Advertisement

ನುಡಿಗೂ ನಡೆಗೂ ಸಾಮ್ಯತೆಯಿರಲಿ: ಡಾ|ಚಂದ್ರಶೇಖರ

01:22 PM May 26, 2018 | |

ಕಲಬುರಗಿ: ಪೋಷಕರು ಮೊದಲ ಗುರುವಾದರೆ ಶಿಕ್ಷಕರು ಎರಡನೇ ಪೋಷಕರು. ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಇಬ್ಬರ ಪಾತ್ರವೂ ಬಹಳ ಮುಖ್ಯ ಎಂದು ಮನೋವೈದ್ಯ ಡಾ| ಸಿ.ಆರ್‌.ಚಂದ್ರಶೇಖರ ಹೇಳಿದರು.

Advertisement

ನಗರದ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ದೈವತ್ವವನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ ಎಂದರು.

ನಮ್ಮಲ್ಲಿ ನೈತಿಕ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳು ಕುಸಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ದಿನೆ-ದಿನೇ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಜನರಲ್ಲಿ ಋಣಾತ್ಮಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತಿವೆ. ನುಡಿಗೂ-ನಡೆಗೂ ಸಾಮ್ಯತೆ ಕಡಿಮೆಯಾಗುತ್ತಿದೆ. ಹೀಗಾಗಬಾರದು ಎಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರಿಗೆ ತಮ್ಮ ಮಕ್ಕಳೊಡನೆ ಕುಳಿತು ಮಾತನಾಡಲು ಸಮಯವಿಲ್ಲ. ಮಕ್ಕಳಿಗೆ ಅತಿ ಹೆಚ್ಚು ಶುಲ್ಕ ಭರಿಸಿ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಿ ಹೆಚ್ಚು ಅಂಕ ಗಳಿಸಬೇಕೆಂದು ಅಪೇಕ್ಷೆ ಪಡುತ್ತಾರೆ. ಮಗು ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಯಬೇಕು, ಜೀವನದಲ್ಲಿ ಅಂಕಗಳು ಮುಖ್ಯವಲ್ಲ ಎಂದು ಹೇಳಲಾಗದು. ಹೀಗಾಗಿ ಶಿಕ್ಷಕರು ಮಕ್ಕಳ ಮನಸ್ಸನ್ನು ಅವರವರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನೈತಿಕ ಶಿಕ್ಷಣ ನೀಡಿ ದೇಶದ ಉತ್ತಮ ಪ್ರಜೆಗಳಾಗಿ ಮಾಡಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಮಾತನಾಡಿ, ಮಕ್ಕಳಿಗೆ ಕೇವಲ ಪಠ್ಯಜ್ಞಾನ ನೀಡುವುದು ಮುಖ್ಯವಲ್ಲ. ಅವರನ್ನು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸುವ ಹೊಣೆ ಎಲ್ಲ ಶಿಕ್ಷಕರದ್ದಾಗಿದೆ. ಮಕ್ಕಳ ಸಮಸ್ಯೆ ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರ ನೀಡಿ ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವ ಕಡೆಗೆ ಶಾಲೆಗಳು ಗಮನಹರಿಸಬೇಕು ಎಂದರು.

Advertisement

ಸಂಸ್ಥೆ ಅಧ್ಯಕ್ಷೆ ಸುವರ್ಣ ಭಗವತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಗ್ಗಾಂವಕರ, ಟ್ರಸ್ಟ್‌ನ ಪ್ರಕಾಶಕ ಎಸ್‌. ಎಸ್‌.ಹಿರೇಮಠ, ಮದರ ತೆರೆಸಾ ಕಾಲೇಜನ ಆಡಳಿತಾಧಿಕಾರಿ ಪ್ರಕಾಶ ಕವಿಶೆಟ್ಟಿ ಹಾಗೂ ಶಿಕ್ಷಕರು ಹಾಜರಿದ್ದರು. ಶಿಕ್ಷಕ ಆನಂದ ಸ್ವಾಗತಿಸಿದರು. ಶಿಕ್ಷಕಿ ಶೋಭಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next