Advertisement

ಅರ್ಥವತ್ತಾದ ಚಟುವಟಿಕೆಗಳಿಂದ ನಮ್ಮ ಬದುಕನ್ನು ಸಾರ್ಥಕಗೊಳಿಸೋಣ

12:11 AM Jan 17, 2021 | Team Udayavani |

ಇದು 45 ವರ್ಷ ವಯಸ್ಸಿನ ಮಧ್ಯವಯಸ್ಕರೊಬ್ಬರು ಮಾತು: “ಹಿಂದೆ ನನಗೆ ಮತ್ತು ನನ್ನ ಕುಟುಂಬಕ್ಕಾಗಿ ವ್ಯಯಿಸಲು ರವಿವಾರ ಮಾತ್ರ ಸಮಯ ಸಿಗುತ್ತಿತ್ತು. ನಾನು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ. ನನ್ನ ಹೆಚ್ಚಿನ ಸಮಯವೆಲ್ಲ ಶಾಲೆಯಲ್ಲಿ ಮಕ್ಕಳು ಮತ್ತು ಸಹೋದ್ಯೋಗಿ ಶಿಕ್ಷಕರ ಜತೆಗೆ ಕಳೆದುಹೋಗುತ್ತಿತ್ತು. ನನ್ನದು ನಿಗದಿತವಾದ ಆದರೆ ಸ್ವಲ್ಪ ಮಾತ್ರ ಆಚೀಚೆ ಮಾಡಿಕೊಳ್ಳಬಹುದಾದ ಉದ್ಯೋಗ.

Advertisement

ಕೋವಿಡ್ ಹಾವಳಿ ಆರಂಭವಾಗಿ ಲಾಕ್‌ಡೌನ್‌ ಘೋಷಣೆಯಾದಾಗ ನನ್ನ ಸಹಜ ದೈನಿಕ ಚಟುವಟಿಕೆಗಳಲ್ಲಿಯೂ ಏರುಪೇರು ಉಂಟಾಯಿತು. ವೈರಾಣುವಿನ ಪ್ರಸರಣ, ನನ್ನ ಉದ್ಯೋಗ ಭದ್ರತೆ, ಸಂಬಳ ಇತ್ಯಾದಿಯಾಗಿ ಕೆಲವು ಸಂಗತಿಗಳು ನನ್ನನ್ನು ಕಳವಳಕ್ಕೀಡು ಮಾಡಿದವು. ಮನೆಯಲ್ಲಿ ಕಳೆಯುವುದಕ್ಕೆ ಬೇಕಾದಷ್ಟು ಸಮಯ ಸಿಕ್ಕಿದ ಕಾರಣ ನಾನು ನನ್ನ ದೈನಿಕ ಚಟುವಟಿಕೆಗಳನ್ನು ಬೇರೆಯದೇ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ವ್ಯಾಮಾಮ ಮಾಡುವುದು, ಹೊಸ ಭಾಷೆಯ ಕಲಿಕೆ, ಅಡುಗೆಯಲ್ಲಿ, ಮನೆಯನ್ನು ಶುಚಿಗೊಳಿಸುವುದರಲ್ಲಿ ಹೆಂಡತಿಗೆ ಸಹಕರಿಸುವುದು, ಮಕ್ಕಳಿಗೆ ಅಭ್ಯಾಸದಲ್ಲಿ ನೆರವಾಗುವುದರ ಮೂಲಕ ನನ್ನ ಸಮಯವನ್ನು ಮರು ಹೊಂದಿಸಿಕೊಂಡೆ. ಲಾಕ್‌ಡೌನ್‌ನ ಒಂದು ಪ್ರಯೋಜನ  ಎಂದರೆ, ಅನಗತ್ಯವಾಗಿ ತಿರುಗಾಡುವುದನ್ನು ಅದು ತಪ್ಪಿಸಿತು. ಆದರೆ ಸಮಾಜದಿಂದ ದೂರವಾಗಿ ಪ್ರತ್ಯೇಕವಾಗಿರುವುದು ಬೇಸರ ಹುಟ್ಟಿಸಿತ್ತು.’

