Advertisement

ಪ್ರವಾಹ ಹಾನಿ ಸಂಭವಿಸಿದಲ್ಲಿ ತಾತ್ಕಾಲಿಕ ಪರಿಹಾರಕ್ಕೆ ಸೀಮಿತ

04:06 PM Apr 14, 2023 | Team Udayavani |

ಸುಳ್ಯ: ಕಳೆದ ಮಳೆಗಾಲದಲ್ಲಿ ಭಾರೀ ನೆರೆಗೆ ಹಾನಿಗೊಳಗಾದ ಹರಿಹರ ಪಲ್ಲತ್ತಡ್ಕದಲ್ಲಿ ಕೇವಲ ತಾತ್ಕಾಲಿಕ ಕಾಮಗಾರಿ ನಡೆಸಿದ್ದು ಬಿಟ್ಟರೆ ಶಾಶ್ವತ ಕಾಮಗಾರಿ ಇನ್ನೂ ನಡೆದಿಲ್ಲ. ಇದು ಹಾಗೆಯೇ ಮುಂದುವರಿದರೆ ಈ ಮಳೆಗಾಲದಲ್ಲಿ ಹರಿಹರ ಪಲ್ಲತ್ತಡ್ಕದಲ್ಲಿ ಮತ್ತೆ ಹಾನಿಯಾಗುವ ಭೀತಿ ಎದುರಾಗಿದೆ.

Advertisement

2022ರ ಅಗಸ್ಟ್‌ ಮೊದಲಲ್ಲಿ ಭಾರೀ ಮಳೆಗೆ ಸುಳ್ಯ ತಾಲೂಕಿನ ಹಲವೆಡೆ ಹಾನಿ ಸಂಭವಿಸಿತ್ತು. ಹೊಳೆಯಲ್ಲಿ ಭಾರೀ ಪ್ರಮಾಣದ ನೆರೆ ನೀರು ಬಂದು ಹರಿಹರ ಪಲ್ಲತ್ತಡ್ಕ ಪೇಟೆ ನೆರೆ ನೀರಿನಿಂದ ಆವೃತಗೊಂಡಿತ್ತು. ಪೇಟೆಯ ಎರಡು ಅಂಗಡಿಗಳು ನೀರು ಪಾಲಾಗಿತ್ತು. ಬಾಳುಗೋಡು ಸಂಪರ್ಕದ ಸೇತುವೆಯಲ್ಲಿ ಮರ, ರೆಂಬೆ ಇತ್ಯಾದಿ ಸಿಲುಕಿಕೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು. ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಕುಸಿತ ಉಂಟಾಗಿತ್ತು.

ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ಹಾನಿ ಸಂಭವಿಸಿದ್ದರೂ, ಅಂದು ಅತೀ ಜರೂರಾಗಿ ತಾತ್ಕಾಲಿಕ ಪರಿಹಾರ ಕಾರ್ಯ ಮಾಡಲಾಗಿತ್ತು. ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಉಂಟಾಗಿದ್ದ ಕುಸಿತದ ಭಾಗಕ್ಕೆ ಗೋಣಿ ಚೀಲಕ್ಕೆ ಮರಳು ತುಂಬಿಸಿ ತಡೆ ಗೋಡೆ ನಿರ್ಮಿಸಲಾಗಿತ್ತು. ಶಾಶ್ವತ ಕಾರ್ಯ ನಡೆಯಲೇ ಇಲ್ಲ. ಅಳವಡಿಸಿದ ಗೋಣಿ ಚಿಲವೂ ಹರಿಯಲಾರಂಭಿಸಿದೆ.

ಹೇಳಿಕೆ ಕಾರ್ಯಗತ ಗೊಂಡಿಲ್ಲ
ತಾತ್ಕಾಲಿಕ ಪರಿಹಾರ ಕಾರ್ಯ ನಡೆಸಿದ ಬಳಿಕ ಮುಂದೆ ಅನುದಾನದಲ್ಲಿ ಶಾಶ್ವತ ಕೆಲಸ ಮಾಡುವ ಬಗ್ಗೆ ಅಂದು ಸಂಬಂಧಿಸಿದವರು ಮಾಹಿತಿ ನೀಡಿದ್ದರೂ ಅದು ಯಾವುದೂ ಕಾರ್ಯಗತ ಗೊಂಡಿಲ್ಲ. ಶೀಘ್ರ ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಮತ್ತೆ ಹೊಳೆಯಲ್ಲಿ ನೀರು ಹರಿದು ಬಂದಾಗ ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಕುಸಿತ ಸಂಭವಿಸಿ ಆ ಭಾಗದ ಸಂಪರ್ಕವೇ ಕಡಿತಗೊಳ್ಳುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬಾಳುಗೋಡು ಸಂಪರ್ಕ ಸೇತುವೆ ಬ್ರಿಟಿಷರ ಕಾಲದ ಸೇತುವೆಯಾಗಿದ್ದು, ಅದೂ ಶಿಥಿಲವಾಗಿದೆ ಎನ್ನಲಾಗಿದೆ. ಹರಿಹರ ಪಲ್ಲತ್ತಡ್ಕ ಪೇಟೆಗೆ ಹೊಂದಿಕೊಂಡು ಹರಿಯುತ್ತಿರುವ ಹೊಳೆ ಬದಿಗೆ ತಡೆಗೋಡೆ ನಿರ್ಮಾಣವಾಗಬೇಕಿದೆ. ಕುಸಿತಗೊಂಡಿದ್ದ ಸಂಪರ್ಕ ರಸ್ತೆಯಲ್ಲಿ ಗೋಣಿಚೀಲ ಇರಿಸಲಾದ ಸ್ಥಳದಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಾಣವಾಗಬೇಕಿದೆ. ಚುನಾವಣೆಯ ಹೆಸರಿನಲ್ಲಿ ಕಾಮಗಾರಿ ಬಾಕಿಯಿರಿಸಿದರೆ ಅಪಾಯ ನಿಶ್ಚಿತ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next