Advertisement

ಐತಿಹಾಸಿಕ ನಗರದಲ್ಲಿ ಎತ್ತಂಗಡಿ ಗ್ರಂಥಾಲಯ

11:57 AM Oct 26, 2019 | Team Udayavani |

ತೇರದಾಳ: ಗೊಂಕರಸರ ಕಾಲದ ಪ್ರಸಿದ್ಧ ವ್ಯಾಪಾರಿ ಕೇಂದ್ರವೆನಿಸಿದ್ದ ತೇರದಾಳ ನಗರವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೋಬಳಿ ಹಾಗೂ ವಿಧಾನಸಭಾ ಮತಕ್ಷೇತ್ರದ ಕೇಂದ್ರಸ್ಥಳ, ನೂತನ ತಾಲೂಕೆಂದು ಘೋಷಣೆಯಾದ ನಗರದಲ್ಲಿ ಜಿಲ್ಲಾ ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಶಾಖೆಯಿದೆ. ಆದರೆ ಸ್ವಂತ ಕಟ್ಟಡವಿಲ್ಲದೆ ಗ್ರಂಥಾಲಯಕ್ಕೆ ಅಸ್ಥಿರತೆ ಕಾಡುತ್ತಿದೆ.

Advertisement

ಸ್ಥಳಾಂತರಿ ವಾಚನಾಲಯ: ನಗರದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದಕ್ಕೆ ಎಲ್ಲ ಕಡೆಗೂ ಸ್ಥಳಾಂತರವಾಗುತ್ತಲೆ ಇದೆ. ಮೊದಲು ಪುರಸಭೆ ವತಿಯಿಂದ ನಡೆಯುತ್ತಿದ್ದ ಗ್ರಂಥಾಲಯ ಪ್ರತ್ಯೇಕಗೊಂಡು 1978ರಲ್ಲಿ ಕೇಂದ್ರ ಗ್ರಂಥಾಲಯ ಅಧಿಧೀನಕ್ಕೆ ಬಂದ ಬಳಿಕ ಪುರಸಭೆಯ ಸಿಬ್ಬಂದಿಯಿಂದ ಪೇಠೆ ಭಾಗದ ಹನುಮಾನ್‌ ದೇವಸ್ಥಾನದ ಬಳಿಯ ಮಹಡಿ ಮೇಲಿನ ಕಟ್ಟಡದಲ್ಲಿತ್ತು. ನಂತರ ಬಹು ವರ್ಷದವರೆಗೆ ನಗರದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿತ್ತು. ಅಲ್ಲಿಂದ ಪುರಸಭೆಯ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಸ್ಥಳಾಂತರಗೊಂಡಿತು. ಹೀಗೆ ಸ್ವಂತ ಕಟ್ಟಡವಿಲ್ಲದೆ ಅಲ್ಲಲ್ಲಿ ಸ್ಥಳಾಂತರಗೊಂಡು ಈಗ ಪುರಸಭೆ ಆವರಣದಲ್ಲಿನ ಹೊಸ ಕಟ್ಟಡದ ಸುಮಾರು 20×40 ಅಡಿ ಅಳತೆಯ ಒಂದು ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆಲ ಮುಖಂಡರ ಪರಿಶ್ರಮದಿಂದ ನಗರದ ಒಂದು ಸ್ಥಳದಲ್ಲಿ ಗ್ರಂಥಾಲಯಕ್ಕೆ ನಿಗದಿಗೊಳಿಸಿ ಕಟ್ಟಡ ಪ್ರಾರಂಭಿಸಲಾಗಿತ್ತು.

