Advertisement

ನಮ್ಮ ದಾರಿ ನಮಗೆ: ದೇವೇಗೌಡ ಸ್ಪಷ್ಟ ನುಡಿ

01:44 AM Jul 08, 2019 | Sriram |

ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ರಾಜ್ಯದ ಕೈ ನಾಯಕರು ಪ್ರಾಮಾಣಿಕವಾಗಿ ಬಯಸಿದರೆ ಮಾತ್ರ ಸರ್ಕಾರ ಉಳಿಯುತ್ತದೆ, ಇಲ್ಲದಿದ್ದರೆ ನಾವು ಬೇರೆ ದಾರಿ ನೋಡಿಕೊಳ್ಳುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಡ್ಡಿ ಮುರಿದಂತೆ ಕಾಂಗ್ರೆಸ್‌ಗೆ ಸಂದೇಶ ರವಾನಿಸಿದ್ದಾರೆ.

Advertisement

ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ತಮ್ಮ ನಿವಾಸಕ್ಕೆ ಆಗಮಿಸಿ ಮಾತನಾಡಿದ ಸಂದರ್ಭದಲ್ಲಿ, ಕಾಂಗ್ರೆಸ್‌ ನಾಯಕರ ವರ್ತನೆ ಬಗ್ಗೆಯೇ ತೀವ್ರ ಅಸಮಾಧಾನ ಹೊರಹಾಕಿದ ದೇವೇಗೌಡರು, ಪರಿಸ್ಥಿತಿ ಕೈ ಮೀರುವವರೆಗೂ ಎಲ್ಲರೂ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ಫ‌ಲಿತಾಂಶದ ನಂತರ ಮನೆಗೆ ಬಂದವರು ನೀವು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದವರು ನೀವು, ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಿದವರೂ ನೀವು. ಆ ನಂತರ ಏನೆಲ್ಲಾ ಬೆಳವಣಿಗೆಯಾಯಿತು. ಎಲ್ಲವನ್ನು ಸೋನಿಯಾಗಾಂಧಿ ಹಾಗೂ ರಾಹುಲ್ಗಾಂಧಿಯವರಿಗೂ ಸಮಗ್ರವಾಗಿ ವಿವರಿಸಿದ್ದೇನೆ. ಉಳಿದದ್ದು ನಿಮ್ಮ ಕೈಯಲ್ಲೇ ಇದೆ ಎಂದು ಹೇಳಿದರು ಎನ್ನಲಾಗಿದೆ.

ರಾಜೀನಾಮೆ ಕೊಟ್ಟವರು ಯಾರು?: ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜ್‌ ಅವರು ಯಾರ ಬೆಂಬಲಿಗರು? ಅವರು ರಾಜೀನಾಮೆ ಯಾಕೆ ಕೊಟ್ಟರು? ಇದೆಲ್ಲವೂ ಪೂರ್ವನಿಯೋಜಿತವೇ? ಮುಖ್ಯಮಂತ್ರಿಯವರು ಅಮೆರಿಕಕ್ಕೆ ಹೋಗಿರುವಾಗಲೇ ಹೀಗೆ ನಡೆಯಲು ಕಾರಣವಾದರೂ ಏನು ಎಂದು ಪ್ರಶ್ನಿಸಿದರು ಎಂದು ಹೇಳಲಾಗಿದೆ.

ರಾಮಲಿಂಗಾರೆಡ್ಡಿ ಹಾಗೂ ನಗರದ ಮೂವರು ಶಾಸಕರ ಜತೆ ನಡೆದ ಸಮಾಲೋಚನೆಯ ವಿವರಗಳನ್ನು ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು ದೇವೇಗೌಡರಿಗೆ ನೀಡಿದರು. ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಪದೇ ಪದೆ ಇಂತಹ ಡ್ರಾಮಾ ನಡೆದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತಾ? ರೈತರ ಸಾಲ ಮನ್ನಾ ಸೇರಿ ಎಷ್ಟೆಲ್ಲಾ ಕಾರ್ಯಕ್ರಮ ಕೊಟ್ಟರೂ ವ್ಯರ್ಥವಾದಂತಾಗಿಲ್ಲವೇ? ಎಂದು ಬೇಸರ ವ್ಯಕ್ತಪಡಿ ಸಿದರು ಎಂದು ತಿಳಿದು ಬಂದಿದೆ.

