Advertisement

ಲಾಕ್‌ಡೌನ್‌ಗೆ ಹೊಂದಿಕೊಳ್ಳುತ್ತಿದೆ ಜಿಲ್ಲೆ

05:17 PM Mar 29, 2020 | Suhan S |

ಹಾವೇರಿ: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಘೋಷಣೆ ಮಾಡಿರುವ ಲಾಕ್‌ ಡೌನ್‌ಗೆ ಜಿಲ್ಲೆ ಹೊಂದಿಕೊಳ್ಳುತ್ತಿದ್ದು, ಶನಿವಾರ ಜನರು ರಸ್ತೆಗಿಳಿಯದೆ ಮನೆಯಲ್ಲಿಯೇ ಇದ್ದು ಲಾಕ್‌ಡೌನ್‌ಗೆ ಸಹಕಾರ ನೀಡಿದರು.

Advertisement

ಎಲ್ಲ ರಸ್ತೆಗಳಲ್ಲಿ ವಾಹನ ಸಂಚಾರ, ಜನ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಸಾರಿಗೆ ಬಸ್‌ ಹಾಗೂ ರೈಲು ಸಂಚಾರ ಬಂದ್‌ ಆಗಿದ್ದರಿಂದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳು ಜನರಿಲ್ಲದೇ ಬಿಕೋ ಎಂದವು. ಆಟೋ, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರವೂ ಸಂಪೂರ್ಣ ಬಂದ್‌ ಆಗಿತ್ತು.

ನಿತ್ಯ ಬೆಳಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನದಟ್ಟಣೆ ತಪ್ಪಿಸಲು ಇಲ್ಲಿಯೂ ಅಧಿಕಾರಿಗಳು ಸಾಮಾಜಿಕ ಅಂತರ ಕಾಯುವ ಗುರುತುಗಳನ್ನು ಹಾಕುವ ವ್ಯವಸ್ಥೆ ಮಾಡಿದ್ದರಿಂದ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡೇ ತರಕಾರಿ ಹರಾಜಿನಲ್ಲಿ ಭಾಗಿಯಾದರು. ಬಳಿಕ ಮನೆ ಮನೆಗೆ ಹೋಗಿ ತರಕಾರಿ ಮಾರಲು ವಾಹನಗಳಿಗೆ ಪಾಸ್‌ ವ್ಯವಸ್ಥೆ ಮಾಡಿದ್ದು, 35ಕ್ಕೂ ಅಧಿಕ ವಾಹನಗಳಿಗೆ ತರಕಾರಿ ವ್ಯಾಪಾರ ಮಾಡುವ ಪರವಾನಗಿ ನೀಡಲಾಗಿದೆ. ದಿನಸಿ, ಶುದ್ಧ ಕುಡಿಯುವ ನೀರಿನ ಘಟಕಗಳ ಎದುರು ಮೂರಡಿಗಳ ಅಂತರದಲ್ಲಿ ನಿಂತು ಜನ ಸಾಮಾಜಿಕ ಅಂತರಕ್ಕೆ ಮಹತ್ವ ನೀಡಿದ್ದು, ವಿಶೇಷವಾಗಿ ಜಿಲ್ಲೆಯಾದ್ಯಂತ ಕಂಡುಬಂತು.

ಎಂದಿನಂತೆ ಜನತೆ ಔಷಧಿ ಅಂಗಡಿಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಔಷಧಿ ಖರೀದಿಸಿದರು. ಅಗತ್ಯ ವಸ್ತುಗಳ ಖರೀದಿ ಸೇರಿ ಇತ್ಯಾದಿಗಳ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಗೆ ಬರಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಹೊರಗಡೆ ಬರುತ್ತಿದ್ದರು.

ಅಧಿಕಾರಿಗಳಿಂದ ಪರಿಶೀಲನೆ: ಮುಂಜಾನೆಯೇ ಉಪವಿಭಾಗಾಧಿಕಾರಿ, ತಹಶೀಲ್ದಾರರು, ನಗರಸಭೆ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದರಿಂದ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆ ಸ್ವತಃ ಜನರಿಂದ ಶುರುವಾಗುತ್ತಿದೆ. ಕೇವಲ ನಗರಗಳಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಎಲ್ಲ ಅಗತ್ಯ ವಸ್ತುಗಳ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗುರುತು ಹಾಕುವ ಕಾರ್ಯ ಶನಿವಾರವೂ ಮುಂದುವರಿಯಿತು.