ಆದರೆ ಕೆಲವರು ನ್ಯಾಯಾಲಯ ಕಟ್ಟೆ ಏರಿದ್ದರಿಂದ ಆ ಕಾಮಗಾರಿ ಅರ್ಧಕ್ಕೆ ನಿಂತಿತು. ಬಳಿಕ ಪೇಠೆ ಭಾಗದ ಪ್ರಧಾನ ಅಂಚೆ ಕಚೇರಿಯ ಹಿಂಭಾಗದಲ್ಲಿನ ಜಾಗೆಯನ್ನು ಗ್ರಂಥಾಲಯಕ್ಕೆಂದು ಮೀಸಲಿಟ್ಟು, ಗ್ರಂಥಾಲಯ ಇಲಾಖೆಯ ಹೆಸರಿಗೆ ಹಸ್ತಾಂತರಿಸಲಾಗಿದೆ ಎನ್ನಲಾಗುತ್ತಿದೆ. ಅದು ನಗರದ ಕೇಂದ್ರ ಸ್ಥಳವಾಗಿದ್ದರಿಂದ ಅಲ್ಲಿ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಿ ಗ್ರಂಥಾಲಯ ಸ್ಥಳಾಂತರಗೊಂಡರೆ ಓದುಗರಿಗೆ ತುಂಬಾ ಅನುಕೂಲವಾಗುವುದು ಎಂದು ಅನೇಕ ಓದುಗರು ಅಭಿಪ್ರಾಯಪಡುತ್ತಿದ್ದಾರೆ. ಸದ್ಯಕ್ಕಂತು ಪುರಸಭೆ ಒಡೆತನದ ಕಟ್ಟಡದಲ್ಲೇ ಗ್ರಂಥಾಲಯವಿದೆ.

ಒಟ್ಟು ಪತ್ರಿಕೆ-ಪುಸ್ತಕಗಳು: 8 ದಿನಪತ್ರಿಕೆಗಳು, 4 ವಾರ ಪತ್ರಿಕೆಗಳು, ಒಂದು ಪಾಕ್ಷಿಕ ಪತ್ರಿಕೆ, 7 ಮಾಸ ಪತ್ರಿಕೆಗಳು  ತಪ್ಪದೆ ಗ್ರಂಥಾಲಯಕ್ಕೆ ಬರುತ್ತವೆ. ಗ್ರಂಥಾಲಯದಲ್ಲಿ 25,753 ವಿವಿಧ ಪುಸ್ತಕಗಳು ಇಲ್ಲಿವೆ. ಒಟ್ಟು 810 ಪುರುಷರು, 131 ಮಹಿಳೆಯರು ಸೇರಿದಂತೆ ಒಟ್ಟು 944 ಸದಸ್ಯರಿದ್ದಾರೆ.

ಸೆಸ್‌ ಬಾಕಿ: ಸಾರ್ವಜನಿಕರ ಆಸ್ತಿ ತೆರಿಗೆಯಲ್ಲಿಶೇ.3ರಷ್ಟು ಗ್ರಂಥಾಲಯ ಸೆಸ್‌ ಎಂದು ವಸೂಲಿ ಮಾಡುವ ಪುರಸಭೆಯವರು ನಿಯಮಾನುಸಾರ ತಿಂಗಳಿಗೊಮ್ಮೆ ಗ್ರಂಥಾಲಯ ಇಲಾಖೆಗೆ ಸೆಸ್‌ ಹಣ ಭರಿಸಬೇಕು. ಆದರೆ ಸುಮಾರು 6ರಿಂದ 7ಲಕ್ಷ ರೂ. ಸೆಸ್‌ ಹಣ ತುಂಬುವುದನ್ನು ಪುರಸಭೆ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪವಿದೆ.

