Advertisement

ಶಾಸಕರು, ಜಿಲ್ಲಾಧಿಕಾರಿಗಳ ಭರವಸೆ: ಎಂಡೋ ಸಂತ್ರಸ್ತರ ಉಪವಾಸ ಅಂತ್ಯ

10:50 AM May 29, 2017 | Team Udayavani |

ನೆಲ್ಯಾಡಿ: ಎಂಡೋಸಲ್ಫಾನ್‌ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 27ರಂದು ಕೊಕ್ಕಡ ಜೋಡುಮಾರ್ಗದಲ್ಲಿ ಆರಂಭವಾದ ಎಂಡೋ ಸಂತ್ರಸ್ತರ ಬೃಹತ್‌ ಪ್ರತಿಭಟನೆ ಮೇ 28ರಂದು ಆಮರಣಾಂತ ಉಪವಾಸದತ್ತ ಹೊರಳಿತಾದರೂ ಶಾಸಕರಾದ ವಸಂತ ಬಂಗೇರ, ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾಧಿಕಾರಿ ಜಗದೀಶ್‌, ಪುತ್ತೂರು ಎಸಿ ರಘುನಂದನ್‌ ಮೂರ್ತಿ, ಡಿಎಚ್‌ಒ ಡಾ| ರಾಮಕೃಷ್ಣ ರಾವ್‌ ಮೊದಲಾದವರು ಆಗಮಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಸಂಜೆಯ ವೇಳೆಗೆ ಸತ್ಯಾಗ್ರಹವನ್ನು ಹಿಂದೆಗೆದುಕೊಳ್ಳಲಾಯಿತು.

Advertisement

ಬೆಳಗ್ಗಿನಿಂದಲೇ ಎಲ್ಲ ಕಡೆಗಳ ಎಂಡೋ ಸಂತ್ರಸ್ತರು ಮತ್ತು ಹೋರಾಟ ಬೆಂಬಲಿಸುವ ಸಂಘ – ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದರು. 500ಕ್ಕೂ ಅಧಿಕ ಸಾರ್ವಜನಿಕರು ಮತ್ತು 10ಕ್ಕೂ ಮಿಕ್ಕಿ ಎಂಡೋ ಸಂತ್ರಸ್ತರು ಆಮರಣಾಂತ ಉಪವಾಸ ಸತ್ಯಾಗ್ರಹದ ಸಭೆಯಲ್ಲಿ ಭಾಗವಹಿಸಿದ್ದರು. ಮೇ 27ರಂದು ಪ್ರತಿಭಟನೆ ನಡೆಯಲಿರುವ ಸ್ಥಳಕ್ಕೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಆಗಮಿಸಿ ನಮ್ಮ ಮನವಿ ಸ್ವೀಕರಿಸದಿದ್ದರೆ ಮರುದಿನದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ  ತಿಂಗಳ ಹಿಂದೆಯೇ ತಿಳಿಸಿದ್ದೆವು. ಸಂತ್ರಸ್ತರ ಬವಣೆ ಅರಿತಿದ್ದರೆ ಪ್ರತಿಭಟನ ಸ್ಥಳಕ್ಕೆ ಸಚಿವರು ಆಗಮಿಸಬೇಕಿತ್ತು. ಆದರೆ ಅವರು ನಮ್ಮ ಅಹವಾಲನ್ನು ಆಲಿಸಲು ಸಿದ್ಧರಿಲ್ಲದ ಕಾರಣ ಸಂಜೆ ರಸ್ತೆಗಿಳಿದು ಪ್ರತಿಭಟಿಸಲು ಸಿದ್ಧರಾಗಿದ್ದೇವೆ ಎಂದು ಹೋರಾಟಗಾರರು ಹೇಳಿದರು.

ಶಾಸಕರ ಭೇಟಿ
ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು ಮಧ್ಯಾಹ್ನ ಪ್ರತಿಭಟನ ಸಭೆಗೆ ಆಗಮಿಸಿ ಎಂಡೋ ಸಂತ್ರಸ್ತರ ಬೇಡಿಕೆಗಳ ಬಗ್ಗೆ ಈಗಾಗಲೇ ಸರಕಾರದಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇನ್ನು ಹಲವು ಅಗತ್ಯ ಬೇಡಿಕೆಗಳು ಈಡೇರಲು ಬಾಕಿ ಇರುವ ವಿಷಯ ಪ್ರತಿಭಟನ ಸಭೆಯಲ್ಲಿ ತಮ್ಮ ಗಮನಕ್ಕೂ ತರಲಾಗಿದೆ. ಇದನ್ನು ಸಂಬಂಧಪಟ್ಟ ಆರೋಗ್ಯ ಸಚಿವರಿಗೆ ಮತ್ತು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ತಿಳಿಸಿದರು. ಪ್ರತಿಭಟನಕಾರರಲ್ಲಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ವಿನಂತಿಸಿದರು. ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಭೇಟಿ ನೀಡಿ ಮಾತನಾಡಿ, ಜೂನ್‌ 4ರಂದು ಆರಂಭವಾಗಲಿರುವ ಉಭಯ ಸದನಗಳಲ್ಲೂ ನಮ್ಮ ಜಿಲ್ಲೆಯ ಎಂಡೋ ಸಮಸ್ಯೆ ಕುರಿತು ಚರ್ಚಿಸಲು ಬೇಕಾದ ನಿಲುವಳಿಗಳ ಬಗ್ಗೆ ಈಗಾಗಲೇ ಪರಿಷತ್‌ ಅಧ್ಯಕ್ಷರಲ್ಲಿ ಅನುಮತಿ ಪಡೆದುಕೊಂಡಿದ್ದು, ಈ ವಿಷಯದಲ್ಲಿ ಚರ್ಚೆಗೆ ಅವಕಾಶ ಕೇಳಲಿದ್ದೇವೆ ಎಂದರು.

