Advertisement

ಅಭಯಾರಣ್ಯಕ್ಕೆ ಜೀವಕಳೆ; ಎಲ್ಲೆಲ್ಲೂ ಪ್ರಾಣಿ-ಪಕ್ಷಿಗಳ ಕಲರವ

09:49 PM Jun 16, 2019 | Lakshmi GovindaRaj |

ಗುಂಡ್ಲುಪೇಟೆ: ಕಿಡಿಗೇಡಿಗಳ ಬೆಂಕಿಯ ಕಿಡಿಗೆ ಧಗಧಗಿಸಿದ್ದ ಬಂಡೀಪುರ ಅಭಯಾರಣ್ಯ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ರಾಷ್ಟ್ರದ ಅತ್ಯುನ್ನತ ಉದ್ಯಾನವನಗಳಲ್ಲಿ ಒಂದಾದ ಬಂಡೀಪುರ ಅಭಯಾರಣ್ಯದಲ್ಲಿ ಈಗ ಜೀವಕಳೆ ದಿನೇ ದಿನೇ ಹೆಚ್ಚುತ್ತಿದೆ.

Advertisement

ಕಳೆದ ಒಂದು ತಿಂಗಳಿನಿಂದ ಬೀಳುತ್ತಿರುವ ಮಳೆಗೆ ಮೈಯೊಡ್ಡಿ ನಿಂತಿರುವ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಈಗ ಎಲ್ಲೆಲ್ಲೂ ಅಚ್ಚ ಹಸಿರಿನ ಮೈಸಿರಿ. ಸಮೃದ್ಧಿಯಾಗಿರುವ ತುಂಬಿರುವ ಕೆರೆ ಕಟ್ಟೆಗಳು. ಸ್ವಚ್ಚಂದವಾಗಿ ವಿಹರಿಸುವ ವನ್ಯ ಜೀವಿಗಳು ಮತ್ತು ಪಕ್ಷಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊಸದಾಗಿ ಚಿಗುರಿದ ಹುಲ್ಲನ್ನು ಮೇಯಲು ಹರಿಣಗಳು ಹಾಗೂ ಆನೆಗಳು ಹಿಂಡು-ಹಿಂಡಾಗಿ ರಸ್ತೆ ಬದಿಯಲ್ಲಿ ಕಂಡುಬರುತ್ತಿದ್ದು ಪ್ರವಾಸಿಗರಲ್ಲಿ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಸಂತಸವನ್ನುಂಟು ಮಾಡುತ್ತಿವೆ.

ಪ್ರತಿ ದಿನವೂ ಸಾವಿರಾರು ಪ್ರವಾಸಿಗರು ಆಗಮಿಸುವ ಈ ಉದ್ಯಾನವನದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ಎದ್ದು ಕಾಣುತ್ತಿದೆ. ಅದರೊಂದಿಗೆ ಬೆಳಗ್ಗೆ ಹಾಗೂ ಸಂಜೆಯಾಗುತ್ತಿದ್ದಂತೆಯೇ ರಸ್ತೆಯ ಬದಿಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯಲು ಆಗಮಿಸುವ ಚುಕ್ಕಿ ಜಿಂಕೆಯನ್ನು ನೋಡಲು ಪ್ರವಾಸಿಗರು ಬಂಡೀಪುರಕ್ಕೆ ಮತ್ತೆ ಮತ್ತೆ ಬರಬೇಕು ಎನ್ನಿಸುವಂತಿದೆ.

ನೂರಾರು ಸಂಖ್ಯೆಯಲ್ಲಿ ರಸ್ತೆಯ ಪಕ್ಕದಲ್ಲೇ ತಮ್ಮ ಸಂಸಾರ ಸಮೇತರಾಗಿ ಆಗಮಿಸುವ ಚುಕ್ಕೆ ಜಿಂಕೆಗಳ ಅಂದವನ್ನು ಕಣ್ತುಂಬಿಸಲು ಹಾಗೂ ತಮ್ಮ ಮೊಬೈಲುಗಳಲ್ಲಿ ಅವುಗಳ ಫೋಟೋ ಸೆರೆಡಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಒಮ್ಮೊಮ್ಮೆ ಮರದ ಎಲೆಗಳನ್ನು ಎಟುಕಿಸಲು ಮುಂಗಾಲೆತ್ತಿ ಎಗರುವ ದೃಶ್ಯ ರಮಣೀಯವಾಗಿದೆ. ಆಹಾರ ತಿನ್ನಲು ಬರುವ ಸಹಪಾಠಿಯೊಡನೆ ಕಾಲುಕೆರೆದು ಜಗಳಕ್ಕೆ ಬೀಳುವಾಗ ಅವುಗಳ ಕೊಂಬುಗಳ ಕಟಕಟ ಶಬ್ಧ ಕೋಲಾಟವನ್ನು ನೆನಪಿಸುತ್ತದೆ.

