Advertisement

ರಾಜಸೀಮೆಯ ಮುಂದೆ ಕಂಪ್ನಿ ಸೀಮೆ ಸಪ್ಪೆ!

07:44 PM Dec 22, 2020 | Suhan S |

ಈ ಘಟನೆ ಕುರಿತು ಹೇಳಿದವರು, ವಾರದ ಹಿಂದೆಯಷ್ಟೇ ನಮ್ಮನ್ನು ಅಗಲಿದ ಹಿರಿಯ ವಿಜ್ಞಾನಿ ರೊದ್ದಂ ನರಸಿಂಹ. ರೊದ್ದಂ ಅವರದು ತೆಲುಗು ಮೂಲದ ಬ್ರಾಹ್ಮಣ ಮನೆತನ. ರೊದ್ದಂ ಎಂಬುದು ತೆಲುಗು ಪ್ರಾಂತ್ಯದ ಸಣ್ಣ ಊರು. ನರಸಿಂಹ ಅವರ ಹಿರೀಕರು ಅ ಭಾಗದಲ್ಲಿ ಪ್ರಕಾಂಡ ಪಂಡಿತರೂ, ವೇದಪಾರಂಗತರೂ ಆಗಿ ಹೆಸರು ಗಳಿಸಿದ್ದರು. ನರಸಿಂಹ ಅವರ ತಂದೆ ಆರ್‌. ಎನ್‌. ನರಸಿಂಹಯ್ಯ, ಸಂಸ್ಕೃತ -ವೈದಿಕ ಅಧ್ಯಯನಗಳ ಜೊತೆಗೆ ಆಧುನಿಕ ವಿಜ್ಞಾನವನ್ನೂ ಓದಿ, ಬೆಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು.

Advertisement

ನರಸಿಂಹ ಅವರು ಬಾಲಕರಾಗಿದ್ದಾಗ ಬೇಸಿಗೆ ರಜೆಯಲ್ಲಿ ತೆಲುಗು ಪ್ರಾಂತ್ಯದ ತಮ್ಮ ಅಜ್ಜಿಮನೆಗೆ ಹೋಗುವುದಿತ್ತು. ಹಾಗೆ ಹೋಗುವುದೆಂದರೆ ಮೈಸೂರು ರಾಜ್ಯವನ್ನು ದಾಟಿಕೊಂಡು ಬೇರೊಂದು ರಾಜ್ಯಕ್ಕೆ ಹೋದಂತೆ. ಆ ಕಾಲದಲ್ಲಿ ಮೈಸೂರು ಪ್ರಾಂತ್ಯದ ಆಚೀಚಿನ ಎಲ್ಲ ರಾಜ್ಯಗಳೂ ಬ್ರಿಟಿಷ್‌ ಅಧಿಪತ್ಯದಲ್ಲೇ ಇದ್ದವು. ಅವನ್ನು ರೊದ್ದಂರ ಅಜ್ಜಿ “ಕಂಪ್ನಿ ಸೀಮೆ” ಎಂದು ಕರೆಯುತ್ತಿದ್ದರು. ಮೈಸೂರು, ಅವರ ಪ್ರಕಾರ “ರಾಜಸೀಮೆ”. ಅದು, ಹೆಸರಿಗೆ ತಕ್ಕಂತೆ ವೈಭವೋಪೇತವಾಗಿಯೇ ಇತ್ತು. ಇಲ್ಲಿ ಜನರಿಗೆ ಯುದ್ಧಗಳ ಭೀತಿ ಇರಲಿಲ್ಲ. ಉದ್ಯೋಗವನ್ನು ಅರಸಿಕೊಂಡು ಈ ಭಾಗದ ಜನ ದೇಶದ ಬೇರೆ ಭಾಗಗಳಿಗೆ ಅಲೆಯಬೇಕಿರಲಿಲ್ಲ. ಮಳೆ ಬೆಳೆ ಚೆನ್ನಾಗಿತ್ತು. ಜನರಿಗೆ ಬೇಕಾದ ಎಲ್ಲ ಬಗೆಯ ಸೌಕರ್ಯಗಳನ್ನೂ ಸಂಸ್ಥಾನ ಒದಗಿಸಿತ್ತು. ಹೆಚ್ಚಿನ ತೆರಿಗೆ ಭಾರ ಇರಲಿಲ್ಲ. ರಾಜಸೀಮೆಯ ಹೊರಗಿನವರು ಬಹಳ ದೌರ್ಭಾಗ್ಯಶಾಲಿಗಳು ಎಂದು ರೊದ್ದಂ ಅಜ್ಜಿಯ ನಂಬಿಕೆ. ಅದು ಸುಳ್ಳೇನೂ ಆಗಿರಲಿಲ್ಲ. ಈ ರಾಜಸೀಮೆ, ಕಂಪ್ನಿಸೀಮೆಗಳ ವ್ಯತ್ಯಾಸಗಳನ್ನು ಎತ್ತಿತೋರಿಸುವಂಥ ಒಂದು ಘಟನೆ ನಡೆಯಿತು.

