Advertisement

ಸಾಹಿತ್ಯ ಸಾಮಾಜಿಕ ಬದಲಾವಣೆಗೆ ಅಸ್ತ್ರ

01:49 PM Sep 18, 2019 | Team Udayavani |

ಮಾಗಡಿ: ಸಾಮಾಜಿಕ ಬದಲಾವಣೆಗೆ ಸಾಹಿತ್ಯ, ಕಾವ್ಯ ಅಸ್ತ್ರವಿದ್ದಂತೆ, ಅದನ್ನು ಬಳಸಿಕೊಂಡು ಸಮಾಜದಲ್ಲಿ ಸಮಾನತೆಗೆ ಶ್ರಮಿಸಬೇಕಿದೆ ಎಂದು ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ತೋಟದ ಮನೆ ಗಿರೀಶ್‌ ಅವರ ಗುಡಿಸಲ ಬೆಳಕು ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಲ್ಯ ಗ್ರಾಮ ಬೌದ್ಧರ ವಿಶ್ವವಿದ್ಯಾಲಯವಾಗಿತ್ತು. ಕಲ್ಯದ ಕಲಿಗಣನಾಥ ಗುಹಾಂತರ ದೇವಾಲಯದಲ್ಲಿ ಬುದ್ಧನ ಶಿರಸ್ಸಿದೆ. ಕಲ್ಯ ಬಗ್ಗೆ ಸಂಪೂರ್ಣವಾಗಿ ಸಂಶೋಧನೆಯಾಗಬೇಕು. ಸಂಸ್ಕೃತಿ ಪಂಡಿತತ್ತೋಮರ ಪರಂಪರೆ ಮಾಗಡಿಯಲ್ಲಿದೆ. ಭೌಗೋಳಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿರುವ ಸುಂದರವಾದ ಕಾನನ ಪ್ರದೇಶವಾಗಿದ್ದು, ಸಹಜವಾಗಿ ಮಾಗಡಿಯ ನೆಲ, ಜಲ, ಭಾಷೆ, ಸಂಸ್ಕೃತಿ, ನಾಟಕಗಳು ಕವಿ ಹೃದಯವನ್ನು ಮಿಡಿಯುತ್ತವೆ ಎಂದು ಹೇಳಿದರು.

ಮಾಗಡಿ ಸಂಸ್ಕೃತಿಯ ತೊಟ್ಟಿಲು: ಮಾಗಡಿ ಸೀಮೆಯಲ್ಲಿ ಸಾಹಿತಿಗಳು, ಸಂಸ್ಕೃತ ಪಂಡಿತರು, ಸಂಗೀತಗಾರರು, ನಾಟಕಕಾರರು ಕವಿಗಳಿಗೇನು ಕೊರತೆಯಿಲ್ಲ. ಮಾಗಡಿ ಒಂದು ಸಾಂಸ್ಕೃತಿ ತೊಟ್ಟಿಲ್ಲಿದ್ದಂತೆ, ಅನೇಕ ಶ್ರೇಷ್ಟರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪಕ ಹೆಬ್ಬಳಲಿನ ಎಚ್.ವಿ.ನಂಜುಂಡಯ್ಯ, 64 ಭಾಷೆಯನ್ನು ಒಂದೇ ಭಾಷೆಗೆ ತುರ್ಜುಮೆ ಮಾಡಿರುವ ಸಿರುಬು ವಲಯ ಕರಲಮಂಗಲದ ಶ್ರೀಕಂಠಯ್ಯ, ನಾರಸಂದ್ರದ ಬಸವಪ್ಪ ಶಾಸ್ತ್ರಿ, ಸಾತನೂರಿನ ಅಭಿನವ ಕಾಳಿದಾಸ ಪುಂಡರೀಕ ವಿಠಲ, ತಂಬೂರಿ, ವೀಣೆ ಸಂಗೀತ ವಿದ್ವಾನ್‌ ಶ್ರೀನಿವಾಸಚಾರ್ಯ ಇನ್ನೂ ಅನೇಕರು ಮಾಗಡಿಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.

