Advertisement

ಬದುಕೇ ಮುಳುಗೋಯ್ತು

12:32 PM Aug 11, 2019 | Suhan S |

ಹಾವೇರಿ: ಮನೆಯೊಳಗೆ ನೀರು. ಮನೆ ಸುತ್ತಲೂ ನೀರು. ಓಣಿಯಲ್ಲಿಯೂ ನೀರು. ಊರೊಳಗೆ, ಊರ ಹೊರಗೆ ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ನೀರೇ ನೀರು. ಊರೊಳಗೆ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಪ್ಪ, ಹಗ್ಗದ ಸಹಾಯದಲ್ಲಿಯೇ ಸಂಚರಿಸುವ ಸ್ಥಿತಿ

Advertisement

-ಇದು ಅಕ್ಷರಶಃ ನೀರಲ್ಲಿ ಮುಳುಗಿ ನಡುಗಡ್ಡೆಯಂತಾಗಿರುವ ತಾಲೂಕಿನ ಕೋಣನತಂಬಗಿ ಗ್ರಾಮದ ದುಸ್ಥಿತಿ.

ಊರಿನ ಸಂತ್ರಸ್ತರು, ಜಾನುವಾರುಗಳ ಸಹಿತ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿದ್ದಾರೆ. ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ನದಿಯಲ್ಲಿನ ರಭಸ ಮಾತ್ರ ಕಡಿಮೆಯಾಗಿರಲಿಲ್ಲ. ನದಿ ಒಂದೇ ಸಮನೆ ತುಂಬಿ ಹರಿಯುವ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತಲೇ ಇದೆ.

ಊರ ಹೊಲವೆಲ್ಲ ದಾಟಿ ಗ್ರಾಮಕ್ಕೆ ನುಗ್ಗಿರುವ ನೀರು ನಿಂತಲ್ಲೇ ನಿಂತಿದ್ದು ಮನೆಗಳು, ಕಟ್ಟಡಗಳ ಗೋಡೆಗಳು ನೀರಿಗೆ ನೆನೆದು ಒಂದೊಂದಾಗಿ ಕುಸಿಯುತ್ತಿವೆ. ಇದೊಂದೇ ಗ್ರಾಮದಲ್ಲಿ 170ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ನೀರು ಆವರಿಸಿರುವ ಮನೆಯೊಳಗೆ ಜನರು ಹೋಗಲು ಬೆದರುತ್ತಿದ್ದಾರೆ. ಒಂದಿಷ್ಟು ಜನ ಶನಿವಾರ ಧೈರ್ಯ ಮಾಡಿ ಮನೆಯೊಳಗೆ ಪ್ರವೇಶಿಸಿ ನೀರಿನಿಂದ ಹಾಳಾಗಬಹುದಾದ ಒಂದಿಷ್ಟು ಸರಕು, ಸರಂಜಾಮುಗಳನ್ನು ಹೊರ ತೆಗೆದು ಸುರಕ್ಷಿತ ಸ್ಥಳದಲ್ಲಿರುವ ಪರಿಚಯಸ್ಥರು, ಸಂಬಂಧಿಕರ ಮನೆಗೆ ಸ್ಥಳಾಂತರಿಸುತ್ತಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಘೇರಾವ್‌ ಹಾಕಿದ ನಂತರ ಶನಿವಾರ ಮೂರು ತೆಪ್ಪಗಳನ್ನು ಜಿಲ್ಲಾಡಳಿತ ಪೂರೈಸಿದೆ. ಆ ತೆಪ್ಪಗಳಿಂದ ಶನಿವಾರ ಮನೆಯಲ್ಲಿಯೇ ಉಳಿದಿದ್ದ ಗ್ರಾಮಸ್ಥರು ಪಾತ್ರೆಗಳನ್ನು ಹೊರತರುತ್ತಿದ್ದಾರೆ.

