ಉಪ್ಪುಂದ: ವಿವಿಧೆಡೆ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆಯಲ್ಲಿ ದೋಷದ ಕುರಿತು ಕೇಳಿ ಬರುತ್ತಿದ್ದಂತೆಯೇ ಖಂಬದಕೋಣೆ ಪರಿಸರದಲ್ಲಿ ಕ್ವಾರಂಟೈನ್ ಕೇಂದ್ರ ನಿರ್ವಹಣೆಗೆ ಸ್ಥಳೀಯರು ಸಾಥ್ ನೀಡಿ ವ್ಯವಸ್ಥೆಗೆ ಸಹಾಯ ಮಾಡಿದ್ದಾರೆ.
ಮೇ 13 ರಿಂದ ಇಲ್ಲಿ ಹೊರರಾಜ್ಯಗಳಿಂದ ಆಗಮಿಸಿದ ಮಕ್ಕಳು, ಮಹಿಳೆಯರು ಸಹಿತ 83 ಮಂದಿಗೆ ಕ್ವಾರಂಟೈನ್ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. 24 ಗಂಟೆ ಉತ್ತಮ ನೀರಿನ ವ್ಯವಸ್ಥೆ ಇದೆ. ಶ್ರೀ ಕ್ಷೇತ್ರ ಕೊಲ್ಲೂರಿನಿಂದ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.
ಹೆಸರು ಹೇಳಲು ಇಷ್ಟಪಡದ ನಾಯ್ಕನಕಟ್ಟೆ ಗೆಳೆಯರು ಒಂದಾಗಿ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಇಡ್ಲಿ ಚಟ್ನಿ ಅಥವಾ ಉಪ್ಪಿಟ್ಟು ಕೇಸರಿಬಾತ್ ಮತ್ತು ಅಪರಾಹ್ನ 3 ಗಂಟೆಗೆ ಟೀ ಜತೆ ಬೋಂಡಾ/ ವಡೆ ವಿತರಿಸುತ್ತಾರೆ. ದಾನಿಗಳೊಬ್ಬರು ಮಧ್ಯಾಹ್ನ ಊಟದ ಸಮಯದಲ್ಲಿ ಪ್ರತಿದಿನ ಸಿಹಿ ಬಡಿಸುತ್ತಾರೆ.
ಮಕ್ಕಳಿಗೆ ಮತ್ತು ಅಗತ್ಯ ಇರುವವರಿಗೆ ಬಿಸಿನೀರು/ ಹಾಲು ಒದಗಿಸುತ್ತಾರೆ. ಮುಂಬಯಿ ಉದ್ಯಮಿ ಉಪ್ಪು³ಂದ ನಿವಾಸಿಯೊಬ್ಬರು ಈ ಭಾಗದ ಕ್ವಾರಂಟೈನ್ ಕೇಂದ್ರಗಳಿಗೆ ಶುದ್ಧೀಕರಿಸಿದ ನೀರಿನ ಬಾಟಲಿ ವಿತರಿಸಿದ್ದಾರೆ. ಪೊಲೀಸ್, ಇಲಾಖಾ ಅಧಿಕಾರಿಗಳ ಮೇಲ್ವಿಚಾರಣೆ ನಡೆಯುತ್ತಿದೆ. ಎಲ್ಲರ ಕನಿಷ್ಠ ಬೇಡಿಕೆಗೆ ಸ್ಪಂದಿಸಲು ಗೆಳೆಯರ ಬಳಗ ಸದಾ ಸಿದ್ಧವಿದೆ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುನಿಲ್ ನಾಯ್ಕನಕಟ್ಟೆ ಹೇಳಿದ್ದಾರೆ.