Advertisement

ಬೆಂಕಿಯಿಂದ ಒಣಗಿ ನಿಂತಿದ್ದ ಮರಗಿಡಗಳು ಈ ಬಾರಿ ಉತ್ತಮ ಮಳೆಯಿಂದಾಗಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ಎತ್ತ ನೋಡಿದರೂ ದಟ್ಟ ಹಸಿರಿನ ಹೊದಿಕೆ ಹೊದ್ದ ಬಂಡೀಪುರ ವನ್ಯ ಜೀವಿ ಪ್ರಿಯರಲ್ಲಿ ಮಂದಹಾಸ ಮೂಡಿಸುತ್ತಿದೆ.

ಕಾಡೆಲ್ಲಾ ಸುಟ್ಟುಹೋಗಿತ್ತು: ಕಳೆದ ಫೆಬ್ರವರಿಯಲ್ಲಿ ಕಿಡಿಗೇಡಿಗಳ ಕಿಚ್ಚಿಗೆ ಮೂವತ್ತು ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಬೂದಿಯಾಗಿತ್ತು. ಎಲ್ಲೆಲ್ಲೂ ಒಣಗಿದ ಮತ್ತು ಅರ್ಧಂಬರ್ಧ ಬೆಂದ ಮರಗಳು ಕಾಣಿಸುತ್ತಿದ್ದವು. ಆದರೆ, ಈಗ ಅರಣ್ಯದ ಈ ಹಿಂದಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ 874ಕ್ಕೂ ಹೆಚ್ಚು ಕೆರೆ ಕಟ್ಟೆಗಳು ಈ ಬಾರಿಯ ಉತ್ತಮವಾದ ಮಳೆಯಿಂದ ತುಂಬಿ ತುಳುಕುತ್ತಿವೆ. ಈ ಮೂಲಕ ವನ್ಯ ಜೀವಿಗಳ ನೀರಿನ ತೊಂದರೆ ನೀಗಿದಂತಾಗಿದೆ. ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರದ ಅರಣ್ಯ ಮತ್ತು ಬೆಟ್ಟ ಗುಡ್ಡಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
-ಬಾಲಚಂದ್ರ, ಬಂಡೀಪುರ ಹುಲಿಯೋಜನೆ ನಿರ್ದೇಶಕರು

ಬಂಡೀಪುರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಾಣದಷ್ಟು ಸಂಖ್ಯೆಯಲ್ಲಿ ಜಿಂಕೆ, ಆನೆ, ನವಿಲು, ಕಾಡುಹಂದಿ, ಚಿರತೆ ಹಾಗೂ ಹುಲಿಗಳು ಕಂಡುಬರುತ್ತಿವೆ. ಸಫಾರಿ ಹಾಗೂ ಮಧುಮಲೆ ಮಾರ್ಗದಲ್ಲಿಯೂ ಹೆಚ್ಚಿನ ವನ್ಯಜೀವಿಗಳು ದರ್ಶನ ನೀಡುತ್ತಿದ್ದು ಬಂಡೀಪುರ ಉದ್ಯಾನವನದ ಹಿರಿಮೆ ಸಾರುತ್ತಿದೆ. ಡಿಸೆಂಬರ್‌ನಲ್ಲಿ ಬಂಡೀಪುರವನ್ನು ನೋಡುವುದೇ ಆನಂದ.
-ಜಿ.ಎಸ್‌.ಗಣೇಶ್‌ ದರ್ಶನ್‌, ಪರಿಸರ ಪ್ರೇಮಿ, ಗುಂಡ್ಲುಪೇಟೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next