Advertisement

ದಿಲ್ಲಿಯೊಳಗೊಂದು ಪುಟ್ಟ ಟಿಬೆಟ್‌

06:24 PM Jun 15, 2019 | mahesh |

ಮಹಾನಗರಿಗಳ ಒಡಲಲ್ಲಿ ಅಡಗಿರುವ ಅಸಂಖ್ಯಾತ ಜಗತ್ತುಗಳ ಲೆಕ್ಕವಿಟ್ಟವರ್ಯಾರು?
ದಿಲ್ಲಿಯೆಂಬ ದಿಲ್ಲಿಯಲ್ಲೂ ಇಂಥದ್ದೊಂದು ಪುಟ್ಟ ಜಗತ್ತಿದೆ. ಈಗಾಗಲೇ ಅಲ್ಲಲ್ಲಿ ನೆಲೆಯಾಗಿರುವ ಅದೆಷ್ಟೋ ಪುಟ್ಟ ಲೋಕಗಳಲ್ಲಿ ಇದೂ ಒಂದು. ಒಂದು ದಿಕ್ಕಿನಲ್ಲಿ ಸರ್ಪದಂತೆ ಸುರುಳಿ ಸುತ್ತಿರುವ ದಿಲ್ಲಿಯ ಔಟರ್‌ ರಿಂಗ್‌ ರೋಡ್‌. ಇನ್ನೊಂದೆಡೆ ಹರಿಯುವ ಯಮುನೆ. ಮಧ್ಯದಲ್ಲೊಂದು ಮಜೂ° ಕಾ ತಿಲ್ಲಾ ಎಂಬ ಅಪರೂಪದ ಹೆಸರಿನ ಪುಟ್ಟ ಜಾಗ. ತಿಲ್ಲಾ ಎಂದರೆ ಹಿಂದಿಯಲ್ಲಿ ದಿಬ್ಬ ಎಂದರ್ಥವಿದೆ. ಇದು ಮಜೂ° ಮಹಾಶಯನ ದಿಬ್ಬ.

Advertisement

ಮಜೂ°ವಿನ ದಿಬ್ಬಕ್ಕೊಂದು ವಿಶೇಷ ಆಕರ್ಷಣೆಯೂ ಇದೆ. ಈ ಪುಟ್ಟ ಜಾಗಕ್ಕೆ ಕಾಲಿಟ್ಟ ಕೂಡಲೇ ದಿಲ್ಲಿಯನ್ನೂ, ಒಟ್ಟಾರೆ ಭಾರತವನ್ನೂ ಏಕಾಏಕಿ ಹಿಂದೆಲ್ಲೋ ಬಿಟ್ಟು ಬಂದೆವೇನೋ ಎಂಬಂತೆ ಭಾಸವಾಗುತ್ತದೆ. ಅಚಾನಕ್ಕಾಗಿ ಟಿಬೆಟಿಗೋ, ನೇಪಾಳಕ್ಕೋ ಬಂದು ತಲುಪಿದೆವೇನೋ ಎಂಬ ಭಾವ. ಇಕ್ಕಟ್ಟಾದ ಸ್ವತ್ಛ ಗಲ್ಲಿಗಳು, ಟಿಬೆಟನ್‌ ಮತ್ತು ಇಂಗ್ಲಿಷ್‌ ಲಿಪಿಗಳನ್ನು ಹೊಂದಿರುವ ಫ‌ಲಕಗಳು, ಎಲ್ಲೆಡೆ ಕಾಣುವ ಚೀನೀಯ ಮುಖಗಳು, ಶಾಂತಮುಖಭಾವದ ಟಿಬೆಟನ್‌ ಸನ್ಯಾಸಿಗಳು, ಬಣ್ಣಬಣ್ಣದ ಪುಟ್ಟಗಾತ್ರದ ಧ್ವಜಗಳು, ಬೌದ್ಧಧರ್ಮ-ಸಂಸ್ಕೃತಿಗಳನ್ನೇ ಉಸಿರಾಡುತ್ತಿರುವ ಪರಿಸರ. ಇಂಥದ್ದೊಂದು “ಮಿನಿ ಟಿಬೆಟ್‌’ ಅನ್ನು ಬೇರೆಯದೇ ಲೋಕಕ್ಕೆ ಹೋಲಿಸಿದ್ದು ಈ ಕಾರಣಕ್ಕೇನೇ.

