Advertisement

ಕೃಷಿ ನೀರಾವರಿ ಕೆರೆಯಲ್ಲಿ ಲಿಖಿತ್ ಈಜು ಅಭ್ಯಾಸ !

11:09 AM Apr 18, 2020 | Sriram |

ಬೆಂಗಳೂರು: ಒಲಿಂಪಿಕ್ಸ್‌ಗೆ ಆಯ್ಕೆಯಾಗಬಲ್ಲ ಸಾಮರ್ಥ್ಯ ಹೊಂದಿರುವ ರಾಜ್ಯದ ಖ್ಯಾತ ಈಜುಪಟು ಎಸ್‌.ಪಿ.ಲಿಖಿತ್ ಸೇರಿದಂತೆ 15 ಮಂದಿ ಈಜುಪಟುಗಳು ಲಾಕ್‌ಡೌನ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ವಿಟ್ಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

Advertisement

ಹೌದು, ಕೇವಲ ಎರಡು ದಿನಗಳ ಶಿಬಿರಕ್ಕೆ ಎಂದು ಬಂದವರು ಇದೀಗ ಎರಡು ತಿಂಗಳಿನಿಂದ ಕಾಡಿನ ಸಮೀಪ ಬಂಧಿಯಾಗಿದ್ದಾರೆ.

ಕೆರೆಯೇ ಈಜು ಕೇಂದ್ರ
ಕೋಚ್‌ ಪಾರ್ಥ ವಾರಣಾಸಿ ಲಿಖೀತ್‌ ಅವರನ್ನು ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದಾರೆ. ಫೆಬ್ರವರಿಯಲ್ಲಿ ಹೆಚ್ಚುವರಿ ತರಬೇತಿಗಾಗಿ ಅವರ ಹುಟ್ಟೂರಾದ ವಿಟ್ಲದ ಅಡ್ಯನಡ್ಕದಲ್ಲಿನ ತಮ್ಮ ಕೃಷಿ ಭೂಮಿಗೆ ಬೆಂಗಳೂರಿನಿಂದ 15 ಮಂದಿ ವಿವಿಧ ವಯೋಮಿತಿ ಈಜು ಪಟುಗಳ ತಂಡವನ್ನು ಕರೆದುಕೊಂಡು ಹೋಗಿದ್ದರು. ಅವರಲ್ಲಿ 21 ವರ್ಷದ ಎಸ್‌.ಪಿ.ಲಿಖೀತ್‌ ಕೂಡ ಒಬ್ಬರು.

ಎರಡು ದಿನಗಳ ತರಬೇತಿ ಬಳಿಕ ಇನ್ನೇನು ಮತ್ತೆ ಬೆಂಗಳೂರಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಕೋವಿಡ್ 19 ಮಹಾಮಾರಿ ಸೋಂಕಿನ ಸುದ್ದಿ ಕೇಳಿ ಎಲ್ಲ ಅಲ್ಲೇ ಉಳಿದುಕೊಂಡರು. ಕೆಲ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದೆಂದು ಹಳ್ಳಿಯಲ್ಲಿಯೇ ಖುಷಿಪಡಲು ಅವರೆಲ್ಲ ನಿಂತರು. ಆದರೆ ಕೋವಿಡ್ 19 ಸೋಂಕಿನ ಪ್ರಮಾಣ ಏರಿಕೆಯಾಗಿದ್ದರಿಂದ ಕೇಂದ್ರ ಸರಕಾರ ಲಾಕ್‌ಡೌನ್‌ ಘೋಷಿಸಿತು. ಅಲ್ಲಿಂದ ಯಾರಿಗೂ ವಾಪಸ್‌ ಬೆಂಗಳೂರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಈ ವೇಳೆ ಕೋಚ್‌ ಪಾರ್ಥ ವಾರಣಾಸಿ ಸುಮ್ಮನೆ ಕುಳಿತಿಲ್ಲ, ತಮ್ಮ ಕೃಷಿಗೆ ನೀರುಣಿಸುವ ಕೆರೆಯನ್ನೇ ಈಜುಕೊಳವಾಗಿ ಮಾರ್ಪಡಿಸಿ ಈಜು ಪಟುಗಳ ತರಬೇತಿಗೆ ತೊಂದರೆಯಾಗದಂತೆ ನೋಡಿಕೊಂಡು ಲಾಕ್‌ಡೌನ್‌ ಸಮಯ ವ್ಯರ್ಥವಾಗದಂತೆ ನೋಡಿಕೊಂಡಿದ್ದಾರೆ.

