Advertisement

“ಮಧ್ಯಂತರ ಚುನಾವಣೆಗೆ ಸಜ್ಜಾಗೋಣ’

11:17 PM Aug 07, 2019 | Team Udayavani |

ಬೆಂಗಳೂರು: “ಯಡಿಯೂರಪ್ಪ ಮೂರು ವರ್ಷ ಎಂಟು ತಿಂಗಳು ಅಧಿಕಾರ ನಡೆಸಲಿ, ನನ್ನದೇನೂ ಅಭ್ಯಂತರವಿಲ್ಲ. ಆದರೆ, ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಏನು ತೀರ್ಮಾನ ಕೈಗೊಳ್ಳುತ್ತಾರೋ, ಯಾರಿಗೆ ಗೊತ್ತು’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, “ನರೇಂದ್ರ ಮೋದಿ-ಅಮಿತ್‌ ಶಾ ಅವರು ಕೊಠಡಿಯಲ್ಲಿ ಪ್ರತ್ಯೇಕವಾಗಿ ಕುಳಿತು ಕೈಗೊಳ್ಳುವ ತೀರ್ಮಾನವೇ ಅಂತಿಮ.

Advertisement

ಹೀಗಾಗಿ, ನಾನು ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಎದುರಿಸಲು ಸಜ್ಜಾಗುತ್ತಿದ್ದೇನೆ’ ಎಂದರು. “ತುಮಕೂರು ಲೋಕಸಭೆ ಚುನಾವಣೆಯಲ್ಲಿ ನಾನು ಸೋತಿದ್ದು ದೇವರ ತೀರ್ಮಾನ ಎಂದುಕೊಳ್ಳುತ್ತೇನೆ. ನನ್ನನ್ನು ಸೋಲಿಸಲು ಯತ್ನಿಸಿದ ಪುಣ್ಯಾತ್ಮರಿಗೆ, ಮಹಾನುಭಾವರಿಗೆ ಒಳ್ಳೆಯದಾಗಲಿ. ನಾನು ಯಾರಿಗೂ ಕೆಡಕು ಬಯಸುವುದಿಲ್ಲ. ಪಕ್ಷ ಕಟ್ಟುವ ಸಲುವಾಗಿಯೇ ನನಗೆ ಸೋಲು ಉಂಟಾಯಿತು ಎಂದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ನಮಗೂ ಮಾತನಾಡಲು ಅವಕಾಶ ಬೇಕು: ಜೆಡಿಎಸ್‌ ಸಮಾವೇಶದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ತಮಗೆ ಮಾತನಾಡಲು ಅವಕಾಶ ಕೊಡಬೇಕು. ವೇದಿಕೆಯಲ್ಲಿದ್ದವರೇ ಯಾವಾಗಲೂ ಮಾತನಾಡುತ್ತೀರಿ, ನಮ್ಮ ನೋವನ್ನು ಹಂಚಿಕೊಳ್ಳಬೇಕು. ಅಧಿಕಾರದಲ್ಲಿದ್ದಾಗ ಸಹಕಾರ ಪಡೆದವರೇ ಮೋಸ ಮಾಡಿದ್ದಾರೆ ಎಂದು ಹೇಳಿದರು. ವೇದಿಕೆ ಮೇಲಿದ್ದ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಅವರನ್ನು ಸಮಾಧಾನಪಡಿಸಿದರು. ಎರಡು ತಿಂಗಳಿಂದ ಪಕ್ಷದ ಕಚೇರಿಯಲ್ಲಿ ದೇವೇಗೌಡರು ಕಾರ್ಯಕರ್ತರು, ಮುಖಂಡರನ್ನು ಕರೆದು ಮಾತನಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next