ಮಜುನು ಎಂಬ ಮಾಯಕಾರ
ಅದು 16ನೇ ಶತಮಾನದ ದಿಲ್ಲಿ. ದೊರೆ ಸಿಕಂದರ್‌ ಲೋಧಿಯ ಚಕ್ರಾಧಿಪತ್ಯ. ಇಂತಿಪ್ಪ ದಿಲ್ಲಿಯಲ್ಲಿ ಅಬ್ದುಲ್ಲಾ ಎಂಬ ಸೂಫಿ ಸಂತನೊಬ್ಬನಿದ್ದನಂತೆ. ಎಲ್ಲರೂ ಆತನನ್ನು ಪ್ರೀತಿಯಿಂದ ಕರೆಯುತ್ತಿದ್ದ ನಾಮಧೇಯವೆಂದರೆ “ಮಜೂ°’. ಬಹುತೇಕ ಸೂಫಿಸಂತರಂತೆ ಮೊಹಬ್ಬತ್‌-ಇಬಾದತ್‌ (ಪ್ರೀತಿ-ಆರಾಧನೆ) ಗಳೇ ಅವನ ಬದುಕಾಗಿತ್ತೇ? ಇರಬಹುದೇನೋ! ಈ ಮಜೂ° ಜಮುನೆಯ ತಟದಾಚೆಗೂ ಈಚೆಗೂ ಸ್ಥಳೀಯರನ್ನು ದೋಣಿಯಲ್ಲಿ ಉಚಿತವಾಗಿ ಕರೆದೊಯ್ಯುತ್ತಿದ್ದನಂತೆ. ಆತನಿಗೆ ಇದೊಂದು ಬಗೆಯ ನಿಸ್ವಾರ್ಥ ದೈವಸೇವೆಯಾಗಿತ್ತು.

ಹೀಗಿರುವಾಗಲೇ ಸಿಕ್ಖ್ ಧರ್ಮಸಂಸ್ಥಾಪಕರಾದ ಗುರುನಾನಕ್‌ ಒಮ್ಮೆ ಆ ಕಡೆ ಬಂದಿದ್ದರಂತೆ. ಮಾನವತೆಯೇ ಮೈವೆತ್ತಂತಿದ್ದ ಮಜೂ°ನ ಜೀವನಶೈಲಿಯನ್ನು ನೋಡಿ ಅವರು ಸಹಜವಾಗಿಯೇ ಖುಷಿಪಟ್ಟಿದ್ದರು. ಆತನ ಆತಿಥ್ಯದಿಂದಾಗಿ ಆ ತಿಂಗಳ ಕೊನೆಯವರೆಗೆ ಸಂತ ಗುರುನಾನಕ್‌ ಅಲ್ಲಿ ಉಳಿದರು ಕೂಡ. ಮುಂದೆ 18ನೇ ಶತಮಾನದಲ್ಲಿ ಸಿಕ್ಖ್ ಮಿಲಿಟರಿ ನಾಯಕನಾಗಿದ್ದ ಬಘೇಲ್‌ ಸಿಂಗ್‌ ಇಲ್ಲಿ ಸಿಖ್‌ ಪೂಜಾಸ್ಥಳವಾದ ಗುರುದ್ವಾರವೊಂದನ್ನು ಕಟ್ಟಿಸಿದ್ದ. ದಿಲ್ಲಿಯಲ್ಲಿ ಇಂದಿಗೂ ಸಕ್ರಿಯವಾಗಿರುವ ಕೆಲವೇ ಕೆಲವು ಹಳೆಯ ಗುರುದ್ವಾರಗಳಲ್ಲಿ ಇದೂ ಒಂದು. ಸಿಕ್ಖರ ಆರನೇ ಧರ್ಮಗುರುಗಳಾಗಿದ್ದ ಗುರು ಹರ್ಗೋಬಿಂದ್‌ ಸಿಂಗ್‌ ಕೂಡ ಇಲ್ಲಿಗೆ ಬಂದಿದ್ದರು ಎಂಬ ಪ್ರತೀತಿಯಿದೆ.

