Advertisement

ಆರೋಗ್ಯಪೂರ್ಣ ಜೀವನ ಪಡೆಯೋಣ

12:13 PM Jul 02, 2019 | keerthan |

ಪ್ರಾಪಂಚದಲ್ಲಿಯೇ ಭಾರತೀಯ ಆರೋಗ್ಯ ಶಾಸ್ತ್ರವು ಉನ್ನತ ಸ್ಥಾನದಲ್ಲಿದೆ. ನಮ್ಮ ಪಾರಂಪರಿಕ ವೈದ್ಯಕೀಯ ಶಾಸ್ತ್ರವು ಇಡೀ ಜಗತ್ತಿಗೆ ಆರೋಗ್ಯ ರಕ್ಷಣೆಯಲ್ಲಿ ಮಾರ್ಗದರ್ಶಕವಾಗಿದೆ. ಆದರೂ ನಾವಿಂದು ವ್ಯಾಧಿಗ್ರಸ್ತರಾಗುತ್ತ ಎಲ್ಲ ಕಾಯಿಲೆಗಳಲ್ಲೂ ಎತ್ತಿದ ಕೈ ಆಗುತ್ತಿದ್ದೇವೆ.

Advertisement

ಬೇರೆ ದೇಶಗಳ ಪ್ರಜೆಗಳಿಗಿಂತ ಹೆಚ್ಚು ರೋಗಗ್ರಸ್ತರಾಗುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಇಂದಿನ ದಿನಗಳಲ್ಲಿ ನಾವು ಕಣ್ಣು, ಮೂಗು, ನಾಲಿಗೆ ಬಯಸುವ ತಿನಿಸುಗಳನ್ನು ಬಹುವಾಗಿ ಸೇವಿಸುತ್ತಿರುವುದು. ಮತ್ತು ಇಷ್ಟವಾದ ತಿನಿಸುಗಳನ್ನು ಇಂತಿಷ್ಟೇ ಸೇವಿಸಬೇಕೆಂಬುದಿಲ್ಲ, ಇಂತಹ ಸಮಯವೆಂಬುದಿಲ್ಲ, ಇಂತಹ ಸ್ಥಳವೆಂಬುದಿಲ್ಲದೇ ಆರೋಗ್ಯದ ನಿಯಮಗಳನ್ನು ಗಾಳಿಗೆ ತೂರಿ ಹೊಟ್ಟೆ ತುಂಬುತ್ತಿದ್ದೇವೆ. ಮತ್ತು ಅನವಶ್ಯಕವಾದ ಬೊಜ್ಜನ್ನು ದೇಹಕ್ಕೆ ಸೇರಿಸುತ್ತಿದ್ದೇವೆ.

ಭಾರತದ 61 ಪ್ರತಿಶತ ಸಾವುಗಳು ಬದಲಾದ ಜೀವನ ಶೈಲಿಯಿಂದ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಎಂದು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ, ಬೊಜ್ಜುತನ ಮತ್ತು ಹೃದಯ ರೋಗಗಳನ್ನು ತಡೆಗಟ್ಟುವಲ್ಲಿ ಹಾಗೂ ಉಪಚರಿಸುವಲ್ಲಿ ಮುಖ್ಯವಾದ 4 ಅಂಶಗಳನ್ನು ತಿಳಿಸಿತ್ತು. ಅದೆಂದರೆ ಶಾರೀರಿಕ ವ್ಯಾಯಾಮ, ದುಶ್ಚಟಗಳಿಂದ ದೂರ, ಸಸ್ಯಾಹಾರ ಮತ್ತು ಉದ್ವೇಗ ಶಮನ.

ಒತ್ತಡರಹಿತನಾದ ಮನುಷ್ಯನನ್ನು ಈ ಕಾಲಘಟ್ಟದಲ್ಲಿ ಹುಡುಕುವುದೇ ಕಷ್ಟ ಸಾಧ್ಯವೆಂದಾಗಿದೆ. ಕಳೆದ 3-4 ದಶಮಾನಗಳಿಂದ ಮಾನವನ ಜೀವನ ವಿಧಾನದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಅದರಲ್ಲಿ ಮುಖ್ಯವಾಗಿ ದೈಹಿಕ ಶ್ರಮ ಬಹಳಷ್ಟು ಕಡಿಮೆಯಾಗಿರುವುದಲ್ಲದೇ ಆಹಾರದ ಶೈಲಿ ಬದಲಾವಣೆಯಾಗಿದೆ ಮತ್ತು ಮಾನಸಿಕ ಒತ್ತಡವು ಯಥೇತ್ಛವಾಗಿ ಹೆಚ್ಚಿದೆ. ಒತ್ತಡ ಇಂದು ಸರ್ವವ್ಯಾಪಿ ಆವರಿಸಿ ಮಾನವನ ಮಾನಸಿಕ ನೆಮ್ಮದಿ ಹಾಳು ಮಾಡಿ ರೋಗಗ್ರಸ್ತರನ್ನಾಗಿಸುತ್ತಿದೆ.

