Advertisement

ಬಿತ್ತನೆ ಬೀಜ ಕೊರತೆಯಾಗದಿರಲಿ

11:14 AM Jun 03, 2019 | Team Udayavani |

ಹಿರೇಕೆರೂರ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಸಕಾಲಕ್ಕೆ ವಿತರಣೆಯಾಗುವಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಯಾವುದೇ ಕಾರಣಕ್ಕೂ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ಈಗಾಗಲೇ ಬಿತ್ತನೆ ಕಾರ್ಯ ಮುಕ್ತಾಯವಾಗಬೇಕಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ವಿಳಂಭವಾಗಿದ್ದು, ಮುಂಬರುವ ದಿನಗಳಲ್ಲಿ ವರುಣ ಕೃಪೆ ತೋರಿ ರೈತರು ಮೊಗದಲ್ಲಿ ಮಂದಹಾಸ ಬೀರಿ ಉತ್ತಮ ಬೆಳೆ ಬೆಳೆಯುವಂತಾಗಲಿದೆ ಎಂದು ಆಶಿಸಿದರು.

ರೈತರಿಗೆ ಕೃಷಿ ಇಲಾಖೆಯಿಂದ ನೀಡುವ ಸಹಾಯಧನದ ಬೀಜಗಳನ್ನು ಬಿತ್ತುವ ಮೂಲಕ ಉತ್ತಮ ಬೆಳೆ ಬೆಳೆಯಬಹುದು. ಕೆಲವು ಬಾರಿ ಅನ್ನದಾತ ಎಷ್ಟೇ ಕಷ್ಟಪಟ್ಟು ಉತ್ತಮ ಬೆಳೆ ಬೆಳದರೂ ಕೀಟ ಬಾಧೆಯಿಂದ ಫಸಲು ಕುಂಟಿತಗೊಳ್ಳುವುದು. ಹೀಗಾಗಿ ಅದನ್ನು ತಡೆಯಲು ರೈತರು ಬಿತ್ತನೆ ಸಮಯದಿಂದ ಬೆಳೆ ಕಟಾವಿನ ವರೆಗೊ ಕಾಲಕಾಲಕ್ಕೆ ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಳ್ಳಬೇಕು. ಬೆಳೆಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಮೂಲಕ ಉತ್ತಮ ಫಸಲು ಬೆಳೆಯುವಂತಾಗಲಿ. ಸರ್ಕಾರ ಸಹಾಯಧನದಲ್ಲಿ ವಿತರಿಸುವ ಬಿತ್ತನೆ ಬೀಜದ ಸದ್ಬಳಕೆ ಮಾಡಿಕೊಳ್ಳಬೇಕು. ಈ ವರ್ಷ ಉತ್ತಮ ಮಳೆಯಾಗಿ ಸರಿಯಾಗಿ ಬೆಳೆ ಬೆಳೆದು ರೈತರು ಅರ್ಥಿಕವಾಗಿ ಸಶಕ್ತರಾಗಲಿ ಎಂದು ಹಾರೈಸಿದರು.

ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ ಮಾತನಾಡಿ, 250 ಟನ್‌ ಬಿತ್ತನೆ ಬೀಜಗಳು ಮಾರಾಟವಾಗುವ ನಿರೀಕ್ಷೆ ಹೊಂದಿದ್ದು, ಈ ಸಲ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ರೈತರು ಹತ್ತಿ ಬೆಳೆ ಕಡಿಮೆ ಮಾಡಿ ಗೋವಿನ ಜೋಳ ಅಧಿಕ ಪ್ರಮಾಣದಲ್ಲಿ ಬಿತ್ತಲಿದ್ದಾರೆ. ಹೀಗಾಗಿ ಇಲಾಖೆ ಹೆಚ್ಚುವರಿಯಾಗಿ ಹತ್ತು ಟನ್‌ ಗೋವಿನ ಜೋಳದ ಬೀಜಗಳು ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದೆ. ರಿಯಾಯಿತಿ ಬೀಜಗಳ ವಿತರಣೆಗಾಗಿ ಹಿರೇಕೆರೂರ, ರಟ್ಟಿಹಳ್ಳಿ ಹಾಗೂ ಹಂಸಭಾವಿ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ ಮಾಸೂರ ಹಳ್ಳೂರ, ತಡಕನಹಳ್ಳಿ, ಚಿಕ್ಕೇರೂರ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುವುದು. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು. ಅದಲ್ಲದೆ ಗೋವಿನ ಜೋಳಕ್ಕೆ ಸೈನಿಕ ಹುಳುಗಳ ಬಾಧೆ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ರೈತರು ಬೆಳೆಗಳ ಮುಂಜಾಗೃತಿ ಕ್ರಮ ತಗೆಕೊಂಡು ಸಕಾಲಕ್ಕೆ ಔಷಧ ಸಿಂಪಡಿಸಬೇಕು ಎಂದು ತಿಳಿಸಿದರು.

ತಾಲೂಕ ಪಂಚಾಯತ್‌ ಅಧ್ಯಕ್ಷ ಹೇಮಪ್ಪ ಮುದರಡ್ಡೇರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ.ಶಿವನಗೌಡ, ಸದಸ್ಯರಾದ ಬಸವರಾಜ ಭರಮಗೌಡ್ರ, ಪಾರವ್ವ ಸೂಡಂಬೇರ, ರತ್ನಮ್ಮ ಕೆರೂಡಿ, ಗಿರಿಜಾ ದನವಿನವರ, ಪಪಂ ಸದಸ್ಯರಾದ ಗುರುಶಾಂತಪ್ಪ ಎತ್ತಿನಹಳ್ಳಿ, ಅಶೋಕ ಜಾಡಬಂಡಿ, ಕೃಷಿ ಅಧಿಕಾರಿಗಳಾದ ಮಾರುತಿ ಅಂಗರಗಟ್ಟಿ, ಪಿ.ಎಂ.ವಾಲಿ, ಎಂ.ಜಿ.ಹಾಲಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next