Advertisement

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

11:51 PM Sep 20, 2024 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೆ. 14ರಂದು ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯದ ಹೈಕೋರ್ಟ್‌ನ 3 ಪೀಠಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 35,84,430 ಪ್ರಕರಣಗಳು ಇತ್ಯರ್ಥಗೊಂಡಿವೆ.

Advertisement

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ, ಹೈಕೋರ್ಟ್‌ ನ್ಯಾಯಮೂರ್ತಿ ವಿ. ಕಾಮೇಶ್ವರ್‌ ರಾವ್‌ ಅವರು ಈ ಮಾಹಿತಿ ಹಂಚಿ ಕೊಂಡಿದ್ದಾರೆ.

ಬೆಂಗಳೂರಿನ ಹೈಕೋರ್ಟ್‌ನ 5 ಪೀಠದಲ್ಲಿ 331 ಪ್ರಕರಣ, ಧಾರವಾಡ ಮತ್ತು ಕಲಬುರಗಿಯ ತಲಾ 2 ಪೀಠದಲ್ಲಿ ತಲಾ 225 ಪ್ರಕರಣ ಸೇರಿ ಒಟ್ಟು 781 ಪ್ರಕರಣಗಳನ್ನು ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿನ ಒಟ್ಟು 999 ಪೀಠಗಳಲ್ಲಿ 35,83,649 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು.

ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2,00,083 ಪ್ರಕರಣ ಮತ್ತು ವ್ಯಾಜ್ಯ ಪೂರ್ವ 33,84,430 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಒಟ್ಟು 2,402 ಕೋಟಿ ರೂ. ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ. ಲೋಕ ಅದಾಲತ್‌ನಲ್ಲಿ ವೈವಾಹಿಕ ಜೀವನದ ಪುನರ್‌ ಸ್ಥಾಪನೆಗೆ ನಾವು ಒತ್ತು ನೀಡಿದ್ದೇವೆ. 1,669 ವೈವಾಹಿಕ ಪ್ರಕರಣಗಳಲ್ಲಿ 248 ದಂಪತಿ ರಾಜಿ ಸಂಧಾನದಿಂದ ಪುನಃ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ. 2,696 ವಿಭಾಗ ದಾವೆ, 8,517 ಚೆಕ್‌ ಬೌನ್ಸ್‌ ಪ್ರಕರಣ ಇತ್ಯರ್ಥಪಡಿಸಲಾಗಿದೆ.

1,365 ಹಿರಿಯ ನಾಗರಿಕರು ತಮ್ಮ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Advertisement

ಮೋಟಾರು ವಾಹನ ಅಪರಾಧ ಪರಿಹಾರದ 3,621 ಪ್ರಕರಣ ಇತ್ಯರ್ಥಪಡಿಸಿ 191 ಕೋಟಿ ರೂ. ಪರಿಹಾರ ಮೊತ್ತ ನೀಡಲಾಗಿದೆ. ಅದೇ ರೀತಿ 3,610 ಅಮಲ್ಜಾರಿ ಪ್ರಕರಣ ಇತ್ಯರ್ಥಪಡಿಸಿ 352 ಕೋಟಿ ರೂ. ಮತ್ತು 73 ಗ್ರಾಹಕರ ವ್ಯಾಜ್ಯ ಪ್ರಕರಣ ಇತ್ಯರ್ಥ ಪಡಿಸಿ 3.24 ಕೋಟಿ ರೂ. ಇತ್ಯರ್ಥ ಮೊತ್ತ ನೀಡಲು ಆದೇಶಿಸಲಾಗಿದೆ ಎಂದು ಎಂದು ತಿಳಿಸಿದರು.

26 ವರ್ಷ ಹಳೆಯ
ಕ್ರಿಮಿನಲ್‌ ಪ್ರಕರಣಕ್ಕೂ ಮುಕ್ತಿ
ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿದ್ದ ರಿಲಯನ್ಸ್‌ ಹೋಮ್‌ ಫೈನಾನ್ಸ್‌ ವಿರುದ್ಧ ಸೈಕಾನ್‌ ಕನ್‌ಸ್ಟಕ್ಷನ್‌ ಕಂಪೆನಿ ಮಧ್ಯೆಯ ಪ್ರಕರಣವನ್ನು 20 ಕೋಟಿ ರೂ.ಗೆ ಇತ್ಯರ್ಥ ಪಡಿಸಿರುವುದು, ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್‌ 379 (ಕಳ್ಳತನ)ದಡಿ ಶಿಕ್ಷಾರ್ಹ ಅಪರಾಧಕ್ಕಾಗಿ 1998ರಲ್ಲಿ ದಾಖಲಾಗಿದ್ದು ನಂಜಪ್ಪ ವಿರುದ್ಧ ಅಕ್ರಂ ಪ್ರಕರಣವನ್ನು 26 ವರ್ಷಗಳ ಬಳಿಕ ಇತ್ಯರ್ಥ ಪಡಿಸಲಾಗಿದೆ.

15 ವರ್ಷ ಹಳೆಯ 144 ಕೇಸ್‌ ಇತ್ಯರ್ಥ
ಐದು ವರ್ಷಗಳಿಗೂ ಹೆಚ್ಚು ಹಳೆಯದಾದ 1,022 ಪ್ರಕರಣಗಳು, 10 ವರ್ಷಗಳಿಗೂ ಹಳೆಯದಾದ 277 ಪ್ರಕರಣಗಳು ಮತ್ತು 15 ವರ್ಷಗಳಿಗೂ ಹಳೆಯದಾದ 144 ಪ್ರಕರಣಗಳು ಸೇರಿ 1,443 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಎಂದು ನ್ಯಾಯಮೂರ್ತಿಗಳು ವಿವರಿಸಿದರು.

ಟ್ರಾಫಿಕ್‌ ದಂಡ ರಿಯಾಯಿತಿಗೆ ಒಪ್ಪದ ಸರಕಾರ
ಟ್ರಾಫಿಕ್‌ ದಂಡದಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ಕುಮಾರ್‌ ಹೇಳಿದ್ದಾರೆ. 2023ರಲ್ಲಿ ಕಾನೂನು ಪ್ರಾಧಿಕಾರದ ಶಿಫಾರಸಿನ ಮೇರೆಗೆ ಟ್ರಾಫಿಕ್‌ ದಂಡದಲ್ಲಿ ರಿಯಾಯಿತಿ ನೀಡಲು ಸರಕಾರ ಒಪ್ಪಿಕೊಂಡಿತ್ತು. ಆದರೆ ಆ ಬಳಿಕ ಪ್ರಾಧಿಕಾರ ರಿಯಾಯಿತಿಗೆ ಶಿಫಾರಸು ಮಾಡಿದ್ದರೂ ಸರಕಾರ ಒಪ್ಪಿಕೊಂಡಿಲ್ಲ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2024ನೇ ಸಾಲಿನ ನಾಲ್ಕನೇ ಹಾಗೂ ಕೊನೆಯ ಲೋಕ ಅದಾಲತ್‌ ಡಿ. 14ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.
-ನ್ಯಾ| ಕಾಮೇಶ್ವರ್‌ ರಾವ್‌,
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next