Advertisement

ಸೌಲಭ್ಯ ಕೊರತೆ: ಸಾಕಷ್ಟು ಜನವಸತಿ ಇರುವ ಪ್ರದೇಶದ ಕೇಂದ್ರ ಸ್ಥಳದಲ್ಲಿ ಗ್ರಂಥಾಲಯವಿದ್ದರೆ ಮಹಿಳೆಯರು, ವೃದ್ಧರು ಸೇರಿದಂತೆ ನಗರದ ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಮೂತ್ರಾಲಯ, ಶೌಚಾಲಯ, ಕುಡಿಯುವ ನೀರಿನ, ಆಸನಗಳ, ಬೆಳಕು-ಗಾಳಿಯ ವ್ಯವಸ್ಥೆ ಅತ್ಯವಶ್ಯಕ. ಪುಸ್ತಕಗಳ ವಿಭಾಗ, ಪತ್ರಿಕೆಗಳ ವಿಭಾಗ, ಎಳೆಯರ ವಿಭಾಗ ಹೀಗೆ ವಿಭಾಗವಾರು ಕೊಠಡಿಗಳೊಂದಿಗೆ ಗ್ರಂಥಾಲಯ ಇರಬೇಕು. ಮಧ್ಯಾಹ್ನ ದಲ್ಲಿಯೂ ಗ್ರಂಥಾಲಯ ತೆರೆದಿರಬೇಕು.

ಈ ಗ್ರಂಥಾಲಯದಲ್ಲಿ ಪುಸ್ತಕಗಳ ಬೀರುಗಳ (ಕಪಾಟು) ಕೊರತೆ ಯಿಂದ ಲಿಂಟಲ್‌ ರ್ಯಾಕರ್‌ ಮೇಲೆಯೆ ಪುಸ್ತಕ ಗಳನ್ನಿಡಬೇಕಾಗಿದೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.ಮಧ್ಯಾಹ್ನದಲ್ಲೂ ಕಾರ್ಯ ನಿರ್ವಹಿಸಿದರೆ ಆ ಸಮಯದಲ್ಲಿ ಬರುವ ಓದುಗರಿಗೆ ಅನುಕೂಲವಾಗುತ್ತದೆ. ನಿಯಮಗಳ ಸೂಚನಾಫಲಕ ಹಾಗೂ ಸಿಸಿ ಕಾಮೆರಾಗಳ ಅಳವಡಿಕೆಯಾಗಬೇಕು. ಕೇವಲ 15-20 ಜನ ಓದುಗರು ಕೂಡ್ರಿಸಲು ಆಸನಗಳಿವೆ. ಪ್ರತ್ಯೇಕ ಶೌಚಾಲಯಗಳು ಅವಶ್ಯಕ.

ಗ್ರಂಥಾಲಯವನ್ನು ಜನರು ಜೀವನಾಡಿಗಳಾಗಿ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮೂರ ಗ್ರಂಥಾಲಯಕ್ಕೆ ಸ್ವಂತ ಜಾಗೆ-ಕಟ್ಟಡವಿಲ್ಲದ್ದಕ್ಕೆ ಅದು ಸ್ಥಳಾಂತರಗೊಳ್ಳುವ ಸಾಧ್ಯತೆಯಿತ್ತು. ನಮ್ಮಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಅಂಚೆ ಕಚೇರಿ ಹಿಂಭಾಗದಲ್ಲಿ 40×60 ಅಡಿ ನಿವೇಶನ ಗುರುತಿಸಿ, ಅವರ ಹೆಸರಿಗೆ ಮಾಡಲಾಯಿತು. ಆದರೆ ಕಟ್ಟಡ ಮಾಡುವಷ್ಟರಲ್ಲಿ ಕೆಲವರು ತಕರಾರು ಮಾಡಿದ್ದಕ್ಕೆ ಅನುದಾನ ಬಳಸಿ ಪುರಸಭೆ ಆವರಣದಲ್ಲಿ ಹೊಸ ಕೊಠಡಿ ನಿರ್ಮಿಸಿ ಗ್ರಂಥಾಲಯ ಬಳಕೆಗೆ ಕೊಡಲಾಯಿತು. ಗ್ರಂಥಾಲಯಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲೇ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲು ಪ್ರತಿಯೊಬ್ಬರು ಉತ್ಸುಕರಾಗಬೇಕಾಗಿದೆ. ಬಸವರಾಜ ಬಾಳಿಕಾಯಿ, ಪುರಸಭೆ ಮಾಜಿ ಅಧ್ಯಕ್ಷ

 

-ಬಿ.ಟಿ. ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next