ಎಲ್ಲ ಮನೋದೈಹಿಕ ಕಾಯಿಲೆಗಳು ವ್ಯಾಯಾಮರಹಿತ ಮತ್ತು ಬದಲಾದ ಜೀವನ ಶೈಲಿಯಿಂದ ಕಾಣಿಸಿಕೊಳ್ಳುತ್ತಿರುವ ತೊಂದರೆಗಳಾಗಿವೆ. ಇದಕ್ಕೆ ವಾತಾವರಣ ದೋಷಗಳು, ಮಾನಸಿಕ ವ್ಯಥೆೆಗಳು, ಒತ್ತಡ ಕೂಡ ಬಹುಮುಖ್ಯ ಕಾರಣಗಳೆಂದು ಅಂದಾಜಿಸಲಾಗಿದೆ. ಇದು ಕೇವಲ ತಮ್ಮೊಂದಿಗೆ ಮಾತ್ರ ಕೊನೆಗೊಳ್ಳದೇ ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಯುವ ಅಥವಾ ತಮ್ಮಿಂದ ತಮ್ಮ ಮಕ್ಕಳಿಗೆ ಬರಬಹುದಾದ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಮಧುಮೇಹ, ಹೃದಯ ತೊಂದರೆ ಮತ್ತು ಪಾರ್ಶ್ವವಾಯುವಿಗೂ ಕಾರಣವಾಗಬಹುದು.

Advertisement

ಮಾನಸಿಕ ಆರೋಗ್ಯವು ಅತಿ ಮುಖ್ಯ ಅಂಶ. ನ್ಯಾಶನಲ್‌ ಮಾನಸಿಕ ಆರೋಗ್ಯ ಸಂಶೋಧನೆಯಲ್ಲಿ ಕಂಡು ಬಂದ ಆಘಾತಕಾರಿ ಅಂಶಗಳೆಂದರೆ ಪ್ರತಿ 6ನೇ ಒಬ್ಬ ಭಾರತೀಯನು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಶೇ.8 ಜನರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬುದು ಬೆಳಕಿಗೆ ಬಂದಿದೆ. ಮಾನಸಿಕ ಅನಾರೋಗ್ಯವು ಅತಿ ಹೆಚ್ಚು 30 ರಿಂದ 49 ವಯಸ್ಸಿನವರಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ 60ಕ್ಕಿಂತ ಹೆಚ್ಚಿನ‌ ವಯಸ್ಸಿನವರಲ್ಲಿಯೂ ಅ ಧಿಕವಾಗಿ ಕಾಣಿಸಿಕೊಳ್ಳುತ್ತದೆ.

ಮುಂದುವರಿಯುತ್ತಿರುವ ನಮ್ಮ ದೇಶದ ಜನರಲ್ಲಿ ಸಾತ್ವಿಕ ಆಹಾರ‌ ಬಗ್ಗೆ ಇದ್ದ ಸದಭಿರುಚಿ ಕ್ಷೀಣಿಸಿ, ರಜೋಗುಣ ಹಾಗೂ ತಮೋಗುಣವನ್ನು ವೃದ್ಧಿಸುವ ಆಹಾರ ಬಗ್ಗೆ ಜನರ ಒಲವು ಹೆಚ್ಚುತ್ತಿದೆ. ಹೀಗಾಗಿ ನಮ್ಮ ಜೀವನ ಮಟ್ಟ ಸುಧಾರಿಸಿದೆ ಎನ್ನುವುದಕ್ಕಿಂತ ನಮ್ಮ ಜೀವನ ಶೈಲಿ ಹಾಳಾಗಿದೆ ಎನ್ನುವುದು ಸೂಕ್ತ. ಹಾಳಾದ ಜೀವನ ಶೈಲಿಯಿಂದಾಗಿ ಬಹಳಷ್ಟು ಖಾಯಿಲೆಗಳು ಅಧಿಕವಾಗತೊಡಗಿದೆ.

