Advertisement

ನಿರೀಕ್ಷಿತ, ಅನಿರೀಕ್ಷಿತಗಳ ಕಾಂಗ್ರೆಸ್‌ ಪಟ್ಟಿ

04:58 PM Apr 16, 2018 | |

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಭಾನುವಾರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ಮಟ್ಟಿಗೆ ನಿರೀಕ್ಷಿತ ಹಾಗೂ ತೀರಾ ಅನಿರೀಕ್ಷಿತ ಎನ್ನುವಂತಿದೆ. ಜಗಳೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ ಹೆಸರು ಇಲ್ಲ. ಇದು ನಿಜಕ್ಕೂ ಶಾಕ್‌!.

Advertisement

ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ ಬದಲಿಗೆ ಪಟ್ಟಿಯಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಹೆಸರು ಕಾಣಿಸಿಕೊಂಡಿದೆ. ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಕೆ. ಶಿವಮೂರ್ತಿನಾಯ್ಕಗೆ ಟಿಕೆಟ್‌ ಸಿಕ್ಕುವುದೇ ಇಲ್ಲ ಎಂಬ ಮಾತು ಕೊನೆಗೆ ನಿಜ ಎನ್ನುವಂತೆ ಪ್ರಕಟಿತ ಪಟ್ಟಿಯಲ್ಲಿ ಕೆ. ಶಿವಮೂರ್ತಿನಾಯ್ಕರ ಹೆಸರು ಇಲ್ಲ. ಆನಗೋಡು ಜಿಲ್ಲಾ ಪಂಚಾಯತ್‌ ಕ್ಷೇತ್ರದ ಸದಸ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಅವರ ಅಳಿಯ ಕೆ.ಎಸ್‌. ಬಸವರಾಜ್‌(ಬಸವಂತಪ್ಪ) ಹೆಸರು ಕಾಣಿಸಿಕೊಂಡಿದೆ. ಜಗಳೂರು ಮತ್ತು ಮಾಯಕೊಂಡ ಎರಡು ಮೀಸಲು ಕ್ಷೇತ್ರ ಹೊರತುಪಡಿಸಿದರೆ ಇನ್ನುಳಿದ 6 ಕ್ಷೇತ್ರದಲ್ಲಿ ನಿರೀಕ್ಷಿತ ಆಕಾಂಕ್ಷಿಗಳಿಗೇ ಟಿಕೆಟ್‌ ದಕ್ಕಿದೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ, ಹರಿಹರ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಎಸ್‌. ರಾಮಪ್ಪ, ಹರಪನಹಳ್ಳಿ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಪಿ. ರವೀಂದ್ರ, ಹೊನ್ನಾಳಿಯಿಂದ ಡಿ.ಜಿ. ಶಾಂತನಗೌಡ, ಚನ್ನಗಿರಿ ಕ್ಷೇತ್ರಕ್ಕೆ ವಡ್ನಾಳ್‌ ರಾಜಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. 

ಜಗಳೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ ಅವರ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರುವುದು ಸ್ವತಃ ರಾಜೇಶ್‌ ಗೆ ಅಚ್ಚರಿ ಮೂಡಿಸಿದೆ. ಪಕ್ಷ, ಆಂತರಿಕ ಸಮೀಕ್ಷೆ ಮತ್ತು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದುಕೊಂಡ ಮಾಹಿತಿಯಂತೆ ರಾಜೇಶ್‌ಗೆ ಹೆಚ್ಚಿನ ಒಲವು ಇಲ್ಲ…. ಎನ್ನುವ ಕಾರಣಕ್ಕೆ ಟಿಕೆಟ್‌ ದೊರೆತಿಲ್ಲ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿವೆ. 

ಜಗಳೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರುವುದು ತೀರಾ ಅನಿರೀಕ್ಷಿತ ಎನ್ನುವುದು ಜಿಲ್ಲಾ ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬರುತ್ತಿದೆ. ಈ ಬಾರಿ ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು ಎಂಬ ಪ್ರಬಲ ಒತ್ತಾಯ ಮಂಡಿಸುತ್ತಲೇ ಬಂದಿದ್ದ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. 

