Advertisement

ಲೋಕಲ್‌ ಎಲೆಕ್ಷನ್‌ “ಡೋಲಾಯಮಾನ’

11:44 PM Sep 29, 2019 | Team Udayavani |

ಬೆಂಗಳೂರು: ಮೀಸಲಾತಿ “ಗೊಂದಲ’ ಎದುರಿ ಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದೀಗ ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ “ಗುಮ್ಮ’ ಎದುರಾಗಿದೆ. ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಡಿ.5ರಂದು ಚುನಾವಣೆ ನಿಗದಿ ಪಡಿಸಿ ವೇಳಾಪಟ್ಟಿ ಪ್ರಕಟಿಸಿದ್ದರಿಂದ 2019ರ ಡಿಸೆಂಬರ್‌ನಲ್ಲಿ ಅವಧಿ ಮುಕ್ತಾಯವಾಗಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸ್ಥಿತಿ “ಡೋಲಾಯಮಾನ’ ಆಗಿದೆ.

Advertisement

ರಾಜ್ಯದ ಒಟ್ಟು 274 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಈ ವರ್ಷಾಂತ್ಯಕ್ಕೆ ಅವಧಿ ಪೂರ್ಣಗೊಳ್ಳಲಿರುವ 106 ಸಂಸ್ಥೆಗಳ ಪೈಕಿ 44 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಿದೆ. ಆದರೆ, ಉಪ ಚುನಾವಣೆಯ ಘೋಷಣೆ ರಾಜ್ಯ ಚುನಾವಣಾ ಆಯೋಗವನ್ನು ಇಕ್ಕಟ್ಟಿನ ಸ್ಥಿತಿಗೆ ತಂದಿಟ್ಟಿದೆ. ಚುನಾವಣೆ ನಡೆಸಬೇಕಿರುವ 44 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನ್ಯಾಯಾಲಯದಲ್ಲಿ ವ್ಯಾಜ್ಯ ಇತ್ಯರ್ಥಗೊಂಡಿರುವ 17 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈ ಮಧ್ಯೆ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವ 26 ನಗರ ಸ್ಥಳೀಯ ಸಂಸ್ಥೆಗಳ ವಿಚಾರವಾಗಿ ರಾಜ್ಯ ಸರ್ಕಾರದ ಜತೆಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಎಲ್ಲ ಸೇರಿ ಒಂದೇ ಬಾರಿಗೆ ಚುನಾವಣೆ ನಡೆಸಬೇಕು ಎಂಬುದು ಆಯೋಗದ ಚಿಂತನೆಯಾಗಿದೆ. ವಿಧಾನಸಭಾ ಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಸ್ಥೆಗಳು ಬೇರೆ, ಬೇರೆ ಆಗಿದ್ದರೂ, ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತವೆ.

ಚುನಾವಣೆ ನಡೆಯಬೇಕಿರುವ 44 ಸ್ಥಳೀಯ ಸಂಸ್ಥೆಗಳಲ್ಲಿ ಕೆಲವು ಕಡೆ ಆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದೆ. ಅದೇ ರೀತಿ, ವಿಧಾನ ಸಭಾ ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಲವು ಕಡೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದೆ. ಒಂದೇ ಕಡೆ ಏಕಕಾಲಕ್ಕೆ ಅಥವಾ ಕಡಿಮೆ ದಿನಗಳ ಅಂತರದಲ್ಲಿ ಎರಡೆರಡು ಚುನಾವಣೆ ನಡೆಸುವುದು ಕಷ್ಟ. ಇದು ಚುನಾವಣಾ ಸಿದ್ಧತೆ, ನೀತಿ ಸಂಹಿತೆ ಜಾರಿ ಇತ್ಯಾದಿ ಕಾನೂನು ಮತ್ತು ಆಡಳಿತಾತ್ಮಕ ಗೊಂದಲಗಳಿಗೆ ಕಾರಣವಾಗುತ್ತದೆ.

ಮೀಸಲಾತಿ ಗೊಂದಲದಿಂದ ವಿಳಂಬ: ಮೀಸಲಾತಿ ಗೊಂದಲ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾ ವಣೆ ವಿಳಂಬಕ್ಕೆ ಅವಿನಾಭಾವ ಸಂಬಂಧ ಇದ್ದಂತಿದೆ. ಚುನಾವಣೆಗೆ ಮೊದಲು ವಾರ್ಡ್‌ವಾರು ಮೀಸಲಾತಿ ಮತ್ತು ಚುನಾವಣೆ ನಂತರದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿವಾದ ನ್ಯಾಯಾಲಯದ ಅಂಗಳಕ್ಕೆ ಹೋಗಿ ಬರುವುದು ನಿಶ್ಚಿತ. ಪ್ರಮುಖವಾಗಿ ಇದೇ ವಿಚಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಜಾರಿಗೆ ಬರಲು ವಿಳಂಬವಾಗುತ್ತದೆ.

