Advertisement

ನಿರ್ಬಂಧ ಕೊಂಚ ಸಡಿಲ; ತಿಂಗಳ ಬಳಿಕ ತೆರೆದರು ಅಂಗಡಿ ಬಾಗಿಲ

01:11 PM May 01, 2020 | Suhan S |

ಧಾರವಾಡ: ಹುಬ್ಬಳ್ಳಿ ಹೊರತುಪಡಿಸಿ ಜಿಲ್ಲೆಯ ಉಳಿದ ಭಾಗದಲ್ಲಿ ಲಾಕ್‌ಡೌನ್‌ನಲ್ಲಿ ಕೆಲ ಸಡಿಲಿಕೆ ಮಾಡಿ ಜಿಲ್ಲಾಡಳಿತ ವಿನಾಯಿತಿ ನೀಡಿರುವ ಕಾರಣ ಗುರುವಾರ ಕೆಲ ಚಟುವಟಿಕೆಗಳು ಕಂಡುಬಂದವು.

Advertisement

ಲಾಕ್‌ಡೌನ್‌ ಜಾರಿಯಿಂದ ಬಾಗಿಲು ಮುಚ್ಚಿದ್ದ ಸ್ಟೇಷನರಿ, ಬುಕ್‌ಸ್ಟಾಲ್‌, ಎಲೆಕ್ಟ್ರಿಕಲ್ಸ್‌, ಪ್ಲಬಿಂಗ್‌, ಪೇಂಟ್‌, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳು, ರಿಪೇರಿ ಮತ್ತು ಸರ್ವೀಸ್‌ ಸೆಂಟರ್‌ಗಳು, ಟೈಲ್ಸ್‌ ಅಂಗಡಿಗಳು, ಜೆರಾಕ್ಸ್‌ ಮತ್ತು ಪ್ರಿಂಟಿಂಗ್‌, ಆಪ್ಟಿಕಲ್ಸ್‌, ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ ಮಿಲ್‌ಗ‌ಳು ಮತ್ತು ಅಂಗಡಿಗಳು, ಟೈರ್‌ ಮತ್ತು ಟ್ಯೂಬ್‌ ಅಂಗಡಿಗಳು, ಮಿನರಲ್‌ ವಾಟರ್‌ ಮಾರಾಟ ಅಂಗಡಿಗಳು, ಮೊಬೈಲ್‌ ರಿಪೇರಿ ಅಂಗಡಿಗಳ ಬಾಗಿಲು ತೆರೆದ ಮಾಲೀಕರು ಮೊದಲು ಅಂಗಡಿಗಳನ್ನು ಸ್ವಚ್ಛ ಮಾಡಿದರು. ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡಿದರು. ಉಳಿದಂತೆ ಮರಳು, ಇಟ್ಟಿಗೆ, ಸಿಮೆಂಟ್‌, ಕಬ್ಬಿಣ ಮೊದಲಾದ ಸಾಮಗ್ರಿಗಳ ವಹಿವಾಟುಗಳು ನಡೆದವು.

ಕಳೆದ ಒಂದು ತಿಂಗಳಿಂದ ಬಿಕೋ ಅನ್ನುತ್ತಿದ್ದ ರಸ್ತೆಗಳಲ್ಲಿ ಸ್ವಲ್ಪಮಟ್ಟಿಗೆ ವಾಹನಗಳ ಸಂಚಾರ ಕಾಣುವಂತಾಗಿದೆ. ಲಾಕ್‌ಡೌನ್‌ ಸಡಿಲ ಮಾಡಿದ್ದರೂ ಗುರುವಾರ ಪೂರ್ಣ ಪ್ರಮಾಣದಲ್ಲಿ ಅಂಗಡಿಗಳು ತೆರೆದಿರಲಿಲ್ಲ. ಶೇ.50 ಅಂಗಡಿಗಳನ್ನು ತೆರೆದಿದ್ದು ಕಂಡು ಬಂದರೆ ಉಳಿದವರು ಬಾಗಿಲು ತೆರೆಯುವ ಗೋಜಿಗೆ ಹೋಗಲಿಲ್ಲ. ಧಾರವಾಡ ನಗರದಲ್ಲಿ ಮಾತ್ರ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ.

ಈಗ ಗುರುವಾರ ಬಾಗಿಲು ತೆರೆದರೂ ಮತ್ತೆ ಶುಕ್ರವಾರದಿಂದ ರವಿವಾರದ ವರೆಗೆ ಬಾಗಿಲು ಮುಚ್ಚಬೇಕು. ಅಷ್ಟರೊಳಗೆ ಮೇ 3 ಮುಗಿದು ಲಾಕ್‌ಡೌನ್‌ನ ಸ್ಪಷ್ಟ ಚಿತ್ರಣವೂ ದೊರೆಯುವ ಕಾರಣ ಗುರುವಾರ ಅಷ್ಟೊಂದು ಪ್ರಮಾಣದಲ್ಲಿ ಅಂಗಡಿಗಳ ಬಾಗಿಲು ತೆರೆಯಲಿಲ್ಲ. ಗ್ರಾಮೀಣ ಭಾಗದಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿದರೂ ಅದು ಕಂಡುಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next