ಅದೇನೆಂದರೆ, ಬಾಲಗಂಗಾಧರ ತಿಲಕರು ತಮ್ಮ “ಕೇಸರಿ”ಪತ್ರಿಕೆಯಲ್ಲಿ ಅದೊಮ್ಮೆ ಸ್ವರಾಜ್ಯದಪ್ರತಿಪಾದನೆಮಾಡುತ್ತ, “ಬ್ರಿಟಿಷರು ಈ ದೇಶಕ್ಕೆ ಬರದೇಹೋಗಿದ್ದರೆ ಇಲ್ಲಿನ ಜನ ಇನ್ನಷ್ಟು ಸುಖಶಾಂತಿಗಳಿಂದ, ಇನ್ನಷ್ಟು ಹೆಚ್ಚು ಅಭಿವೃದ್ಧಿ ಸಾಧಿಸಿ ಶ್ರೀಮಂತಿಕೆಯಿಂದ ಬದುಕುತ್ತಿದ್ದರು’ ಎಂದು ಬರೆದರು. ಈಗೆನೋ ಈ ಮಾತು ಸರಳ ಅನ್ನಿಸಬಹುದು. ಆದರೆ ಆ ಕಾಲದಲ್ಲಿ ಭಾರತದ ಎಲ್ಲೆಲ್ಲೂ, ಬ್ರಿಟಿಷರು ಬಂದದ್ದರಿಂದಲೇ ಭಾರತ ಉದ್ಧಾರವಾಯಿತು ಎಂಬ ಅಭಿಪ್ರಾಯ ವ್ಯಾಪಕವಾಗಿತ್ತು. ಅಂಥ ಅನಿಸಿಕೆಯನ್ನು ಜನರ ತಲೆಯಲ್ಲಿ ತುಂಬಿದ್ದೂ ಬ್ರಿಟಿಷರೇ! ತಮ್ಮ ಶಿಕ್ಷಣ, ಆಡಳಿತಗಳ ಮೂಲಕ ಬ್ರಿಟಿಷರು ಒಂದುಬಗೆಯ ಅಮಲನ್ನು ಇಡೀ ದೇಶದಲ್ಲಿ ಹರಡಿಬಿಟ್ಟಿದ್ದರು. ಇಂಗ್ಲಿಷ್‌ ಭಾಷೆಯೇ ಭಾಷೆ – ಉಳಿದದ್ದೆಲ್ಲ ಕಳಪೆ; ಇಂಗ್ಲಿಷ್‌ ಶಿಕ್ಷಣವೇ ಪರಮೋಚ್ಚ ಎಂಬ ಅಪಸ್ಮಾರ ವಿಜೃಂಭಿಸುತ್ತಿದ್ದ ಕಾಲವದು. ತಿಲಕರ ಮಾತಿಗೆ ಬ್ರಿಟಿಷ್‌ ಸರಕಾರದಿಂದ ಉಗ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ತಿಲಕರ ಮೇಲೆ ದೇಶದ್ರೋಹದ ಕೇಸ್‌ ದಾಖಲಾಯಿತು! ತನ್ನ ಮೇಲೆ ಹೊರಿಸಿರುವ ಆರೋಪ ನಿರಾಧಾರವಾದದ್ದು ಎಂದು ತಿಲಕರು ಪ್ರತಿವಾದ ಹೂಡಿದರು. ವಿಚಾರಣೆ ಶುರುವಾಯಿತು. ತಿಲಕರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲಿದ್ದ ವಕೀಲ- ಮಹಮ್ಮದ್‌ ಅಲಿ ಜಿನ್ನಾ! ಜಿನ್ನಾ ತಮ್ಮ ವಾದದ ಸಮಯದಲ್ಲಿ ತಿಲಕರ ಮಾತಿಗೆ ಸಮರ್ಥನೆ ಕೊಡಲುಬಳಸಿಕೊಂಡದ್ದು ಮೈಸೂರು ರಾಜ್ಯವನ್ನು! ಮೈಸೂರನ್ನೂ ಅದರ ಹೊರಗಿನ ಬೇರೆ ಪ್ರಾಂತ್ಯಗಳನ್ನೂ ಹೋಲಿಸಿನೋಡಿದರೆ ಬ್ರಿಟಿಷರ ಅಧಿಕಾರವಿರುವ ಬೇರೆ ರಾಜ್ಯಗಳ ವ್ಯವಸ್ಥೆಗಿಂತ ಮೈಸೂರಿನದು ಎತ್ತರದಲ್ಲಿದೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ, ಹಲವು ಅಂಕಿ-ಅಂಶಗಳ ಮೂಲಕ ಜಿನ್ನಾ ಪುಷ್ಟೀಕರಿಸಿ, ನ್ಯಾಯಾಲಯದ ಮುಂದೆ ಮಂಡಿಸಿ, ಕೊನೆಗೆ ತೀರ್ಪು ತಿಲಕರ ಪರವಾಗಿ ಬರುವಂತೆ ಮಾಡಿದರು.

ಹೀಗೆ ರಾಜಸೀಮೆಯ ಒಡೆಯರು ತಿಲಕರಿಗೆ ಜೈಲಾಗುವುದನ್ನು ತಪ್ಪಿಸಿದರು! ರೊದ್ದಂರ ಅಜ್ಜಿ “ರಾಜಸೀಮೆಯ ಮುಂದೆ ಕಂಪ್ನಿಸೀಮೆ ಸಪ್ಪೆ” ಎನ್ನುತ್ತಿದ್ದುದಕ್ಕೆ ಕೋರ್ಟಿನ ಮಾನ್ಯತೆಯೂ ಸಿಕ್ಕಿದಂತಾಯಿತು!

Advertisement

 

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next