Advertisement

ಎಲ್ಲೆಡೆ ಬ್ಯಾರಿಕೇಡ್‌: ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಜನರು ತಮ್ಮ ಊರಿಗೆ ಬೇರೆ ಕಡೆಯಿಂದ ಜನರು ಬರಬಾರದೆಂದು ಬೇಲಿ, ಫಲಕ ಹಾಕಿದ್ದರೆ, ಮತ್ತೆ ಕೆಲವರು ನಗರ ಪ್ರದೇಶದಲ್ಲಿ ತಮ್ಮ ತಮ್ಮ ಓಣಿಗೂ ಫಲಕ, ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಆ ಓಣಿಯವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಓಣಿಯ ಹುಡುಗರೇ ಒಬ್ಬೊಬ್ಬರಾಗಿ ಹೋಗಿ ತಂದು ಕೊಡುತ್ತಿದ್ದಾರೆ. ನಗರದ ಪ್ರಮುಖ ಜನದಟ್ಟಣೆ ಪ್ರದೇಶದಲ್ಲೆಲ್ಲ ಪೊಲೀಸರು ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್‌ ಹಾಕಿದ್ದು, ಎಲ್ಲೆಡೆ ರಸ್ತೆಗಳೆಲ್ಲ ನಿರ್ಜನ ಪ್ರದೇಶಗಳಾಗಿವೆ.

ಅನಗತ್ಯ ಓಡಾಟಕ್ಕೆ ಬ್ರೇಕ್‌: ಪೊಲೀಸರು ಎಷ್ಟೇ ಹೇಳಿದರೂ, ಎಷ್ಟೇ ಹೊಡೆದರೂ, ಏನೇ ಶಿಕ್ಷೆ ಕೊಟ್ಟರೂ ಒಂದಿಷ್ಟು ಜನರು ವಾಹನಗಳಲ್ಲಿ ಓಡಾಡುವುದನ್ನು ನಿಲ್ಲಿಸಿರಲಿಲ್ಲ. ಶುಕ್ರವಾರದಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಅವಶ್ಯಕ ಕರ್ತವ್ಯ ನಿರ್ವಹಿಸುವ ಪಾಸ್‌ ಹೊಂದಿರುವ ವಾಹನಗಳಿಗೆ ಮಾತ್ರ ಪೆಟ್ರೋಲ್‌ ಕೊಡುತ್ತಿರುವುದರಿಂದ ಹಾಗೂ ಅನಗತ್ಯವಾಗಿ ಸಂಚರಿಸುವ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವುದರಿಂದ ಅನಗತ್ಯ ವಾಹನ ಸಂಚಾರ ಶನಿವಾರ ತಹಬಂದಿಗೆ ಬಂದಿತು.

ಸ್ವಚ್ಛತೆ ಮುಂದುವರಿಕೆ: ಜಿಲ್ಲೆಯ ವಿವಿಧೆಡೆ ನಗರಸಭೆ, ಪುರಸಭೆ, ಪಪಂ ಹಾಗೂ ಸ್ಥಳೀಯ ಆಡಳಿತ ವತಿಯಿಂದ ಶನಿವಾರವೂ ಸಾಂಕ್ರಾಮಿಕ ರೋಗ ನಿಯಂತ್ರಕ ಔಷಧಿ ಸಿಂಪರಣೆ, ಧೂಮೀಕರಣ, ಸ್ವಚ್ಛತಾ ಕೆಲಸಗಳು ಮುಂದುವರಿದವು. ಹಳ್ಳಿಗಳಲ್ಲಿಯೂ ಗ್ರಾಪಂ ವತಿಯಿಂದ ಗ್ರಾಮದ ಸ್ವತ್ಛತಾ ಕಾರ್ಯಗಳು ನಡೆದವು. ಒಟ್ಟಾರೆ ಲಾಕ್‌ಡೌನ್‌ಗೆ ಜಿಲ್ಲೆಯ ಜನ ಸ್ವಯಂ ಆಗಿ ಸ್ಪಂದಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next