ನಾವು, ಮನುಷ್ಯರು ಸಾಮಾಜಿಕವಾಗಿ ಬದುಕುವ ಜೀವಿಗಳು. ಸಾಮಾಜಿಕವಾಗಿ ಜೀವಿಸುವ ಇತರ ಜೀವಿಗಳ ಹಾಗೆಯೇ ನಾವು ಕೂಡ ಸಾಮಾಜಿಕ ಸಂಬಂಧಗಳಿಗಾಗಿ ಇತರ ಸಂಬಂಧಿ ಸಾಮಾಜಿಕ ಜೀವಿಗಳ ಜತೆಗೆ ಅವಲಂಬನೆ ಹೊಂದುವ ಮೂಲಕ ಅಭಿವೃದ್ಧಿ ಸಾಧಿಸಿದ್ದೇವೆ. ನಮ್ಮ ಬೆಳವಣಿಗೆಯ ಮೈಲಿಗಲ್ಲು ಇದು. ಕೋವಿಡ್‌-19 ಹಾವಳಿ ಆರಂಭವಾಗಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಸಾಮಾಜಿಕ ಸಂವಹನದ ಚಟುವಟಿಕೆಗಳು ನಿರ್ಬಂಧಕ್ಕೊಳಗಾಗಿ ಜಾಗತಿಕ ಹಳ್ಳಿಯಲ್ಲಿ ಬದುಕುವುದು ಎಂಬ ಪರಿಕಲ್ಪನೆ ಆಮೂಲಾಗ್ರವಾಗಿ ಬದಲಾಯಿತು. ಚಟುವಟಿಕೆಯಿಂದಿರಲು ಮತ್ತು ವ್ಯಸ್ತವಾಗಿರಲು ಸಾಮಾಜಿಕವಾಗಿ ಸಕ್ರಿಯವಾಗಿರುವುದು ಕೋವಿಡ್‌ ಪೂರ್ವ ದಿನಗಳಲ್ಲಿ ಅತ್ಯುಪಯುಕ್ತ ಮತ್ತು ಅವಶ್ಯವಾದ ವಿಧಾನವಾಗಿತ್ತು.

ಇದರಿಂದಾಗಿ ಜನರು ಬೌದ್ಧಿಕವಾಗಿ ಚುರುಕಾಗಿರುತ್ತಿದ್ದರು. ಆದರೆ ಕೋವಿಡ್ ಹಾವಳಿ ಆರಂಭವಾದ ಬಳಿಕ ಇದು ಜಾಗತಿಕ ಮಟ್ಟದಲ್ಲಿಯೇ ಆಮೂಲಾಗ್ರವಾಗಿ ಬದಲಾಯಿತು. ಅದುವರೆಗಿನ ಎಲ್ಲ ಸಾಮಾಜಿಕ ಚಟುವಟಿಕೆಗಳೂ ಮರೆಗೆ ಸರಿದು ಕ್ವಾರಂಟೈನ್‌, ಐಸೊಲೇಶನ್‌, ಸಾಮಾಜಿಕವಾಗಿ ಪ್ರತ್ಯೇಕಗೊಳ್ಳುವಿಕೆ, ಸ್ವಯಂ ಪ್ರತ್ಯೇಕತೆ ಇತ್ಯಾದಿಗಳೇ ಮುನ್ನೆಲೆಗೆ ಬಂದವು. ಕೊರೊನಾ ವೈರಾಣು ಪ್ರಸರಣವನ್ನು ತಡೆಯುವುದಕ್ಕೆ ಅನಸರಿಸಲಾದ ಅನಿವಾರ್ಯವಾದ ಪ್ರಕ್ರಿಯೆಗಳು ಇವಾಗಿದ್ದವು. ಇದರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಜನರ ಬದುಕಿನ ಮೇಲೆ ಪರಿಣಾಮಗಳು ಉಂಟಾದವು.

