Advertisement

ಲಾಕ್‌ಡೌನ್‌: ಪುತ್ತೂರಿನಲ್ಲಿ ಜನರ ಓಡಾಟ ಇಳಿಕೆ

11:19 PM Mar 27, 2020 | Sriram |

ಪುತ್ತೂರು: ಕೋವಿಡ್‌ 19 ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡಿರುವ ಕಟ್ಟು ನಿಟ್ಟಿನ ಕ್ರಮಗಳ ಹಿನ್ನೆಲೆಯ ಪರಿಣಾಮ ಪುತ್ತೂರು ತಾಲೂಕಿನಾದ್ಯಂತ ನಿಧಾನವಾಗಿ ಕಾಣಿಸಿಕೊಳ್ಳುತ್ತಿದ್ದು,ರಾಜ್ಯದಲ್ಲಿನ ಲಾಕ್‌ಡೌನ್‌ ಆದೇಶದ ಐದನೇ ದಿನ ಶುಕ್ರವಾರ ನಗರದಲ್ಲಿ ಜನರ ಓಡಾಟದಲ್ಲಿ ಇಳಿಕೆ ಕಂಡುಬಂತು.

Advertisement

ನಗರವನ್ನು ಪ್ರವೇಶಿಸುವ ಕಬಕ,ಬೊಳುವಾರು,ದರ್ಬೆಗಳಲ್ಲಿ ಪೊಲೀಸ್‌ ಬಿಗು ಬಂದೋಬಸ್ತ್ ನಡೆಸಿ ಅಗತ್ಯ ಇರುವವರನ್ನು ಮಾತ್ರ ಪೇಟೆಗೆ ಬಿಡುವ ಕ್ರಮವನ್ನು ಪೊಲೀಸರು ಅನುಸರಿಸಿದರು. ಮಾಸ್ಕ್ ಧರಿಸದೆ ನಿರ್ಲಕ್ಷé ವಹಿಸಿದ್ದವರಿಗೆ ಎಚ್ಚರಿಕೆ ನೀಡುವುದು ಕಂಡುಬಂತು.

ವಾರ್ಡ್‌ಗೆ ಸಮಯ ನಿಗದಿ
ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿ ಅವಕಾಶದ ಸಂದರ್ಭ ಉಂಟಾಗುತ್ತಿರುವ ಜನದಟ್ಟಣೆಯನ್ನು ನಿಯಂತ್ರಿಸುವ ಸಲು ವಾಗಿ ಪುತ್ತೂರು ನಗರದಲ್ಲಿ ಮತ್ತೂಂದು ಪ್ರಯೋಗದ ಹೆಜ್ಜೆ ಇರಿಸಲಾಗಿದೆ. ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಸೂಚನೆಯಂತೆ ನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ನಗರಸಭಾ 31 ವಾರ್ಡ್‌ಗಳನ್ನು ವಿಭಾಗಿಸಿ ಸಮಯ ನಿಗದಿಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಸಮ ಯಕ್ಕೆ ಮಾತ್ರ ಆಯಾ ಮಾರ್ಡ್‌ನವರು ವಸ್ತುಗಳ ಖರೀದಿಗೆ ಪೇಟೆಗೆ ಬರುವಂತೆ ಮಾಹಿತಿ ನೀಡುವ ನಿಟ್ಟಿನಲ್ಲಿ ವಾರ್ಡ್‌ಗಳ ನಗರ ಸಭಾ ಸದಸ್ಯರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ನಿಗದಿತ ವಾರ್ಡ್‌ ನವರಿಗೆ 2ಗಂಟೆಗಳ ಅವಕಾಶ ನೀಡಲಾಗಿದೆ.

ಬೆಳಗ್ಗೆ 6ರಿಂದ 8
ಬೆಳಗ್ಗೆ 6ರಿಂದ 8 ಗಂಟೆಯ ತನಕ ವಾರ್ಡ್‌ ಸಂಖ್ಯೆ ಕಬಕ 1, ಕಬಕ 2, ಪಟ್ನೂರು 3, ಬನ್ನೂರು 4, 5 6, ಚಿಕ್ಕಮುಟ್ನೂರು 7,8, 9. ನಗರಸಭಾ ಸದಸ್ಯರಾದ ಶಿವರಾಮ, ವಸಂತ ಕಾರೆಕ್ಕಾಡು, ಕೆ. ಜೀವಂಧರ್‌ ಜೈನ್‌, ಗೌರಿ ಬನ್ನೂರು, ಕೆ. ಫಾತಿಮತ್‌ ಝೋರಾ, ಮೋಹಿನಿ ವಿಶ್ವನಾಥ, ಲೀಲಾವತಿ, ಸುಂದರ ಪೂಜಾರಿ, ರೋಬಿನ್‌ ತಾವ್ರೋ ಅವರಿಗೆ ಜವಾಬ್ದಾರಿ ಹಂಚಿಕೆ.