ಪ್ರಕೃತಿದತ್ತ ಜೀವನಶೈಲಿ
ಆರೋಗ್ಯವಂತ ಮನುಷ್ಯನೇ ನಿಜವಾದ ಭಾಗ್ಯವಂತನು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲವೆಂಬುದು ಅಕ್ಷರಶಃ ಸತ್ಯ. ಆರೋಗ್ಯವೆಂದರೆ ಕೇವಲ ರೋಗರಹಿತವಾಗಿರದೇ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು.ಈ ರೀತಿಯಆರೋಗ್ಯವನ್ನು ಕಾಪಾಡಿ ಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರ ಅತಿ ಮಹತ್ವದ್ದಾಗಿದೆ.
ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸನು °ರೂಪಿಸಲು, ಜೀವನಕ್ರಮದಲ್ಲಿಯೇ ಮಹತ್ತರ ಪರಿವರ್ತನೆ ತರಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗಮಾರ್ಗ ಜನಪ್ರಿಯವಾಗುತ್ತಿದೆ.

ಜೀವನದಲ್ಲಿ ಕಾಣ ಬರುತ್ತಿರುವ ಒತ್ತಡ, ಉದ್ವೇಗ, ಅತೃಪ್ತಿ, ಅರಿಷ‌ಡ್ವರ್ಗಗಳ
ಅಧಿ ಪತ್ಯ ಇವುಗಳ ಮೇಲೆ ನಿಯಂತ್ರಣ ಸಾಧಿ ಸಿ ಬದುಕನ್ನು ಊಧ್ವಮುಖೀ ಯಾಗಿಸಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗ‌ವೇ ಏಕೈಕ ಮಾರ್ಗ. ಪ್ರತಿದಿನ ಎರಡು ಬಾರಿ ಧ್ಯಾನ ಅಥವಾ ಪ್ರಾರ್ಥನೆ ದಿನಕ್ಕೆ ಒಂದು ಅಥವಾ ಎರಡು ಬಾರಿ ಪ್ರಾರ್ಥನೆ ಮಾಡುವುದರಿಂದ ನಮ್ಮ ಉದ್ವೇಗ, ಒತ್ತಡ, ಚಿಂತೆ ದೂರವಾಗಿ ಮನಸ್ಸಿನಲ್ಲಿ ಶಾಂತಿ ನೆಲೆಯೂರುತ್ತದೆ. ಜತೆಗೆ ಮಾನಸಿಕ ಉದ್ವೇಗ ಶಮನಗೊಳಿಸುತ್ತದೆ. ಆಹಾರ ದೇಹಕ್ಕೆ ಶಕ್ತಿ ನೀಡಿದರೆ ಪ್ರಾರ್ಥನೆ ಮನಸ್ಸಿಗೆ ಶಕ್ತಿ ನೀಡುತ್ತದೆ.

ನಿತ್ಯ ಕನಿಷ್ಠ ಒಂದು ಗಂಟೆ ಯೋಗಾಭ್ಯಾಸ
ಯೋಗವು ನಮ್ಮ ಪುರಾತನ ಶಾಸ್ತ್ರ. ಇದು ಒಂದು ಜೀವನ ಶೈಲಿ ಹಾಗೂ ಕಲೆ. ಒಬ್ಬ ಮನುಷ್ಯನ ಸರ್ವೋನ್ನತ ಏಳ್ಗೆೆಗೆ ಇದು ತುಂಬಾ ಸಹಕಾರಿ. ಯೋಗವು ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲ  ಪಂಥದ ಜನರೂ ಒಂದಲ್ಲ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸನ್ನು ರೂಪಿಸಲು, ಜೀವನಕ್ರಮದಲ್ಲಿಯೇ ಮಹತ್ತರ ಪರಿವರ್ತನೆ ತರಲು ಯೋಗಮಾರ್ಗ ಸರ್ವವ್ಯಾಪಿಯಾಗುತ್ತಿದೆ. ಜೀವನದಲ್ಲಿ ಕಾಣ ಬರುತ್ತಿರುವ ಒತ್ತಡ, ಉದ್ವೇಗ, ಅತೃಪ್ತಿ, ಅರಿಷಡ್ವರ್ಗಗಳ ಅಧಿ ಪತ್ಯ ಇವುಗಳ ಮೇಲೆ ನಿಯಂತ್ರಣ ಸಾ ಧಿಸಿ ಬದುಕನ್ನು ಊಧ್ವಮುಖೀಯಾಗಿಸಲು ಯೋಗವೇ ಏಕೈಕ ಮಾರ್ಗ. ಯೋಗವು ಪಂಚಕೋಶ (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ)ಗಳನ್ನು ಸಮತೋಲನಗೊಳಿಸಿ ಮನುಷ್ಯನನ್ನು ಆರೋಗ್ಯವಂತನನ್ನಾಗಿಸುತ್ತದೆ.