ಸಾಮಾಜಿಕವಾಗಿ ಅಂತರ ಕಾಪಾಡಿಕೊಳ್ಳುವುದು ಈಗಲೂ ಜಾರಿಯಲ್ಲಿದೆ ಮತ್ತು ಇನ್ನಷ್ಟು ದೀರ್ಘ‌ಕಾಲ ನಾವು ಇದನ್ನು ಅನುಸರಿಸಬೇಕಾಗಿದೆ. ಕೊರೊನಾ ವೈರಾಣು ಉಸಿರಾಟ ಪ್ರಕ್ರಿಯೆಯ ಸಂದರ್ಭ ಹೊರಬೀಳುವ ಹನಿಬಿಂದುಗಳ ಮೂಲಕ ಪ್ರಸಾರವಾಗುವುದರಿಂದ ಅದರ ಪ್ರಸಾರವನ್ನು ತಡೆಯಲು ಇತರರ ಜತೆಗೆ ಅನಿವಾರ್ಯವಾಗಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಜನರಿಗೆ ದೈನಿಕ ಕೆಲಸ ಕಾರ್ಯಗಳನ್ನು ನಡೆಸಲು ಅನುವು ಮಾಡಿಕೊಡುವುದರ ಜತೆಗೆ ಇತರರ ಜತೆಗೆ ಸಂವಹನ ಮತ್ತು ಸಂಪರ್ಕವನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ. ಸಾಂಸ್ಥಿಕ ನಿಯಮಗಳ ಪ್ರಕಾರ ಮನೆಯಿಂದಲೇ ಕೆಲಸ ಮಾಡುವುದು (ವರ್ಕ್‌ ಫ್ರಮ್‌ ಹೋಮ್‌), ಅಗತ್ಯವಿದ್ದರೆ ಮಾತ್ರ ಪ್ರಯಾಣಿಸುವುದು, ಸಾರ್ವಜನಿಕ ಸ್ಥಳಗಳು ಮತ್ತು ಜನಸಂದಣಿಗಳು, ಸಮಾರಂಭಗಳಿಗೆ ಹಾಜರಾಗುವುದನ್ನು ತ್ಯಜಿಸುವುದು ಮತ್ತು ಇತರರಿಂದ ಸುರಕ್ಷಿತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸೇರಿವೆ.

Advertisement

ಇವೆಲ್ಲವುಗಳಿಂದಾಗಿ ಜನರು ಗೃಹಬಂಧನಕ್ಕೆ ಒಳಗಾದ ಅನುಭವಕ್ಕೆ ಈಡಾಗಿದ್ದಾರೆ. ಮುಂಜಾಗ್ರತೆಯ ಕ್ರಮಗಳಾಗಿ ಸಾಮಾನ್ಯ ಜನತೆಯ ಮೇಲೆ ವಿಧಿಸಲ್ಪಟ್ಟ ಈ ಕ್ರಮಗಳಿಂದಾಗಿ ಎಲ್ಲ ವಯೋಮಾನದ ಜನರಲ್ಲಿ ಮಾನಸಿಕ ಮತ್ತು ಮನೋವೈಜ್ಞಾನಿಕ ಸವಾಲುಗಳು ಉಂಟಾಗುವ ಸಾಧ್ಯತೆ ಎದುರಾಗಿದೆ. ಕೆಲವು ಮಂದಿಗೆ ಇದರಿಂದಾಗಿ ಹತಾಶೆ ಮತ್ತು ಬೇಸರ ಕೂಡ ಉಂಟಾಗಿದೆ. ಉದ್ದೇಶಿತ ಮತ್ತು ಅರ್ಥವಂತಿಕೆಯ ಸಾಮಾಜಿಕ, ಸಾಮುದಾಯಿಕ  ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಇರುವ ದೀರ್ಘ‌ಕಾಲಿಕ ನಿರ್ಬಂಧವು ಜನರಲ್ಲಿ ಹತಾಶೆ ಮತ್ತು ಬೇಗುದಿಯನ್ನು ಉಂಟುಮಾಡಿದೆ. ಇವೆಲ್ಲವೂ ಜತೆಯಾಗಿ ಜನರಲ್ಲಿ ತಾತ್ಕಾಲಿಕವಾಗಿಯಾದರೂ ಸಾಂದರ್ಭಿಕ ಏಕಾಂಗಿತನ, ಖನ್ನತೆ, ಒತ್ತಡ, ಆತಂಕ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದೆ. ಇಂತಹ ಸನ್ನಿವೇಶವು ಅತಿಯಾದ ಧೂಮಪಾನ, ಮದ್ಯ ಅವಲಂಬನೆಯಂತಹ ವರ್ತನಾತ್ಮಕ ಬದಲಾವಣೆಗಳಿಗೂ ಕಾರಣವಾಗಬಹುದಾಗಿದೆ. “ಭಾರತದ ಎಲ್ಲ ರಾಜ್ಯಗಳಲ್ಲಿ ಮಾನಸಿಕ ಅನಾರೋಗ್ಯಗಳ ಹೊರೆ: ಕಾಯಿಲೆಗಳ ಜಾಗತಿಕ ಹೊರೆಯ ಅಧ್ಯಯನ 1990-2017′ ಎಂಬ ಶೀರ್ಷಿಕೆಯಲ್ಲಿ 2020ರಲ್ಲಿ ಲ್ಯಾನ್ಸೆಟ್‌ ಸೈಟಿಯಾಟ್ರಿ ನಿಯತಕಾಲಿಕದಲ್ಲಿ ಐಸಿಎಂಆರ್‌ ಪ್ರಕಾಶಿತ ಅಧ್ಯಯನ ವರದಿಯ ಪ್ರಕಾರ, ಪ್ರತೀ ಏಳು ಮಂದಿ ಭಾರತೀಯರಲ್ಲಿ ಒಬ್ಬರು ಮಾನಸಿಕ ಅನಾರೋಗ್ಯಗಳನ್ನು ಹೊಂದಿರುತ್ತಾರೆ. ಕೊರೊನೋತ್ತರ ಸನ್ನಿವೇಶಗಳಲ್ಲಿ ಇದು ಅನಿವಾರ್ಯವಾಗಿ ಮುಂದುವರಿಯಲಿದೆ ಮತ್ತು ಹೆಚ್ಚಲಿದೆ.

