Advertisement

ಕಾಸರಗೋಡಿನಲ್ಲಿ ಸಪ್ತ ಸ್ವರ ಕೇಂದ್ರ ಆರಂಭವಾಗಲಿ: ನೆಲ್ಲಿಕುನ್ನು

03:25 AM Jul 10, 2017 | |

ಕಾಸರಗೋಡು: ಸಪ್ತ ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡಿನ ವಿವಿಧ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಪರಸ್ಪರ ಒಗ್ಗೂಡಿ ಅವಲೋಕನ, ಅಧ್ಯಯನ, ಅರಿವು ಮತ್ತು ಸೌಹಾರ್ದ ಮೂಡಿಸಲು ಕಾಸರಗೋಡಿನಲ್ಲಿ “ಸಪ್ತ ಸ್ವರ ಕೇಂದ್ರ’ವೊಂದನ್ನು ಸ್ಥಾಪಿಸಬೇಕೆಂದು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಹೇಳಿದರು.

Advertisement

ಡಾ| ಪ್ರಭಾಕರನ್‌ ಆಯೋಗದ ಶಿಫಾರಸಿನಂತೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ಭಾಗವಾಗಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರಾರಂಭವಾದ ಯಕ್ಷಗಾನ ಸಂಶೋಧನಾ ಕೇಂದ್ರದ ವತಿಯಿಂದ ಒಂದು ತಿಂಗಳ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡಿನ ಗಂಡು ಕಲೆ ಯಕ್ಷಗಾನ, ಮಾಪಿಳ್ಳಪಾಟು, ಜಾನಪದ ಕಲೆಗಳು, ವಿವಿಧ ಸಂಸ್ಕೃತಿ ಮೊದಲಾದವುಗಳನ್ನು ಸರ್ವರೂ ಒಗ್ಗೂಡಿ ಅಧ್ಯಯನ ಮತ್ತು ಪ್ರದರ್ಶನ ಮಾಡುವ ಮೂಲಕ ಸೌಹಾರ್ದದ ವಾತಾವರಣ ಸೃಷ್ಟಿಸಿಬೇಕು. ಕಲೆ, ಸಂಸ್ಕೃತಿ ಕಲಿಕೆಯ ಜತೆಗೆ ನೈತಿಕ ಮತ್ತು ಮಾನವೀಯ ಮೌಲ್ಯ ಗಳನ್ನು, ವ್ಯಕ್ತಿತ್ವ ವಿಕಾಸವನ್ನು ರೂಪಿಸಿಕೊಳ್ಳಲು ಇಂತಹ ಯೋಜನೆ ಸಹಕಾರಿಯಾಗಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.

ಒಂದು ಪ್ರದೇಶ ರಸ್ತೆ, ಸೇತುವೆ ನಿರ್ಮಾಣದಂತಹ ಕಾರ್ಯಗಳಿಂದ ಅಭಿವೃದ್ಧಿಯಾಗದು. ಯಾವುದೇ ಒಂದು ಪ್ರದೇಶದ ಅಭಿವೃದ್ಧಿಗೆ ಸಾಂಸ್ಕೃತಿಕ ನೆಲೆ ಬೇಕು. ಸಾಂಸ್ಕೃ ತಿಕ ಹಿನ್ನೆಲೆಯಿಂದಷ್ಟೇ ಒಂದು ಪ್ರದೇಶದ ಅಭಿವೃದ್ಧಿ ಸಾಧ್ಯ ಎಂದ ಅವರು ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಿಂದಿನ ಸರಕಾರದಿಂದ ಡಾ| ಪ್ರಭಾಕರನ್‌ ಆಯೋಗ ನೇಮಿಸಲಾಗಿತ್ತು. ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಸಾಂಸ್ಕೃತಿಕ ಮೌಲ್ಯಗಳ ಅಭಿವೃದ್ಧಿ ಮಾತ್ರವೇ ಇಲ್ಲಿನ ಅಭಿವೃದ್ಧಿಯಿಂದ ಸಾಧ್ಯ ಎಂದು ಆಯೋಗ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರ ಆರಂಭಗೊಂಡಿತು ಎಂದರು.

ಯಕ್ಷಗಾನ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ| ರತ್ನಾಕರ ಮಲ್ಲಮೂಲೆ ಅವರ ಪ್ರಾಮಾಣಿಕತೆ, ಕಳಕಳಿ, ಸಾಮಾಜಿಕ ಬದ್ಧತೆಯಿಂದಾಗಿ ಒಂದು ತಿಂಗಳ ಯಕ್ಷಗಾನ ಶಿಬಿರ ಎಲ್ಲರಿಗೂ ಮಾದರಿಯಾಗುವಂತೆ ನಡೆಸಿಕೊಟ್ಟಿರುವುದು ಕಾಸರಗೋಡಿನ ಪ್ರತಿಯೊಬ್ಬರಿಗೂ ಹೆಮ್ಮೆ ಎಂದರು.

