Advertisement

ಸ್ತ್ರೀ ಹೊರತಾದ ಸಾಹಿತ್ಯ ಅಸಾಧ್ಯ: ಚಂದ್ರಕಲಾ

01:15 PM Nov 10, 2019 | Suhan S |

ಶೃಂಗೇರಿ: ಸಾಹಿತ್ಯದ ಯಾವುದೇ ವಿಷಯ ತೆಗೆದುಕೊಂಡರೂ ಅದರಲ್ಲಿ ಸ್ತ್ರೀ ಸಂವೇದನೆಯನ್ನು ಕಾಣಬಹುದಾಗಿದೆ ಎಂದು ಕೊಪ್ಪದ ಸಾಹಿತಿ ಚಂದ್ರಕಲಾ ಹೇಳಿದರು.

Advertisement

ಮೆಣಸೆಯ ರಾಜೀವ್‌ ಗಾಂಧಿ ಸಂಸ್ಕೃತ ಕಾಲೇಜಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ಎಸ್‌.ವಿ. ರಾಮಚಂದ್ರ ಭಟ್‌ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಾಹಿತ್ಯದಲ್ಲಿ ಮಹಿಳಾ ಚಿಂತನೆ ಮತ್ತು ಸ್ಥಾನಮಾನ’ ಕುರಿತು ಮಾತನಾಡಿದರು. ಆದಿ ಮಾನವನ ಕಾಲದಿಂದಲೂ ಭಾಷೆ ಮತ್ತು ಸಾಹಿತ್ಯ ಒಂದಲ್ಲೊಂದು ರೀತಿಯಲ್ಲಿ ಅಸ್ತಿತ್ವದಲ್ಲಿದೆ. ನಾಗರೀಕತೆ ಬೆಳೆದಂತೆ ಸಾಹಿತ್ಯ ಪ್ರಾಕಾರಗಳಲ್ಲೂ ಅನೇಕ ಬದಲಾವಣೆ ಕಾಣಬಹುದು ಎಂದರು. ಮಹಿಳೆಯನ್ನು ಹೊರತುಪಡಿಸಿದ ಸಾಹಿತ್ಯವನ್ನು ಕಾಣಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಾದ ಜಾನಪದ ಸಾಹಿತ್ಯ, ಹಳೆಗನ್ನಡ, ಹೊಸಗನ್ನಡ, ನಡುಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ನವ್ಯ, ನವೋದಯ, ಬಂಡಾಯ ಸಾಹಿತ್ಯಗಳ ಕಥೆ, ಕವನ, ಕಾದಂಬರಿ, ನಾಟಕ ಹೀಗೆ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಮಹಿಳಾ ಶೋಷಣೆ ಅಥವಾ ಸಮಾನತೆ ಕಾಣಬಹುದು ಎಂದರು.

ಮಹಿಳಾ ಶಿಕ್ಷಣ ವಿಚಾರಗಳ ಕುರಿತು ಸಾಹಿತಿಗಳು ಮತ್ತು ಕವಿಗಳು ಬಹಳ ಆಕರ್ಷಕವಾಗಿ ಚಿತ್ರಿಸಿದ್ದಾರೆ. ಹಿಂದೆ ಮಹಿಳೆಯರಿಗೆ ಅವಕಾಶ ಕಡಿಮೆ ಇದ್ದು, ಈಗ ಅವಕಾಶ ಹೆಚ್ಚಾಗಿದೆ. ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು. ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಉತ್ತಮ ಅವಕಾಶವನ್ನು ಹಾಗೂ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಹೇಳಿದರು.

ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಚಾಲಕನಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆ ಕುಟುಂಬ ಹಾಗೂ ಸಮಾಜದಲ್ಲಿ ಮಡದಿಯಾಗಿ, ತಾಯಿ, ಅತ್ತೆ, ಸಹೋದರಿಯಾಗಿ, ಚಿಕ್ಕಮ್ಮ, ದೊಡ್ಡಮ್ಮ ಹೀಗೆ ವಿವಿಧ ಪಾತ್ರ ನಿರ್ವಹಿಸುತ್ತಿದ್ದಾಳೆ. ಆದ್ದರಿಂದ ಸಾಹಿತ್ಯದಲ್ಲಿ ಪುರುಷನಿಗಿಂತ ಮಹಿಳಾ ವಸ್ತು ವಿಷಯಗಳು ಹೇರಳವಾಗಿ ಚಿತ್ರಿಸಲ್ಪಟ್ಟಿವೆ. ಇದನ್ನು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲೂ ಕಾಣಬಹುದೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ

ಅಧ್ಯಕ್ಷ ಡಾ| ಶ್ರೀಮಂದಾರ, ಸಾಹಿತ್ಯ ಕ್ಷೇತ್ರದ ಉಳಿವಿಗೆ ಕನ್ನಡದ ನಿರಂತರ ಕಾರ್ಯಕ್ರಮ ಅಗತ್ಯವಾಗಿದೆ. ದತ್ತಿ ಉಪನ್ಯಾಸವಲ್ಲದೇ ವರ್ಷವಿಡೀ ಕನ್ನಡ ಸಾಹಿತ್ಯದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ| ಎ.ಸಚ್ಚಿದಾನಂದ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಸದಸ್ಯ ರಾದ ಎ.ಎಸ್‌.ನಯನ, ಬೇಗಾನೆ ವಿವೇಕ್‌, ದಿನೇಶ್‌ಹೆಗ್ಡೆ, ಲತಾ ಶ್ರೀನಿವಾಸ್‌, ಪೂರ್ಣಿಮಾ ಸಿದ್ಧಪ್ಪ, ಗಾಯತ್ರಿ ಆರ್‌.ಭಟ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next