“ಯಾವುದೇ ಆತಂಕವಿಲ್ಲ’
ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಲಿಖೀತ್‌ ಪ್ರತಿಕ್ರಿಯಿಸಿದ್ದು ಹೀಗೆ, “ನನ್ನ ಮನೆ ಇರುವುದು ಬೆಂಗಳೂರಿನ ಗಿರಿನಗರದಲ್ಲಿ, ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದೇನೆ, ಚಿಕ್ಕವನಾಗಿದ್ದಾಗಿನಿಂದಲೇ ನಾನು ಈಜು ತರಬೇತಿ ಆರಂಭಿಸಿರುವುದರಿಂದ ಮನೆಯಲ್ಲಿ ಇದ್ದದ್ದು ತೀರ ಅಪರೂಪ, ಹೀಗಾಗಿ ನನ್ನ ಬಗ್ಗೆ ಮನೆಯವರು ಹೆಚ್ಚಿನ ಯೋಚನೆ ಮಾಡುವುದಿಲ್ಲ, ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿರುವುದರಿಂದ ನನ್ನ ತಂದೆ-ತಾಯಿಗೆ ಹೆಚ್ಚಿನ ಆತಂಕವಿದೆ. ದಿನಕ್ಕೆ ಒಂದು ಸಲ ಫೋನ್‌ ಮಾಡಿ ವಿಚಾರಿಸುತ್ತಾರೆ. ಇಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಬೇಸರವಿಲ್ಲ, ನಮ್ಮ ಕೋಚ್‌ ನಮಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಅವರ 100 ಎಕರೆ ಕೃಷಿ ಭೂಮಿಯಲ್ಲೇ ಮಾಡಿಕೊಟ್ಟಿದ್ದಾರೆ. ಕೋವಿಡ್ 19 ಇರುವುದರಿಂದ ಅವರು ನಮಗೆ ಹೊರಗೆಲ್ಲೂ ಹೋಗಲು ಬಿಡುವುದಿಲ್ಲ, ಏನೇ ಬೇಕಿದ್ದರೂ ಮನೆಗೆ ಅವರೇ ತಂದುಕೊಡುತ್ತಾರೆ, ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಇಲ್ಲಿನ ಹಸಿರ ವಾತಾವರಣ ಮನಸ್ಸಿಗೆ ತುಂಬಾ ಹಿಡಿಸಿದೆ, ಕಾಡಿನ ಸಮೀಪ ಇರುವುದರಿಂದ ವಿವಿಧ ಬಗೆಯ ಪಕ್ಷಿ, ಚೇಳು, ನವಿಲು, ಹಾವು ಇತ್ಯಾದಿಗಳನ್ನು ನೋಡಿ ಸಂಭ್ರಮ ಪಡುತ್ತಿದ್ದೇವೆ’ ಎಂದರು.

Advertisement

ಲಿಖಿತ್ ಗೆ ಒಲಿಂಪಿಕ್ಸ್‌ ಅರ್ಹತೆಯ ಭರವಸೆ
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುವ ಭರವಸೆಯನ್ನು ಲಿಖಿತ್ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಒಲಿಂಪಿಕ್ಸ್‌ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇದರಿಂದ ನನಗೆ ಅರ್ಹತೆ ಪಡೆದುಕೊಳ್ಳಲು ಅವಕಾಶ ಸಿಕ್ಕಿದೆ. 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ 59.93 ಸೆಕೆಂಡ್ಸ್‌ ನಲ್ಲಿ ಗುರಿ ತಲುಪಿದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳಬಹುದು. ಸದ್ಯ ನನ್ನ ಟೈಮಿಂಗ್ಸ್‌ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 1 ನಿಮಿಷ 2.02 ಸೆಕೆಂಡ್ಸ್‌ ಆಗಿದೆ. ಇನ್ನು ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ ಎಂದರು. ಲಿಖೀತ್‌ ಕಳೆದ ವರ್ಷ ಮಲೇಷ್ಯಾ ಈಜು ಕೂಟದಲ್ಲಿ ಪದಕ ಗೆದ್ದಿದ್ದರು ಜತೆಗೆ ಹಲವಾರು ರಾಜ್ಯ, ರಾಷ್ಟ್ರೀಯ ಕೂಟದಲ್ಲಿ ಮಿಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next