ಪಿಡಿಒಗಳಿಗೆ ಹೊಣೆ
ನ್ಯಾಯವಾದಿ ಹರೀಶ್‌ ಪೂಂಜ ಮಾತನಾಡಿ, ಎಂಡೋ ಸಂತ್ರಸ್ತರು ಜಿಲ್ಲೆಯ ಎಲ್ಲ ತಾಲೂಕುಗಳ ಹೆಚ್ಚಿನ ಎಲ್ಲ ಗ್ರಾಮಗಳಲ್ಲಿಯೂ ಕಂಡುಬರುತ್ತಿದ್ದು, ಆಯಾಯ ಗ್ರಾಮಗಳಲ್ಲಿ ಎಂಡೋ ಸಂತ್ರಸ್ತರ ಸಮಸ್ಯೆಗಳ ಸ್ಪಂದನೆಗೆ ವಿಶೇಷ ಅಧಿಕಾರಿ ನಿಯಮಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಯಾವ ಕಡೆಗಳಲ್ಲಿ ಅವಶ್ಯ ಇದೆಯೋ ಆ ಗ್ರಾಮಗಳ ಪಿಡಿಒಗಳಿಗೆ ಈ ಹೊಣೆ ವಹಿಸುವುದಾಗಿ ತಿಳಿಸಿದರು.

ಬಜರಂಗ ದಳ ವೇಣೂರು ಪ್ರಖಂಡ ಸಂಚಾಲಕ ರಾಮ್‌ಪ್ರಸಾದ್‌ ಮರೋಡಿ, ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್‌ ಗೌಡ, ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ಪುರಂದರ ಗೌಡ ಕಡಿರ, ಹೋರಾಟ ಸಮಿತಿಯ ಬಾಲಕೃಷ್ಣ ಗೌಡ ಬಳಕ್ಕ ಉಪಸ್ಥಿತರಿದ್ದರು. ಪ್ರತಿಭಟನ ಸಭೆಯಲ್ಲಿ ಉದ್ಯಮಿ ರಮಾನಂದ ಸಾಲಿಯಾನ್‌, ಇಚಿಲಂಪಾಡಿ ನೀತಿ ಟ್ರಸ್ಟ್‌ ರಾಜ್ಯಾಧ್ಯಕ್ಷ ಜಯನ್‌ ಟಿ., ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್‌, ಪುತ್ತೂರು ತಾಲೂಕು ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನವೀನ್‌ ಕುಲಾಲ್‌, ಪ್ರಜ್ವಲ್‌, ರಾಜ್‌ ಪ್ರಸಾದ್‌ ಪೋಳ್ನಾಯ ಮೊದಲಾದವರು ಭಾಗವಹಿಸಿದರು. ನವೀನ್‌ ನೆರಿಯ ಸ್ವಾಗತಿಸಿ ನಿರೂಪಿಸಿದರು. ಶ್ರೀಧರ ಗೌಡ ಕೆಂಗುಡೇಲು ವಂದಿಸಿದರು.

Advertisement

ಸಂತ್ರಸ್ತರಿಗೆ ಭರವಸೆ
ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅವರು ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಹೋರಾಟಗಾರರು ಈ ಹೋರಾಟದ ಪೂರ್ವಭಾವಿಯಾಗಿ ನೀಡಿದ 20 ಬೇಡಿಕೆಗಳಲ್ಲಿ ಬಹುತೇಕ ಬೇಡಿಕೆಗಳನ್ನು ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಪರಿಹರಿಸಬಹುದಾಗಿದೆ ಎಂದು ತಿಳಿಸಿ ಅವುಗಳ ಪಟ್ಟಿಯನ್ನು  ಪ್ರತಿಭಟನಕಾರರಿಗೆ ನೀಡಿದರು.

ಜೂ. 15: ಅಕಾರಿಗಳ ಸಭೆ
ಜೂ. 15ರಂದು ಕೊಕ್ಕಡದಲ್ಲಿ ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಕಾರಿಗಳನ್ನು ಕರೆದು ಜಿಲ್ಲಾಕಾರಿ ಸಭೆ ನಡೆಸಲಿದ್ದು, ಜಿಲ್ಲೆಯ ಎಂಡೋ ಸಂತ್ರಸ್ತರ ಗುರುತು ಚೀಟಿ ಮತ್ತು ಇನ್ನಿತರ ಎಲ್ಲ ಸಮಸ್ಯೆಗಳನ್ನು ಮುಂಚಿತವಾಗಿ ಕಂದಾಯ ಇಲಾಖೆಗೆ ತಿಳಿಯಪಡಿಸಿದಲ್ಲಿ ಅಂದಿನ ಸಭೆಯಲ್ಲೇ ಇತ್ಯರ್ಥ ಮಾಡಲಾಗುವುದು ಮತ್ತು ಹೊಸದಾಗಿ ನೀಡಿದ ಸಮಸ್ಯೆ ದಾಖಲಿಸಿ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next