Advertisement

ಮತ್ತೆ ಲಾಕ್‌ ಡೌನ್‌ ಬಿಸಿ

01:00 AM Mar 12, 2021 | Team Udayavani |

ಬೆಂಗಳೂರು/ಮುಂಬಯಿ/ಹೊಸದಿಲ್ಲಿ, ಮಾ. 11: ಹೊಸ ವರ್ಷದ ಮೊದಲೆರಡು ತಿಂಗಳಲ್ಲಿ ಕೋವಿಡ್ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದರೆ, ಮಾರ್ಚ್‌ನಲ್ಲಿ ಮತ್ತೆ ಹೆಚ್ಚಳ ಕಂಡುಬರುತ್ತಿದೆ.

Advertisement

ಮಹಾರಾಷ್ಟ್ರದಲ್ಲಿ ಗಂಭೀರ ಸ್ಥಿತಿ ಇದ್ದು, ಕೆಲವು ನಗರ ಗಳಲ್ಲಿ ಲಾಕ್‌ಡೌನ್‌ ಆತಂಕ ಎದುರಾಗಿದೆ. ಮಾ. 15ರಿಂದ 21ರ ವರೆಗೆ ನಾಗ್ಪುರದಲ್ಲಿ ಲಾಕ್‌ಡೌನ್‌ಗೆ ಸರಕಾರ ನಿರ್ಧರಿಸಿದೆ. ತರಕಾರಿ-ಹಣ್ಣು ಮಾರಾಟ, ಹಾಲಿನ ಕೇಂದ್ರಗಳಂಥ ಅಗತ್ಯ ಸೇವೆಗಳನ್ನು ಮಾತ್ರ ಮುಂದುವರಿಸಲು ಅವಕಾಶ ಕಲ್ಪಿಸಿ, ಮಿಕ್ಕೆಲ್ಲ ವ್ಯಾಪಾರ-ವಹಿವಾಟು, ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನೂ ಕೆಲವು ನಗರಗಳಿಗೆ ಲಾಕ್‌ಡೌನ್‌ ವಿಸ್ತರಣೆಯಾಗಬಹುದು ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷದಲ್ಲಿ ದಾಖಲೆ :

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 22,854 ಪ್ರಕರಣ ಗಳು ದೃಢಪಟ್ಟಿದ್ದು, ಡಿಸೆಂಬರ್‌ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಪ್ರಕರಣಗಳು ಕಾಣಿಸಿಕೊಂಡಿವೆ. ಮಹಾರಾಷ್ಟ್ರವೊಂದರಲ್ಲೇ ಅರ್ಧದಷ್ಟು ಪ್ರಕರಣಗಳಿವೆ. ಅಂದರೆ ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8 ಗಂಟೆ ವರೆಗಿನ ಮಾಹಿತಿಯಂತೆ ಮಹಾರಾಷ್ಟ್ರದಲ್ಲಿ 13,659 ಪ್ರಕರಣ ದೃಢಪಟ್ಟಿದೆ.

ರಾಜ್ಯಕ್ಕೆ ಮಹಾರಾಷ್ಟ್ರದ್ದೇ ಆತಂಕ :

Advertisement

ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಅಬ್ಬರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಆತಂಕ ಮೂಡಿದೆ. ಪೂರಕವೆಂಬಂತೆ ರಾಜ್ಯದಲ್ಲಿ ಕಳೆದ ತಿಂಗಳಿಗೆ ಹೋಲಿಸಿದರೆ ಸದ್ಯ ಸೋಂಕು ಪ್ರಕರಣಗಳು ಶೇ. 50ರಷ್ಟು ಹೆಚ್ಚಾಗಿದ್ದು, ಸೋಂಕಿತರ ಸಾವು ದುಪ್ಪಟ್ಟಾಗಿವೆ. ಫೆಬ್ರವರಿ ಮೊದಲ ಹತ್ತು ದಿನ ಸರಾಸರಿ 422 ಪ್ರಕರಣಗಳಿರುತ್ತಿದ್ದರೆ, ಈ ತಿಂಗಳ  ಮೊದಲ ಹತ್ತು ದಿನಗಳಲ್ಲಿ 555 ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆಯಲ್ಲಿ ಮೊದಲ ಹತ್ತು ದಿನ 2 ಸಾವು ದಾಖಲಾಗಿದ್ದರೆ, ಗುರುವಾರ ಒಂದೇ ದಿನ ಐವರು ಸಾವನ್ನಪ್ಪಿದ್ದಾರೆ.

 ಸೋಂಕು ಹೆಚ್ಚಿರುವ ಜಿಲ್ಲೆಗಳಿವು :

lಬೆಂಗಳೂರು 350 lಕಲಬುರಗಿ 24 l ಮೈಸೂರು 19 l ತುಮಕೂರು 19 l ಉಡುಪಿ 17 lದಕ್ಷಿಣ ಕನ್ನಡ 18 ಉಳಿದ ಜಿಲ್ಲೆಗಳಲ್ಲಿ ನಿತ್ಯ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ.