Advertisement

ಬೆಳಗ್ಗೆ 8 ರಿಂದ 10
ವಾರ್ಡ್‌ ಸಂಖ್ಯೆ ಪುತ್ತೂರು ಕಸಬಾ 10ರಿಂದ 18ರ ತನಕ. ನಗರಸಭಾ ಸದಸ್ಯರಾದ ಪ್ರೇಮ್‌ ಕುಮಾರ್‌, ಶಕ್ತಿ ಸಿನ್ಹಾ, ಪದ್ಮನಾಭ ನಾಯ್ಕ, ಪಿ.ಜಿ. ಜಗನ್ನಿವಾಸ್‌ ರಾವ್‌, ಪ್ರೇಮಲತಾ ರಾವ್‌, ಕೆ. ಸಂತೋಷ್‌ ಕುಮಾರ್‌, ನವೀನ್‌ ಕುಮಾರ್‌, ಅಶೋಕ್‌ ಶೆಣೈ, ಯಶೋದಾ ಹರೀಶ್‌ ಅವರಿಗೆ ಜವಾಬ್ದಾರಿ ಹಂಚಿಕೆ.

ಬೆಳಗ್ಗೆ 10 ರಿಂದ 12
ವಾರ್ಡ್‌ ಸಂಖ್ಯೆ ಪುತ್ತೂರು ಕಸಬಾ 19- 23, ಕೆಮ್ಮಿಂಜೆ ವಾರ್ಡ್‌ 24- 28ರ ತನಕ. ನಗರಸಭಾ ಸದಸ್ಯರಾದ ವಿದ್ಯಾ ಗೌರಿ, ದೀಕ್ಷಾ ಪೈ, ಇಂದಿರಾ, ಶಶಿಕಲಾ, ಮನೋಹರ್‌ ಕಲ್ಲಾರೆ, ಬಾಲಚಂದ್ರ, ರೋಹಿಣಿ, ಮಮತಾ ರಂಜನ್‌, ಬಿ. ಶೈಲಾ ಪೈ, ಇಸುಬು ಅವರಿಗೆ ಜವಾಬ್ದಾರಿ ಹಂಚಿಕೆ.

ನಿಯಮಗಳನ್ನು ಮೀರಿ ಅನಗತ್ಯವಾಗಿ ಪೇಟೆಗೆ ಬರುವವರಿಗೆ ಬಾಯಿ ಮಾತಿನ ಎಚ್ಚರಿಕೆಯ ಬಳಿಕ ಶಿಕ್ಷೆಯ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಅಂತವರಿಗೆ ಸಾರ್ವಜನಿಕವಾಗಿ ಬಸ್ಕಿ ತೆಗೆಯುವ ಶಿಕ್ಷೆಯನ್ನು ಆರಂಭಿಸಿದ್ದಾರೆ.

ದರ್ಬೆ ಸರ್ಕಲ್‌ ಬಳಿಯಿಂದ ನಗರಕ್ಕೆ ವಾಹನಗಳನ್ನು ಪರೀಕ್ಷಿಸಿ ಬಿಡುತ್ತಿದ್ದ ಪೊಲೀಸರು ಅನಗತ್ಯ ಬಂದವರಿಗೆ ಈ ರೀತಿಯ ಶಿಕ್ಷೆ ನೀಡಿರುವುದು ಕಂಡು ಬಂದಿದೆ.

ಲಘು ಲಾಠಿ ಪ್ರಹಾರ
ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸದೆ ಖರೀದಿಗೆ ಮುಗಿಬಿದ್ದ ಜನರಿಗೆ ಎಚ್ಚರಿಕೆ ನೀಡಿದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರಘಟನೆ ಮಂಜಲ್ಪಡುವಿನ ಬಳಿ ನಡೆದಿದೆ.

ವರ್ತಕರಿಂದಲೂ ಜಾಗೃತಿ
ಬ್ಯಾಂಕ್‌, ದಿನಸಿ ಅಂಗಡಿ, ಪೆಟ್ರೋಲ್‌ ಪಂಪ್‌, ಮೆಡಿಕಲ್‌, ತರಕಾರಿ ಅಂಗಡಿಗಳಿಗೆ ಬರುವ ಗ್ರಾಹಕರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಅಂಗಡಿ ಮಾಲಕರು, ಅಧಿಕಾರಿಗಳು ಮುಂದಾಗಿದ್ದಾರೆ.

