Advertisement

ಬೇಗ ಹೋಗಿ ಮತಹಾಕಿ; ಇಲ್ದಿದ್ರೆ ಮಳೆ ಬಂದೀತು

11:24 AM May 11, 2018 | Team Udayavani |

ಹೊಸದಿಲ್ಲಿ: ಮಳೆ ಬರುವ ಮುನ್ನ ಮತ ಚಲಾಯಿಸಿ… ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಸಂಜೆ ಅಂತ್ಯವಾಗುತ್ತಿದ್ದಂತೆ, ಮಾತಿನ ಮಳೆಯೂ ಸ್ಥಗಿತವಾಗಿದೆ. ಆದರೆ ಶನಿವಾರದ ಮತದಾನದ ವೇಳೆ ಕರ್ನಾಟಕಾದ್ಯಂತ ಭಾರೀ ಪ್ರಮಾಣದಲ್ಲಿ ಗುಡುಗು ಸಹಿತ ಗಾಳಿ – ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಮಧ್ಯಾಹ್ನಕ್ಕೂ ಮುನ್ನವೇ ಮತ ಚಲಾಯಿಸುವಂತೆ ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಕೇಂದ್ರ ಮತದಾರರಲ್ಲಿ ಮನವಿ ಮಾಡಿದೆ.

Advertisement

ಭಾರತೀಯ ಹವಾಮಾನ ಇಲಾಖೆ ಕೂಡ ಮೇ 14ರ ವರೆಗೆ ಕರ್ನಾಟಕವೂ ಸೇರಿ ದೇಶದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಗುಡುಗು ಜತೆಗೆ ಗಾಳಿ-ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಕರ್ನಾಟಕದಲ್ಲಿ ಶನಿವಾರ ಅಪರಾಹ್ನ 2 ಗಂಟೆ ವೇಳೆಗೆ ಮಳೆ ಪ್ರಮಾಣ ಹೆಚ್ಚಾಗಬಹುದು ಎಂದು ಹೇಳಿರುವ ವಿಪತ್ತು ನಿರ್ವಹಣ ಕೇಂದ್ರದ ಅಧಿಕಾರಿಗಳು, ಬೆಳಗ್ಗೆಯೇ ಮತ ಚಲಾಯಿಸುವಂತೆ ತಿಳಿಸಿದ್ದಾರೆ.

ಹವಾಮಾನ ಇಲಾಖೆ ತಜ್ಞರ ಪ್ರಕಾರ, ಈಗಾಗಲೇ ದೇಶದ ಹಲವು ಕಡೆ ಶುರುವಾಗಿರುವ ಮುಂಗಾರು ಪೂರ್ವ ಮಳೆ ರಾಜ್ಯದಲ್ಲೂ ವಿಸ್ತರಣೆ ಯಾಗಲಿದೆ. ಇದು ಬೇಸಗೆ ಕಾಲದ ಮಳೆಯಾಗಿರು ವುದರಿಂದ ಅಪರಾಹ್ನ 2 ಅಥವಾ 3 ಗಂಟೆಗೆ ಶುರುವಾಗಬಹುದು.

ಬಿಸಿಲಿಗಾಗಿ ವಿಸ್ತರಿಸಿದ್ದರು
ಎಪ್ರಿಲ್‌ – ಮೇ ತಿಂಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆಯೋಗ ಈ ಬಾರಿ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಿತ್ತು. ಆದರೆ ಈಗ ರಾಜ್ಯದ ಹೆಚ್ಚಿನೆಡೆ ಮಳೆಯಾಗುತ್ತಿದ್ದು, ಎಲ್ಲೂ ಬಿಸಿಲಿನ ಅಬ್ಬರ ಇರದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಕ್ಷಗಳಿಂದಲೂ ಸಿದ್ಧತೆ 
ಒಂದು ವೇಳೆ ಶನಿವಾರ ಮಳೆ ತೀರಾ ಹೆಚ್ಚಿದಲ್ಲಿ ಅವರನ್ನು ಮತಗಟ್ಟೆಗೆ ಕರೆದು ತರುವ ಕೆಲಸವನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಳೆಯಿಂದಾಗಿ ಇದುವರೆಗೆ ನಡೆಸಿರುವ ಪ್ರಚಾರ, ಸಿದ್ಧತೆಗಳೆಲ್ಲವೂ ನಾಶವಾಗುವ ಸಾಧ್ಯತೆ ಇರುವುದರಿಂದ ಮತದಾರರ ದೂರವಾಣಿ ಸಂಖ್ಯೆ ಸಂಗ್ರಹಿಸಿಟ್ಟು ಅವರನ್ನು ಕರೆತರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Advertisement

ಕಾರಣವೇನು ? 
ಅರಬಿ ಸಮುದ್ರ ಮತ್ತು ಬಂಗಾಲ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಮೋಡಗಳನ್ನು ಸೆಳೆಯುತ್ತಿದೆ. ಹೀಗಾಗಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ವಾರಾಂತ್ಯದಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂಬುದು ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಕೇಂದ್ರದ ಅಧಿಕಾರಿಗಳ ಮುನ್ಸೂಚನೆ.

ಎಲ್ಲೆಲ್ಲ ಮಳೆ ನಿರೀಕ್ಷೆ ?
ದಕ್ಷಿಣ ಒಳನಾಡು ಪ್ರದೇಶ

ಬೆಂಗಳೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ.

ಮಲೆನಾಡು ಪ್ರದೇಶ
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಸುತ್ತಮುತ್ತಲ ಪ್ರದೇಶಗಳು.

Advertisement

Udayavani is now on Telegram. Click here to join our channel and stay updated with the latest news.

Next