Advertisement

ಡಾ| ರತ್ನಾಕರ ಮಲ್ಲಮೂಲೆಗೆ ಶ್ಲಾಘನೆ 
ಶಿಬಿರದ ಯಶಸ್ವಿಗೆ ದುಡಿದ ಎಲ್ಲರನ್ನೂ ಅಭಿನಂದಿಸುವುದಾಗಿ ಹೇಳಿದ ಅವರು, ಸರಕಾರದ ಹಣವನ್ನು ಶಿಸ್ತುಬದ್ಧವಾಗಿ ಬಳಸಿಕೊಂಡು ಶಿಬಿರವನ್ನು ಯಶಸ್ಸುಗೊಳಿಸಿದ ಡಾ|ರತ್ನಾಕರ ಮಲ್ಲಮೂಲೆ ಅವರನ್ನು  ಶ್ಲಾಘಿಸಿದರು. ಕಾಸರಗೋಡಿನಲ್ಲಿ ರುವ ಎಲ್ಲ ಕಲೆಗಳನ್ನು ಒಗ್ಗೂಡಿ ಕಲಿಯಲು ಸಪ್ತ ಸ್ವರ ಕೇಂದ್ರ ವನ್ನು ಆರಂಭಿಸುವಂತೆ ಸರಕಾರವನ್ನು ಒತ್ತಾಯಿಸುವುದಲ್ಲದೆ, ಇದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಕನಸು ಸಾಕಾರಗೊಳ್ಳಲು ಎಲ್ಲರ ಸಹಕಾರವೂ ಅಗತ್ಯ ಎಂದರು.

ನಾಟ್ಯಗುರುಗಳಿಗೆ ವಂದನೆ 
ಯಕ್ಷಗಾನ ಶಿಬಿರ ಸಮಾರೋಪ ಸಮಾರಂಭದಲ್ಲಿ ಯಕ್ಷ ಗಾನ ಶಿಬಿರಾರ್ಥಿಗಳಿಗೆ ಒಂದು ತಿಂಗಳ ಕಾಲ ಯಕ್ಷಗಾನ ಪಾಠ ಹೇಳಿಕೊಟ್ಟ ಮತ್ತು ನಾಟ್ಯ ತರಬೇತಿ ನೀಡಿದ ಜಿಲ್ಲೆಯ ಹಿರಿಯ ಮತ್ತು ಅನುಭವಿ ನಾಟ್ಯಗುರುಗಳಾದ ದಿವಾಣ ಶಿವಶಂಕರ ಭಟ್‌ ಮತ್ತು ಸಬ್ಬಣಕೋಡಿ ರಾಮ ಭಟ್‌ ಅವರಿಗೆ ಶಿಬಿರಾರ್ಥಿಗಳು ಗುರುವಂದನೆ ಸಲ್ಲಿಸಿದರು. ಗುರುಗಳಿಗೆ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗುರುವಂದನೆ ಸಲ್ಲಿಸಿದ ಶಿಬಿರಾರ್ಥಿಗಳು ಕೃತಾರ್ಥರಾದರು.

ಕಾಲೇಜು ಪ್ರಾಂಶುಪಾಲ ಡಾ| ಟಿ. ವಿನಯನ್‌ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಕೆ. ಅಂಬು ಜಾಕ್ಷನ್‌ ದಿಕ್ಸೂಚಿ ಭಾಷಣ ಮಾಡಿದರು. ಕಾಸರಗೋಡು ನಗರಸಭಾಧ್ಯಕ್ಷೆ  ಬೀಫಾತಿಮ ಇಬ್ರಾಹಿಂ, ಕೌನ್ಸಿಲರ್‌ ಕೆ. ಸವಿತಾ ಟೀಚರ್‌, ಗಿಳಿವಿಂಡು ಆಡಳಿತಾಧಿಕಾರಿ ಡಾ| ಕೆ. ಕ‌ಮಲಾಕ್ಷ ಶುಭಹಾರೈಸಿದರು.
   
ಸಂಯೋಜನಾಧಿಕಾರಿ ಡಾ| ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಸಹಸಂಚಾಲಕ ಡಾ| ರಾಜೇಶ್‌ ಬೆಜ್ಜಂಗಳ ವಂದಿಸಿದರು. ದೀಪ್ತಿ ಪ್ರಾರ್ಥನೆ ಹಾಡಿದರು.