ಸಮಾನತೆಯೇ ನಿಜವಾದ ಧರ್ಮ: ತೋಟದ ಮನೆ ಗಿರೀಶ್‌ ಅವರು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ತಾವು ಬಾಲ್ಯದಲ್ಲಿ ಅನುಭವಿಸಿದ ಶೋಷಣೆಯಿಂದ ಹೊರಬಂದ ರೀತಿಯನ್ನು ತಮ್ಮ ಸಮರ್ಥವಾಗಿ ರಚಿಸಿದ್ದಾರೆ. ಕಲ್ಲಿನ ಮೂರ್ತಿಯನ್ನು ಪೂಜಿಸುವುದಕ್ಕಿಂತ ಮಾನವರನ್ನು ಸಮಾನತೆಯಿಂದ ನೋಡುವುದೇ ನಿಜವಾದ ಧರ್ಮ. ಯುವ ಕವಿಗಳು ಮೊದಲು ಪಂಪ, ಲಕ್ಷ್ಮೀಶ, ಕುಮಾರವ್ಯಾಸ, ಬಿಎಂಶ್ರೀ, ಕುವೆಂಪು, ದಾ.ರಾ.ಬೇಂದ್ರೆ, ದಾಸ ಸಾಹಿತ್ಯ, ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಗ್ರಾಮೀಣ ಮೂಲದ ಜನಪದಗಳಾದ ಕೋಲಾಟ, ರಾಗಿ ಬೀಸುವ ಪದ, ಗೀಗೀ ಪದ, ಕಂಸಾಳೆ ನೃತ್ಯ, ಸೋಮನ ಕುಣಿತ, ಪಠದ ಕುಣಿತ, ಜವಳಿ ಕುಣಿತ, ನಾಟಕಗಳು, ಗ್ರಾಮ ದೇವತೆ ಉತ್ಸವ ತಮಟ, ವಾಧ್ಯ ಇವುಗಳನ್ನು ಜೀವಂತಗೊಳಿಸಬೇಕು ಎಂದು ತಿಳಿಸಿದರು.

ಸಮಾಜಮುಖೀ ಚಿಂತನೆ ರೂಪಿಸಿಕೊಳ್ಳಿ: ಸಾಹಿತಿ ಎಲ್.ಎನ್‌.ಮುಕುಂದರಾಜ್‌ ಮಾತನಾಡಿ, ಮಾನವರಾದವರು ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಲ್ಲುವ ಬದಲಾಗಿ ಗ್ರಂಥಾಲಯದೊಳಗೆ ಪ್ರವೇಶಿಸಿ ಸಾಹಿತ್ಯವನ್ನು ಓದುವ ಹವ್ಯಾಸವನ್ನು ಜನರು ಬೆಳೆಸಿಕೊಳ್ಳಬೇಕು. ಇದರಿಂದ ದೇಶ ಪ್ರಗತಿ ಸಾಧಿಸುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಸಾಂಸ್ಕೃತಿಕವಾಗಿ ಬದುಕುವಂತ ವಾತಾವರಣ ರೂಢಿಸಿಕೊಳ್ಳಬೇಕು. ಸಮಾಜಮುಖೀ ಚಿಂತನೆಗಳು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು, ಬೆಸ್ಕಾಂ ನೌಕರರ ಸಂಘದ ರಾಜ್ಯಾದ್ಯಕ್ಷ ಟಿ.ಆರ್‌.ರಾಮಕೃಷ್ಣಯ್ಯ, ಸಿ.ಬಿ.ಅಶೋಕ್‌, ಚಿಕ್ಕವೀರಯ್ಯ, ಕಡಬಗೆರೆ ಮುನಿರಾಜು, ಗುಡಿಸಲು ಬೆಳಕು ಸಂಕಲನಕಾರ ತೋಟದ ಮನೆ ಗಿರೀಶ್‌ ಮಾತನಾಡಿದರು.

ಈ ವೇಳೆಯಲ್ಲಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್‌, ಸದಸ್ಯ ನಾರಾಯಣಪ್ಪ, ಜಿಪಂ ಮಾಜಿ ಅಧ್ಯಕ್ಷ ಧನಂಜಯ, ಪುರಸಭಾ ಮಾಜಿ ಅಧ್ಯಕ್ಷರಾದ ಎಚ್.ಜೆ.ಪುರುಷೋತ್ತಮ್‌, ರಂಗಹನುಮಯ್ಯ, ತಮ್ಮಣ್ಣಗೌಡ, ಸೀಗೇಕುಪ್ಪೆ ಶಿವಣ್ಣ, ಕಾಂತರಾಜು, ಸೀಬೇಗೌಡ, ಬೆಸ್ಕಾಂ ಹರೀಶ್‌, ಕೆಂಪೇಗೌಡ, ರಂಗಸ್ವಾಮಿ, ಶಿವರಾಮು, ಜಯರಾಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next