ಇಂಡೋ-ಚೀನ ಯುದ್ಧದ ಬಳಿಕ
1959ರಲ್ಲಿ ಟಿಬೆಟ್‌ ಧರ್ಮಗುರು ದಲಾಯಿಲಾಮಾ ಭಾರತಕ್ಕೆ ಬಂದು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯವನ್ನು ಪಡೆದಾಗ ಅದೆಷ್ಟೋ ಮಂದಿ ಟಿಬೇಟಿಯನ್ನರು ದಲಾಯಿಲಾಮಾರ ಹಾದಿಯನ್ನೇ ತುಳಿದು ಭಾರತದತ್ತ ಹೆಜ್ಜೆಹಾಕಿದ್ದರು. ಈ ಘಟನೆಯ ಬೆನ್ನಿಗೇ ಯಮುನೆಯ ತಟದಲ್ಲಿ ಹೀಗೆ ಆಶ್ರಯದ ನಿರೀಕ್ಷೆ ಹೊತ್ತು ಬಂದಿದ್ದ ಟಿಬೇಟಿಯನ್ನರಿಗಾಗಿ ಪುಟ್ಟದೊಂದು ನಿರಾಶ್ರಿತರ ಕ್ಯಾಂಪಿನ ವ್ಯವಸ್ಥೆಯನ್ನು ಮಾಡಲಾಯಿತು. 1960ರಲ್ಲಿ ಇವರೆಲ್ಲ ನೆಲೆಯೂರುವ ನಿಟ್ಟಿನಲ್ಲಿ ಒಂದಷ್ಟು ಭೂಮಿಯನ್ನೂ ಕೂಡ ಭಾರತ ಸರ್ಕಾರವು ಮಂಜೂರು ಮಾಡಿತ್ತು.

Advertisement

ಮುಂದೆ 1962ರಲ್ಲಿ ಇಂಡೋ-ಚೀನಾ ಯುದ್ಧದ ಸಂದರ್ಭದಲ್ಲೂ ಕೂಡ ಸಾವಿರಾರು ನಿರಾಶ್ರಿತರು ಇದೇ ಜಮುನಾ ತಟಕ್ಕೆ ಬಂದು ಬೀಡುಬಿಟ್ಟಿದ್ದರು. ಹೀಗೆ ಕೆಲವೇ ಕೆಲವು ಸಾವಿರ ಟಿಬೇಟಿಯನ್ನರ ಪುಟ್ಟ ಗುಂಪೊಂದು ನಿದ್ದೆಯಲ್ಲಿ ಮಗ್ಗುಲು ಬದಲಿಸಿದಂತೆ ತನ್ನ ಹೊಸ ಪೀಳಿಗೆಯ ಬೀಜವನ್ನು ದಿಲ್ಲಿಯ ನೆಲದಲ್ಲಿ ನಿಧಾನವಾಗಿ ಬಿತ್ತುತ್ತಲಿತ್ತು.

