Advertisement

ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಆಗ್ರಹಿಸಿ ಪತ್ರ ಚಳವಳಿ

09:26 PM Jun 22, 2019 | Lakshmi GovindaRaj |

ಹಾಸನ: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕೆಂದು ಆಗ್ರಹಿಸಿ ಶನಿವಾರ ಬೆಳಿಗ್ಗೆ ನಿಗಮದ ಹಾಸನ ಡಿಪೋದ ಮುಂದೆ ಚಾಲಕರು, ನಿರ್ವಾಹಕರು, ಮತ್ತು ಸಿಬ್ಬಂದಿ ಶನಿವಾರ ಬೆಳಿಗ್ಗೆ ಪ್ರದರ್ಶನ ನಡೆಸಿ ಮುಖ್ಯಮಂತ್ರಿಯವರಿಗೆ ಪತ್ರ ಚಳವಳಿ ಆರಂಭಿಸಿದರು.

Advertisement

ಮುಖ್ಯಮಂತ್ರಿ, ರಾಜ್ಯಪಾಲರಿಗೆ ರವಾನೆ: ಕೆಎಸ್‌ಆರ್‌ಟಿಸಿ ಹಾಸನದ ಒಂದನೇ ಡಿಪೋದ ನೌಕರರು, ಚಾಲಕ, ನಿರ್ವಾಹಕರು ಪತ್ರವನ್ನು ಕೈಯಲ್ಲಿಡಿದು ಮುಖ್ಯಮಂತ್ರಿಗಳಿಗೆ ಮತ್ತು ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಪಾಲರಿಗೆ ಪತ್ರ ರವಾನೆ ಮಾಡುವುದಾಗಿ ಹೇಳಿದರು.

ವೇತನ ತಾರತಮ್ಯ ನಿವಾರಿಸಿ: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಕೆಎಸ್‌ಆರ್‌ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ 6ನೇ ವೇತನ ಆಯೋಗದ ತಾರತಮ್ಯ ನಿವಾರಣೆಯೊಂದಿಗೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎಲ್ಲ ಸೌಲಭ್ಯವನ್ನು ರಸ್ತೆ ಸಾರಿಗೆ ನಿಗಮದ ನೌಕರರಿಗೂ ನೀಡಬೇಕು ಎಂದು ಆಗ್ರಹಪಡಿಸಿದರು.

ಸೇವಾ ಭದ್ರತೆ ನೀಡಿ: ಸರ್ಕಾರದ ಅಂಗ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ನೌಕರರನ್ನು ರಾಜ್ಯ ಸರ್ಕಾರದ ಇತರೆ ನೌಕರರಂತೆ ಕಾಣುತ್ತಿಲ್ಲ. ಜೊತೆಗೆ ವೇತನ, ಪಿಂಚಣಿ, ಭತ್ಯೆ ಹಾಗೂ ರಜೆ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ.ಸೇವಾ ಭದ್ರತೆಯನ್ನು ನೀಡಿಲ್ಲ. ಹಾಗಾಗಿ ಸಾರಿಗೆ ಸಂಸ್ಥೆಯ ರಾಜ್ಯದ 4 ನಿಗಮಗಳ ನೌಕರರೂ ಪತ್ರ ಚಳವಳಿ ಆರಂಭಿಸಿದ್ದು, ನಮ್ಮ ಬೇಡಿಕೆಯನ್ನ ಈಡೇರಿಸದಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ಬೇಡಿಕೆಗೆ ಸ್ಪಂದಿಸದ ಸರ್ಕಾರ: ನೌಕರರ ಮುಖಂಡ ಫಾಲಾಕ್ಷ ಮಾತನಾ, ದೇಶದ ಇತರೆ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಶೇ.30ರಷ್ಟು ಕಡಿಮೆಯಿದೆ. ಈ ಬಗ್ಗೆ ಕಳೆದ ಒಂದೂವರೆ ದಶಕದಿಂದ ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದ್ದರೂ ಸ್ಪಂದಿಸಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.

Advertisement

ಕೆಎಸ್‌ಆರ್‌ಟಿಸಿ ನೌಕರರಾದ ಮಲ್ಲಿಕಾರ್ಜುನ್‌, ದೇವರಾಜು, ಧರ್ಮ, ಚಂದ್ರಶೇಖರ್‌, ಗಿರೀಶ್‌, ಸತೀಶ್‌, ಯೋಗಾರಾಜು, ಆನಂದ್‌, ಭಾಗ್ಯಮ್ಮ, ಮತ್ತಿತರರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next