Advertisement

ಮನಸ್ಸು ಅರಳಿಸುವುದೇ ಸಾಹಿತ್ಯ

05:54 AM Feb 09, 2019 | |

ದಾವಣಗೆರೆ: ಸಾಹಿತ್ಯದ ಕೆಲಸ ಮನಸ್ಸನ್ನು ಕೆರಳಿಸುವುದಲ್ಲ. ಮುದುಡಿದ ಮನಸ್ಸುಗಳನ್ನು ಅರಳಿಸುವುದಾಗಬೇಕು ಎಂದು 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಆರ್‌.ಜಿ. ಹಳ್ಳಿ ನಾಗರಾಜ್‌ ಆಶಿಸಿದ್ದಾರೆ.

Advertisement

ಶುಕ್ರವಾರ ಆನಗೋಡು ಗ್ರಾಮದಲ್ಲಿ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷತೆಯ ಮಾತುಗಳನ್ನಾಡಿದ ಅವರು, ಅಕ್ಷರಲೋಕವೇ ವಿಸ್ಮಯ. ಬರಹಗಾರ ಯಾವ ದೃಷ್ಟಿಯಿಂದ ಬರೆಯುವರು ಎನ್ನುವ ಜಿಜ್ಞಾಸೆ ಪುಸ್ತಕ ರಚನೆ ಪ್ರಾರಂಭಗೊಂಡ ಕಾಲದಿಂದಲೂ ಇದೆ. ಸಾಹಿತ್ಯಕ್ಕಾಗಿ ಸಾಹಿತ್ಯ ಅಲ್ಲ. ಕವಿ, ಸಾಹಿತಿ, ಲೇಖಕರಿಗೆ ಸಾಮಾಜಿಕ ದೃಷ್ಟಿಕೋನ ಇರಬೇಕು ಎಂದು ಪ್ರತಿಪಾದಿಸಿದರು.

ನಾವು ನಿಂತ ನೆಲದಲ್ಲಿ ನಮ್ಮ ಬದುಕಿನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನಿಂದ ಗ್ರಹಿಸುತ್ತಾ ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುವ, ನೋವು ನಲಿವಿಗೆ ಮುಖಾಮುಖೀ ಆಗುವ ಸಾಹಿತ್ಯ ರಚನೆಗೆ ವೇದಿಕೆ ಆಗುವುದೇ ಮುಖ್ಯ ಗುರಿ ಆಗಬೇಕು. ಲೇಖಕರು ಸಮಾಜದೊಂದಿಗೆ ಸದಾ ಸ್ಪಂದಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಸಮ್ಮೇಳನ ನಡೆಯುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಸಮ್ಮೇಳನಗಳ ಮೂಲಕ ಎಳೆಯ ಮಕ್ಕಳ ಮನಸ್ಸಿನಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ, ಓದುವ ಸಂಸ್ಕೃತಿ ಹೆಚ್ಚಿಸುವ, ಹಿರಿಯ ಸಾಹಿತಿಗಳ ಮೂಲಕ ಸಾಹಿತ್ಯ ಪರಂಪರೆಯ ಮೌಲಿಕ ವಿಚಾರಗಳ ತಿಳಿಸುವ ಕೆಲಸ ಆಗುತ್ತಿದೆ. ನಾನು ಚಿಕ್ಕವನಿದ್ದಾಗಿನಿಂದಲೂ ಓಡಾಡಿದಂತಹ ಆನಗೋಡುನಲ್ಲಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿರುವುದು ತುಂಬಾ ಸಂತಸದ ವಿಚಾರ ಎಂದರು.

ಗ್ರಾಮೀಣ ಭಾಗದ ಮಕ್ಕಳಲ್ಲಿ ಅಷ್ಟೇ ಕನ್ನಡ ಉಳಿಯುತ್ತಿರುವುದು ಎಂದು ಅನೇಕ ವರ್ಷದಿಂದ ಕೇಳಿ ಬರುತ್ತಿರುವ ಮಾತುಗಳು ಈಗ ಮಾಯವಾಗುತ್ತಿವೆ. ಅಪ್ಪ-ಅವ್ವನ ಸ್ಥಾನದಲ್ಲಿ ಮಮ್ಮಿ-ಡ್ಯಾಡಿ ಪದ ಕೇಳಿ ಬರುತ್ತಿವೆ. ಗ್ರಾಮೀಣ ಭಾಗದಲ್ಲಿ ಸಾಮೂಹಿಕ ಸನ್ನಿಯಾಗಿರುವ ಕಾನ್ವೆಂಟ್ ಸಂಸ್ಕೃತಿಯ ದಟ್ಟ ಪ್ರಭಾವದಿಂದ ಮಧ್ಯಮ, ಕೆಳ ವರ್ಗದವರು ತಮ್ಮ ಮಕ್ಕಳಿಗೆ ಕಾನ್ವೆಂಟ್ ಶಿಕ್ಷಣ ಬೇಕು… ಎಂಬ ಹುಚ್ಚು ನಿರ್ಧಾರಕ್ಕೆ ಬರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಬರದಲ್ಲಿ ಬೇಯುತ್ತಿರುವ ರೈತರಿಗೆ ಸಾಲ ಮನ್ನಾಕ್ಕಿಂತಲೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಕೃಷಿ ಉಪಕರಣಗಳಿಗೆ ವಿಶೇಷ ಸಹಾಯಧನ ನೀಡುವ ಜೊತೆಗೆ ತೆರಿಗೆ ಮನ್ನಾ ಮಾಡಬೇಕು. ಆಗ ರೈತರು ಆತ್ಮಹತ್ಯೆಯಂತಹ ಘೋರ, ಕೆಟ್ಟ ಆಲೋಚನೆ ದೂರ ಮಾಡುತ್ತಾರೆ ಎಂದರು.

