Advertisement

BJP ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ರೀತಿ ಅಧಿಕಾರ ದುರುಪಯೋಗಪಡಿಸಿಕೊಂಡಿದೆ: ಮಾಯಾವತಿ

09:14 AM Jan 16, 2020 | Team Udayavani |

ಲಕ್ನೋ: ಉತ್ತರಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದಂತೆ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇರದಿಂದ ಜನಸಾಮಾನ್ಯರು ತೊಂದರೆಗೊಳಗಾಗುವಂತಾಗಿದೆ ಎಂದು ಬಹುಜನ್ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.

Advertisement

ಬುಧವಾರ 64ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಯಾವತಿ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಬಿಎಸ್ಪಿ ಪ್ರತಿಭಟನೆ ನಡೆಸಿಲ್ಲ ಎಂದು ಕಾಂಗ್ರೆಸ್ ಪಕ್ಷ ಸುಳ್ಳು ಆರೋಪ ಹೊರಿಸುತ್ತಿದೆ ಎಂದು ದೂರಿದರು.

ದೇಶದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್, ಬಿಜೆಪಿ ರಾಜಕೀಯ ಲಾಭಕ್ಕಾಗಿ ಮತ್ತು ವೈಯಕ್ತಿಕ ದುರಾಸೆಯಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಇದರಿಂದಾಗಿ ಸಾಂವಿಧಾನಿಕವಾಗಿ ಜನಸಾಮಾನ್ಯರಿಗೆ ಸಿಕ್ಕ ಅಧಿಕಾರಕ್ಕೆ ಬೆದರಿಕೆಯೊಡ್ಡುವಂತಾಗಿದೆ ಎಂದು ಮಾಯಾವತಿ ಹೇಳಿದರು.

ಬಿಜೆಪಿ ಸಾರ್ವಜನಿಕ ಅಭಿವೃದ್ಧಿ, ಆರ್ಥಿಕತೆ ಬಗ್ಗೆ ಬೇಜವಾಬ್ದಾರಿ ನಡೆ ಅನುಸರಿಸುತ್ತಿದೆ. ಬಡತನ, ಅನಕ್ಷರಸ್ಥತೆ, ನಿರುದ್ಯೋಗ, ಬೆಲೆ ಏರಿಕೆ ಹೆಚ್ಚಳವಾಗತೊಡಗಿದೆ ಎಂದು ಆರೋಪಿಸಿದರು. ಬಿಜೆಪಿ ಕೂಡಾ ಇದೀಗ ಕಾಂಗ್ರೆಸ್ ಹಾದಿಯನ್ನೇ ಹಿಡಿದಿದೆ. ಸಂವಿಧಾನ ದುರ್ಬಲ ವರ್ಗದವರನ್ನು ರಕ್ಷಿಸುವ ಆಶಯ ಹೊಂದಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಇವರು ಅದನ್ನು ಮರೆತುಬಿಟ್ಟಿದ್ದಾರೆ. ದೇಶ ಹೇಗೆ ಅಭಿವೃದ್ಧಿ ಹೊಂದಲು ಸಾಧ್ಯ? ಇದರಿಂದಾಗಿಯೇ ದೇಶ ಇಂದು ತಪ್ಪು ಕಾರಣಗಳಿಂದಾಗಿಯೇ ಹೆಚ್ಚು ಪ್ರಚಾರದಲ್ಲಿದೆ ಎಂದು ಮಾಯಾವತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next