ಗರಿಷ್ಠ ಫ‌ಲಿತಾಂಶವನ್ನು ಪಡೆಯಲು ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯವು ಹದಗೆಡುವುದನ್ನು ತಡೆಯಲು ಚಟುವಟಿಕೆಗಳ ಆಯ್ಕೆ ಬಹಳ ನಿರ್ಣಾಯಕವಾಗಿದೆ. ದೈನಿಕ ರೂಢಿಗತ ಚಟುವಟಿಕೆಗಳಾದ ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮನೆ ಶುಚಿಗೊಳಿಸುವುದು, ಸ್ನಾನ ಮಾಡುವುದು ಇತ್ಯಾದಿಗಳು ಕಡ್ಡಾಯ ಎಂಬಂಥವಾಗಿವೆ. ಅಡುಗೆ ಮಾಡುವುದು ಒಂದು ಸಕ್ರಿಯವಾಗಬಲ್ಲ ಚಟುವಟಿಕೆಯಾಗಿದ್ದು, ಹೆಚ್ಚು ಮನೆಮಂದಿಯನ್ನು ಒಳಗೊಳ್ಳುವುದಕ್ಕೆ ಸಾಧ್ಯವಿದೆ. ತರಕಾರಿ ಹೆಚ್ಚುವುದು, ತೊಳೆದು ಶುಚಿಗೊಳಿಸುವುದು, ಮಸಾಲೆ ಸಿದ್ಧಪಡಿಸುವುದು, ನಿರ್ದಿಷ್ಟ ಖಾದ್ಯಗಳನ್ನು ತಯಾರಿಸುವುದು ಮತ್ತು ಎಲ್ಲರೂ ಜತೆಗೂಡಿ ಆಹಾರ ಸೇವಿಸುವಂತಹ ವಿವಿಧ ಚಟುವಟಿಕೆಗಳಲ್ಲಿ ಎಲ್ಲರೂ ಭಾಗಿಯಾಗಲು ಸಾಧ್ಯವಿದೆ.

ಇದೇರೀತಿಯಾಗಿ ಬಟ್ಟೆ ತೊಳೆಯುವುದು, ಮನೆ ಶುಚಿಗೊಳಿಸುವಂತಹ ಕೆಲಸಗಳನ್ನು ಸರಿಯಾಗಿ ಯೋಜಿಸಿ, ಜವಾಬ್ದಾರಿಗಳನ್ನು ಹಂಚಿಕೊಂಡಲ್ಲಿ ಎಲ್ಲರೂ ಜತೆ ಸೇರಿ ಸಕ್ರಿಯವಾಗಿ ನಡೆಸಲು ಸಾಧ್ಯವಿದೆ. ಇದೇರೀತಿಯಾಗಿ ಈಜುಕೊಳ ಅಥವಾ ಕೆರೆಯಂತಹ ಸೌಲಭ್ಯ ಇದ್ದಲ್ಲಿ ಸ್ನಾನ ಮಾಡುವುದನ್ನೂ ಮಕ್ಕಳನ್ನು ಜತೆ ಸೇರಿಸಿಕೊಂಡು ಮನೋರಂಜನೆಯಂತೆ ಮಾಡುವುದು ಸಾಧ್ಯ.

