Advertisement

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

07:07 PM Oct 24, 2021 | Team Udayavani |

ಬೆಂಗಳೂರು: ಮಕ್ಕಳ ಮೇಲೆ ಇವತ್ತು ಬೇರೆ ಬೇರೆ ಭಾಷೆಗಳು ಪ್ರಭಾವ ಬೀರುತ್ತಿದ್ದು ನಮ್ಮ ಮನೆ ಮನಗಳಲ್ಲಿ ಕನ್ನಡ ಭಾಷೆ ಪಸರಿಸಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ “ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ “ಮಾತಾಡ್‌ ಮತಾಡ್‌’ ಕನ್ನಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕನ್ನಡ ಭಾಷೆ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದಲ್ಲೆ ಸಹಿ ಮಾಡೋ ಅಭ್ಯಾಸ ಬೆಳೆಸಿ ಕೊಳ್ಳೋಣ ಎಂದು ತಿಳಿಸಿದರು.

ಬೇರೆ-ಬೇರೆ ಭಾಷೆಗಳ ಪ್ರಭಾವದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಕ್ಕಳ ನಡುವೆ, ಕುಟುಂಬಸ್ಥರ ನಡುವೆ ಕನ್ನಡ ಭಾಷೆ ನಿಧನವಾಗಿ ಕಡಿಮೆ ಆಗುತ್ತಿರುವುದು ನಮಗೆ ಗೊತ್ತಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿರುವಾಗ ಕುಟುಂಬ ಸದಸ್ಯರೊಂದಿಗೆ ಕನ್ನಡದಲ್ಲೆ ಮಾತನಾಡೋಣ ಎಂದರು. ಮನೆಗಳಲ್ಲಿ ಹಾಗೂ ವ್ಯಕ್ತಿ ವ್ಯಕ್ತಿಯ ನಡುವೆ ಕನ್ನಡ ಭಾಷೆಯನ್ನು ಪಸರಿಸಬೇಕು.ಆ ಮೂಲಕ ಈ ನೆಲದ ಭಾಷೆ, ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು.ಈ ಸದುದ್ದೇಶದ ಹಿನ್ನೆಲೆಯಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆಗೂಡಿ ಸರ್ಕಾರ ದೊಡ್ಡ ಪ್ರಮಾಣದ ಕನ್ನಡ ಕಾರ್ಯಕ್ರಮವನ್ನು ರಾಜ್ಯ ವ್ಯಾಪಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.

 ಅಭಿಯಾನ ಯಶಸ್ವಿಗೊಳಿಸಿ:

ಅ.28ರಂದು ಸರ್ಕಾರದ ವತಿಯಿಂದ ಕರ್ನಾಟಕದ ಇತಿಹಾಸದಲ್ಲಿ ಒಂದು ಹೊಸ ರೀತಿ ಕಾರ್ಯಕ್ರಮ ರೂಪಿಸಲಾಗಿದೆ.ಎಲ್ಲಾ ಜಿಲ್ಲೆ , ತಾಲೂಕು,ಗ್ರಾಮ ಗ್ರಾಮಗಳಲ್ಲಿ ಲಕ್ಷಕಂಠಗಳಲ್ಲಿ ಕನ್ನಡ ಸಾಮೂಹಿಕ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ತಮ್ಮೆಲ್ಲ ಕೆಲಸಗಳನ್ನು ಬದಿಗಿಟ್ಟು  ಕಚೇರಿ ಮತ್ತು ಮನೆಗಳಿಂದ ಹೊರಬಂದು ಬೆಳಗ್ಗೆ 11ರಿಂದ11.30ರ ವರೆಗೆ ಆಯೋಜಿಸಿರುವ ಕನ್ನಡದ ಮೂರು ಗೀತೆಗಳ ಗಾಯನದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ಸೇರಿ ಕನ್ನಡ ಗೀತೆಗಳನ್ನು ಹಾಡೋಣ ಆ ಮೂಲಕ ಕನ್ನಡ ಪ್ರೇಮ ಮೆರೆಯೋಣ. ಕನ್ನಡದ ಪ್ರೇಮ ಕಾರ್ಯಕ್ರಮದ ವಸ್ತುವಲ್ಲ , ಕನ್ನಡ ಭಾಷೆ ಭಾಷಣ ವಸ್ತುವಲ್ಲ ಇದಕ್ಕೆ ಒಂದು ಇತಿಹಾಸವಿದೆ ಪರಂಪರೆ ಇದೆ. ಈ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡೋಣ ಎಂದರು. ಇದೇ ವೇಳೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಕನ್ನಡರೇತರರಿಗೆ ಕನ್ನಡ ಕಲಿಸುವ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್‌ ಭಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 ಮೇಟ್ರೋ ನಿಲ್ದಾಣದಲ್ಲಿ ಸೆಲ್ಪಿ :

66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಅಭಿಯಾನದ ಸ್ವಯಂ ಭಾವ ಚಿತ್ರ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು ಅಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೆಲ್ಪಿ ಪಡೆದುಕೊಳ್ಳುವ ಮೂಲಕ ಸಚಿವ ಸುನಿಲ್‌ ಕುಮಾರ್‌ ಸೆಲ್ಪಿ ಕೇಂದ್ರ ಉದ್ಘಾಟಿಸಿದರು.

ಬಳಿಕ ಕನ್ನಡಕ್ಕಾಗಿ ನಾವು ಅಭಿಯಾನದ ಭಾಗವಾಗಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ  ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿ ಆಧಾರಿತ “ಪರ್ವ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ ಅಧಿಕ ಸಂಖ್ಯೆಯಲ್ಲಿ ರಂಗಾಸಕ್ತರು ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿರುವುದು ಕನ್ನಡದ ಮೇಲಿನ ಅಭಿಮಾನ ತೋರಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ  ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ಬಿತ್ತಿ  ಪತ್ರ ಮತ್ತು ಎಲ್‌ಇಡಿ ಪರದೆ ಹೊಂದಿ ವಾಹನ ಅನಾವರಣಗೊಳಿಸಿದರು.

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ , ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next