Advertisement

ಸಾಹಿತಿಗಳು ಮತ್ತು ವಿಶ್ವಾಸಾರ್ಹತೆ

08:55 AM Dec 10, 2017 | Harsha Rao |

ಸರಕಾರ ನೀಡಿದ ಪ್ರಶಸ್ತಿಗಳನ್ನು ಹಿಂತಿರುಗಿಸುವ ವಿದ್ಯಮಾನಗಳು ಈ ಹಿಂದೆ ನಡೆದಿವೆ. ಅದು ಪ್ರತಿಭಟನೆಯ ಒಂದು ವಿಧಾನ. ಆದರೆ, ಸೂಕ್ಷ್ಮವಾಗಿ ಗಮನಿಸಿ : ಸರಕಾರ ಪ್ರಶಸ್ತಿ ಕೊಡುವುದು ಮತ್ತು ಅದನ್ನು ಪಡೆಯುವುದು- ಎರಡೂ ತಾತ್ತ್ವಿಕವಾಗಿ ಪ್ರಜಾಪ್ರಭುತ್ವ ವಿರೋಧಿ ಸಂಗತಿಗಳು. ಸಂವಿಧಾನ ಈ ಬಗ್ಗೆ ಏನು ಹೇಳಿದೆಯೊ ಗೊತ್ತಿಲ್ಲ ;  ನ್ಯಾಯಶಾಸ್ತ್ರಜ್ಞರು ಹೇಳಬೇಕು. ಪ್ರಶಸ್ತಿಯನ್ನು ಒಮ್ಮೆ ಸ್ವೀಕರಿಸಿದವರಿಗೆ ಅದನ್ನು ಹಿಂತಿರುಗಿಸುವ ನೈತಿಕ ಹಕ್ಕು ಖಂಡಿತವಾಗಿಯೂ ಇಲ್ಲ. ಸರ್ವರನ್ನು ಸಮಾನವಾಗಿ ಕಾಣಬೇಕಾದ ಸರಕಾರ ನೀಡುವ ಪ್ರಶಸ್ತಿಯನ್ನು ನಿರಾಕರಿಸುವ ಛಾತಿ ಇರುವವರು ಲಕ್ಷಕ್ಕೊಬ್ಬರು ಸಿಕ್ಕಿಯಾರು. ಅಂಥವರ ಮಾತಿಗೆ ಮಾತ್ರ ವಿಶ್ವಾಸಾರ್ಹತೆ ಇರುತ್ತದೆ.

Advertisement

ಕೇಂದ್ರ ಅಥವಾ ರಾಜ್ಯ ಸರಕಾರಗಳು ಪ್ರಾಯೋಜಿಸುತ್ತಿರುವ ಅನೇಕ ಪ್ರಶಸ್ತಿಗಳಿವೆ. ಅದನ್ನು ಪಡೆದುಕೊಳ್ಳಲು ಹಾತೊರೆಯುವ ಮಂದಿ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಪ್ರಶಸ್ತಿಗೆ ಆಸೆ ಪಡದೆ ದೂರ ಉಳಿಯುವವರೂ ಹಲವರಿದ್ದಾರೆ. ಅಂಥವರಲ್ಲಿ ಹೆಚ್ಚಿನವರು ಪ್ರಶಸ್ತಿ ಪಡೆದವರಿಗಿಂತ ಹೆಚ್ಚಿನ ಅರ್ಹತೆ ಉಳ್ಳವರಾಗಿರುತ್ತಾರೆ. 
ಹಾಗಿದ್ದರೆ ಸರ್ಕಾರ ನೀಡುವ ಪ್ರಶಸ್ತಿಗಳ ಮಾನದಂಡಗಳು ಎಷ್ಟು ಸಂವಿಧಾನಾತ್ಮಕವಾಗಿವೆ? ಇಂಥ ಪ್ರಶಸ್ತಿಗಳನ್ನು ಸ್ವೀಕರಿಸಲು ತವಕಿಸುವ  ಸಾಹಿತಿಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹರಾಗುತ್ತಾರೆ?

