, 2019 | Team Udayavani |

ಮಂಗಳೂರು: ಚುನಾವಣ ಕರ್ತವ್ಯ ಹಾಗೂ ಮತದಾನದ ದಿನ ಅಧಿಕಾರಿಗಳ ಓಡಾಟಕ್ಕೆ ದ.ಕ. ಜಿಲ್ಲೆಯಲ್ಲಿ 652 ವಾಹನಗಳು ಅಗತ್ಯವಿರುವುದಾಗಿ ಸಾರಿಗೆ ಇಲಾಖೆ ಅಂದಾಜು ಮಾಡಿದೆ.

Advertisement

ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 652 ವಾಹನಗಳನ್ನು ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಷ್ಟೇ ಸಂಖ್ಯೆಯ ವಾಹನಗಳು ಈ ಚುನಾವಣೆಗೂ ಅಗತ್ಯವಿದೆ ಎಂದು ದ.ಕ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ಕಳೆದ ತಿಂಗಳು ಬೇಡಿಕೆ ಸಲ್ಲಿಸಲಾಗಿತ್ತು. ಕಾರು-ಬಸ್‌ಗಳನ್ನು ಒದಗಿಸುವಂತೆ ದ.ಕ. ಜಿಲ್ಲಾ ಚುನಾ ವಣಾಧಿಕಾರಿ ಕಚೇರಿಯಿಂದ ಮಂಗಳೂರಿನ ಸಾರಿಗೆ ಇಲಾಖೆಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಪ್ರವಾಸಿ ಕಾರುಗಳ ವಿವಿಧ ಸಂಘಟನೆ, ಮಾಲಕರ ಸಂಘದ ಪ್ರಮುಖರ ಜತೆಗೆ ಆರ್‌ಟಿಒ ಮಾತುಕತೆ ನಡೆಸಲಾಗಿದೆ.

ಕಂದಾಯ, ಪೊಲೀಸ್‌, ಭದ್ರತಾ ದಳಗಳು ಚುನಾವಣ ಕಾರ್ಯದ ನಿಮಿತ್ತ ಜಿಲ್ಲೆಯಾದ್ಯಂತ ಸುತ್ತಾಡಲು ವಾಹನಗಳನ್ನು ಚುನಾವಣಾ ಆಯೋಗದಿಂದ ಒದಗಿಸಲಾಗುತ್ತದೆ. ಸಂಬಂಧಿತ ನಗರ ವ್ಯಾಪ್ತಿಯ ಆರ್‌ಟಿಒ ಅಧಿಕಾರಿಗಳು ಇದರ ಹೊಣೆ ವಹಿಸಿಕೊಳ್ಳಬೇಕು.

ಮಂಗಳೂರು, ಮಂ.ಉತ್ತರ, ಮಂ.ದಕ್ಷಿಣ, ಮೂಡುಬಿದಿರೆ ವಿ.ಸಭಾ ಕ್ಷೇತ್ರ ವ್ಯಾಪ್ತಿಗೆ ಮಂಗಳೂರು ಆರ್‌ಟಿಒ ಕಚೇರಿಯಿಂದ ಮತ್ತು ಬಂಟ್ವಾಳ-ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಂಟ್ವಾಳ ಆರ್‌ಟಿಒ ಕಚೇರಿ ಹಾಗೂ ಪುತ್ತೂರು-ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಪುತ್ತೂರು ಆರ್‌ಟಿಒ ಕಚೇರಿಯಿಂದ ವಾಹನಗಳನ್ನು ಒದಗಿಸಲಾಗುತ್ತಿದೆ.

ಹಣ ಸಿಗುವುದೇ ಕಷ್ಟ ಎಂಬಂತಾಗಿತ್ತು!
ನಗರಗಳಿಗೆ ಹೊರಭಾಗದಿಂದ ಬರುವ ಗಣ್ಯರ ಭದ್ರತೆ, ಚುನಾವಣೆ, ಪಲ್ಸ್‌ ಪೋಲಿಯೊ ಹಾಗೂ ಇತರ ತುರ್ತು ಸಂದರ್ಭ ಸಹಿತ ವಿವಿಧ ಕಾರಣಗಳಿಗೆ ವಾಹನಗಳನ್ನು ಆರ್‌ಟಿಒ/ ಪೊಲೀಸರು ಬಳಸಿಕೊಳ್ಳುತ್ತಾರೆ.

Advertisement

ತಮ್ಮ ಕೆಲಸದ ಬಳಿಕ ನಿಗದಿ ಮಾಡಿದ ಹಣವನ್ನು ನೀಡಿ ವಾಹನವನ್ನು ಹಿಂದಿರುಗಿಸಬೇಕು. ಆದರೆ ಕೆಲವು ವರ್ಷಗಳಲ್ಲಿ ಚುನಾವಣೆ, ಗಣ್ಯರ ಆಗಮನದ ಸಂದರ್ಭ ಬಳಕೆಯಾಗುವ ವಾಹನಗಳ ಬಿಲ್‌ ಮೊತ್ತ ಪಾವತಿಸಲು ಸರಕಾರ ಹಿಂದೇಟು ಹಾಕುತ್ತಿದ್ದರಿಂದ ಪ್ರವಾಸಿ ಕಾರು/ಜೀಪು, ವ್ಯಾನ್‌ನವರು ವಾಹನ ನೀಡಲು ಮುಂದಾಗುತ್ತಿರಲಿಲ್ಲ.