Advertisement

ಕಳೆದ ಚುನಾವಣೆಯಿಂದಲೂ ಟಿಕೆಟ್‌ಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಪುಷ್ಪಾ ಲಕ್ಷ್ಮಣಸ್ವಾಮಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಟಿಕೆಟ್‌ ಖಾತರಿ ಆದಲ್ಲಿ ಜಗಳೂರು ಕ್ಷೇತ್ರದ ಇತಿಹಾಸದಲ್ಲೇ ರಾಷ್ಟ್ರೀಯ ಪಕ್ಷದಿಂದ ಮಹಿಳಾ ಅಭ್ಯರ್ಥಿಯೊಬ್ಬರು ಕಣಕ್ಕೆ ಇಳಿದಂತಾಗುತ್ತದೆ. ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರ ನಂತರ ಟಿಕೆಟ್‌ ಪಡೆದವರಾಗುತ್ತಾರೆ.

ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಕೆ. ಶಿವಮೂರ್ತಿನಾಯ್ಕಗೆ ಟಿಕೆಟ್‌ ಸಿಕ್ಕುವುದೇ ಇಲ್ಲ ಎಂಬ ಮಾತು ನಿಜವಾಗಿದೆ. ಪಟ್ಟಿಯಲ್ಲಿ ಕೆ. ಶಿವಮೂರ್ತಿ ನಾಯ್ಕರ ಬದಲಿಗೆ ಆನಗೋಡು ಜಿಲ್ಲಾ ಪಂಚಾಯತ್‌ ಕ್ಷೇತ್ರದ ಸದಸ್ಯ ಕೆ.ಎಸ್‌. ಬಸವರಾಜ್‌(ಬಸವಂತಪ್ಪ) ಹೆಸರು ಇದೆ. ಕೆ. ಶಿವಮೂರ್ತಿ ಸಹ ಟಿಕೆಟ್‌ಗೆ ಪ್ರಯತ್ನ ಮುಂದುವರೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಅನಾರೋಗ್ಯ ಮತ್ತು ಕೆಲವಾರು ಕಾರಣದಿಂದ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿ, ರಾಜೀನಾಮೆ ನೀಡಲಿಕ್ಕೂ ಮುಂದಾಗಿದ್ದ ಹರಪನಹಳ್ಳಿ ಕ್ಷೇತ್ರದ ಹಾಲಿ ಶಾಸಕ ಎಂ.ಪಿ. ರವೀಂದ್ರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರವೀಂದ್ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ರವೀಂದ್ರ ಅವರ ಪ್ರಮುಖ ಬೇಡಿಕೆ ಹರಪನಹಳ್ಳಿ
ತಾಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸುವುದಕ್ಕೆ ಸ್ಪಂದಿಸಿದ್ದರು. ಹರಿಹರ ಕ್ಷೇತ್ರದಿಂದ ವಿಟಿಯು ವಿಶ್ರಾಂತ ಕುಲಪತಿ ಡಾ| ಮಹೇಶ್ವರಪ್ಪ, ಮಾಜಿ ಸಚಿವ ಡಾ| ವೈ. ನಾಗಪ್ಪ, ಡಾ| ಶೈಲೇಶ್‌ಕುಮಾರ್‌ ಟಿಕೆಟ್‌ ಗೆ ಭಾರೀ ಪ್ರಯತ್ನ ನಡೆಸಿದ್ದರ ಮಧ್ಯೆಯೂ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಎಸ್‌. ರಾಮಪ್ಪ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ವಯೋಮಾನದ ಆಧಾರದಲ್ಲಿ ಹಿರಿಯ ಕಾಂಗ್ರೆಸಿಗ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರಾಯಶಃ ಟಿಕೆಟ್‌ ಕೊಡುವುದಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಹೈಕಮಾಂಡ್‌ ಮನೆಯ ಬಾಗಿಲಿಗೆ ಟಿಕೆಟ್‌ ಕಳಿಸಿಕೊಡುತ್ತದೆ… ಎಂದು ಶಾಸಕ ಶಾಮನೂರು ಶಿವಶಂಕರಪ್ಪ ದೃಢ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಕಾಂಗ್ರೆಸ್‌ ಪಟ್ಟಿಯಲ್ಲಿ ಹೆಸರು ಇದೆ. ಇನ್ನುಳಿದಂತೆ ದಾವಣಗೆರೆ ಉತ್ತರ, ಹೊನ್ನಾಳಿ, ಚನ್ನಗಿರಿಯಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕರ ಹೆಸರು ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next