ಸಾಹಿತ್ಯವೂ ಸೇರಿದಂತೆ, ಅನೇಕ ಕ್ಷೇತ್ರಗಳಲ್ಲಿ ಸರಕಾರಿ ಕೃಪಾಪೋಷಿತ ಪ್ರಶಸ್ತಿಯನ್ನು ಪಡೆದವರ ಪಟ್ಟಿ ನೋಡಿ. ಆ ಪ್ರಶಸ್ತಿ ಅವರ ತಲೆಮಾರಿನ ಸಾಧನೆಗೆ ಸಮಗ್ರವಾಗಿ ನೀಡಿದ್ದಲ್ಲ ; ಅವರ ವೈಯಕ್ತಿಕ ಸಾಧನೆಗೆ ನೀಡಿರುವಂಥಾದ್ದು. ಅವರಷ್ಟೇ ಸಾಧನೆ ಮಾಡಿದ ಅವರಿಗೆ ಸಮಕಾಲೀನರಾದವರು ಅನ್ಯಾನ್ಯ ಕಾರಣಗಳಿಗಾಗಿ ಪ್ರಶಸ್ತಿಯಿಂದ ವಂಚಿತರಾಗಿರುತ್ತಾರೆ. ಇದಕ್ಕೆ ಸಾಹಿತ್ಯ, ಸಿನೆಮಾ, ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಹೀಗೆ ಯಾವ ಕ್ಷೇತ್ರಗಳೂ ಹೊರತಲ್ಲ. ಹತ್ತಾರು ನಿದರ್ಶನಗಳನ್ನು ಹೇಳುವುದಕ್ಕಿಂತ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಒಂದೇ ಉದಾಹರಣೆಯನ್ನುಯಿ ಇಲ್ಲಿ ಕೊಡೋಣ : ಕನ್ನಡದಲ್ಲಿ ಹೊಸ ಕಾವ್ಯಮಾರ್ಗವನ್ನು ತೆರೆದವರಲ್ಲಿ ಎಂ. ಗೋಪಾಲಕೃಷ್ಣ ಅಡಿಗರ ಹೆಸರು ಮೊತ್ತಮೊದಲನೆಯದು. ಅಡಿಗರ ಕಾವ್ಯ ಸಾಲುಗಳನ್ನು ಉದ್ಧರಿಸದೆ ಕನ್ನಡ ನವ್ಯಕಾವ್ಯದ ಅವಲೋಕನವನ್ನು ಮಾಡಲು ಸಾಧ್ಯವಿಲ್ಲ. ಅಡಿಗರಂತೆ ಬರೆದವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಗೋಪಾಲಕೃಷ್ಣ ಅಡಿಗರಿಗೆ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲ! ಯಾಕೆ ಬರಲಿಲ್ಲ? ಯಾರಲ್ಲಿ ಕೇಳುವುದು?

ಹಾಗೆಂದು, ಸರಕಾರ ಪ್ರಶಸ್ತಿಯನ್ನು ನೀಡಬಾರದಲ್ಲದೆ, ಖಾಸಗಿ ಸಂಸ್ಥೆಗಳು ಪ್ರಶಸ್ತಿಯನ್ನು ಪ್ರಾಯೋಜಿಸಬಾರದೆಂದೇನೂ ಇಲ್ಲ. ಅಲ್ಲಿ ಪ್ರಶಸ್ತಿಯ ಮಾನದಂಡಗಳು ಆಯಾ ಸಂಸ್ಥೆಗಳಿಗೆ ಅನ್ವಯವಾಗುವಂಥದ್ದಾಗಿರುತ್ತವೆ. ಅವುಗಳು ಇಡೀ ಸಮಾಜದ ವಿಶ್ವಾಸಾರ್ಹತೆಯನ್ನು ಪಡೆದಿರಬೇಕಾಗಿಲ್ಲ. ಆದರೆ, ಸರಕಾರಕ್ಕೆ ಅಂಥ ಬಾಧ್ಯತೆ ಇದೆ.