ದಿಲ್ಲಿಯೊಳಗಣ ಟಿಬೆಟ್‌
ಹಾಗೆ ನೋಡಿದರೆ ಇಂದು ಇಲ್ಲಿರುವ ಬಹಳಷ್ಟು ಟಿಬೇಟಿಯನ್ನರು ಎರಡನೇ ಪೀಳಿಗೆಯವರು. ಆದರೆ ತಮ್ಮ ಮೂಲಸಂಸ್ಕೃತಿಯ ಬಗ್ಗೆ ಬಹುವಾಗಿ ಪ್ರೀತಿಯನ್ನಿಟ್ಟುಕೊಂಡವರು. ಈ ಅಂಶವು ಅವರ ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿಗಳಲ್ಲಿ ಧಾರಾಳವಾಗಿ ಕಾಣುತ್ತದೆ. ಇಲ್ಲಿ ಇಂದು ಬೆರಳೆಣಿಕೆಯ ಸುಂದರ ಬೌದ್ಧ ಮೊನಾಸ್ಟರಿ (ಮಠ)ಗಳಿವೆ. ಆರ್ಥಿಕತೆಗೆ ಪುಟ್ಟ ಕ್ಯಾಂಟೀನುಗಳಿಂದ ಹಿಡಿದು ವಸತಿಗೃಹಗಳು, ತರಹೇವಾರಿ ವಸ್ತುಗಳನ್ನು ಮಾರುವ ಮಳಿಗೆಗಳು, ಸ್ಪಾ ಕೇಂದ್ರಗಳು, ಟ್ರಾವೆಲ್‌ ಏಜೆನ್ಸಿಗಳು, ಗ್ಯಾಲರಿಗಳಿವೆ. ಪ್ರತೀ ಗೂಡಿನಲ್ಲೂ ಎದುರಾಗುವ ದಲಾಯಿಲಾಮಾರ ನಗುಮುಖದ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಇದೇ ಕಾರಣಕ್ಕೋ ಏನೋ, ಈ ಪ್ರದೇಶವು ದಿಲ್ಲಿಯ ಗಾಢ ಪರಿಣಾಮವನ್ನೂ ಕೂಡ ಕಳಚಿಕೊಂಡು ಆ ಮಟ್ಟಿಗೆ “ಟಿಬೆಟ್‌’ತನವನ್ನು ಪಡೆದುಕೊಂಡುಬಿಟ್ಟಿದೆ.

ಮಜು°ವಿನ ದಿಬ್ಬವು ಇಂದು ಅಧಿಕೃತವಾಗಿ “ನ್ಯೂ ಅರುಣಾನಗರ ಕಾಲೊನಿ’ಯಾಗಿದೆ. ಇನ್ನು ಬಣ್ಣಗಳ ಪುಟ್ಟ ಸ್ವರ್ಗದಂತೆ ಕಾಣುವ ಈ ಪ್ರದೇಶವು ಸ್ಥಳೀಯರನ್ನೂ, ವಿದೇಶಿ ಪ್ರವಾಸಿಗರನ್ನೂ ಬಹಳ ಆಕರ್ಷಿಸುವಂಥದ್ದು. ಹಿಂದಿ ಆಡುಭಾಷೆಗಂತೂ ಇದು ತಿಬ್ಬತ್‌ ಮಾರ್ಕೆಟ್‌. ಆಸುಪಾಸಿನಲ್ಲೇ ಇರುವ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೆಚ್ಚಿನ ಹ್ಯಾಂಗೌಟ್‌ ತಾಣ. “ಮೋಮೋ’ ಖಾದ್ಯಗಳ ವಿವಿಧ ಅವತಾರಗಳಿಂದ ಹಿಡಿದು ತರಹೇವಾರಿ ಟಿಬೆಟನ್‌ ವಿಶೇಷ ಖಾದ್ಯಗಳ ಕಾಶಿ. ಅತ್ಯುತ್ಕೃಷ್ಟ ಕೊರಿಯನ್‌ ಮತ್ತು ನಾಗಾ ಖಾದ್ಯಗಳು ಇಲ್ಲಿಯ ಬೋನಸ್‌. ಇನ್ನು ಕೊರಿಯನ್‌ ಮದ್ಯವಾಗಿರುವ ಸೋಜು ಮತ್ತು ನಾಗಾಲ್ಯಾಂಡ್‌ ಸ್ಪೆಷಲ್‌ ಅಕ್ಕಿಯ ಬಿಯರ್‌ ಗುಂಡುಪ್ರಿಯರಿಗಾಗಿ ಲಭ್ಯವಿರುವ ಸೋಮರಸಗಳು. ಸೋಜು ಗೋವಾದಲ್ಲಿ ಲಭ್ಯವಾಗುವ ಫೆನ್ನಿಯಂತಿದ್ದರೆ, ಅಕ್ಕಿಯ ಬಿಯರ್‌ ರೂಪದಲ್ಲೂ ರುಚಿಯಲ್ಲೂ ಶೇಂದಿಯ ಅಪರಾವತಾರ. ಒಟ್ಟಿನಲ್ಲಿ ತಿರುಗಾಡುವ ಖಯಾಲಿಯೊಂದಿದ್ದರೆ ಮಜೂ° ಕಾ ತಿಲ್ಲಾ ನಿಜಕ್ಕೂ ಪೈಸಾವಸೂಲ್‌ ತಾಣ.