ವರದಾ ನದಿಗೆ ನೆರೆ ಬಂದರೆ ನದಿ ಅಂಚಿನ ಗ್ರಾಮಗಳ ಒಂದು ಭಾಗದಲ್ಲಿ ನೆರೆ ತೊಂದರೆ ಎದುರಾಗುತ್ತದೆ. ಆದರೆ, ಇಡೀ ಕೋಣನತಂಬಗಿ ಗ್ರಾಮವನ್ನು ವರದಾ ನದಿ ಸುತ್ತುವರಿದಿರುವುದರಿಂದ ಪ್ರವಾಹ ಬಂದರೆ ಇಡೀ ಊರೊಳಗೆ ನೆರೆ ಉಕ್ಕಿ ಎಲ್ಲ ಸಂಪರ್ಕ ಕಳೆದುಕೊಂಡು ದ್ವೀಪವಾಗುವುದು ಈ ಗ್ರಾಮದ ವಿಶೇಷ. ಕೋಣನತಂಬಗಿ ಗ್ರಾಮದಲ್ಲಿ ಅಂದಾಜು ನಾಲ್ಕು ಸಾವಿರ ಜನಸಂಖ್ಯೆಯಿದ್ದು ಗ್ರಾಮದ ಕ್ವಾಟಿ ಓಣಿ, ಹರಿಜನಕೇರಿ ಹಾಗೂ ಹೊರಕೇರಿ ಸಂಪೂರ್ಣ ಜಲಾವೃತವಾಗಿವೆ. 200ಕ್ಕೂ ಹೆಚ್ಚು ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ. ಊರಿನ ಸೊಸೈಟಿ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಜನರೊಂದಿಗೆ ಎತ್ತು,ಎಮ್ಮೆ, ಹಸು, ಮೇಕೆ ಸೇರಿದಂತೆ 50ಕ್ಕೂ ಹೆಚ್ಚು ಜಾನುವಾರುಗಳು ಸಹ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಗ್ರಾಮದ ಉಳಿದ ಕಡೆಗಳಲ್ಲಿಯೂ ನೀರು ನುಗ್ಗಿದ್ದು, ಜನಜೀವನ ದುಸ್ತರವಾಗಿದೆ.

Advertisement

ನದಿಗುಂಟ ನೆರೆ ಹಾವಳಿ: ವರದಾ ನದಿ ದಂಡೆಯಲ್ಲಿರುವ ಹಾವೇರಿ ತಾಲೂಕಿನ ಕೋಣನತಂಬಗಿ, ಗುಯಲಗುಂದಿ, ಕೆಸರಳ್ಳಿ, ಮಣ್ಣೂರು, ಚೆನ್ನೂರು, ಕಿತ್ತೂರ, ಮರಡೂರು, ಅಕ್ಕೂರ, ಹಾಲಗಿ, ಮರೋಳ, ನದಿನೀರಲಗಿ, ಕೊಡಬಾಳ, ಹಿರೆಮಗದೂರ, ಕಲಕೋಟಿ, ಸವಣೂರು ತಾಲೂಕಿನ ಹಲಸೂರ, ಮನ್ನಂಗಿ, ಚಿಕ್ಕಮರಳಿಹಳ್ಳಿ, ಮಂಟಗಣಿ, ತೊಂಡೂರ, ಡೊಂಬರಮತ್ತೂರ, ಮೆಳ್ಳಾಗಟ್ಟಿ, ಮಣ್ಣೂರು ಹಾಗೂ ಹಾನಗಲ್ಲ ತಾಲೂಕಿನ ಮಲಗುಂದ, ಕೂಡಲ, ಹರವಿ ಗ್ರಾಮಗಳು ಸಹ ನೆರೆಗೊಳಗಾಗಿವೆ. ಈ ಗ್ರಾಮಗಳಲ್ಲಿಯೂ ಜಮೀನು ಅಷ್ಟೇಅಲ್ಲದೇ ಜನವಸತಿ ಪ್ರದೇಶದಲ್ಲಿಯೂ ನೀರು ನಿಂತಿದ್ದು, ಮನೆ ಕುಸಿತ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗ್ರಾಮಸ್ಥರ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ.

ಕೋಣನತಂಬಗಿ ಗ್ರಾಮವನ್ನು ವರದಾ ನದಿ ಸುತ್ತುವರಿದಿದೆ. ಹೀಗಾಗಿ ನೆರೆ ಬಂತೆಂದರೆ ಇಡೀ ಊರು ದ್ವೀಪದಂತಾಗುತ್ತದೆ. ಗ್ರಾಮದ ದ್ವೀಪ ಕ್ವಾಟಿ ಓಣಿಯಿಂದ ಹರಿಜನ ಕೇರಿ ವರೆಗೆ ಎತ್ತರದ ತಡೆಗೋಡೆ ನಿರ್ಮಿಸಿದರೆ ನೆರೆಯಿಂದಾಗಬಹುದಾದ ಜೀವ ಹಾನಿಯನ್ನಾದರೂ ತಡೆಯಬಹುದು. ನೆರೆಪೀಡಿತ ಗ್ರಾಮ ಇದಾಗಿರುವುದರಿಂದ ನವಗ್ರಾಮ ನಿರ್ಮಿಸುವ ವ್ಯವಸ್ಥೆಯೂ ಆಗಬೇಕು. ಆಗ ಮಾತ್ರ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗುತ್ತದೆ.•ಗಂಗಯ್ಯ ಕುಲಕರ್ಣಿ, ಗ್ರಾಮದ ಪ್ರಮುಖ

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next