ಪ್ರಶಸ್ತಿ ಮಾತ್ರವಲ್ಲ, ಸರಕಾರದ ಹಣದಿಂದ ಆಯೋಜಿಸುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವ ವಿರೋಧಿಯೇ. ಇಂಥ ಮನ್ನಣೆಯನ್ನು ಒಬ್ಬನಿಗೇ ನೀಡುವುದಾದಲ್ಲಿ ಅದಕ್ಕೆ ಮಾನದಂಡಗಳೇನು? ಅಷ್ಟೇ ಯೋಗ್ಯತೆ ಇರಬಹುದಾದ ಉಳಿದವರಿಗೆ ಸಲ್ಲಿಸಲಾಗದ ನ್ಯಾಯಕ್ಕೆ ಪ್ರಜಾಪ್ರಭುತ್ವವಾದಿ ಸರಕಾರ ಏನು ಹೇಳುತ್ತದೆ? ಹಾಗಾಗಿ, ಸಮ್ಮೇಳನಾಧ್ಯಕ್ಷತೆಯನ್ನು ಒಮ್ಮೆ ಒಪ್ಪಿಕೊಂಡ ಮೇಲೆ ಆ ವ್ಯಕ್ತಿ ಆಡುವ  ಪರ-ವಿರೋಧ ಮಾತುಗಳಿಗೆ ಯಾವ ಬೆಲೆಯೂ ಇರುವುದಿಲ್ಲ. ದೇವನೂರು ಮಹಾದೇವರಿಗೆ ಇಂಥ ಎಚ್ಚರ ಇದ್ದಿರಬೇಕು. ಹಾಗಾಗಿ, ಅವರು ಈ ಸ್ಥಾನವನ್ನು ನಿರಾಕರಿಸಿದ್ದಿರ‌ಬೇಕು. ಆದರೆ, ಖಾಸಗಿ ವಲಯದವರು ನಡೆಸುವ ಸಮ್ಮೇಳನಗಳಲ್ಲಿ ಅಧ್ಯಕ್ಷರನ್ನು ಇಟ್ಟುಕೊಳ್ಳುವುದು, ಬಿಡುವುದು ಅವರವರ ಇಚ್ಛೆ. ಸರಕಾರದ ಕೃಪೆಯಿಂದ ನಡೆಸುವ ಕಾರ್ಯಕ್ರಮದಲ್ಲಿರಬೇಕಾದ ನೈತಿಕ ಹೊಣೆ ಅವರಿಗಿರಬೇಕಾಗಿಲ್ಲ.

Advertisement

ಇವತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಭೆ ದುರ್ಬಲವಾಗುತ್ತಿದೆ, ಪ್ರತಿಭಾವಂತರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಆದರೂ ಗಂಭೀರ ಚಿಂತನೆಯ ಸಮುದಾಯವೊಂದು ಅದರಷ್ಟಕ್ಕೆ ಜಾಗ್ರತ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ಮರೆಯಬಾರದು. ಅವರಲ್ಲಿ ಹೆಚ್ಚಿನವರು ಯುವ ಹರೆಯದವರು. ಸಾಹಿತ್ಯದಲ್ಲಿ ಆಸಕ್ತಿ ಇರುವ ಕಂಪ್ಯೂಟರ್‌ ಇಂಜಿನಿಯರ್‌, ಸಿನೆಮಾ ನಿರ್ಮಾಣದಲ್ಲಿ ಅನುಭವ ಇರುವ ಡಾಕ್ಟರ್‌, ಯಕ್ಷಗಾನ ಕಲೆಯಲ್ಲಿ ಪರಿಣತಿ ಇರುವ  ವಕೀಲ… ಹೀಗೆ ಇವತ್ತಿನ ಕಾಲಘಟ್ಟದಲ್ಲಿ ಆಸಕ್ತಿಯ ವಿಷಯ ಬೇರೆ, ವೃತ್ತಿ ಬೇರೆ- ಆಗಿರುತ್ತದೆ. ಅಂಥವರು ತಮ್ಮ ವಿರಾಮದ ವೇಳೆ ಆಸಕ್ತಿಯ ಕ್ಷೇತ್ರಗಳಲ್ಲಿ ಸಕ್ರಿಯರಾಗುತ್ತಾರೆ, ಪೋಷಣೆ ನೀಡುತ್ತಾರೆ. ನಮ್ಮ ಸಾಹಿತ್ಯ- ಕಲೆಗಳು ಬೆಳೆದು ಬಂದದ್ದು ಇಂಥ ಸಹೃದಯ ಆಸಕ್ತಿಯಲ್ಲಿಯೇ ಅಲ್ಲವೆ? ಇಂಥ ಸಮುದಾಯ ಆಯಾ ಕ್ಷೇತ್ರಗಳ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುತ್ತಾರೆ. ಲಘುತ್ವವೇ ಅಧಿಕವಾಗಿ, ವಿಶ್ವಾಸಾರ್ಹತೆ ಕುಸಿಯತೊಡಗಿದರೆ ತಮ್ಮ “ಹವ್ಯಾಸ’ದ ಕ್ಷೇತ್ರದಿಂದ ದೂರ ಉಳಿಯುತ್ತಾರೆ. ಸಾಹಿತ್ಯವಾಗಲಿ, ಕಲೆಯಾಗಲಿ, ಪ್ರೋತ್ಸಾಹ-ಪೋಷಣೆಯಿಂದ ವಂಚಿತವಾದರೆ ಅವರ ಬೆಳವಣಿಗೆಗೆ ಕಷ್ಟಸಾಧ್ಯ.

