Advertisement

ಲಾಕ್‌ಡೌನ್‌ನಿಂದ ಶೇ. 41ರಷ್ಟು ಜನರಿಗೆ ಉದ್ಯೋಗ ನಷ್ಟ

10:27 PM Mar 29, 2022 | Team Udayavani |

ಬೆಂಗಳೂರು: ಲಾಕ್‌ಡೌನ್‌ ಸಮಯದಲ್ಲಿ ಶೇ. 41ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದು, ಕೊರೊನಾ ಸಾಂಕ್ರಾಮಿಕ ರೋಗ ಬಂದು ಒಂದೂವರೆ ವರ್ಷ ಕಳೆದರೂ ಶೇ. 21ರಷ್ಟು ಜನರು ಹಿಂದಿನ ವೇತನ ಪಡೆದುಕೊಳ್ಳಲು ಸಾಧ್ಯವಾಗದಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

Advertisement

ಕೊರೊನಾ ಸಮಯದಲ್ಲಿ ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರ ಕುರಿತು ಅಜೀಂ ಪ್ರೇಮ್‌ ಜೀ ವಿಶ್ವವಿದ್ಯಾಲಯವು ಕೈಗೊಂಡ “ಕೊರೊನಾ ಸಾಂಕ್ರಾಮಿಕ ಪರಿಣಾಮಗಳು’ ಕುರಿತ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ನಗರದ 33 ವಾರ್ಡ್‌ಗಳಲ್ಲಿ 3 ಸಾವಿರ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಿದ್ದು, ಲಾಕ್‌ಡೌನ್‌ ವೇಳೆ ಜನರ ಜೀವನೋಪಾಯ, ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕತೆ ಮೇಲೆ ಉಂಟಾದ ಪರಿಣಾಮಗಳನ್ನು ಕುರಿತು ಸಮೀಕ್ಷೆ ನಡೆಸಿದೆ. ವಾಹನ ಚಾಲಕರು, ದಿನಗೂಲಿ ನೌಕರರು, ಮನೆಗೆಲಸದವರು ಮತ್ತು ಕಾರ್ಖಾನೆಗಳ ಕಾರ್ಮಿಕರನ್ನು ಒಳಗೊಂಡ ಸಮೀಕ್ಷೆಯನ್ನು 2021ರ ಅಕ್ಟೋಬರ್‌ ತಿಂಗಳಿನಲ್ಲಿ ನಡೆಸಲಾಗಿದೆ.

ಶೇ. 80 ಮಂದಿಗೆ ಕನಿಷ್ಠ ವೇತನವೂ ಇರಲಿಲ್ಲ
2020ರ ಲಾಕ್‌ಡೌನ್‌ ಅವಧಿಯ ಅನಂತರವೂ ಉದ್ಯೋಗ ಮತ್ತು ಆದಾಯ ನಷ್ಟಗಳು ಮುಂದುವರಿದಿವೆ. ಫೆಬ್ರವರಿ 2021ರಲ್ಲಿ ಶೇ. 41ರಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ಶೇ. 21ರಷ್ಟು ಜನರಿಗೆ ಆದಾಯ ಕುಂಠಿತವಾಗಿದೆ. ದಿನಗೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಶ್ರಮಿಕರು ಅತ್ಯಂತ ಹೆಚ್ಚು ಹಾನಿಗೆ ತುತ್ತಾಗಿದ್ದಾರೆ. 2021ರ ಅಕ್ಟೋಬರ್‌ನಲ್ಲಿಯೂ ಶೇ. 21ರಷ್ಟು ಪುರುಷರು ಮತ್ತು ಶೇ. 15ರಷ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡ ಸ್ಥಿತಿ ಮುಂದುವರಿದಿದೆ ಎಂದರು. ಶೇ. 80ರಷ್ಟು ಜನರಿಗೆ ರಾಷ್ಟ್ರೀಯ ಕನಿಷ್ಠ ವೇತನ (ಪ್ರತಿ ದಿನಕ್ಕೆ 119 ರೂ.) ಕೂಡ ಕಡಿಮೆಯಾಗಿದೆ. ಅದೇ ರೀತಿ ಆಹಾರ ಅಭದ್ರತೆ ಕೂಡ ತೀವ್ರವಾಗಿ ಏರಿಕೆ ಕಂಡಿದೆ. ಶೇ. 40ರಷ್ಟು ಕುಟಂಬಗಳ ಜನರು ಕೊರೊನಾ ಪೂರ್ವದಲ್ಲಿ ಸೇವಿಸುತ್ತಿದ್ದ ಆಹಾರಕ್ಕಿಂತ ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿದ್ದಾರೆ.

