Advertisement

ನಮ್ಮ ಸಾಮರ್ಥ್ಯ ಅರಿಯೋಣ

11:34 PM Nov 10, 2019 | Sriram |

ಆನೆ ಶಿಬಿರಕ್ಕೆ ಪ್ರವಾಸಿಯೊಬ್ಬ ತೆರಳಿದ್ದ. ಅಲ್ಲಿ ಆನೆಗಳನ್ನು ಹಗ್ಗ ಅಥವಾ ಸರಪಳಿಯಿಂದ ಮರಗಳಿಗೆ ಕಟ್ಟಿ ಹಾಕಿದ್ದನ್ನು ನೋಡಿ ಚಕಿತನಾದ. ಆತನಿಗೊಂದು ಯೋಚನೆ ಬಂತು. ಆನೆ ಬಲಿಷ್ಠ ಪ್ರಾಣಿ. ಅದನ್ನು ಕಟ್ಟಿರುವ ಮರವನ್ನೇ ಬೇಕಿದ್ದರೂ ಎತ್ತಿ ಹಾಕಬಲ್ಲದು. ಇನ್ನು, ಈ ಸರಪಳಿ, ಹಗ್ಗ ಯಾವ ಲೆಕ್ಕ? ಒಂದು ಚೂರು ಬಲ ಪ್ರಯೋಗಿಸಿದರೂ ಬಂಧನ ಮುರಿದು ಹೋಗುತ್ತದೆ. ಆದರೂ ಆನೆ ತಪ್ಪಿಸಿಕೊಳ್ಳುತ್ತಿಲ್ಲವೇಕೆ? ಎಂದು.

Advertisement

ಇದಕ್ಕೆ ಉತ್ತರ ತಿಳಿಯಲು ಆತ ಮಾವುತನನ್ನೇ ಕೇಳಿದ.ಈ ಆನೆಗಳು ಮರಿಯಾಗಿದ್ದ ಸಂದರ್ಭದಲ್ಲಿ ನಾವು ಅವುಗಳನ್ನು ಹಗ್ಗ ಅಥವಾ ಸರಪಳಿಯಿಂದಲೇ ಕಟ್ಟುತ್ತೇವೆ. ಆಗ ಅವುಗಳು ಹಗ್ಗವನ್ನು ಕಿತ್ತುಕೊಂಡು ಹೋಗುವಷ್ಟು ಶಕ್ತವಾಗಿರುವುದಿಲ್ಲ. ಕಾಲಿನಿಂದ ಎಳೆಯಲು ಪ್ರಯತ್ನಿಸುತ್ತವೆ. ಆದರೆ, ಮುಗ್ಗರಿಸುತ್ತವೆ. ಈ ಹಗ್ಗ ಅಥವಾ ಸರಪಳಿ ಕಿತ್ತುಕೊಂಡು ಹೋಗಲು ನನ್ನಿಂದ ಸಾಧ್ಯವಿಲ್ಲ ಎನ್ನುವ ಮನಃಸ್ಥಿತಿಯಲ್ಲೇ ಆನೆಗಳು ಬೆಳೆಯುತ್ತವೆ. ಸಾಕಷ್ಟು ಶಕ್ತಿ ಸಂಪಾದಿಸಿದ ಮೇಲೂ ಈ ಬಂಧನದಿಂದ ಪಾರಾಗುವುದು ತಮ್ಮಿಂದ ಸಾಧ್ಯವಿಲ್ಲ ಎಂದೇ ನಂಬಿರುತ್ತವೆ. ಹೀಗಾಗಿ, ಅವು ಕಟ್ಟಿ ಹಾಕಿದÇÉೇ ಇರುತ್ತವೆ. ಅಷ್ಟೇ ಏಕೆ ಸ್ವಾಮಿ? ಈ ಹಗ್ಗ ಅಥವಾ ಸರಪಳಿ ಅವುಗಳ ಕಾಲಲ್ಲಿದ್ದರೂ ಸಾಕು. ಮತ್ತೂಂದು ತುದಿಯನ್ನು ಕಟ್ಟಬೇಕೆಂದೂ ಇಲ್ಲ    ಎಂದು ಮಾವುತ ಉತ್ತರಿಸಿದ.