“ವೀರ ಅಭಿಮನ್ಯು’ ಯಕ್ಷಗಾನ: ಸಮಾರೋಪ ಸಮಾರಂಭದ ಬಳಿಕ ಪುತ್ತಿಗೆ ರಘುರಾಮ ಹೊಳ್ಳ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆ ಯಿಂದ “ವೀರ ಅಭಿಮನ್ಯು’ ಯಕ್ಷಗಾನ ಬಯಲಾಟ ನಡೆಯಿತು.  ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆಯಲ್ಲಿ ಅಡೂರು ಲಕ್ಷಿ$¾à ನಾರಾಯಣ ರಾವ್‌, ಮದ್ದಳೆಯಲ್ಲಿ ನೇರೋಳು ಗಣಪತಿ ನಾಯಕ್‌, ಉದಯ ಕಂಬಾರ್‌, ಚಕ್ರತಾಳದಲ್ಲಿ ಶ್ರೀಸ್ಕಂದ ದಿವಾಣ, ಮುಮ್ಮೇಳದಲ್ಲಿ  ರಾಧಾಕೃಷ್ಣ ನಾವಡ, ಮೋಹನ ಶೆಟ್ಟಿ ಬಾಯಾರು, ಹರಿನಾರಾಯಣ ಎಡನೀರು, ಮೋಹನ ಬೆಳ್ಳಿಪ್ಪಾಡಿ, ಬಾಲಕೃಷ್ಣ ಮವ್ವಾರು, ಶಶಿಧರ ಕುಲಾಲ್‌, ಶಬರೀಶ ಮಾನ್ಯ, ಬಾಲಕೃಷ್ಣ ಸೀತಾಂಗೊಳಿ, ವಿಶ್ವನಾಥ ಎಡನೀರು, ಪ್ರಕಾಶ್‌ ನಾಯ್ಕ ನೀರ್ಚಾಲು, ವಸುಧರ ಹರೀಶ್‌, ಮನೀಶ್‌ ಪಾಟಾಳಿ ಎಡನೀರು, ಮಧುರಾಜ್‌ ಪಾಟಾಳಿ ಎಡನೀರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದರು.
ಯಶಸ್ವಿ ಶಿಬಿರ: ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಪದವಿಪೂರ್ವ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗಿನ 33 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದು, ಯಕ್ಷಗಾನ ಕಲಿಕೆಯ ಜತೆಗೆ ನೈತಿಕ ಮತ್ತು ಮಾನವೀಯ ಮೌಲ್ಯಗಳು, ಸಮಯ ಪರಿಪಾಲನೆ, ವ್ಯಕ್ತಿತ್ವ ವಿಕಾಸ ಈ ಮುಂತಾದ ವಿಷಯಗಳನ್ನು ತರಬೇತಿ ಶಿಬಿರದಲ್ಲಿ ಪಡೆದುಕೊಂಡರು. ಬದುಕಿಗೆ ಅಗತ್ಯವಾದ ಏಕಾಗ್ರತೆ, ವೈಚಾರಿಕ ದೃಷ್ಟಿಕೋನ, ಶೋಧನಾ ಪ್ರಜ್ಞೆ, ನಾಯಕತ್ವ ಗುಣ, ಅಧ್ಯಯನಶೀಲತೆ ಇತ್ಯಾದಿಗಳ ಮಹತ್ವವನ್ನು ಶಿಬಿರದ ಮೂಲಕ ಪಡೆದುಕೊಳ್ಳಲು ಸಾಧ್ಯವಾಯಿತು. 

ಕರ್ನಾಟಕದ ವಿವಿಧ ಸಂಶೋಧನ ಕೇಂದ್ರಗಳಿಗೆ, ಯಕ್ಷಗಾನ ಅಧ್ಯಯನ ಕೇಂದ್ರಗಳಿಗೆ ಶಿಬಿರಾರ್ಥಿಗಳು ಭೇಟಿ ನೀಡುವುದರ ಮೂಲಕ ಯಕ್ಷಗಾನದ ಕುರಿತು ಹಾಗೂ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಹಲವು ವಿಷಯಗಳನ್ನು, ಅನುಭವಗಳನ್ನು ಪಡೆದುಕೊಂಡರು. ಶಿಬಿರವು ಮಲಯಾಳ ಮತ್ತು ಕನ್ನಡ ನಾಡಿನ ಕಲಾವಿದರ, ಸಂಶೋಧಕರ, ವಿದ್ವಾಂಸರ, ಸಾಹಿತಿಗಳ, ವಿಮರ್ಶಕರ ವಿಶೇಷ ಮನ್ನಣೆಗೆ ಪಾತ್ರವಾಗಿರುವುದು ಶಿಬಿರಕ್ಕೆ ಸಂದರ್ಶಿಸಿದ ವ್ಯಕ್ತಿಗಳ ಬಹುದೊಡ್ಡ ಸಂಖ್ಯೆಯಿಂದಲೇ ಸಾಬೀತಾಗಿದೆ.

