Advertisement

Living together: ಕುಕ್ಕರ್‌ನಿಂದ ಹೊಡೆದು ಪ್ರೇಯಸಿ ಹತ್ಯೆ

10:53 AM Aug 28, 2023 | Team Udayavani |

ಬೆಂಗಳೂರು: ಪರಪುರುಷನ ಜತೆ ಆತ್ಮೀಯವಾಗಿದ್ದಾಳೆ ಎಂದು ಶಂಕಿಸಿ ಪ್ರಿಯಕರನೊಬ್ಬ ತನ್ನೊಂದಿಗೆ ಲಿವಿಂಗ್‌ ಟುಗೆದರ್‌ನಲ್ಲಿದ್ದ ಪ್ರೇಯಿಸಿ ತಲೆಗೆ ಕುಕ್ಕರ್‌ನಿಂದ ಹೊಡೆದು ಕೊಲೆಗೈದಿರುವ ಘಟನೆ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಕೇರಳ ಮೂಲದ ದೇವಾ (24) ಕೊಲೆಯಾದ ಯುವತಿ. ಕೃತ್ಯ ಎಸಗಿದ ವೈಷ್ಣವ್‌(27) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಕೇರಳ ಮೂಲದ ದೇವಾ ಮತ್ತು ವೈಷ್ಣವ್‌ ಕಾಲೇಜು ದಿನಗಳಿಂದ ಪರಿಚಯಸ್ಥರು. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಖಾಸಗಿ ಕಂಪನಿಯೊಂದರ ಮಾರುಕಟ್ಟೆ ವಿಭಾಗದಲ್ಲಿ ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಹೀಗಾಗಿ ಎರಡೂವರೆ ವರ್ಷಗಳಿಂದ ಸಹ ಜೀವನ(ಲಿವಿಂಗ್‌ ಟುಗೆದರ್‌) ನಡೆಸುತ್ತಿದ್ದು, ಒಂದು ವರ್ಷದಿಂದ ಬೇಗೂರಿನ ನ್ಯೂಮೈಕೋ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಈ ವಿಚಾರ ಇಬ್ಬರ ಪೋಷಕರಿಗೂ ತಿಳಿದಿತ್ತು. ಮುಂದಿನ ವರ್ಷ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ವರ್ಕ್‌ ಫ್ರಮ್‌ ಹೋಮ್‌ ಮಾಡುತ್ತಿದ್ದರಿಂದ ಇಬ್ಬರು ಮನೆಯಲ್ಲೇ ಇದ್ದರು. ಈ ನಡುವೆ ದೇವಾ, ವೈಷ್ಣವ್‌ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾಳೆ. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಅಲ್ಲದೆ, “ನೀನು ಬೇರೊಬ್ಬ ಯುವಕನ ಜತೆ ಎಂಗೆಜ್‌ ಆಗಿರುವೆ, ಹೀಗಾಗಿ ನನ್ನನ್ನು ದೂರ ಮಾಡುತ್ತಿರುವೆ’ ಎಂದು ಜಗಳ ಮಾಡುತ್ತಿದ್ದ. ಆದರೆ, ದೇವಿ, ವೈಷ್ಣವ್‌ನ ಮಾತನ್ನು ನಿರ್ಲಕ್ಷಿಸಿದ್ದಳು. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ, ವೈಷ್ಣವ್‌ ಅಡುಗೆ ಕೋಣೆಯಲ್ಲಿದ್ದ ಕುಕ್ಕರ್‌ನಿಂದ ದೇವಾ ತಲೆಗೆ ಜೋರಾಗಿ ಹೊಡೆದಿದ್ದಾನೆ. ಆಕೆಯ ತಲೆಗೆ ಗಂಭೀರ ಪೆಟ್ಟುಬಿದ್ದು ಕುಸಿದು ಬಿದ್ದಿದ್ದಾಳೆ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಗಾಬರಿಗೊಂಡ ಆರೋಪಿ, ಆಕೆಯನ್ನು ಎಚ್ಚರಿಸಲು ಯತ್ನಿಸಿದ್ದಾನೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ದೃಢವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಭಾನುವಾರ ಆರೋಪಿಯ ಸುಳಿವು ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next