ಸೂಕ್ತವಾದ ಐಚ್ಛಿ ಚಟುವಟಿಕೆಗಳಲ್ಲಿ ಹವ್ಯಾಸಗಳು ಮತ್ತು ವಿರಾಮ ಚಟುವಟಿಕೆಗಳು ಉತ್ತಮ ಉದಾಹರಣೆಗಳಾಗಿವೆ. ಈ ಹಿಂದೆ ಸಮಯದ ಕೊರತೆಯಿಂದ ಮರೆಯಾದ ಅಥವಾ ಮರೆತುಹೋದ ಹವ್ಯಾಸಗಳನ್ನು ಮತ್ತೆ ಪುನಶ್ಚೇತನಗೊಳಿಸಬಹುದಾಗಿದೆ. ಚಿತ್ರ ಬಿಡಿಸುವುದು, ಹಾಡುವುದು, ಕರಕುಶಲ ವಸ್ತುಗಳನ್ನು ತಯಾರಿಸುವುದು ಮತ್ತಿತರ ಅನೇಕ ಹವ್ಯಾಸಗಳು ಈ ನಿಟ್ಟಿನಲ್ಲಿ ಚೇತೋಹಾರಿಯಾಗಬಲ್ಲವು. ಕೆಲವರು ಸಂಗೀತ ಕೇಳುವುದು ಅಥವಾ ಪುಸ್ತಕಗಳನ್ನು ಓದುವುದನ್ನು ಆನಂದಿಸಬಹುದು. ಇಂತಹ ಹಲವು ಚಟುವಟಿಕೆಗಳನ್ನು ಒಬ್ಬಂಟಿಯಾಗಿ ಅಥವಾ ಕೆಲವೇ ಜನರನ್ನು ಜತೆ ಸೇರಿಸಿಕೊಂಡು ನಡೆಸಬಹುದಾಗಿದೆ. ಇದು ನಮ್ಮನ್ನು ವ್ಯಸ್ತರಾಗಿ ಇರಿಸುವುದು ಮಾತ್ರವಲ್ಲದೆ ಜೀವನದ ಏಕತಾನತೆಯಿಂದ ಪಾರುಮಾಡುತ್ತವೆ.

 

ಯಾರು ಸಹಾಯ ಮಾಡಬಲ್ಲರು? :

ಸರಿಯಾದ ಚಟುವಟಿಕೆಗಳ ಆಯ್ಕೆಯು ವ್ಯಕ್ತಿಗತ ಸಾಮರ್ಥ್ಯಗಳ ಸರಿಯಾದ ವಿಶ್ಲೇಷಣೆ ಮತ್ತು ಮಿತಿಗಳನ್ನು ಆಧರಿಸಿ ನಡೆಯಬೇಕಾಗುತ್ತದೆ. ಕೆಲವು ಬಾರಿ ಸಂದರ್ಭ ಮತ್ತು ವ್ಯಕ್ತಿಯ ಅಗತ್ಯಗಳನ್ನು ಆಧರಿಸಿ ಚಟುವಟಿಕೆಗಳಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ. ಚಟುವಟಿಕೆಗಳ ಆಯ್ಕೆ ಮತ್ತು ಸಮಾಲೋಚನೆಯಂತಹ ವಿಚಾರದಲ್ಲಿ ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ವಿಶೇಷ ಪರಿಣತಿಯನ್ನು ಹೊಂದಿರುತ್ತಾರೆ. ಅರ್ಥವತ್ತಾದ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಜನರಿಗೆ ಮಾರ್ಗದರ್ಶನ ಬೇಕಾಗುತ್ತದೆ. ಸರಿಯಾದ ಚಟುವಟಿಕೆಗಳ ಆಯ್ಕೆಯಿಂದ ಸಾಮಾಜಿಕ ಅಂತರವನ್ನೂ ಪುನರ್‌ವ್ಯಾಖ್ಯಾನಿಸುವುದು ಸಾಧ್ಯ. ಜನರು ಆಕ್ಯುಪೇಶನಲ್‌ ಥೆರಪಿಸ್ಟ್‌ ಗಳಿಂದ ಚಟುವಟಿಕೆಗಳ ಆಯ್ಕೆಯ ಬಗ್ಗೆ ಮಾರ್ಗದರ್ಶನ ಪಡೆಯಬಹುದಾಗಿದೆ.

 

 

– ದೀಪಾ

ಬಿಒಟಿ, ದ್ವಿತೀಯ ವರ್ಷ

ಕೌಶಿಕ್‌ ಸಾವು

ಅಸಿಸ್ಟೆಂಟ್‌ ಪ್ರೊಫೆಸರ್‌, ಹಿರಿಯ ಶ್ರೇಣಿ

ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next