Advertisement

ಸಿಎಂ ಬದಲಾವಣೆ ಮಾತು: ಅತೃಪ್ತ ಶಾಸಕರ ಬೇಡಿಕೆ ವಿಚಾರ ಪ್ರಸ್ತಾಪ ಸಂದರ್ಭದಲ್ಲಿ ಕೆಲವು ನಾಯಕತ್ವ ಬದಲಾವಣೆ ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ, ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲಿ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಅದಕ್ಕೆ ದೇವೇಗೌಡರು, ಅದೆಲ್ಲಾ ಮಾತುಗಳು ಈಗ ಅಪ್ರಸ್ತುತ. ಸದ್ಯಕ್ಕೆ ಸರ್ಕಾರ ಉಳಿಯಬೇಕಾ? ಬೇಡವಾ? ಎಂಬುದರ ಬಗ್ಗೆ ಗಮನಹರಿಸಿ. ಹೈಕಮಾಂಡ್‌ ಜತೆ ಚರ್ಚಿಸಿ, ನಾಯಕತ್ವ ಬದಲಾವಣೆ ವಿಚಾರ ದೆಹಲಿಯಲ್ಲಿ ಸಮ್ಮಿಶ್ರ ಸರ್ಕಾರ ಒಪ್ಪಂದವಾದ ಸಂದರ್ಭದಲ್ಲಿ ಆಗಲಿಲ್ಲ. ತೀರಾ ಅನಿವಾರ್ಯವಾದರೆ ಆಮೇಲೆ ನೋಡೋಣ ಎಂದು ಹೇಳಿದರು. ನಂತರ ಅಲ್ಲಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ದೇವೇಗೌಡರು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು ಎಂದು ತಿಳಿದು ಬಂದಿದೆ. ಆದರೆ, ಈ ಕುರಿತು ಮಾಧ್ಯಮದವರಿಗೆ ದೇವೇಗೌಡರು ಪ್ರತಿಕ್ರಿಯಿಸಿ, ಎಲ್ಲಾ ನಿಮ್ಮ ಊಹಾಪೋಹ. ಸಿದ್ದರಾಮಯ್ಯ ಅವರ ಬಗ್ಗೆಯಾಗಲಿ, ಖರ್ಗೆಯವರ ಬಗ್ಗೆಯಾಗಲಿ ನಾವು ಮಾತನಾಡಲೇ ಇಲ್ಲ ಎಂದು ನಿರಾಕರಿಸಿದರು.

ಸಿಎಂ ಬದಲಾವಣೆಗೆ ಜೆಡಿಎಸ್‌ ವಿರೋಧ

ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಲು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಿರ್ಣಯ ಕೈಗೊಂಡಿದೆ. ಜತೆಗೆ, ಸಮ್ಮಿಶ್ರ ಸರ್ಕಾರ ಮುಂದುವರಿಯುವುದಾದರೆ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ನಾಯಕತ್ವ ಬದಲಾವಣೆಗೆ ಒಪ್ಪಬಾರದು. ಅನಿವಾರ್ಯವಾದರೆ ಮಧ್ಯಂತರ ಚುನಾವಣೆಗೆ ಹೋಗೋಣ ಎಂದು ಕೆಲವು ಶಾಸಕರು ಸಭೆಯಲ್ಲಿ ಆಗ್ರಹಿಸಿದರು.

ಖರ್ಗೆ ಸಿಎಂ ದಾಳ

ಹದಿಮೂರು ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುವ ಹೊತ್ತಿನಲ್ಲೇ, ದೇವೇಗೌಡರು ಈಗ ಖರ್ಗೆ ಸಿಎಂ ದಾಳ ಉರುಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ರಾಜೀನಾಮೆ ನೀಡಿ ಹೋದವರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಬೆಂಬಲಿಗರೇ ಆಗಿದ್ದು, ಅವರನ್ನು ಸಿಎಂ ಮಾಡುವ ನಿರ್ಧಾರ ತಳೆದರೆ ಅವರು ವಾಪಸ್‌ ಬರಬಹುದು. ಈ ಹಿನ್ನೆಲೆಯಲ್ಲಿ ದೇವೇಗೌಡರು, ಚಾಣಾಕ್ಷತೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತೇಲಿ ಬಿಟ್ಟಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್‌ನಲ್ಲೇ ಸಿಎಂ ಸ್ಥಾನಕ್ಕೆ ಗೊಂದಲ ಉಂಟಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ಇದೇ ವಿಷಯಕ್ಕೆ ಕಾಂಗ್ರೆಸ್‌ನಲ್ಲೇ ಎರಡು ಬಣಗಳಾಗಿವೆ ಎನ್ನಲಾಗುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next