ಪ್ರಕಾಶಕರೊಬ್ಬರು ಈಗ ಪುಸ್ತಕಗಳ ವ್ಯವಹಾರ ಕುಸಿದಿದೆ ಎಂದು ದೂರುತ್ತಾರೆ. ಅವರು ಈ ಹಿಂದೆ ಸಾವಿರಾರು ಪುಸ್ತಕಗಳನ್ನು ಪ್ರಿಂಟ್‌ ಮಾಡಿಸಿ ಹಣ ಗಳಿಸಿದ್ದರು. ಆದರೆ, ಅವರು ಮುದ್ರಿಸಿದ ಪುಸ್ತಕಗಳ ಲೇಖಕರು “ಸಮಾಜದ ವಿಶ್ವಾಸಾರ್ಹತೆ’ಯನ್ನು ಯಾವಾಗ ಕಳೆದುಕೊಂಡರೋ ಅಂದಿನಿಂದ ವ್ಯವಹಾರ ಕುಸಿಯಲಾರಂಭಿಸುತ್ತದೆ. ಈಗ ಮುದ್ರಣಗೊಳ್ಳುತ್ತಿರುವ ಪುಸ್ತಕಗಳ ಸಂಖ್ಯೆಗೆ ಹೋಲಿಸಿದರೆ ಓದುತ್ತಿರುವವರ ಸಂಖ್ಯೆ ಹೇಗೆ ಕಡಿಮೆಯಾಗುತ್ತದೆ! ಯಾವನೇ ಲೇಖಕ ತನ್ನಷ್ಟಕ್ಕೆ ತಾನು ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಕಾಲವಿದು: “ನನ್ನ ಪುಸ್ತಕವನ್ನು ಯಾವನಾದರೂ ಯಾಕೆ ಓದಬೇಕು?’ ಬೇರೆಯವರು ಓದುವುದಕ್ಕಿಂತ ಮೊದಲು ಪ್ರತಿಯೊಬ್ಬನೂ ತಾನು ಬರೆದದ್ದನ್ನು ತಾನೇ ಮತ್ತೂಮ್ಮೆ ಓದಿಕೊಳ್ಳುವುದು ಮತ್ತು ಎಷ್ಟು ವಿಶ್ವಾಸಾರ್ಹವಾಗಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ಹಣ, ಜಾತಿ, ನೀತಿ- ಎಲ್ಲ ವಿಚಾರಗಳಲ್ಲಿಯೂ ಒಂದು ರೀತಿಯ “ಮಿಥ್ಯಾತಣ್ತೀ’ಗಳು ಕ್ರಿಯಾಶೀಲವಾಗಿವೆ. ಇವುಗಳನ್ನು ಆಧರಿಸಿದ ಸಂಗತಿಗಳು ಬಹು ಕಾಲ ಬಾಳಿಕೆ ಬರುವುದು ದುರ್ಲಭ!

ಇತ್ತೀಚೆಗೆ ಸಾಹಿತಿಗಳು ತಮ್ಮ ಭಾಷಣಗಳಲ್ಲಿ ಎಷ್ಟೊಂದು ಬಾಲಿಶ ಸಂಗತಿಗಳನ್ನು ಬಳಸುತ್ತಾರೆ! ನೈತಿಕತೆಯನ್ನು ಹೆಣ್ಣಿನ ಕನ್ಯತ್ವಕ್ಕೆ ಹೋಲಿಸುತ್ತಾರೆ, ಅರ್ಧ ಬರೆದು ಎಸೆದ ಕತೆಗಳನ್ನು “ಭ್ರೂಣಹತ್ಯೆ’ ಎಂದು ಕರೆಯುತ್ತಾರೆ, ಕ್ರಿಯಾಶೀಲವಾಗದೇ ಉಳಿಯುವುದಕ್ಕೆ “ಮುಟ್ಟು ನಿಂತಿದೆ’ ಎಂದು ಬಣ್ಣಿಸುತ್ತಾರೆ. ಅದೇ ಚರ್ವಿತಚರ್ವಣ ಉಪಮೆಗಳು. ನಾವು ಹದಿಮೂರನೆಯ ಶತಮಾನದಲ್ಲಿ ನಿಂತು ಮಾತನಾಡುತ್ತಿಲ್ಲ ಎಂಬ ಕನಿಅರಿವಾದರೂ ಇವರಿಗೆ ಬೇಕಲ್ಲ !
ಇಂಥ ಸಾಹಿತಿಗಳ ಮಾತುಗಳಿಗೆ ಎಂಥ ವಿಶ್ವಾಸಾರ್ಹತೆ ಇರಬಹುದು?

– ಎ. ಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next