ಮರಿಯಿದ್ದಾಗ ಆನೆಗೂ ಶಕ್ತಿ ಇರುವುದಿಲ್ಲ. ಕಟ್ಟಿ ಹಾಕಿದರೆ ಬಿಚ್ಚಿಕೊಂಡು ಹೋಗುವುದು ಕಷ್ಟ. ಆದರೆ, ಆನೆ ಬೆಳೆದಿದೆ. ಅದರ ಶಕ್ತಿಯ ಮುಂದೆ ಈಗ ಯಾವ ಬಂಧನವೂ ಬಂಧನವೆನಿಸಲಿಕ್ಕಿಲ್ಲ. ಆದರೂ ಆನೆ ಹಗ್ಗ ಅಥವಾ ಸರಪಳಿಯ ಪರಿಧಿಯಿಂದ ಆಚೆಗೆ ಹೋಗಲು ಪ್ರಯತ್ನಿಸುವುದೇ ಇಲ್ಲ. ಆನೆಯನ್ನು ನಿಜವಾಗಿ ಕಟ್ಟಿಹಾಕಿದ್ದು ಹಗ್ಗ ಅಥವಾ ಸರಪಳಿ ಅಲ್ಲ. ಆನೆ, ತನ್ನನ್ನು ತಾನೇ ಕಟ್ಟಿಕೊಂಡಿದೆ!

ನಮ್ಮ ಕಥೆಯೂ ಆನೆಗಿಂತ ಭಿನ್ನವಾಗೇನೂ ಇಲ್ಲ. ನಮ್ಮ ಶಕ್ತಿಯ ಅರಿವೂ ನಮಗಿರುವುದಿಲ್ಲ. ಇದು ನನ್ನಿಂದ ಆದೀತೇ ಎಂಬ ಹಿಂಜರಿಕೆಯೇ ನಮ್ಮೆಲ್ಲ ಸಾಧನೆಗೆ ಅಡ್ಡಿಯಾಗಿದೆ. ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತಿದ್ದರೆ ಕೊಲಂಬಸ್‌ ಅಮೆರಿಕವನ್ನು ಪತ್ತೆ ಮಾಡುತ್ತಿದ್ದನೇ? ವಾಸ್ಕೋ ಡ ಗಾಮ ಭಾರತಕ್ಕೆ ಬರುತ್ತಿದ್ದನೇ? ತಾನೊಬ್ಬ ಗೃಹಿಣಿ. ಮನೆ, ಮಕ್ಕಳನ್ನು ನೋಡಿಕೊಂಡರೆ ಸಾಕೆಂದು ಸುಮ್ಮನಿದ್ದರೆ ಮೇರಿ ಕೋಮ್‌ ಎಂಟು ಬಾರಿ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ಆಗುತ್ತಿದ್ದರೇ? ಇಂಥ ಎಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿಲ್ಲ? ನಮ್ಮ ಶಕ್ತಿಯನ್ನು ಮೊದಲು ಅರಿಯಬೇಕು. ಇದು ನನ್ನಿಂದ ಸಾಧ್ಯ. ಈಗ ಅಲ್ಲದಿದ್ದರೆ ಇನ್ನೆಂದಿಗೂ ಇಲ್ಲ’ ಎಂಬ ಭಾವನೆಯಿಂದ ಮುಂದಡಿಯಿಟ್ಟರೆ ಯಶಸ್ಸು ನಿಶ್ಚಿತ.