Advertisement

ರಾಜ್ಯದಲ್ಲಿ 10 ಮಹಾನಗರ ಪಾಲಿಕೆಗಳು, 54 ನಗರಸಭೆಗಳು, 116 ಪುರಸಭೆ ಹಾಗೂ 90 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 274 ನಗರ ಸ್ಥಳೀಯ ಸಂಸ್ಥೆಗಳಿವೆ. ಇದರಲ್ಲಿ ಮೊದಲ ಹಂತದಲ್ಲಿ 2018ರ ಆಗಸ್ಟ್‌ನಲ್ಲಿ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾ ವಣೆ ನಡೆದಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿವಾದ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ವರ್ಷ ಕಳೆದರೂ, ಈ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಜಾರಿಗೆ ಬಂದಿಲ್ಲ.

ಅದೇ ರೀತಿ, 2019ರ ಮಾರ್ಚ್‌, ಜೂನ್‌ ಮತ್ತು ಡಿಸೆಂಬರ್‌ನಲ್ಲಿ ಅವಧಿ ಪೂರ್ಣಗೊಳ್ಳಲಿರುವ 106 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಈಗಾಗಲೇ ಈ ವರ್ಷದ ಮೇ ತಿಂಗಳಲ್ಲಿ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಆದರೆ, ಮೀಸಲಾತಿ ವಿವಾದ ದಿಂದಾಗಿ ಇಲ್ಲಿಯೂ ಜನಪ್ರತಿನಿಧಿಗಳ ಕೈಗೆ ಆಡಳಿತ ಸಿಕ್ಕಿಲ್ಲ. ಇನ್ನು, ಚುನಾವಣೆ ನಡೆಯಬೇಕಿರುವ 44 ಸ್ಥಳೀಯ ಸಂಸ್ಥೆಗಳ ಪೈಕಿ ವಾರ್ಡ್‌ವಾರು ಮೀಸಲಾತಿ ಪ್ರಶ್ನಿಸಿದ್ದ ಪ್ರಕರಣದಲ್ಲಿ 17 ನಗರ ಸ್ಥಳೀಯ ಸಂಸ್ಥೆಗಳ ವ್ಯಾಜ್ಯವನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ. ಇನ್ನುಳಿದ 26 ಸಂಸ್ಥೆಗಳ ಮೀಸಲಾತಿ ವಿವಾದ ಹೈಕೋರ್ಟ್‌ ನಲ್ಲಿ ವಿಚಾರಣೆಗೆ ಬಾಕಿ ಇದೆ.

ಒಟ್ಟು 44 ಕಡೆ ಚುನಾವಣೆ ನಡೆಯಬೇಕಿದೆ. ಇದರಲ್ಲಿ 17 ಕಡೆಗಳಲ್ಲಿ ನ್ಯಾಯಾಲಯದಿಂದ ಒಪ್ಪಿಗೆ ಸಿಕ್ಕಿದೆ. ಎಲ್ಲ ಸೇರಿಸಿ ಚುನಾವಣೆ ನಡೆಸಬೇಕು ಎಂದು ಇನ್ನುಳಿದವುಗಳ ಬಗ್ಗೆ ಕಾಯುತ್ತಿದ್ದೇವೆ. ಈ ಮಧ್ಯೆ, ವಿಧಾನಸಭೆಗೆ ಉಪಚುನಾವಣೆ ಘೋಷಣೆಯಾಗಿದೆ. ಇದು ನಮಗೆ ಸಮಸ್ಯೆ ಆಗಲಿಕ್ಕಿಲ್ಲ ಅಂದುಕೊಂಡಿದ್ದೇವೆ. ಆದರೂ, ಎಲ್ಲವನ್ನೂ ನೋಡಿಕೊಂಡು ಮುಂದುವರಿಯುತ್ತೇವೆ.
-ಬಿ. ಬಸವರಾಜು, ರಾಜ್ಯ ಚುನಾವಣಾ ಆಯುಕ್ತ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next