ಮಹಾನಗರಗಳಿಗಿರುವ ಮಹಾಗಡಿಬಿಡಿಯ ಭಾತು ಈ ಪ್ರದೇಶವನ್ನಂತೂ ಇನ್ನೂ ತಟ್ಟಿಲ್ಲ. ಹೀಗಾಗಿಯೇ ಈಚಿನ ದಿನಗಳಲ್ಲಿ ಅಪರೂಪವೆನಿಸುವ ನಿಧಾನಗತಿಯ ಜೀವನ, ಸರಳತೆಯ ಬದುಕು ಮತ್ತು ಶ್ರಮಜೀವನವನ್ನು ನಂಬಿಕೊಂಡು ಇದ್ದುದರಲ್ಲೇ ಸಂತೃಪ್ತ ಜೀವನವನ್ನು ಕಾಣುವ ನೋಟಗಳು ಇಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಮೊನಾಸ್ಟರಿಯೊಂದರ ಅಂಗಳದಲ್ಲೇ ಇರುವ ಕೆಲ ಕೈಗಾಡಿಗಳು, ಸುತ್ತಲಿರುವ ತಿಂಡಿತಿನಿಸುಗಳ ಮೂಲೆಗಳು, ಕುಲುಕುಲು ನಗುತ್ತಾ ಖುಷಿ ಚೆಲ್ಲುವ ಸ್ಥಳೀಯ ಜನಸಮೂಹ, ಇವೆಲ್ಲದರ ನಡುವೆಯೂ ತಮ್ಮ ಮಣಿಸರದೊಂದಿಗೆ ಪ್ರಾರ್ಥನೆಯಲ್ಲಿ ನಿರತರಾಗಿರುವ ನೆರಿಗೆ ಮುಖದ ಹೆಂಗಸರು, ಅವರ ಮುಖದಲ್ಲಿರುವ ಜೀವನ್ಮುಖೀ ಮಂದಹಾಸ… ಇವೆ ಲ್ಲವನ್ನೂ ನೋಡಿಯೇ ಸವಿಯಬೇಕು.

ಆ ಕಾಲದ “ಮಜೂ°’ ಹೇಗಿದ್ದರೋ ಗೊತ್ತಿಲ್ಲ. ಆದರೆ, ದಿಬ್ಬದ ಹವೆಯಲ್ಲಿ ಮಾತ್ರ ಈ ಸೂಫಿಸಂತನ ಪ್ರೀತಿ, ಮಾನವತೆಗಳು ಇಂದಿಗೂ ಆತ್ಮದಂತಿವೆ.

ಪ್ರಸಾದ್‌ ನಾೖಕ್‌

Advertisement

Udayavani is now on Telegram. Click here to join our channel and stay updated with the latest news.

Next