ಯಕ್ಷಗಾನ ಮಾಹಿತಿ ದಾಖಲಾಗಲಿ: ಜೋಷಿ
ಇಂದು ಯಕ್ಷಗಾನ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಲಾವಿದರು, ವಿದ್ವಾಂಸರು ಪ್ರಯತ್ನಿಸಬೇಕು. ಕಾಸರಗೋಡಿನಲ್ಲಿ ನಡೆದ ಒಂದು ತಿಂಗಳ ಅಭೂತಪೂರ್ವ ಯಕ್ಷಗಾನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳೆಲ್ಲರೂ ಉತ್ತಮ ಕಲಾವಿದರಾಗಬೇಕೆಂದಿಲ್ಲ. ಪ್ರೇಕ್ಷಕರೂ ಆದರೂ ಸಾಕು. ಮುಂದಿನ ತಲೆಮಾರಿಗೆ ಯಕ್ಷಗಾನವನ್ನು ಹಸ್ತಾಂತರಿಸುವ ಕೆಲಸ ಈ ಶಿಬಿರಾರ್ಥಿಗಳಿಂದಾಗಬೇಕು ಎಂದು ಸಮಾರೋಪ ಭಾಷಣ ಮಾಡಿದ ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಅವರು ಹೇಳಿದರು.

ಕಾಸರಗೋಡು ಯಕ್ಷಗಾನ ಪರಂಪನೆಯನ್ನು ಉಳಿಸಿಕೊಳ್ಳಬೇಕು. ಕೂಡ್ಲು, ಮಧೂರು ಮೊದಲಾದ ಐತಿಹಾಸಿಕ ಯಕ್ಷಗಾನ ಪರಂಪರೆಯ ಹಿನ್ನೆಲೆಗಳ ದಾಖಲಾತಿ, ಸಂಶೋಧನೆ, ಲಭ್ಯ ದಾಖಲೆಗಳನ್ನು ಮೊಕ್ರೋ ಫಿಲಿ¾ಂಗ್‌ ಮಾಡಬೇಕು. ಇಲ್ಲಿನ ದೇವಸ್ಥಾನಗಳಲ್ಲಿರುವ ಯಕ್ಷಗಾನ ಚಿತ್ರಗಳನ್ನು ರಕ್ಷಿಸುವ ಕೆಲಸಗಳಾಗಬೇಕು. ಯಕ್ಷಗಾನ ಕಲಾವಿದರ ಚಿತ್ರಗಳನ್ನು ಈ ಸಂಶೋಧನಾ ಕೇಂದ್ರದಲ್ಲಿರಿಸಿಕೊಳ್ಳಬೇಕು. ಸಂಶೋಧನಾ ಕೇಂದ್ರದಿಂದ ಶೇಣಿ ನೆನಪಿಗಾಗಿ ಸ್ಮಾರಕ ಕೆಲಸಗಳಾಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಈ ಶಿಬಿರಾರ್ಥಿಗಳು ಎಲ್ಲಿಗೂ ಹೋದರೂ ಯಕ್ಷಗಾನವನ್ನು ಕೊಂಡೊಯ್ಯಬೇಕೆಂದು ಕಳಕಳಿಯಿಂದ ವಿನಂತಿಸಿಕೊಂಡರು.

ಯಕ್ಷಗಾನದ ಮೂಲ ಸ್ವರೂಪವನ್ನು ಮತ್ತು ಪ್ರತ್ಯೇಕತೆಯನ್ನು ಅರಿತುಕೊಂಡು ಪ್ರತಿ ನಿರ್ಮಾಣ ಮಾಡಬೇಕು. ಇತರ ಕಲೆಗಳೊಂದಿಗೆ ತುಲನೆ ಮಾಡುವ ಮೂಲಕ ಯಕ್ಷಗಾನವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು ಯಕ್ಷಗಾನದಿಂದ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. 

ಚಿತ್ರ : ಶ್ರೀಕಾಂತ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next