ದಾರಿಯಲ್ಲಿ ಕಲ್ಲು ಮುಳ್ಳು
ರಾಜನೊಬ್ಬ ದಾರಿಯಲ್ಲಿ ದೊಡ್ಡ ಕಲ್ಲನ್ನು ಅಡ್ಡ ಇಟ್ಟು, ಅದರ ಮೇಲೊಂದಿಷ್ಟು ಮುಳ್ಳಿನ ರಾಶಿ ಪೇರಿಸಿಟ್ಟು ಮರೆಯಲ್ಲಿ ಕುಳಿತಿದ್ದ. ದಾರಿಹೋಕರೆಲ್ಲ ಈ ಕಲ್ಲನ್ನು ಕಂಡು ಗೊಣಗುತ್ತ ಸುತ್ತಿ ಬಳಸಿ ಸಾಗಿದರು. ಕೆಲವರು ರಸ್ತೆ ಸರಿಯಾಗಿ ಇಟ್ಟುಕೊಳ್ಳದ ರಾಜನನ್ನೇ ದೊಡ್ಡದಾಗಿ ಬಯ್ಯುತ್ತ ಹೋದರು. ಆದರೂ ರಾಜ ಸುಮ್ಮನಿದ್ದ.

Advertisement

ಒಬ್ಬ ರೈತ ತಲೆ ಮೇಲೆ ಹುಲ್ಲಿನ ಹೊರೆ ಹೊತ್ತುಕೊಂಡು ಹೊಲದಿಂದ ಮರಳುತ್ತಿದ್ದ. ದಾರಿಯಲ್ಲಿರುವ ಕಲ್ಲನ್ನು ಕಂಡ. ಅಯ್ಯೋ, ಇದರಿಂದ ಎಷ್ಟು ಜನರಿಗೆ ತೊಂದರೆ ಆಗುತ್ತದೆಯೋ ಏನೋ ಎಂದು ಭಾವಿಸಿ, ಹುಲ್ಲಿನ ಹೊರೆ ಇಳಿಸಿ, ತುಂಬ ಪರಿಶ್ರಮ ಪಟ್ಟು ಆ ಕಲ್ಲನ್ನು ಬದಿಗೆ ಸರಿಸಿದ. ಅಂಗವಸ್ತ್ರಕ್ಕೆ ಬೆವರು ಒರೆಸಿಕೊಳ್ಳುತ್ತ ಆ ರೈತ ವಾಪಸ್‌ ಬಂದು ನೋಡುತ್ತಾನೆ, ಕಲ್ಲಿದ್ದ ಜಾಗದಲ್ಲಿ ಚಿನ್ನದ ನಾಣ್ಯಗಳ ಥೈಲಿಯಿತ್ತು. ಜತೆಗೆ, ಕಲ್ಲನ್ನು ಬದಿಗೆ ಸರಿಸಿದವರಿಗೇ ಈ ನಾಣ್ಯಗಳು ಸೇರಬೇಕೆಂಬ ಒಕ್ಕಣಿಕೆಯಿದ್ದ ರಾಜನ ಪತ್ರವೂ ಇತ್ತು!

ನಮ್ಮ ಸಾಧನೆಯ ಹಾದಿಯಲ್ಲಿ ಬರುವ ಪ್ರತಿಯೊಂದು ಅಡ್ಡಿಯೂ ನಮ್ಮ ಸಾಮರ್ಥ್ಯಕ್ಕೆ ಒಂದು ಪರೀಕ್ಷೆ, ನಮ್ಮ ಕೌಶಲಗಳನ್ನು ಬೆಳೆಸಿಕೊಳ್ಳುವ ಸದವಕಾಶ ಎಂದು ಭಾವಿಸಬೇಕು. ಸೋಮಾರಿಗಳು ಸಮಸ್ಯೆಯನ್ನು ಹಾಗೂ ಅದಕ್ಕೆ ಕಾರಣರೆಂದು ಯಾರನ್ನೋ ದೂರುತ್ತಾರೆ. ಉಳಿದವರು ಆ ಪರೀಕ್ಷೆಯನ್ನು ಗೆದ್ದು ಯಶಸ್ವಿಯಾಗುತ್ತಾರೆ.

ಮನಸ್ಸು, ದೇಹಗಳ ಬಂಧನವನ್ನು ಬಿಚ್ಚಿಕೊಂಡರೆ ಮುಂದಿದೆ ನಂದನವನ, ಆನಂದವನ. ಅನುಭವಿಸೋಣ.

  ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next