ಇದನ್ನೂ ಓದಿ:ಬಿಸಿಲು ಮತ್ತಷ್ಟು ಹೆಚ್ಚಳ ರಾಯಚೂರಿನಲ್ಲಿ 42.8: ಕರಾವಳಿಯಲ್ಲಿ ಮಳೆ ಸಾಧ್ಯತೆ

Advertisement

ಸಾಲ ತೀರಿಸುವುದಕ್ಕಾಗಿ ಸಾಲ
ಕೊರೊನಾ ಸಮಯದಲ್ಲಿ ಜನರು ಈ ಹಿಂದೆ ಮಾಡಿದ್ದ ಹಳೆಯ ಸಾಲವನ್ನು ತೀರಿಸಲು ಹೊಸದಾಗಿ ಸಾಲ ಮಾಡಿಕೊಂಡಿದ್ದಾರೆ. ಶೇ. 11ರಷ್ಟು ಜನರು ಜೀವನ ನಿರ್ವಹಣೆ ಮತ್ತು ಹಳೆಯ ಸಾಲವನ್ನು ತೀರಿಸಲು ಹೊಸ ಸಾಲ ಮಾಡಿದ್ದಾರೆ. ಶೇ. 15ರಷ್ಟು ಜನರು ಒಡವೆಗಳನ್ನು ಮಾರಿ ಅಥವಾ ಗಿರವಿ ಇಟ್ಟಿರುವುದು ತಿಳಿದು ಬಂದಿದೆ.
ಬಿಪಿಎಲ್‌ ಕುಟಂಬಗಳಿಗೆ ಪಡಿತರ ಬಂಪರ್‌ ಲಾಕ್‌ಡೌನ್‌ ಸಮಯದಲ್ಲಿ ಶೇ. 55ರಷ್ಟು ಬಿಪಿಎಲ್‌ ಪಡಿತರ ಚೀಟಿದಾರರು ಕೊರೊನಾ ಪೂರ್ವಕ್ಕಿಂತ ಹೆಚ್ಚಿನ ಧಾನ್ಯಗಳನ್ನು ಪಡೆದಿದ್ದಾರೆ. ಶೇ. 32ರಷ್ಟು ಜನರು ಕೆಲವು ತಿಂಗಳು ಮಾತ್ರ ಹೆಚ್ಚಿನ ರೇಷನ್‌ ಪಡೆದಿರುವುದು ತಿಳಿದು ಬಂದಿದೆ.

ಜನರಿಗೆ ತಲುಪದ ಜನಧನ
ರಾಜ್ಯ ಸರಕಾರವು ನಗದು ಮೂಲಕ ನೀಡಿದ ನೆರವು ಕೇವಲ ಶೇ. 3ರಷ್ಟು ಜನರಿಗೆ ಮಾತ್ರ ತಲುಪಿದೆ. ಈ ಪೈಕಿ ಶೇ. 78ರಷ್ಟು ಮಹಿಳೆಯರ ಕುಟುಂಬಗಳಲ್ಲಿ ಜನಧನ ಖಾತೆ ಇರಲಿಲ್ಲ. ಇನ್ನು ಖಾತೆ ಇರುವ ಶೇ. 75ರಷ್ಟು ಕುಟುಂಬಗಳಿಗೆ ಸ್ವಲ್ಪ ಮಾತ್ರ ಹಣ ಸಿಕ್ಕಿದೆ. ಶೇ. 40ರಷ್ಟು ಜನರಿಗೆ 1,500 ರೂ. ಜಮಾ ಆಗಿದೆ.

ಸಿಗದ ಪೌಷ್ಟಿಕಾಂಶಗಳು
ಸಾಂಕ್ರಾಮಿಕ ಕಾಲದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ಆದರೆ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ, ಗರ್ಭಣಿ/ಬಾಣಂತಿ ಕುಟುಂಬಗಳಿಗೆ ದೊರಕುವ ಪೂರಕ ಪೋಷಕಾಂಶಗಳು ಶೇ. 38ರಿಂದ ಶೇ. 24ಕ್ಕೆ ಕುಸಿದಿದೆ.

ಮೂಲಸೌಕರ್ಯ ವಂಚಿತ ಕುಟುಂಬಗಳು
– ಸರ್ವೆಯಲ್ಲಿ ಶೇ. 8ರಷ್ಟು ಜನರಿಗೆ ವೈಯಕ್ತಿಕವಾಗಿ ಅಥವಾ ಸಾರ್ವಜನಿಕವಾಗಿ ಯಾವುದೇ ಶೌಚಾಲಯಗಳಿಲ್ಲ. ಬಯಲುಗಳನ್ನೇ ಆಶ್ರಯಿಸಿದ್ದಾರೆ.
-ಶೇ. 33ರಷ್ಟು ಜನರು ಸಾರ್ವಜನಿಕವಾಗಿ ಪೈಪುಗಳಲ್ಲಿ ಬರುವ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಶೇ. 6ರಷ್ಟು ಜನರು ಟ್ಯಾಂಕರ್‌ಗಳಿಂದ ನೀರನ್ನು ಖರೀದಿಸುತ್ತಾರೆ.
-ಶೇ. 91.5ರಷ್ಟು ಜನರಿಗೆ ಸ್ವಂತ ಮನೆಯಿಲ್ಲ
– ಶೇ. 74ರಷ್ಟು ಜನರಿಗೆ ಬೈಕ್‌ಗಳಿಲ್ಲ
– ಶೇ. 44ರಷ್ಟು ಜನರ ಮನೆಗಳಲ್ಲಿ ವಾಷಿಂಗ್‌ ಮೆಷಿನ್‌, ಫ್ರಿಡ್ಜ್ ಮತ್ತು ಮಿಕ್ಸಿಗಳಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next