ಎಲ್ಲೆಲ್ಲಿ ಹೆಚ್ಚು ಕೋವಿಡ್  (ನಗರಗಳು) ;

ಅತೀ ಹೆಚ್ಚು  :

ಕೋವಿಡ್ ಕಾಣಿಸಿಕೊಂಡ ನಗರಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರದ 8 ನಗರ, ಕರ್ನಾಟಕ ಮತ್ತು ಕೇರಳದ ತಲಾ 1 ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

01 ನಾಗ್ಪುರ

02 ಪುಣೆ

03 ಥಾಣೆ

04 ಮುಂಬಯಿ

05 ಬೆಂಗಳೂರು ನಗರ

06 ಎರ್ನಾಕುಲಂ

07 ಅಮರಾವತಿ

08 ಜಲ್ಗಾಂವ್‌

09 ನಾಸಿಕ್‌

10 ಔರಂಗಾಬಾದ್‌

ಕರ್ನಾಟಕ 4ನೇ ಸ್ಥಾನ :

ಬುಧವಾರದಿಂದ ಗುರುವಾರ ಬೆಳಗ್ಗಿನ ವರೆಗೆ ಪತ್ತೆಯಾಗಿರುವ ಪ್ರಕರಣಗಳ ಲೆಕ್ಕಾಚಾರ ದಲ್ಲಿ  ಕರ್ನಾಟಕ 4ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ  ಮಹಾರಾಷ್ಟ್ರವಿದ್ದು, 13,659 ಪ್ರಕರಣಗಳಿವೆ. ಕೇರಳದಲ್ಲಿ 2,475, ಪಂಜಾಬ್‌ನಲ್ಲಿ 1,393, ಕರ್ನಾಟಕದಲ್ಲಿ 760 ಪ್ರಕರಣಗಳು ದೃಢಪಟ್ಟಿವೆ.

ಸದ್ಯದಲ್ಲೇ 157 ರೂ.ಗೆ ಲಸಿಕೆ :

ಹೊಸದಿಲ್ಲಿ: ದೇಶವಾಸಿಗಳಿಗೆ ಸಿಹಿಸುದ್ದಿ ಎಂಬಂತೆ ಕೋವಿಡ್ ಲಸಿಕೆ ದರ ಸದ್ಯದಲ್ಲೇ ಇಳಿಯುವ ಸಾಧ್ಯತೆಯಿದೆ. ಈಗ 1 ಡೋಸ್‌ಗೆ 250 ರೂ. ಇದ್ದು, 157.50 ರೂ.ಗೆ ಇಳಿಸಲು ಕೇಂದ್ರ ಸರಕಾರ ಚಿಂತಿಸಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

ಹಿಂದಿನ ತಪ್ಪಿನಿಂದ ಪಾಠ ಕಲಿಯಬೇಕು :

ಕಳೆದ ವರ್ಷ ಗಡಿಪ್ರದೇಶಗಳ ಭದ್ರತಾ ವೈಫ‌ಲ್ಯದಿಂದ ನಿಜಾಮುದ್ದೀನ್‌, ಅಹ್ಮದಾಬಾದ್‌ನ ತಬ್ಲಿಕ್ ಜಮಾತ್‌ ಸದಸ್ಯರು, ಅಜ್ಮೇರ್‌ ಧಾರ್ಮಿಕ ಯಾತ್ರಿಗಳು,  ವಲಸೆ ಕಾರ್ಮಿಕರು, ದಿಲ್ಲಿ ಪ್ರಯಾಣಿಕರು ರಾಜ್ಯದಲ್ಲಿ  ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದರು. ಈಗ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವರಿಗೆ ಸೋಂಕು ಪರೀಕ್ಷಾ ವರದಿ ಕಡ್ಡಾಯ ಮಾಡಲಾಗಿದೆ. ಬಂದ ಬಳಿಕವೂ ಹಲವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಗಡಿಯಲ್ಲಿ ತಪಾಸಣೆ ಉನ್ನತೀಕರಿಸಬೇಕು  ಎಂಬ ಅಭಿಪ್ರಾಯ ಕೇಳಿಬಂದಿದೆ.

ಆರೋಗ್ಯ ಸಚಿವರಿಗೆ ಆತಂಕ :

ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳವಾಗಿರುವ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌, ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 13,000ಕ್ಕೂ ಹೆಚ್ಚು ಕೋವಿಡ್  ಪ್ರಕರಣಗಳು ಪತ್ತೆಯಾಗಿರುವುದು ನನ್ನನ್ನು ಚಿಂತೆಗೀಡು ಮಾಡಿದೆ. ಇದನ್ನು ಎಚ್ಚರಿಕೆಯ ಘಂಟೆ ಎಂದು ಪರಿಗಣಿಸಿ ಮುಂಜಾಗ್ರತೆ  ಪಾಲಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next