ಈ ಅಭ್ಯಾಸವು ನರಮಂಡಲ, ಹಾರ್ಮೋನ್‌ಗಳು  ಹಾಗೂ ಮನಸ್ಸನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದರಿಂದ ದೇಹಕ್ಕೆ ಉಂಟಾಗುವ ವ್ಯಾ ಧಿಯನ್ನು ತಡೆಗಟ್ಟುವುದಲ್ಲದೇ ಅದರ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಯೋಗಾಸನದ ಅಭ್ಯಾಸವು ದೇಹವನ್ನು ದಂಡಿಸಿ  ಮಾಂಸ ಖಂಡಗಳನ್ನು ಬಲಿಷ್ಠಗೊಳಿಸುವುದಲ್ಲದೆ ದೈಹಿಕ-ಮಾನಸಿಕ ಶಾಂತಿ ಒದಗಿಸುತ್ತದೆ. ಪ್ರಾಣಾಯಾಮದ ಅಭ್ಯಾಸವು ಒಂದು ಕ್ರಮಬದ್ಧವಾದ ಉಸಿರಾಟದ ಪ್ರಕ್ರಿಯೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ದೇಹಕೆ Rಉಲ್ಲಾಸ ಒದಗಿಸುತ್ತದೆ. ಧ್ಯಾನದ ಅಭ್ಯಾಸವು ಮನಸ್ಸನ್ನು ಸಂಪೂರ್ಣವಾಗಿ ಎಲ್ಲ ರೀತಿಯ  ಆಲೋಚನೆಗಳಿಂದ ನಮ್ಮನ್ನು ಮುಕ್ತವಿರಿಸಿ ಮಾನಸಿಕ ನೆಮ್ಮದಿ ನೀಡುವುದಲ್ಲದೆ ಒತ್ತಡ ನಿವಾರಿಸುತ್ತದೆ.

ಅನ್ನಮಯ ಕೋಶ: ಇದನ್ನು ಸಮಸ್ಥಿತಿಗೆ ತರಲು ಆಸನಗಳು, ಕ್ರಿಯೆಗಳು ಮತ್ತು ಆಹಾರವು ಅತಿ ಮುಖ್ಯವಾದ ಅಂಶಗಳಾಗಿವೆ.
ಪ್ರಾಣಮಯ ಕೋಶ: ನಾಡಿಗಳ ಶುದ್ಧಿ ಹಾಗೂ ನಾಡಿಗಳ ಮುಖಾಂತರ
ದೇಹದ ಚಟುವಟಿಕೆಗಳನ್ನು ಹೆಚ್ಚಿಸುವ ಪ್ರಾಣಾಯಾಮ ಮಾಡುವುದು.
ಮನೋಮಯಕೋಶ: ಧ್ಯಾನದ ಅಭ್ಯಾಸವು ಚಿಂತೆಗಳಿಂದ ನಮ್ಮನ್ನು ದೂರವಿಡುವುದು.
ವಿಜ್ಞಾನಮಯ ಕೋಶ: ರೋಗದ ಬಗೆಗಿನ ತಿಳಿವಳಿಕೆ ಮತ್ತು ಅದರ ಪರಿಹಾರವನ್ನು ಸೂಕ್ತವಾಗಿ ತಿಳಿಸುವುದು.
ಆನಂದಮಯ ಕೋಶ: ಈ ಎಲ್ಲ ಕೋಶಗಳು ಒಂದಕ್ಕೊಂದು ಸರಿದೂಗಿದಾಗ ನಾವು ಇದನ್ನು ತಲುಪಬಹುದು.

