Advertisement

ಜೀವ ಉಳಿಸುವ ರಕ್ತ ವಿದಳನ ಘಟಕ

12:57 PM Oct 16, 2019 | Suhan S |

ಹಾವೇರಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಕ್ತ ವಿದಳನ ಘಟಕ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಂಡಿದ್ದು ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾದಂತಾಗಿದೆ.

Advertisement

ಜಿಲ್ಲೆಯಲ್ಲಿ 2016ರಲ್ಲಿ ರಕ್ತ ನಿಧಿ ಕೇಂದ್ರ ಆರಂಭವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿತ್ತು. ಇದೀಗ ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿ ಅಂದಾಜು 56ಲಕ್ಷ ರೂ. ವೆಚ್ಚದಲ್ಲಿ ರಕ್ತ ವಿದಳನ ಘಟಕ ಸ್ಥಾಪಿಸಲಾಗಿದೆ.

ರಕ್ತ ವಿದಳನ ಘಟಕ ಮಂಜೂರು ಮಾಡುವಂತೆ 2017ರಲ್ಲಿಯೇ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 2019ಕ್ಕೆ ಸರಕಾರದಿಂದ ಅನುಮತಿ ಸಿಕ್ಕಿದ್ದು, ಆಗಸ್ಟ್‌ 15ರಿಂದ ರಕ್ತ ವಿದಳನ ಘಟಕ ಸೇವೆ ನೀಡುತ್ತಿದೆ. ಘಟಕದಲ್ಲಿ ವೈದ್ಯರು, ಮೆಡಿಕಲ್‌ ಆಫೀಸರ್‌, ನರ್ಸ್‌, ವಾಹನ ಚಾಲಕ, ಸೇವಕ, ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 11ಜನರು ಕೆಲಸ ನಿರ್ವಹಿಸುತ್ತಿದ್ದಾರೆ.

ರಕ್ತ ವಿದಳನ ಘಟಕದಿಂದ ಬಿಪಿಎಲ್‌, ಥೆಲಾಸೆಮಿಯಾ, ಹಿಮೋಫೀಲಿಯಾ, ಎಚ್‌ಐವಿ, ಜೆಎಸ್‌ಎಸ್‌ಕೆ ರೋಗಿಗಳಿಗೆ ಉಚಿತ ರಕ್ತ ವಿತರಿಸಲಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉಳಿದ ರೋಗಿಗಳಿಗೆ ಸರಕಾರ ಆದೇಶದನ್ವಯ 350 ರೂ., ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ (ನ್ಯಾಟ್‌ ಟೆಸ್ಟ್‌ ಶುಲ್ಕದೊಂದಿಗೆ)2050 ರೂ., ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಇದ್ದರೂ ಏಲಿಜಾ ಟೆಸ್ಟ್‌ ಶುಲ್ಕ 995 ರೂ. ಇದೆ.

ಏನಿದು ರಕ್ತ ವಿದಳನ?: ರಕ್ತದಲ್ಲಿ ನಾಲ್ಕು ಘಟಕಗಳಿರುತ್ತವೆ. ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮತ್ತು ಪ್ಲೇಟ್‌ಲೆಟ್‌. ದಾನಿಗಳಿಂದ ಸಂಗ್ರಹಿಸುವ ರಕ್ತದಲ್ಲಿರುವ ಈ ನಾಲ್ಕು ಅಂಶಗಳನ್ನು ಪ್ರತ್ಯೇಕಿಸುವ ಘಟಕವೇ ರಕ್ತ ವಿದಳನ ಘಟಕವಾಗಿದೆ. ರಕ್ತದ ಕಣಗಳನ್ನು ಬೇರ್ಪಡಿಸಿ ರೋಗಿಗಳಿಗೆ ಬೇಕಾದಂತಹ ಅಗತ್ಯ ಕಣಗಳನ್ನು ಒದಗಿಸುವ ಕಾರ್ಯವನ್ನು ರಕ್ತ ವಿದಳನ ಘಟಕ ಮಾಡುತ್ತದೆ. ಒಂದು ಯುನಿಟ್‌ ರಕ್ತದಿಂದ ನಾಲ್ಕು ರೋಗಿಗಳಿಗೆ ಅನುಕೂಲವಾಗುತ್ತದೆ. ರಕ್ತದಿಂದ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದ್ದು, ಪ್ಲೇಟ್‌ಲೆಟ್‌ 5 ದಿನ ಉಳಿಯುತ್ತದೆ.

Advertisement

ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣಗಳನ್ನು 35 ದಿನಗಳವರೆಗೆ, ಪ್ಲಾಸ್ಮಾವನ್ನು ಒಂದು ವರ್ಷದವರೆಗೂ ಕೆಡದಂತೆ ಇಡಬಹುದಾಗಿದೆ. ರಕ್ತ ವಿದಳನ ಘಟಕಕ್ಕೆ ಎಸ್‌ಡಿಪಿ ಯಂತ್ರ, ಡೇ ಕೇರ್‌ ಸೆಂಟರ್‌, ಜಲ್‌ ಯಂತ್ರ ಸೇರಿದಂತೆ ಪ್ರತ್ಯೇಕ ರಕ್ತ ವಾಹನ ಅವಶ್ಯಕತೆ ಇದೆ. ಇವುಗಳಿಗೆ ದೊಡ್ಡ ಮಟ್ಟದ ಅನುದಾನ ಬೇಕಿರುವುದರಿಂದ ಇದಕ್ಕೆ ಸಹಾಯ ಮಾಡುವ ದಾನಿಗಳು ಮುಂದೆ ಬರಬೇಕು ಎನ್ನುತ್ತಾರೆ ರಕ್ತ ವಿದಳನ ಘಟಕದ ಪ್ರಯೋಗಾಲಯ ತಂತ್ರಜ್ಞ ಬಸವರಾಜ ಕಮತದ.

ಜಿಲ್ಲೆಯ ಜನರ ಬೇಡಿಕೆಯಂತೆ ಜಿಲ್ಲಾಸ್ಪತ್ರೆಯಲ್ಲಿ ರಕ್ತ ವಿದಳನ ಘಟಕ ಆರಂಭಿಸಲಾಗಿದೆ. ರಕ್ತ ಹೀನತೆಯಿಂದ ಬಳಲುವ ರೋಗಿಗಳಿಗೆ ಇದು ಹೆಚ್ಚು ಉಪಯುಕ್ತ. ರಕ್ತದಾನಿಗಳು ಮುಂದೆ ಬಂದರೆ ಉತ್ತಮ ಸೇವೆ ನೀಡಲು ಅನುಕೂಲವಾಗಲಿದೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಜನರು ಮುಂದೆ ಬಂದರೆ ನೂರಾರು ಜೀವಗಳನ್ನು ಉಳಿಸಬಹುದು.-ಬಸವರಾಜ ತಳವಾರ, ವ್ಯವಸ್ಥಾಪಕರು, ರಕ್ತ ವಿದಳನ ಘಟಕ.

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next