ಬೆಳಗಾವಿ: ಗ್ರಂಥಾಲಯದಲ್ಲಿ ಆಳ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರಿನ ಎಲ್ಐಎಸ್ ಅಕಾಡೆಮಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಜೂನ್ 6, 7 ಹಾಗೂ 8ರಂದು ರಾಷ್ಟ್ರ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಟಿಯು ಕುಲಪತಿ ಡಾ| ಕರಿಸಿದ್ದಪ್ಪ, ಗ್ರಂಥಾಲಯಗಳಲ್ಲಿ ಅನ್ವೇಷಣೆ ಅವಕಾಶಗಳು ಕುರಿತು ವಿಟಿಯು ಜ್ಞಾನ ಸಂಗಮ ಆವರಣದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರು ಮಾಹಿತಿ ಮಂಡಿಸಲಿದ್ದಾರೆ. ಗ್ರಂಥಾಲಯ ವಿಜ್ಞಾನ ಕ್ಷೇತ್ರದ ಎಲ್ಲ ಸಹಭಾಗೀದಾರರಿಗೆ ಹೊಸ ಅನ್ವೇಷಣೆಗಳು, ಸಂಶೋಧನಾ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಲಿದೆ ಎಂದರು.
ಜೂನ್ 6ರಂದು ಸಂಜೆ 4:30ಕ್ಕೆ ವಿಟಿಯು ಡಾ| ಎ.ಪಿ.ಜೆ. ಅಬ್ದುಲ್ ಕಲಾಮ್ ಸಭಾಂಗಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೆಗೌಡ, ಕುಲಪತಿ ಡಾ| ಕರಿಸಿದ್ದಪ್ಪ, ಮೌಲ್ಯಮಾಪನ ಕುಲಸಚಿವ ಡಾ| ಸತೀಶ ಅಣ್ಣಿಗೇರಿ, ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ| ಎಸ್.ಎಸ್. ಹೊಸಮನಿ, ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ| ವಿ.ಪಿ. ಕೊಣ್ಣೂರ ಭಾಗವಹಿಸುವರು. ಧಾರವಾಡ ಐಐಟಿ ನಿರ್ದೇಶಕ ಡಾ| ಕವಿ ಮಹೇಶ ಮುಖ್ಯ ಭಾಷಣ ಮಾಡುವರು ಎಂದರು. ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ| ವಿ.ಪಿ. ಕೊಣ್ಣೂರ ಮಾತನಾಡಿ, ಜೂ. 8ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅನಂತಪುರ ಜವಾಹರಲಾಲ್ ನೆಹರು ತಾಂತ್ರಿಕ ವಿವಿ ಕುಲಪತಿ ಡಾ| ಎಸ್. ಶ್ರೀನಿವಾಸ ಕುಮಾರ ಭಾಗವಹಿಸುವರು. ವಿಟಿಯು ಮೌಲ್ಯಮಾಪನ ಕುಲಸಚಿವ ಡಾ| ಸತೀಶ ಅಣ್ಣಿಗೇರಿ ಅಧ್ಯಕ್ಷತೆ ವಹಿಸುವರು. ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ಗ್ರಂಥಾಲಯಗಳು ಹಾಗೂ ಕಂಟ್ರೋಲ್ ಡಿಜಿಟಲ್ ಲ್ಯಾಂಡಿಂಗ್ ಕುರಿತು ಚರ್ಚೆ ನಡೆಯಲಿದೆ. ಜೂ.7 ಹಾಗೂ 8ರಂದು ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಗಣಕ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅವಶ್ಯಕವಿದೆ. ಅದರಂತೆ ಈಗ ಕಲಿಕೆ ಸ್ವರೂಪ ಬದಲಾಗಿದ್ದು, ಉನ್ನತ ಸಂಶೋಧನೆ ಹಾಗೂ ಜ್ಞಾನ ಭಂಡಾರ ಹೆಚ್ಚಿಸಲು ಸ್ಮಾರ್ಟ್ ಗ್ರಂಥಾಲಯಗಳು ಬರುತ್ತಿವೆ ಎಂದರು.