ಪೂರ್ತಿ ಪಾವತಿ
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ 2016 ನ. 8ರಂದು ಬಳಸಿದ್ದ ಕೆಲವು ಟ್ಯಾಕ್ಸಿಗಳ ಬಿಲ್‌ ಪಾವತಿಗೆ ಹಲವು ತಿಂಗಳು ಕಾಯಬೇಕಾಯಿತು. ನರೇಂದ್ರ ಮೋದಿ, ರಾಹುಲ್‌ ಗಾಂಧಿ ಭೇಟಿ ಸಂದರ್ಭ ಬಳಸಲಾಗಿದ್ದ ವಾಹನಗಳ ಬಿಲ್‌ ಪಾವತಿಯೂ ಇದೇ ಕಥೆ. ಆದರೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಬಳಕೆ ಮಾಡಲಾದ ಎಲ್ಲ ವಾಹನಗಳಿಗೆ “ತಡವಾಗಿಯಾದರೂ’ ಸಮರ್ಪಕ ರೀತಿಯಲ್ಲಿ ಹಣ ನೀಡಲಾಗಿದೆ ಎಂಬುದು ಲಭ್ಯ ಮಾಹಿತಿ.

ಟ್ಯಾಕ್ಸಿ ಚಾಲಕರಿಗೆ ಅಂಚೆ ಮತ
ಚುನಾವಣೆ ಸಂದರ್ಭ ಬಳಸಿಕೊಳ್ಳಲಾಗುವ ದ.ಕ. ಜಿಲ್ಲೆಯ ಎಲ್ಲ ಟ್ಯಾಕ್ಸಿ ಚಾಲಕರಿಗೆ ಮತ ಹಾಕಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಎಂಬಂತೆ ಅಂಚೆ ಮತದಾನದ ಅವಕಾಶವನ್ನು ಟ್ಯಾಕ್ಸಿ ಚಾಲಕರಿಗೆ ನೀಡಲಾಗಿದೆ. ಟ್ಯಾಕ್ಸಿ ಚಾಲಕರು ಪ್ರತೀ ಮತದಾನದ ಸಂದರ್ಭ ಚುನಾವಣೆ ನಿಮಿತ್ತ ಬೇರೆ ಬೇರೆ ಪ್ರದೇಶಗಳಿಗೆ ತೆರಳುವ ಕಾರಣದಿಂದ ಮತದಾನದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ಈಗ ದ.ಕ. ಜಿಲ್ಲಾಡಳಿತ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಚುನಾವಣೆ ಕರ್ತವ್ಯದಲ್ಲಿರುವ ಟ್ಯಾಕ್ಸಿ ಚಾಲಕರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಿ ಫಾರಂಗಳನ್ನು ವಿತರಿಸಲಾಗಿದೆ. ಅದನ್ನು ಭರ್ತಿ ಮಾಡಿ ನೀಡಬೇಕಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

ಅಗತ್ಯ ವಾಹನಗಳ ಸಂಖ್ಯೆ
ಮ್ಯಾಕ್ಸಿ ಕ್ಯಾಬ್‌ 134
ಜೀಪು 148
ವ್ಯಾನು 28
ಬಸ್‌ 319
ಮಿನಿ ಬಸ್‌ 23
ಒಟ್ಟು 652

ಕಳೆದ ಚುನಾವಣೆಯ ಮೊತ್ತ ಪಾವತಿ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ, ಇತರರ ಬಳಕೆಗಾಗಿ ವಾಹನಗಳನ್ನು ಪಡೆಯಲಾಗುತ್ತಿದ್ದು, ಇನ್ನಷ್ಟು ಒದಗಿಸುವಂತೆ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ನ್ನು ಕೋರಲಾಗಿದೆ. ಕಳೆದ ವಿ.ಸಭಾ ಚುನಾವಣೆ ವೇಳೆಯಲ್ಲಿ ಬಳಕೆಯಾದ ಎಲ್ಲ ವಾಹನಗಳ ಮೊತ್ತವನ್ನು ಈಗಾಗಲೇ ಸಂಪೂರ್ಣವಾಗಿ ವಾಹನ ಮಾಲಕರಿಗೆ ನೀಡಲಾಗಿದೆ.
– ಜಿ.ಎಸ್‌. ಹೆಗ್ಡೆ, ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ-ಮಂಗಳೂರು

ಚುನಾವಣ ಕಾರ್ಯನಿಮಿತ್ತ ವಾಹನಗಳನ್ನು ನೀಡುವ ಸಂಬಂಧ ಆರ್‌ಟಿಒ/ಪೊಲೀಸ್‌ ಇಲಾಖೆಯು ಬಲವಂತವಾಗಿ ಪ್ರವಾಸಿ ಕಾರು/ವಾಹನಗಳನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಇಲಾಖೆಯ ಸುಪರ್ದಿಗೆ ಪಡೆಯಬಾರದು. ಅಸೋಸಿಯೇಶನ್‌ ನೇತೃತ್ವದಲ್ಲಿ ಈಗಾಗಲೇ ವಾಹನಗಳನ್ನು ಒದಗಿಸಲಾಗುತ್ತಿವೆ. ಸರಿಯಾದ ಪ್ರಮಾಣದಲ್ಲಿ ಬಾಡಿಗೆ ಹಣ ಹಾಗೂ ಚುನಾವಣೆ ನಿಮಿತ್ತ ತೆರಳುವ ವಾಹನಗಳ ಡ್ರೈವರ್‌ಗಳಿಗೆ ಊಟ-ವಸತಿ ಕಲ್ಪಿಸಬೇಕು.
– ದಿನೇಶ್‌ ಕುಂಪಲ, ಅಧ್ಯಕ್ಷರು, ದ.ಕ. ಟ್ಯಾಕ್ಸಿ ಮೆನ್ಸ್‌ ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಷನ್‌

Advertisement

Udayavani is now on Telegram. Click here to join our channel and stay updated with the latest news.

Next