ಕ್ಯೂ ನಿಲ್ಲದೆ ಪಡೆಯಿರಿ
ಅನಗತ್ಯ ಕ್ಯೂ ನಿಲ್ಲುವ ಬದಲು ಅಗತ್ಯದ ಔಷಧ ವಿವರ ಹಾಗೂ ಹೆಸರು ವಾಟ್ಸಾಪ್‌ ಮಾಡಿದಲ್ಲಿ ಸಿದ್ಧಪಡಿಸಿ ಇಡುವ ವ್ಯವಸ್ಥೆ ಯನ್ನು ದರ್ಬೆ ಉಷಾ ಮೆಡಿಕಲ್‌ ಮಾಲಕ ಗಣೇಶ್‌ ಭಟ್‌ ಆರಂಭಿಸಿದ್ದಾರೆ.

ನಗರ ಸ್ವಚ್ಛತೆ
ನಗರ ವ್ಯಾಪ್ತಿಯಲ್ಲಿ ಸುರಕ್ಷತಾ ನೀರು ಹಾಯಿಸಿ ಸ್ವಚ್ಛತಾ ಕಾರ್ಯನಡೆಸಲಾಯಿತು. ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ನೇತೃತ್ವದಲ್ಲಿ ಸಿಬಂದಿ ಸುರಕ್ಷತಾ ನೀರು ಹಾಯಿಸಿ ಸ್ವಚ್ಛತೆ ಕಾರ್ಯ ನಡೆಸಿದರು.

ಮನೆಗೆ ತೆರಳಿ ಹೆರಿಗೆ
ಕೋವಿಡ್‌ 19 ಸೋಂಕಿನ ಭಯದಿಂದ ತನ್ನ ತವರು ಮನೆಯಲ್ಲಿಯೇ ಆರೈಕೆಗೆ ಒಳಗಾಗಿದ್ದ ಗರ್ಭಿಣಿ ಮಹಿಳೆಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಪಂದಿಸಿದ ಪುತ್ತೂರು ಆದರ್ಶ ಆಸ್ಪತ್ರೆಯ ಸಿಬಂದಿ ಆ್ಯಂಬುಲೆನ್ಸ್‌ ಮೂಲಕ ಗರ್ಭಿಣಿಯ ಮನೆಗೆ ತೆರಳಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮುಳ್ಳೇರಿಯಾ ನಿವಾಸಿ ವಿನಯ ಅವರ ಪತ್ನಿ ಸಾವಿತ್ರಿ ಮುಕ್ವೆಯ ತನ್ನ ತವರು ಮನೆಯಲ್ಲಿದ್ದು, ಮಾ. 25ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಹೋದರಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಆದರ್ಶ ಆಸ್ಪತ್ರೆಗೆ ಕರೆ ಮಾಡಿದ್ದು, ಸ್ಪಂದಿಸಿದ ಆಸ್ಪತ್ರೆಯ ಆ್ಯಂಬುಲೆನ್ಸ್‌ ಚಾಲಕ ದಯಾನಂದ್‌, ಆರೋಗ್ಯ ವಿಭಾಗದ ಲಕ್ಷ್ಮೀ ಹಾಗೂ ಭವಾನಿ ಅವರು ಸಹಾಯಕರೊಂದಿಗೆ ತೆರಳಿ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಬಳಿಕ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ  ಮಗು ಆರೋಗ್ಯದಿಂದ ಇರುವ ಮಾಹಿತಿ ಲಭ್ಯವಾಗಿದೆ.

ಸ್ಪಂದನಾ ಸಹಾಯವಾಣಿ
ಅಗತ್ಯ ವಸ್ತುಗಳಿಗೆ ಸಮಸ್ಯೆಯಾಗಬಾರದೆಂಬ ದೃಷ್ಟಿಯಿಂದ ಕುಂಬ್ರದಲ್ಲಿ ಸ್ಪಂದನಾ ಸಹಾಯವಾಣಿ ಆರಂಭಿಸಲಾಗಿದೆ. ಕುಂಬ್ರದ ಸಮಾನ ಮನಸ್ಕ ತಂಡ ಈ ನಿಟ್ಟಿನಲ್ಲಿ ಸೇವೆ ಆರಂಭಿಸಿದೆ. ವಸ್ತುಗಳ ಹಣದ ಜತೆಗೆ ಸಾಗಾಟದ ಪೆಟ್ರೋಲ್‌ ವೆಚ್ಚವನ್ನು ಮಾತ್ರ ನಿಗದಿಪಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next