Advertisement

ಮತ್ತೆ “ಲುಂಪಿ’ಚರ್ಮ ಸೋಂಕಿನ ಆತಂಕ : ಕರಾವಳಿಯಲ್ಲಿ ಮುನ್ನೆಚ್ಚರಿಕೆ ಲಸಿಕೆ ದಾಸ್ತಾನು

11:32 AM Sep 29, 2022 | Team Udayavani |

ಉಡುಪಿ : ಚರ್ಮ ಗಂಟು ರೋಗ (ಲುಂಪಿ) ಸೋಂಕಿಗೆ ದೇಶದ ವಿವಿಧ ಕಡೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಾನುವಾರುಗಳು ಅಸುನೀಗಿವೆ. ಕರಾವಳಿಯಲ್ಲಿ ಇದುವರೆಗೆ ಯಾವುದೇ ಪ್ರಕರಣ ವರದಿ ಯಾಗಿಲ್ಲವಾದರೂ ಪಶು ಸಂಗೋಪನೆ ಇಲಾಖೆ ಮುಂಜಾಗ್ರತೆ ವಹಿಸಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 2.58 ಲಕ್ಷ ಜಾನುವಾರುಗಳಿದ್ದು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ. ಬೇರೆ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದು ಆತಂಕಕ್ಕೆ ಕಾರಣ ವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಅಲ್ಪಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿತ್ತಾದರೂ ಸಕಾಲಿಕ ಚಿಕಿತ್ಸೆಯಿಂದ ಜಾನುವಾರುಗಳು ಶೀಘ್ರ ಗುಣಮುಖವಾಗಿದ್ದವು.

ರೋಗ ಲಕ್ಷಣಗಳು
ರೋಗಗ್ರಸ್ಥ ಜಾನುವಾರುಗಳಿಂದ ನೊಣ, ಸೊಳ್ಳೆ, ಉಣ್ಣಿಗಳ ಮೂಲಕ ಆರೋಗ್ಯಕರ ಜಾನುವಾರುಗಳಿಗೆ ಸೋಂಕು ಹರಡುತ್ತದೆ. ಜ್ವರ, ಶರೀರದಲ್ಲಿ ಅಲ್ಲಲ್ಲಿ ಸಿಡುಬಿನಂತಹ ಗುಳ್ಳೆಗಳು, ಗುಳ್ಳೆಗಳು ಒಡೆದ ಜಾಗದಲ್ಲಿ ಗುಳಿಗಳು, ಗಂತಿಗಳು ಕಂಡುಬರುವುದು, ಹಲವು ದಿನಗಳ ವರೆಗೆ ವಾಸಿಯಾಗದ ಗಾಯಗಳು, ದೇಹದ ಹಲವು ಭಾಗಗಳಿಗೆ ಸೋಂಕು ವ್ಯಾಪಿಸಿ ದೇಹ ಕುಂದುವುದು, ಹಾಲಿನ ಉತ್ಪಾದನೆ ಕಡಿಮೆಯಾಗುವುದು ಪ್ರಮುಖ ಲಕ್ಷಣಗಳು. ಸೂಕ್ತ ಚಿಕಿತ್ಸೆ ದೊರೆತಲ್ಲಿ ಎರಡು ವಾರದೊಳಗೆ ರೋಗ ಹತೋಟಿಗೆ ಬರುತ್ತದೆ ಎನ್ನುತ್ತಾರೆ ತಜ್ಞ ಪಶು ವೈದ್ಯರು.

2 ಸಾವಿರ ಲಸಿಕೆ ಲಭ್ಯ
ದ.ಕ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪ್ರಕರಣ ದೃಢಪಟ್ಟಿಲ್ಲ. ಆದರೂ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 2 ಸಾವಿರ ಲಸಿಕೆಗಳನ್ನು ತರಿಸಿಕೊಂಡಿದ್ದೇವೆ.
– ಡಾ| ಅರುಣ್‌ ಕುಮಾರ್‌ ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ, ದ.ಕ. ಜಿಲ್ಲೆ

10 ಸಾವಿರ ಲಸಿಕೆಗೆ ಇಂಡೆಂಟ್‌
ಈ ವರ್ಷ ಎಲ್ಲಿಯೂ ಚರ್ಮ ಗಂಟು ರೋಗ ಪ್ರಕರಣ ಜಾನುವಾರುಗಳಲ್ಲಿ ದೃಢಪಟ್ಟಿಲ್ಲ. ನಮ್ಮ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಂಡಿದ್ದೇವೆ. ರೋಗ ಲಕ್ಷಣ ಕಾಣಿಸಿದಲ್ಲಿ ತತ್‌ಕ್ಷಣ ಪಶುವೈದ್ಯರಿಗೆ ಮಾಹಿತಿ ನೀಡಿ. 10 ಸಾವಿರ ಲಸಿಕೆಗೆ ಈಗಾಗಲೆ ಇಂಡೆಂಟ್‌ ಹಾಕಿದ್ದೇವೆ. ಸೋಂಕು ಕಂಡುಬಂದರೆ ಒಂದೆರಡು ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ. ಬಾಧಿತ ಜಾನುವಾರುಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ.
– ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ, ಉಡುಪಿ ಜಿಲ್ಲೆ

Advertisement

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next