ಪ್ರಕೃತಿ ಚಿಕಿತ್ಸೆಯ ಪ್ರಕಾರ  ನಮ್ಮ ದಿನಚರಿ ಇಂತಿರಬೇಕು
“”ಬ್ರಹ್ಮಿಮುಹೂರ್ತೆಉತ್ತಿಷ್ಠೆ ಉಷಃ ಪಾನಂ ಮಲಮೂತ್ರ ವಿಸರ್ಜನಂ ದಂತದಾವನಂ ಅಂಗಮರ್ದನಂ ಶಿರಸ್ನಾನಂ ಇಷ್ಟದೇವತಾ ಪ್ರಾರ್ಥನಂ ಸ್ವಾಧ್ಯಾಯಃ” (ಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆ ಎದ್ದು ನೀರು ಕುಡಿದು, ಮಲ-ಮೂತ್ರ ವಿಸರ್ಜಿಸಿ, ಹಲ್ಲುಗಳನ್ನು ಉಜ್ಜಿ ನಂತರ ಎಣ್ಣೆಯನ್ನು ದೇಹಕ್ಕೆ ಹಚ್ಚಿ ತಲೆಸ್ನಾನ ಮಾಡಿ ಇಷ್ಟ ದೇವರ ಪ್ರಾರ್ಥನೆಯೊಂದಿಗೆ ಸ್ವಅಧ್ಯಯನ ಮಾಡಿಕೊಳ್ಳುವುದು)

ಕ್ರಮಬದ್ಧ ದಿನಚರಿ
* ಬೆಳಿಗ್ಗೆ 5 ಗಂಟೆಯೊಳಗೆ ಹಾಸಿಗೆಯಿಂದ ಎದ್ದು 2 ರಿಂದ 4 ಲೋಟ ನೀರನ್ನು ತೆಗೆದುಕೊಂಡು ಮಲ ಮೂತ್ರ ವಿಸರ್ಜನೆ ಮಾಡಿ ಯೋಗಾಭ್ಯಾಸ ಮಾಡಬೇಕು.
* ಬೆಳಗ್ಗೆ 7 ಗಂಟೆ ಸುಮಾರಿಗೆ ಒಂದು ತಾಜಾ ತರಕಾರಿ ಅಥವಾ ಹಣ್ಣಿನ ರಸವನ್ನು ತೆಗೆದುಕೊಳ್ಳುವುದು.
* ಬೆಳಗ್ಗೆ 8 ಗಂಟೆಗೆ ಉಪಹಾರ ತೆಗೆದುಕೊಳ್ಳುವುದು. ಆದಷ್ಟು ಉಪಹಾರವು ಮೊಳಕೆ ಕಾಳುಗಳು ಅಥವಾ ತರಕಾರಿ ಅಥವಾ ಹಣ್ಣುಗಳು ಅಥವಾ ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ಆಹಾರದಿಂದ ಕೂಡಿರಬೇಕು.
* ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ಊಟ. ಇದರಲ್ಲಿ 2 ಚಪಾತಿ ಅಥವಾ ಅನ್ನ, ಬೇಯಿಸಿದ ತರಕಾರಿಗಳು, ಪಲ್ಯ, ಮಜ್ಜಿಗೆ ಅಥವಾ ಸೂಪನ್ನು ತೆಗೆದುಕೊಳ್ಳುವುದು.
* ಸಂಜೆ 4 ಗಂಟೆಗೆ ತಾಜಾ ಹಣ್ಣಿನ ರಸ ಅಥವಾ ಎಳನೀರು ಅಥವಾ ಬಾರ್ಲಿ ನೀರನ್ನು ತೆಗೆದುಕೊಳ್ಳುವುದು.
* ರಾತ್ರಿ 6.30 ರಿಂದ 7.30 ಗಂಟೆಗಳೊಳಗಾಗಿ ಊಟ. 2 ಚಪಾತಿ ಅಥವಾ ರೊಟ್ಟಿ ಜತೆಗೆ ಬೇಯಿಸಿದ ತರಕಾರಿಗಳು, ಸೂಪ್‌ಅಥವಾ ಮಜ್ಜಿಗೆ ಇಲ್ಲವಾದರೆ ಕೇವಲ ತರಕಾರಿಗಳು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದು.


ಡಾ| ಗಂಗಾ ಧರ ವರ್ಮ ಬಿ.ಆರ್‌.

ತಜ್ಞ ವೈದ್ಯರು, ಸರ್ಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ,  ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next