ಆನಗೊಡು ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ್‌ ಕುರ್ಕಿ ಆಶಯ ನುಡಿಗಳಾಡಿದರು. ತಾಲೂಕು ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ನಿಕಟಪೂರ್ವ ಅಧ್ಯಕ್ಷ ಪ್ರೊ| ಎಚ್.ಎಸ್‌. ಹರಿಶಂಕರ್‌ ಸರ್ವಾಧ್ಯಕ್ಷತೆ ಹಸ್ತಾಂತರಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ| ಎಚ್.ಎಲ್‌. ಪುಷ್ಪಾ, ಪ್ರೊ|ಎಸ್‌.ಬಿ. ರಂಗನಾಥ್‌, ಆನಗೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ರವಿ, ನೇರ್ಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್‌. ಅಕ್ಕಮಹಾದೇವಿ, ಎಂ.ಕೆ. ಬಕ್ಕಪ್ಪ, ಎಚ್.ಎಂ. ರೇವಣಸಿದ್ದಪ್ಪ ಇತರರು ಇದ್ದರು.

ದಾವಣಗೆರೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಲ್‌.ಎಸ್‌. ಪ್ರಭುದೇವ್‌ಗೆ ಪ್ರಜಾಸ್ನೇಹಿ… ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಗಣೇಶ ಶೆಣೈ ಸ್ವಾಗತಿಸಿದರು. ಕೆ. ರಾಘವೇಂದ್ರ ನಾಯರಿ ನಿರೂಪಿಸಿದರು. ಡಾ| ಶಿವಕುಮಾರಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆತ್ಮವಿಶ್ವಾಸ ಮೂಡಿಸಬೇಕು…

ಇಂಗ್ಲಿಷ್‌ ಕಲಿಸಿದರೆ ಸರ್ಕಾರ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದೆ. ಕನ್ನಡದಲ್ಲಿ ಓದಿದರೆ ಕೆಲಸ ಸಿಗುವುದೇ ಇಲ್ಲ ಎಂಬ ಹಸಿ ಸುಳ್ಳು ಹಬ್ಬಿಸಲಾಗುತ್ತಿದೆ. ಕನ್ನಡವನ್ನು ಕಲಿಯುವ ಮಕ್ಕಳಿಗೆ ಇಂಗ್ಲಿಷ್‌ನ್ನು ಒಂದು ಭಾಷೆಯನ್ನಾಗಿ ಪ್ರಾಥಮಿಕ ಹಂತದಿಂದಲೇ ಕಲಿಸಬೇಕು. ಕನ್ನಡ ಕಲಿತರೆ ನಾನು ಬದುಕಬಲ್ಲೆ. ಕನ್ನಡ ಅನ್ನದ ಭಾಷೆ ಆಗಬೇಕು ಎಂಬ ಆತ್ಮವಿಶ್ವಾಸದ ವಾತಾವರಣ ಎಲ್ಲೆಡೆ ನಿರ್ಮಾಣವಾಗಬೇಕು ಎಂದು 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಆರ್‌.ಜಿ. ಹಳ್ಳಿ ನಾಗರಾಜ್‌ ಆಶಿಸಿದರು.

ನಿರ್ಣಯಗಳು….

• ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳ ಹೂಳೆತ್ತಿಸಿ, ನೀರು ತುಂಬಿಸುವುದರ ಮೂಲಕ ರೈತಾಪಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ರೈತರ ಬಾಳನ್ನು ಹಸನಾಗಿಸಬೇಕು.
• ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅವುಗಳಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. • ದಾವಣಗೆರೆ ತಾಲೂಕಿನ ಪ್ರಮುಖ ಬೆಳೆಗಳಲ್ಲೊಂದಾದ ಮೆಕ್ಕೆಜೋಳದ ಉಪ ಉತ್ಪನ್ನ ತಯಾರಿಕಾ ಘಟಕಗಳನ್ನು ನಿರ್ಮಿಸಿ, ರೈತರಿಗೆ ಹೆಚ್ಚಿನ ಬೆಲೆ ಸಿಗುವಂತಾಗಲು ಮತ್ತು ಉದ್ಯೋಗವಕಾಶ ಒದಗಿಸುವಂತಾಗಬೇಕು.
• ಈಗಾಗಲೇ ನಿಗದಿಪಡಿಸಿರುವ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲೇ ನಡೆಸಬೇಕು.
• ಪ್ರೌಢಶಾಲಾ ಹಂತದಲ್ಲಿ ಕನ್ನಡ ನಾಡಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next